• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮಂದಿರ-ಮಸೀದಿ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭ

by
October 17, 2019
in ದೇಶ
0
ಮಂದಿರ-ಮಸೀದಿ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭ
Share on WhatsAppShare on FacebookShare on Telegram

ಬಾಬರಿ ಮಸೀದಿ-ರಾಮಮಂದಿರ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭ ಆಗಿದೆ. ಸತತ 40 ದಿನಗಳ ಕಾಲದ ಸುಪ್ರೀಂ ಕೋರ್ಟ್ ವಿಚಾರಣೆಗೆ ಬುಧವಾರ ತೆರೆ ಬಿದ್ದಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಮುಂಬರುವ ನವೆಂಬರ್ 17ರಂದು ನಿವೃತ್ತಿ ಹೊಂದಲಿದ್ದಾರೆ. ಮಂದಿರ-ಮಸೀದಿ ವಿವಾದದ ವಿಚಾರಣೆಯ ನ್ಯಾಯಪೀಠಕ್ಕೆ ಅವರದೇ ನೇತೃತ್ವ. ನಿವೃತ್ತಿಗೆ ಮುನ್ನ ತೀರ್ಪು ನೀಡಲೇಬೇಕು. ತಪ್ಪಿದರೆ ಹೊಸ ನ್ಯಾಯಪೀಠ ರಚನೆಯಾಗಿ ಇಡೀ ವಿವಾದವನ್ನು ಪುನಃ ಮೊದಲಿನಿಂದ ಆಲಿಸಬೇಕಾಗುತ್ತದೆ. ಹೀಗಾಗಿ ತೀರ್ಪು ತಿಂಗಳೊಪ್ಪತ್ತಿನಲ್ಲಿ ಹೊರಬೀಳಲಿದೆ.

ADVERTISEMENT

ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್ 2010ರ ಸೆಪ್ಬಂಬರ್ ನಲ್ಲಿ ತೀರ್ಪು ನೀಡಿತ್ತು. 1992ರ ಡಿಸೆಂಬರ್ ಆರರ ತನಕ ಬಾಬರಿ ಮಸೀದಿ ನಿಂತಿದ್ದ 2.77 ಎಕರೆಯಷ್ಟು ವಿವಾದಿತ ಜಮೀನನ್ನು ಈ ತೀರ್ಪು ನಿರ್ಮೋಹಿ ಅಖಾಡ, ರಾಮಲಲ್ಲಾ ವಿರಾಜಮಾನ್ ಹಾಗೂ ಉತ್ತರಪ್ರದೇಶದ ಸುನ್ನಿ ವಕ್ಫ್ ಮಂಡಳಿಗೆ ಸಮನಾಗಿ ಹಂಚಿಕೊಟ್ಟಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಬಾಕಿ ಇದ್ದ ಈ ಮೇಲ್ಮನವಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ತೀರ್ಪನ್ನು ಕಾಯ್ದಿರಿಸಿದೆ. ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಎದ್ದಿರುವ ಕೋಮುವಾದಿ ಧೃವೀಕರಣದ ಬಹುಸಂಖ್ಯಾತವಾದೀ ಹೆದ್ದೆರೆಗಳ ನಡುವೆ ಈ ತೀರ್ಪು ಹೊರಬೀಳಬೇಕಿರುವ ವಿದ್ಯಮಾನವೇ ದಿಗಿಲು ಹುಟ್ಟಿಸುವಂತಹುದು.

ಹಲವು ದಶಕಗಳಿಂದ ಸಮಾಜದ ಎರಡು ಕೋಮುಗಳ ನಡುವೆ ಹಿಂದು-ಮುಸ್ಲಿಂ ಎಂಬ ನಿಚ್ಚಳ ಗೆರೆಗಳನ್ನು ಎಳೆದಿರುವ ಪುರಾತತ್ವ ವಿವಾದವಿದು. ಅದು ರಾಮ ಹುಟ್ಟಿದ ಸ್ಥಳ. ಅಲ್ಲಿದ್ದ ಮಂದಿರವನ್ನು ಕೆಡವಿ 16ನೆಯ ಶತಮಾನದಲ್ಲಿ ಮೊಗಲ್ ದಾಳಿಕೋರ ದೊರೆ ಬಾಬರ್ ಮಸೀದಿ ಕಟ್ಟಿಸಿದ ಎಂಬುದು ಸಂಘ ಪರಿವಾರ ಮತ್ತು ಹಲವು ಹಿಂದೂ ಸಾಧು ಸಂತ ಸಂಘಟನೆಗಳ ವಾದ. ಮಸೀದಿ ನಿಂತ ಜಾಗದಲ್ಲಿ ಪುನಃ ಭವ್ಯ ರಾಮಮಂದಿರ ನಿರ್ಮಿಸಬೇಕೆಂಬುದಾಗಿ ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದ ಬಿಜೆಪಿ ರಥಯಾತ್ರೆ ದೇಶಾದ್ಯಂತ ಕೋಮುಜ್ವಾಲೆಯನ್ನು ಭುಗಿಲೆಬ್ಬಿಸಿತ್ತು.

ಈ ‘ಜ್ವಾಲೆ’ಯು 1992ರಲ್ಲಿ ಬಾಬರಿ ಮಸೀದಿಯ ನೆಲಸಮಕ್ಕೆ ದಾರಿ ಮಾಡಿತು. ವಿವಾದಿತ ಸ್ಥಳದಲ್ಲಿ ನಿಂತಿದ್ದ ಬಾಬರಿ ಮಸೀದಿಯನ್ನು 1992ರಲ್ಲಿ ಹಿಂದೂ ಕರಸೇವಕರು ನೆಲಸಮ ಮಾಡಿದರು. ನಂತರ ದೇಶದಾದ್ಯಂತ ನಡೆದ ಕೋಮು ಗಲಭೆಗಳು, ಸಾವುನೋವುಗಳಿಗೆ ಲೆಕ್ಕವಿಲ್ಲ. ಹೆಪ್ಪುಗಟ್ಟುತ್ತಲೇ ನಡೆದ ಕೋಮುದ್ವೇಷ ಈಗಲೂ ಕೊನೆಯಿಲ್ಲದೆ ಸಾಗಿದೆ. ಮಂದಿರ-ಮಸೀದಿಯ ಈ ಬಿರುಗಾಳಿಯಲ್ಲಿ ಇದ್ದ ಸರ್ಕಾರಗಳು ಬಿದ್ದಿವೆ, ಹೊಸ ಸರ್ಕಾರಗಳು ಎದ್ದಿವೆ. ಅಧಿಕಾರದಾಹಿ ರಾಜಕಾರಣದ ಪಗಡೆಯ ದಾಳವಾಗಿ ಈ ವಿವಾದ ಬಳಕೆಯಾಗಿದೆ. ಈಗಲೂ ಆಗುತ್ತಿದೆ. ಮುಂದೆಯೂ ಆಗಲಿದೆ. ಮುಂಬರುವ ದಿನಗಳಲ್ಲಿಯೂ ಕೋಮು ದಂಗೆಗಳು, ಸಾವು-ನೋವುಗಳು, ರಕ್ತಪಾತಗಳು ನಡೆಯುವುದಿಲ್ಲ ಎಂದು ಆಶ್ವಾಸನೆ ಕೊಡುವ ಸ್ಥಿತಿಯಲ್ಲಿ ಯಾರೂ ಇಲ್ಲ.

ವಿವಾದಿತ ಸ್ಥಳ ತನಗೇ ಸೇರಿದ್ದು, ಅಲ್ಲಿ ಬಾಬರಿ ಮಸೀದಿಯನ್ನು ಮತ್ತೆ ನಿರ್ಮಿಸಬೇಕೆಂಬುದು ಸುನ್ನಿ ವಕ್ಫ್ ಮಂಡಳಿಯ ಅಹವಾಲು. ಈ ಮಂಡಳಿಯಲ್ಲಿ ಒಡಕು ಉಂಟಾಗಿರುವ ವರದಿಗಳಿವೆ. ಮಂಡಳಿಯು ವಿವಾದಿತ ಸ್ಥಳವನ್ನು ಷರತ್ತಿನ ಮೇರೆಗೆ ರಾಮಮಂದಿರ ನಿರ್ಮಾಣಕ್ಕೆಂದು ಬಿಟ್ಟುಕೊಡುವ ಪರವಾಗಿದೆ ಎಂದು ನ್ಯಾಯಾಲಯವೇ ನೇಮಕ ಮಾಡಿದ್ದ ಮಧ್ಯಸ್ಥಿಕೆ ಸಮಿತಿಯು ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿದೆ. ವಕ್ಫ್ ಮಂಡಳಿಯ ಪರ ನ್ಯಾಯವಾದಿ ರಾಜೀವ ಧವನ್ ಇಂತಹ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ವಿವಾದಿತ ಸ್ಥಳದ ಮೇಲೆ ತನ್ನ ದಾವೆಯನ್ನು ವಾಪಸು ಪಡೆಯುವ ಯಾವುದೇ ಅರ್ಜಿಯನ್ನು ಮಂಡಳಿಯು ಈವರೆಗೆ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿಲ್ಲ ಎಂದಿದ್ದಾರೆ.

ಆದರೆ ವಕ್ಫ್ ಮಂಡಳಿಯ ಒಂದು ಗುಂಪು ಮತ್ತು ದೇಶದ ಮುಸಲ್ಮಾನ ಸಮುದಾಯದ ಕೆಲ ಗಣ್ಯರು ವಿವಾದಿತ ಸ್ಥಳವನ್ನು ಷರತ್ತಿನ ಮೇರೆಗೆ ಸರ್ಕಾರಕ್ಕೆ ಬಿಟ್ಟುಕೊಡುವ ಪರವಾಗಿರುವ ಬೆಳವಣಿಗೆ ನಿರಾಧಾರ ಅಲ್ಲ. ಆದರೆ ಸುಪ್ರೀಂ ಕೋರ್ಟಿನ ತೀರ್ಪು ಹೊರ ಬೀಳುವ ತನಕ ಕಾಯಲಾಗುವುದು. ತೀರ್ಪನ್ನು ನೋಡಿದ ನಂತರವೇ ಈ ದಿಸೆಯಲ್ಲಿ ಮುಂದಿನ ಹೆಜ್ಜೆ ಇರಿಸಲಾಗುವುದು ಎನ್ನಲಾಗಿದೆ. ಈ ಹೊಸ ಬೆಳವಣಿಗೆಯನ್ನು ಕೂಡ ಬಹುಸಂಖ್ಯಾತವಾದದ ಕೋಮುವಾದೀ ಹೆದ್ದೆರೆಗಳ ಹಿನ್ನೆಲೆಯಲ್ಲೇ ಗಮನಿಸಬೇಕಿದೆ. ಘಟಿಸಬಹುದಾದ ಮಾರಣಹೋಮಗಳು ಮತ್ತು ರಕ್ತಪಾತವನ್ನು ತಡೆಯುವುದೇ ಇದರ ಸ್ಪಷ್ಟ ಉದ್ದೇಶ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಈ ನಡುವೆ ಅಯೋಧ್ಯೆಯಲ್ಲಿ ಸಾಮಾಜಿಕ ಸಾಮರಸ್ಯ ಸಂಸ್ಥೆಯನ್ನು ನಿರ್ಮಿಸಲು ವಿವಾದಿತ ಸ್ಥಳದ ಪಕ್ಕದಲ್ಲೇ ಇರುವ ತನ್ನ ಒಡೆತನದ ಮೂರು ಎಕರೆಗಳಷ್ಟು ಜಮೀನನ್ನು ನೀಡುವುದಾಗಿ ಪುದುಚೆರಿಯ ಅರಬಿಂದೋ ಆಶ್ರಮ ಮುಂದೆ ಬಂದಿದೆ. ಇದೇ ಉದ್ದೇಶಕ್ಕೆಂದು ಒಂದು ಲಕ್ಷ ಚದರಡಿಗಳಷ್ಟು ಜಾಗವನ್ನು ನೀಡುವುದಾಗಿ ನಿರ್ವಾಣಿ ಆಖಾಡ ಸಾರಿದೆ. ಕೆಡವಲಾಗಿರುವ ಮಸೀದಿಯನ್ನು ಅದೇ ಜಾಗದಲ್ಲಿ ಮರಳಿ ಕಟ್ಟಬೇಕೆಂಬುದು ಸುನ್ನಿ ವಕ್ಫ್ ಮಂಡಳಿಯ ವಾದವಾದರೆ, ಅಯೋಧ್ಯೆಯ ರಾಮನ ಪೂಜೆ ಮಾಡಿಕೊಂಡು ಬಂದಿರುವ ನಿರ್ಮೋಹಿ ಅಖಾಡ ಮತ್ತು ಖುದ್ದು ರಾಮದೇವರ ಪ್ರಕಾರ ಇಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಬೇಕು.

ಅಯೋಧ್ಯೆಯಲ್ಲಿ ತಲೆ ತಲಾಂತರಗಳಿಂದ ರಾಮನನ್ನು ಪೂಜಿಸುತ್ತ ಬಂದಿರುವ ಸಾಧು ಸಂಘಟನೆಯಾದ ನಿರ್ಮೋಹಿ ಅಖಾಡ ವಿವಾದಿತ ಸ್ಥಳ ತನಗೇ ಸೇರಬೇಕೆಂದು ದಾವೆ ಹೂಡಿದೆ. ಖುದ್ದು ರಾಮದೇವರು ಕೂಡ ಈ ವಿವಾದದಲ್ಲಿ 2.77 ಎಕರೆಗೆ ದಾವೆ ಹೂಡಿರುವ ಅರ್ಜಿದಾರ. ‘ರಾಮಲಲ್ಲಾ ವಿರಾಜಮಾನ್’ನನ್ನೂ (ಬಾಲರಾಮನ ವಿಗ್ರಹ) ಜೀವಂತ ಅರ್ಜಿದಾರ ಎಂದೇ ಪರಿಗಣಿಸಲಾಗಿದೆ. ಈ ಜಾಗವು ಬಾಬರಿ ಮಸೀದಿಗೇ ಸೇರಿದ್ದು, ಕೆಡವಲಾಗಿರುವ ಮಸೀದಿಯನ್ನು ಪುನಃ ಅಲ್ಲಿಯೇ ಕಟ್ಟಬೇಕೆಂದು ದಾವೆ ಹೂಡಿರುವ ಮುಸ್ಲಿಂ ಸಂಸ್ಥೆ, ಸುನ್ನಿ ವಕ್ಫ್ ಮಂಡಳಿ.

ಮಸೀದಿಯು ಇಸ್ಲಾಮ್ ಧರ್ಮದ ಅಗತ್ಯ ಭಾಗ ಅಲ್ಲ ಎಂಬುದಾಗಿ ಅಲಹಾಬಾದ್ ಹೈಕೋರ್ಟ್ 1994ರಲ್ಲಿ ನೀಡಿದ್ದ ತೀರ್ಪನ್ನು ಮರುವಿಮರ್ಶೆ ಮಾಡುವಂತೆ ಕೋರುವ ಅರ್ಜಿಯೊಂದು ಸುಪ್ರೀಂ ಕೋರ್ಟ್ ಮುಂದೆ ಬಂದಿತ್ತು. 2017ರಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಅರ್ಜಿಯನ್ನು ಆಲಿಸುತ್ತಿತ್ತು. ಈ ಪ್ರಕರಣವು ಬಾಬರಿ ಮಸೀದಿ ವಿವಾದದ ಮೇಲೆ ನೇರ ಪರಿಣಾಮ ಹೊಂದಿತ್ತು. ಈ ಹಿನ್ನೆಲೆಯಲ್ಲಿ ಬಾಬರಿ ಮಸೀದಿ-ರಾಮಮಂದಿರ ವಿವಾದದ ವಿಚಾರಣೆಗೆ 2017ರಲ್ಲಿ ರಭಸದ ಗತಿ ಪ್ರಾಪ್ತವಾಗಿತ್ತು. ರಾಮಮಂದಿರ-ಬಾಬರಿ ಮಸೀದಿ ವಿವಾದಿತ ಸ್ಥಳವಿರುವ ಅಯೋಧ್ಯೆ ದೆಹಲಿಯಿಂದ ಸುಮಾರು 700 ಕಿ.ಮೀ. ದೂರದಲ್ಲಿದೆ. ಈ ವಿವಾದಿತ ಸ್ಥಳದ ವಿಸ್ತೀರ್ಣ ಕೇವಲ 2.77 ಎಕರೆಗಳು. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮತ್ತು ತೀರ್ಪಿನ ನಿರೀಕ್ಷೆಯ ಈ ದಿನಗಳಲ್ಲಿ ಮಂದಿರಗಳ ನಗರವಾದ ಅಯೋಧ್ಯೆ ಭಾರೀ ಸುರಕ್ಷತಾ ವ್ಯವಸ್ಥೆಯ ಉಕ್ಕಿನ ಕೋಟೆಯಾಗಿ ಪರಿಣಮಿಸಿದೆ.

2019ರ ಲೋಕಸಭಾ ಚುನಾವಣೆಗಳಿಗೆ ಮುನ್ನವೇ ಈ ವಿವಾದ ಕುರಿತು ತೀರ್ಪು ನೀಡಬೇಕೆಂಬ ಸಂಘಪರಿವಾರದ ಅಗ್ರಹ ಈಡೇರಲಿಲ್ಲ. ‘ಹಿಂದು ಹೃದಯ ಸಾಮ್ರಾಟ’ ನರೇಂದ್ರ ಮೋದಿಯವರು ಎರಡನೆಯ ಬಾರಿಗೆ ಘನವಾಗಿ ಗೆದ್ದು ಕೇಂದ್ರದ ಅಧಿಕಾರ ಹಿಡಿದ ನಂತರ ಬಾಬರಿ ಮಸೀದಿ ನಿಂತಿದ್ದ ಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಿಸಬೇಕೆಂಬ ಒತ್ತಡ ತಾರಕಕ್ಕೆ ಏರಿದೆ. ವಿಶೇಷ ಕಾನೂನು ರೂಪಿಸಿಯಾದರೂ ರಾಮಮಂದಿರ ನಿರ್ಮಿಸಬೇಕೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ವರ್ಷದ ಹಿಂದಿನ ವಿಜಯದಶಮಿ ಭಾಷಣದಲ್ಲಿ ಆಗ್ರಹಪಡಿಸಿದ್ದರು. ವಿನಾ ಕಾರಣ ಸಮಾಜದ ಸಹನೆಯನ್ನು ಪರೀಕ್ಷಿಸುವುದರಿಂದ ಯಾರ ಹಿತವೂ ಸಾಧನೆ ಆಗುವುದಿಲ್ಲ. ದೇಶದಲ್ಲಿ ಸದ್ಭಾವನೆ ಮತ್ತು ಒಮ್ಮತದ ವಾತಾವರಣ ನೆಲೆಸಬೇಕಿದ್ದರೆ ಶೀಘ್ರದಲ್ಲೇ ರಾಮಮಂದಿರ ಸಾಕಾರಗೊಳ್ಳಬೇಕು. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ಕಾನೂನು ರೂಪಿಸಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು.

ಹಿಂದೂ ಬಹುಸಂಖ್ಯಾತವಾದ ಬೊಬ್ಬಿರಿದಿದ್ದು, ಸಂಘಪರಿವಾರ ಅತ್ಯಂತ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಸನ್ನಿವೇಶವಿದು. ಸುಪ್ರೀಂ ಕೋರ್ಟ್ ಒಂದು ವೇಳೆ ಮಂದಿರ ನಿರ್ಮಾಣದ ಬದಲು ಬೇರೆ ಯಾವ ಪರ್ಯಾಯವನ್ನು ಇರಿಸಿದರೂ ಈ ಶಕ್ತಿಗಳು ಒಪ್ಪಿಕೊಳ್ಳುವ ಸಾಧ್ಯತೆ ಅತಿ ವಿರಳ. ಬಾಬರಿ ಮಸೀದಿಗೆ ಹಾನಿಯಾಗಲು ಬಿಡುವುದಿಲ್ಲವೆಂದು ಸುಪ್ರೀಂ ಕೋರ್ಟ್ ಗೆ ಬರೆದು ಕೊಟ್ಟ ಮುಚ್ಚಳಿಕೆಯನ್ನು 1992ರಲ್ಲಿ ಉತ್ತರಪ್ರದೇಶದ ಅಂದಿನ ಬಿಜೆಪಿ ಸರ್ಕಾರ ಗಾಳಿಗೆ ತೂರಿತ್ತು. ಕರಸೇವಕರು ಮಸೀದಿ ನೆಲಸಮ ಮಾಡುವುದನ್ನು ಕಲ್ಯಾಣ್ ಸಿಂಗ್ ನೇತೃತ್ವದ ಸರ್ಕಾರ ತಡೆಯಲಿಲ್ಲ. ಈಗಲೂ ನ್ಯಾಯಾಲಯದ ತೀರ್ಪು ಒಂದು ವೇಳೆ ತನಗೆ ಅನುಕೂಲಕರವಾಗಿ ಹೊರ ಬೀಳದೆ ಹೋದರೆ ಅದರ ಪಾಲನೆಯಾಗುವುದೇ ಎಂಬುದು ಅತಿ ದೊಡ್ಡ ಪ್ರಶ್ನೆ. ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇರುವಂತೆಯೇ, ವಿಶೇಷ ಕಾನೂನು ತಂದು ಮಂದಿರ ನಿರ್ಮಿಸಬೇಕೆಂದವರು ಸುಮ್ಮನೆ ಕುಳಿತುಕೊಳ್ಳಲಾರರು.

Tags: Chief Justice Ranjan GogoiGovernment of IndiaNirmohi AkhadaRam Janmabhoomi ControversyRamlalla VirajmanSunni Waqf BoardSupreme Court of Indiaನಿರ್ಮೋಹಿ ಅಖಾಡಭಾರತ ಸರ್ಕಾರಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ರಾಮ ಜನ್ಮ ಭೂಮಿ ವಿವಾದರಾಮಲಲ್ಲಾ ವಿರಾಜಮಾನ್ಸುನ್ನಿ ವಕ್ಫ್ ಮಂಡಳಿಸುಪ್ರೀಂ ಕೋರ್ಟ್
Previous Post

ತಲಕಾವೇರಿ ತೀರ್ಥೋದ್ಭವಕ್ಕೆ ರಸ್ತೆ ಗುಂಡಿಗಳ ಸ್ವಾಗತ

Next Post

ಕಾನೂನು ಕಟ್ಟಳೆಗಳಿಂದ ಅವನತಿಯತ್ತ  ಬೀಡಿ ಉದ್ಯಮ

Related Posts

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!
Top Story

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಕಾಂಗ್ರೆಸ್‌ ಶಾಸಕ ಎನ್.ಎ.ಹ್ಯಾರಿಸ್‌ ಮನೆ ಮೇಲೆ ಇಂದು ಬೆಳಂಬೆಳಿಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಅಶೋಕ ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ,...

Read moreDetails
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
Next Post
ಕಾನೂನು ಕಟ್ಟಳೆಗಳಿಂದ ಅವನತಿಯತ್ತ  ಬೀಡಿ ಉದ್ಯಮ

ಕಾನೂನು ಕಟ್ಟಳೆಗಳಿಂದ ಅವನತಿಯತ್ತ  ಬೀಡಿ ಉದ್ಯಮ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada