ಆನ್ ಲೈನ್ ಶಿಕ್ಷಣದ ವಿಷಯದಲ್ಲಿ ಸರ್ಕಾರ ಅವಸರದ ನಿರ್ಧಾರ ಕೈಗೊಳ್ಳಬಾರದು. ಸಾಂಪ್ರದಾಯಿಕ ತರಗತಿಗಳಿಗೆ ಆನ್ ಲೈನ್ ಶಿಕ್ಷಣ ಎಂದಿಗೂ ಪರ್ಯಾಯವಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಕಾಯ್ದುಕೊಳ್ಳಲು ಪರ್ಯಾಯ ಶಿಕ್ಷಣ ಅನಿವಾರ್ಯವಾದರೂ, ಅಲ್ಲಿ ಆನ್ ಲೈನ್ ಅಥವಾ ತಂತ್ರಜ್ಞಾನ ಅವಲಂಬನೆಗಿಂತ ಸಾಧ್ಯವಾದಷ್ಟು ಹಾಡು, ನೃತ್ಯ, ನಾಟಕದಂತಹ ಮಾಧ್ಯಮಗಳ ಮೂಲಕ ಬೋಧನೆ ಮಾಡುವುದು ಹೆಚ್ಚು ಸೂಕ್ತ ಎಂದು ಆನ್ ಲೈನ್ ಶಿಕ್ಷಣ ಕುರಿತ ತಜ್ಞರ ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು.
ಆದರೆ, ರಾಜ್ಯ ಶಿಕ್ಷಣ ಇಲಾಖೆ ತಾನೇ ನೇಮಕ ಮಾಡಿದ್ದ ಈ ತಜ್ಞರ ಸಮಿತಿಯ ವರದಿಗೆ ತದ್ವಿರುದ್ಧವಾಗಿ ಈಗ ದೂರದರ್ಶನ ಚಂದನ ವಾಹಿನಿಯ ಮೂಲಕ ರಾಜ್ಯದ ಪ್ರೌಢಶಾಲಾ ಮಕ್ಕಳಿಗೆ ಬೋಧನೆ ಆರಂಭಿಸಿದೆ. ಜು.20ರಿಂದಲೇ 8, 9 ಮತ್ತು 10ನೇ ತರಗತಿ ಮಕ್ಕಳಿಗೆ ನಿತ್ಯ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ವಾಸ್ತವವಾಗಿ ದೂರದರ್ಶನ ಮತ್ತು ಯೂಟ್ಯೂಬ್ ಮೂಲಕ ಈ ತರಗತಿಗಳು ನಡೆಯುತ್ತವೆ. ‘ಸೇತುಬಂಧ’ ಎಂಬ ಹೆಸರಿನಲ್ಲಿ ನಡೆಯುವ ಈ ತರಗತಿಗಳು ಮನೆಯಲ್ಲಿದ್ದುಕೊಂಡೇ ಮಕ್ಕಳು ಕಲಿಕೆ ಮುಂದುವರಿಸಲು ಅನುಕೂಲವಾಗುವಂತೆ ರೂಪಿತವಾಗಿವೆ. ಮಕ್ಕಳಿಗೆ ಮಾರ್ಗದರ್ಶನ ಮಾಡಲು 20 ಮಕ್ಕಳಿಗೆ ಒಬ್ಬ ಮೆಂಟರ್ ಶಿಕ್ಷಕರನ್ನು ಗುರುತಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ವಾರದ ಹಿಂದೆಯೇ ಟ್ವೀಟ್ ಮಾಡಿದ್ದರು.
ಮಕ್ಕಳು ಕಲಿಕೆಯಿಂದ ವಿಮುಖವಾಗಬಾರದು ಎಂಬ ಶಿಕ್ಷಣ ಸಚಿವರ ಕಾಳಜಿ ಮೆಚ್ಚುವಂತಹದ್ದೆ. ಆದರೆ, ಇದೀಗ ಈ ಪರ್ಯಾಯ ಕಲಿಕಾ ಕ್ರಮದಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೂಡ ಸಚಿವರು ಗಮನ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ ಸಚಿವರ ಏಕಪಕ್ಷೀಯ ತೀರ್ಮಾನದಿಂದಾಗಿ ರಾಜ್ಯದ ಹಳ್ಳಿಗಾಡಿನ, ನಗರದಲ್ಲಿದ್ದೂ ಟಿವಿ ಮತ್ತು ಸ್ಮಾರ್ಟ್ ಫೋನ್ ಸೌಲಭ್ಯವಿಲ್ಲದ ಲಕ್ಷಾಂತರ ಮಕ್ಕಳು ಈ ಕಲಿಕೆಯಿಂದ ವಂಚಿತರಾಗುತ್ತಾರೆ. ಜೊತೆಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಟಿವಿ ಇದ್ದರೂ ಗ್ರಾಮೀಣ ಪ್ರದೇಶದ ಹಲವು ಮಕ್ಕಳಿಗೆ ಸಕಾಲದಲ್ಲಿ ಈ ಬೋಧನಾ ಕಾರ್ಯಕ್ರಮವನ್ನು ವೀಕ್ಷಿಸುವುದು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಜೊತೆಗೆ ಶಿಕ್ಷಣ ಇಲಾಖೆಯ ಈ ಸೇತುಬಂಧ ಕಾರ್ಯಕ್ರಮದ ವಿರುದ್ಧ ಈಗಾಗಲೇ ರಾಜ್ಯದ ಹಲವು ಕಡೆಯಿಂದ ಆಕ್ಷೇಪ ಮತ್ತು ಪ್ರತಿರೋಧದ ದನಿಗಳು ಕೇಳಿಬಂದಿವೆ. ಕೆಲವು ಕಡೆ ಪ್ರತಿಭಟನೆಗಳೂ ಆರಂಭವಾಗಿವೆ.
ಮುಖ್ಯವಾಗಿ ಮಲೆನಾಡಿನ ಕುಗ್ರಾಮಗಳಲ್ಲಿ ಮಳೆಗಾಲದಲ್ಲಿ ಕೂಡ ದಿನವಿಡೀ ವಿದ್ಯುತ್ ಇರುವುದು ವಿರಳವೇ. ಮಳೆ-ಗಾಳಿ ಹೆಚ್ಚಾದರೂ ವಿದ್ಯುತ್ ಇರುವುದಿಲ್ಲ, ಬಿಸಿಲು ಬಂದರೂ ವಿದ್ಯುತ್ ಇರುವುದಿಲ್ಲ. ಈಗಲೂ ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದ ಆರು ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದು, ಬೆಳಗ್ಗೆ ಅಥವಾ ಮಧ್ಯಾಹ್ನ ಮಾತ್ರ ವಿದ್ಯುತ್ ಇರುತ್ತದೆ. ಇನ್ನು ವಿದ್ಯುತ್ ಇದ್ದರೂ ಟಿವಿ ಹೊಂದಿರದ ಕಡುಬಡವ, ಕೂಲಿಕಾರರ ಕುಟುಂಬಗಳು ಸಾಕಷ್ಟಿವೆ. ಇಂತಹ ಕುಟುಂಬಗಳ ಮಕ್ಕಳು ಈ ಪಾಠಗಳಿಂದ ವಂಚಿತರಾಗುತ್ತಾರೆ. ಅದರಲ್ಲೂ ಟಿವಿ ಅಥವಾ ವಿದ್ಯುತ್ ಸೌಲಭ್ಯದಿಂದ ವಂಚಿತ ಮಕ್ಕಳ ಪೈಕಿ ಬಹುತೇಕ ಸಮಾಜದ ಕಟ್ಟಕಡೆಯ ದಲಿತ ಮತ್ತ ಹಿಂದುಳಿದ ವರ್ಗಗಳ ಮಕ್ಕಳೇ ಹೆಚ್ಚು. ಇನ್ನು ಶರಾವತಿ ಕಣಿವೆ, ಆಗುಂಬೆ ಕಾಡಿನಂಚಿನ ಪ್ರದೇಶ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ದಡ್ಡ ಮಲೆನಾಡು ಭಾಗದಲ್ಲಿ ಜಾತಿ- ಮತದ ಭೇದವಿಲ್ಲದೆ ಎಲ್ಲಾ ಮಕ್ಕಳೂ ವಿದ್ಯುತ್ ವ್ಯತ್ಯಯದ ಕಾರಣಕ್ಕೆ ಇಂತಹ ಪಾಠಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಕೂಗು ದಟ್ಟವಾಗುತ್ತಿದೆ.

ವಿಶ್ವ ಬ್ಯಾಂಕ್ ಸಮೀಕ್ಷೆ ಪ್ರಕಾರ ದೇಶದ ಬಡತನ ರೇಖೆಗಿಂತ ಕೆಳಗಿರುವ ಶೇ.71ರಷ್ಟು ಕುಟುಂಬಗಳು ಟಿವಿ ಹೊಂದಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳನ್ನು ಪರಿಗಣಿಸಿದರೆ, ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ಅಲ್ಲದೆ, ನಮ್ಮದೇ ಜನಗಣತಿ ಸಮೀಕ್ಷೆಯ(2011) ಪ್ರಕಾರ ಕೂಡ ರಾಜ್ಯದಲ್ಲಿ ಟಿವಿ ಹೊಂದಿರುವ ಕುಟುಂಬಗಳ ಪ್ರಮಾಣ ಶೇ.60ರಷ್ಟು ಮಾತ್ರ. ಈ ನಡುವೆ ಕಳೆದ 9 ವರ್ಷದಲ್ಲಿ ಏನೇ ಬದಲಾವಣೆಯಾಗಿದೆ ಎಂದುಕೊಂಡರೂ, ಈ ಪ್ರಮಾಣ ಹೆಚ್ಚೆಂದರೆ ಶೇ.80ರಷ್ಟಾಗಿರಬಹುದು. ಇನ್ನುಳಿದ ಶೇ.20ರಷ್ಟು ಮಂದಿ ಈಗಲೂ ಟಿವಿ ಹೊಂದಿಲ್ಲ ಎಂದೇ ಇದರರ್ಥ ಅಲ್ಲವೆ? ಅದರಲ್ಲೂ ಗ್ರಾಮೀಣ ಭಾಗದ ಬಡವರ ವಿಷಯದಲ್ಲಿ ಟಿವಿ ಹೊಂದಿರದ ಪ್ರಮಾಣ ಶೇ.40ಕ್ಕೂ ಅಧಿಕವೇ ಇರಬಹುದು.
ಜೊತೆಗೆ, ಆನ್ ಲೈನ್ ಶಿಕ್ಷಣ ಕುರಿತ ತಜ್ಞರ ಸಮಿತಿಯ ಉಲ್ಲೇಖದ ಪ್ರಕಾರವೇ, ರಾಜ್ಯದಲ್ಲಿ ಒಟ್ಟು ಸುಮಾರು 90 ಸಾವಿರಕ್ಕೂ ಅಧಿಕ ಸಂಖ್ಯೆಯ ಮಕ್ಕಳು ವಿವಿಧ ದೈಹಿಕ ನ್ಯೂನತೆಗಳನ್ನು ಹೊಂದಿದ್ದು, ಈ ವಿಶೇಷ ಚೇತನ ಮಕ್ಕಳಿಗೆ ಚಂದನ ವಾಹಿನಿಯ ಸೇತುಬಂಧ ಕಾರ್ಯಕ್ರಮಗಳನ್ನು ತಲುಪಿಸಲು ಶಿಕ್ಷಣ ಸಚಿವರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆ ಎಲ್ಲಾ ಮಕ್ಕಳು ಜನರ ತೆರಿಗೆ ಹಣದಲ್ಲಿ ಜಾರಿಯಾಗಿರುವ ಈ ಬೋಧನೆಯಿಂದ ವಂಚಿತರಾಗಬೇಕೆ? ಎಂಬುದು ಆ ಮಕ್ಕಳ ಪೋಷಕರ ಪ್ರಶ್ನೆ.

ಜೊತೆಗೆ, ಈ ಕಡುಬಡವರ ಮಕ್ಕಳು, ಬಿಜೆಪಿ ರಾಜ್ಯ ಸರ್ಕಾರ ಸಾರ್ವಜನಿಕ ತೆರಿಗೆ ಹಣದಲ್ಲಿ ಅನುಷ್ಠಾನಗೊಳಿಸಿರುವ, ಸಾರ್ವಜನಿಕ ಮಾಧ್ಯಮದ ಮೂಲಕ ತಲುಪಿಸುತ್ತಿರುವ ಈ ಸೇತುಬಂಧ ಬೋಧನೆಗೆ ಅರ್ಹರಲ್ಲವೆ? ಸರ್ಕಾರಿ ಯೋಜನೆಯೊಂದು, ಹೀಗೆ ಜನರ ನಡುವೆಯೇ ತಾರತಮ್ಯದ ಮೂಲಕ ಜಾರಿಗೆ ಬಂದಿರುವುದು ಎಷ್ಟರಮಟ್ಟಿಗೆ ಸರಿ? ಸರ್ವರಿಗೂ ಸಮಾನ ಶಿಕ್ಷಣ ತಲುಪಬೇಕು. ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕು ಎಂಬ ಕಡ್ಡಾಯ ಶಿಕ್ಷಣ ಕಾಯ್ದೆಗೆ ಸರ್ಕಾರದ ಈ ತಾರತಮ್ಯ ನೀತಿ ವಿರುದ್ಧವಾಗಿಲ್ಲವೆ ಎಂಬುದು.

ಆ ಹಿನ್ನೆಲೆಯಲ್ಲಿಯೇ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ವಿವಿಧ ಸಂಘಸಂಸ್ಥೆಗಳ ಮುಖಂಡರು ಮತ್ತು ಪೋಷಕರು ಸರ್ಕಾರಕ್ಕೆ ನೇರವಾಗಿ ಇದೇ ಪ್ರಶ್ನೆಗಳನ್ನು ಕೇಳಿದ್ದು, ಗ್ರಾಮೀಣ ಮಕ್ಕಳು, ಬಡಮಕ್ಕಳು ಹಾಗೂ ನಗರವಾಸಿ ಶ್ರೀಮಂತ ಮಕ್ಕಳ ನಡುವೆ ಸ್ಪಷ್ಟವಾಗಿ ತಾರತಮ್ಯ ಮಾಡುವ ಮತ್ತು ಆ ಮೂಲಕ ಮಕ್ಕಳಲ್ಲಿ ಕೀಳರಿಮೆ, ಉದ್ವೇಗ ಹುಟ್ಟುಹಾಕುತ್ತಿರುವ, ಪೋಷಕರ ಆತಂಕಕ್ಕೂ ಕಾರಣವಾಗಿರುವ ಈ ಸೇತುಬಂಧ ಯೋಜನೆಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಖ್ಯಾತ ರಂಗಕರ್ಮಿ ಮತ್ತು ಮೈಸೂರು ರಂಗಾಯಣದ ಮಾಜಿ ನಿರ್ದೇಶಕರೂ ಆದ ಚಿದಂಬರ ರಾವ್ ಜಂಬೆ ಅವರು ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿ, “ಟಿವಿ, ವಿದ್ಯುತ್ ಮುಂತಾದ ಮೂಲಸೌಕರ್ಯಗಳಿಲ್ಲದೆ ಸಾಕಷ್ಟು ಗ್ರಾಮೀಣ ಮಕ್ಕಳು ಸರ್ಕಾರದ ಸೇತುಬಂಧ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ. ಉಳ್ಳವರಿಗೆ ಒಂದು, ಇಲ್ಲದವರಿಗೊಂದು ಬಗೆಯುವ ಇಂತಹ ತಾರತಮ್ಯ ಮಕ್ಕಳಲ್ಲಿ ಕೀಳರಿಮ, ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಶಿಕ್ಷಣ ಸಚಿವರು ನಗರಕೇಂದ್ರಿತವಾಗಿ ಯೋಚಿಸಿ, ನಗರಕೇಂದ್ರಿತ ಅಭಿಪ್ರಾಯಗಳನ್ನು ಪರಿಗಣಿಸಿ ತರಾತುರಿಯಲ್ಲಿ ಇಂತಹ ಕ್ರಮಕ್ಕೆ ಮುಂದಾಗುವ ಬದಲು, ರಾಜ್ಯದ ಮಲೆನಾಡು ಭಾಗ ಸೇರಿದಂತೆ ಕುಗ್ರಾಮಗಳ, ಕಡುಬಡತನದ ಕುಟುಂಬಗಳ ಮಕ್ಕಳು ಮತ್ತು ಪೋಷಕರ ಬಗ್ಗೆಯೂ ಯೋಚಿಸಬೇಕಿತ್ತು. ಮಕ್ಕಳ ನಡುವೆಯೇ ತಾರತಮ್ಯಕ್ಕೆ, ಕಂದಕಕ್ಕೆ ಉತ್ತೇಜಿಸುವ ಇಂತಹ ಕ್ರಮ ಸಾರ್ವಜನಿಕ ಹಣದಲ್ಲಿ ಜಾರಿಗೆ ಬರುತ್ತಿರುವುದು ದುರಂತ ಮತ್ತು ಅಕ್ಷಮ್ಯ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ನಮ್ಮ ಸಾಂಪ್ರದಾಯಿಕ ಶಿಕ್ಷಣ ಕ್ರಮದ ಮಿತಿಗಳು ಏನು ಎಂಬುದನ್ನು ಈ ಕರೋನಾ ಸಂಕಷ್ಟ ನಮಗೆ ತೋರಿಸಿಕೊಟ್ಟಿದೆ. ಕೇವಲ ಅಂಕ ಮತ್ತು ಮಾಹಿತಿ ಆಧಾರಿತ ಶಿಕ್ಷಣ ನಮ್ಮನ್ನು ಎಷ್ಟು ಕುಬ್ಜರನ್ನಾಗಿಸಿದೆ ಎಂಬುದು ಎಲ್ಲರ ಅರಿವಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಈ ಸಂಕಷ್ಟವನ್ನೇ ಒಂದು ಅವಕಾಶ ಬಳಸಿಕೊಂಡು, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು, ಬದುಕಿನ ಶಿಕ್ಷಣ, ನೈಜ ಅರಿವಿನ ಶಿಕ್ಷಣ ಕ್ರಮ ಅಳವಡಿಸಿಕೊಳ್ಳಲು ಇದೊಂದು ಅವಕಾಶವಾಗಿತ್ತು. ಆದರೆ, ಶಿಕ್ಷಣ ಸಚಿವರು, ಅಂತಹ ದೂರಗಾಮಿ ಚಿಂತನೆಯ ಬದಲಾಗಿ, ಈಗಿರುವ ಶೈಕ್ಷಣಿಕ ಅವಕಾಶಗಳನ್ನು, ಎಲ್ಲಾ ಕಾಯ್ದೆ ಕಾನೂನುಗಳ ಹೊರತಾಗಿಯೂ ಕೆಲವೇ ಮಂದಿಗೆ, ಕೆಲವೇ ವರ್ಗಕ್ಕೆ ಸೀಮಿತಗೊಳಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕಿರುವುದು ಅನ್ಯಾಯದ ನಡೆ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ.
ಕರೋನಾ ಸಂಕಷ್ಟದ ಹೊತ್ತಲ್ಲಿ ಆಳುವ ಸರ್ಕಾರ, ರೈಲ್ವೆ, ಬ್ಯಾಂಕಿಂಗ್, ವಿಮಾ, ಕೃಷಿ, ವಿದ್ಯುತ್ ಸೇರಿದಂತೆ ಹಲವು ವಲಯಗಳಲ್ಲಿ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸುವ ಮೂಲಕ, ದೇಶದ ಜನಸಾಮಾನ್ಯರಿಂದ ಸಾರ್ವಜನಿಕ ಸೇವೆ ಮತ್ತು ಸೌಕರ್ಯಗಳನ್ನು ಕಿತ್ತುಕೊಳ್ಳುತ್ತಿದೆ. ಇದೀಗ ರಾಜ್ಯ ಶಿಕ್ಷಣ ಸಚಿವರು, ಸೇತುಬಂಧದಂತಹ ಕಾರ್ಯಕ್ರಮದ ಮೂಲಕ ನಗರವಾಸಿ ಉಳ್ಳವರ ಮಕ್ಕಳನ್ನು ಗುರಿಯಾಗಿಸಿಕೊಂಡು ಶಿಕ್ಷಣವನ್ನು ನೀಡುತ್ತಿರುವುದು ಕೂಡ, ಗ್ರಾಮೀಣ ಮಕ್ಕಳು ಮತ್ತು ನಗರವಾಸಿಗಳ ನಡುವೆ, ಬಡವರು ಮತ್ತು ಶ್ರೀಮಂತರ ನಡುವೆ ಡಿಜಿಟಲ್ ಡಿವೈಡ್ ಸೃಷ್ಟಿಸುತ್ತಿದೆ. ಇದೂ ಕೂಡ ಒಂದು ರೀತಿಯಲ್ಲಿ ಸಮಾಜದ ಕಟ್ಟಕಡೆಯ ಮಗುವಿನಿಂದ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರವೇ ಎಂಬ ಟೀಕೆ ಕೂಡ ವ್ಯಕ್ತವಾಗುತ್ತಿದೆ.