ನಾನೇ ದುಃಖಿಯಾಗಿದ್ದರೆ ಆಗ ನಾನು ಬೇರೆಯವರಿಗೆ ದುಃಖದ ಹೊರತು ಬೇರೇನೂ ನೀಡಲು ಶಕ್ತನಾಗುವುದಿಲ್ಲ. ನನ್ನ ಒಳಗೆ ಯಾವುದು ಇದೆ. ಅದೇ ಹೊರಗೂ ಇರುವುದು ಮತ್ತು ನನ್ನ ಆಚರಣೆ. ನನ್ನ ವ್ಯವಹಾರದಲ್ಲಿ ಅದು ಕಂಡು ಬರುತ್ತಿರುವುದು. ನನ್ನ ಒಳಗೆ ಕೇಂದ್ರದಲ್ಲಿ ಯಾವುದು ಇದೆ. ಅದೇ ನನ್ನ ಪರಿಧಿಯಲ್ಲೂ ಕಂಡು ಬರುವುದು. ಬಹುತೇಕ ಎಲ್ಲಾ ಜನರು ತಮ್ಮೊಳಗೆ ದುಃಖ ಮತ್ತು ಸಂತಾಪದಿಂದ ತುಂಬಿರುವಾಗ ಅದರ ಪರಿಣಾಮ ಸ್ವಾಭಾವಿಕವಾಗಿಯೇ ಇಡೀ ಜಗತ್ತು ದುಃಖ ಸಂತಾಪದಿಂದ ತುಂಬಿ ಹೋಗುತ್ತದೆ. ಪರಿಣಾಮವಾಗಿ ಇಡೀ ಜಗತ್ತಿನಲ್ಲಿ ಹಿಂಸೆ ಮತ್ತು ವಿನಾಶ ಕಂಡು ಬರುತ್ತದೆ.
ಈ ಮೇಲಿನ ಸಾಲುಗಳು ಬುದ್ಧನ ಇಡೀ ಜೀವಮಾನದ ತತ್ವ ಆದರ್ಶಗಳ ಒಟ್ಟು ಸಾರಾಂಶವಷ್ಟೆ. ಆದರೆ, ಈ ಸಾಲುಗಳು ಮತ್ತು ಇದು ನುಡಿಯುವ ವಾಸ್ತವತೆ ನಿಮಗೆ ಅರ್ಥವಾಗದ ಹೊರತು ಬುದ್ಧ ಮತ್ತು ಆತನ ದಾರಿ ನಿಮಗೆ ಎಂದಿಗೂ ಅರ್ಥವಾಗುವುದೇ ಇಲ್ಲ. ಎಲ್ಲಾ ಕಾಲಕ್ಕೂ ಸಲ್ಲುವ ಬುದ್ಧನ ಪ್ರೀತಿ ಮತ್ತು ಕರುಣೆ ಎಂದು ಶಾಶ್ವತ ಸತ್ಯವನ್ನು ನಾವು ಅರಿಯದ ಕಾರಣಕ್ಕೇ ಇಂದು ಈ ಜಗತ್ತು ಎರಡು ಮಹಾಯುದ್ಧಕ್ಕೆ ಕಾರಣವಾಗಿದ್ದು ಮತ್ತು ದಿನನಿತ್ಯ ಹಿಂಸೆಗೆ ಸಾಕ್ಷಿಯಾಗಿರುವುದು ಎಂದರೂ ತಪ್ಪಾಗಲಾರದು.
ಒಬ್ಬ ಮನುಷ್ಯನ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ನಿಜಕ್ಕೂ ಹುಟ್ಟಿ ಆವರಿಸಿಕೊಳ್ಳುವುದು ಅವರವರದೇ ಬದುಕಿನಲ್ಲಿ ಕಾಡುವ ಒಂದಷ್ಟು ಸೋಲು, ನೆನಪು, ಅವಮಾನ, ಅಪ್ಪುಗೆ, ಪ್ರೀತಿಗಳನ್ನ ಅವರವರದೇ ರೀತಿಗಳಲ್ಲಿ ಅರಗಿಸಿಕೊಂಡು, ಅದರಾಚೆಗೂ ಪ್ರತಿ ಹೆಜ್ಜೆಗಳನ್ನ ಮಮಕಾರದಿಂದ ನೋಡಲು ಮತ್ತು ಅಕ್ಕ ಪಕ್ಕದಲ್ಲಿ ಇರುವವರನ್ನ ನಮ್ಮಂತೆ ಎಂದು ಭಾವಿಸಲು ಸಾಧ್ಯವಾದಾಗ ಮಾತ್ರ.
ದಿನದಿಂದ ದಿನಕ್ಕೆ ಬೇಕೆಂದಾಗಲೆಲ್ಲಾ ಇಡೀ ಜಗತ್ತನ್ನೆ ಸಂಧಿಸಿದಂತೆ ವರ್ಚುಯಲ್ ಲೈಫ್ನ ಗೋಡೆಗಳಾಚೆಗಿನ ಜಗತ್ತು ಕಾಣದಾಗಿ ಅಲ್ಲಿ ಸಿಗುವ ನೆನ್ನೆ, ನಾಳೆ, ಇವತ್ತು, ಬಹು ಪಾಲು ಎಲ್ಲವೂ ಒಂದೇ ತೆರನಾಗಿ ಕಂಡರೂ ಕೂಡ ಅಲ್ಲಿಯೇ ಕಳೆದು ಹೋಗುತ್ತಿರುವಾಗ ಇವತ್ತಿನ ಸಂಜೆ, ಒಂದಷ್ಟು ಎದುರಿನ ಹರಟೆಗಳು, ನಿಜದ ಕಣ್ಣುಗಳ ಹುಡುಕಾಟಗಳ ತನ್ಮಯತೆಗಳು ದೈಹಿಕ ಮತ್ತು ಆಂತರಿಕವಾಗಿ ಬೇರೆಯದಾಗೇ ಪರಿಣಮಿಸುತ್ತಿರುವಾಗ ಬುದ್ಧನ ‘ಪ್ರಸ್ತುತದಲ್ಲಿ ಬದುಕಿ’ ಎಂಬ ಮಾತು ಎಷ್ಟು ಸತ್ಯವೆನಿಸುತ್ತದೆ.
ಈ ಎಲ್ಲಾ ಮಾತುಗಳನ್ನು ಅಷ್ಟು ವರ್ಷಗಳ ಹಿಂದೆಯೇ ಗ್ರಹಿಸಿ ಸರಳ ಬದುಕಿನ ನಿಜ ಸಂತಸಗಳ ಹುಡುಕಲು ಬೇಕಿರುವುದು ‘ಇರುವುದರಲ್ಲಿ ಆ ಕ್ಷಣಕ್ಕೆ ಜೀವಿಸುವುದೇ ಎಲ್ಲವೂ ಆಗುವುದು’ ಎಂಬ ಹೊಳಹನ್ನು ಹೇಳಿದವನೇ ಗೌತಮ ಬುದ್ಧ.
ಭಗವಾನ್ ಬುದ್ಧ ಎಂಬ ಹೆಸರು ಕೇಳಿದಂತೆ ಥಟ್ಟನೆ ನೆನಪಾಗುವುದು ಆಸೆಯೇ ದು:ಖಕ್ಕೆ ಮೂಲವೆಂಬ ಸಿದ್ಧ ಮಂತ್ರ. ಈತ ಇಡೀ ಜಗತ್ತಿಗೇ ಜ್ಞಾನದ ಹಿರಿಮೆಯನ್ನು ತೋರಿಸಲು ಜನಿಸಿದವನು. ಈತ ಪ್ರಚಾರ ಮಾಡಿದ ಬೌದ್ಧ ಧರ್ಮವು ಎಲ್ಲರಿಗೂ ಸ್ಫೂರ್ತಿಧಾಯಕವಾಗಿದ್ದು. ವಿಶ್ವದಾದ್ಯಂತ ಸ್ವೀಕರಿಸಲ್ಪಟ್ಟಿತು.
ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ. ಕೊನೆಯವನೂ ಅಲ್ಲವೆಂದು ಜಗತ್ತಿಗೇ ಸಾರಿದನು. ದು:ಖದಿಂದ ಮುಕ್ತಿಹೊಂದಲು ಈತನ ಬೊಧನೆಗಳು ಸಂಜೀವಿನಿಯಿದ್ದಂತೆ. ಈ ಸಾಲುಗಳು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ.
ಇಡೀ ಮನುಕುಲಕ್ಕೇ ಮಹಾನ್ ಶಿಕ್ಷಕನಾಗಿರುವ ಭಗವಾನ್ ಬುದ್ಧನ ಜೀವನ ಚರಿತ್ರೆಯನ್ನು ಒಮ್ಮೆ ತಿರುವಿ ನೋಡಿದರೆ, ಆತನ ಜೀವನದ ಪ್ರತಿಯೊಂದು ಹಂತವೂ ಸಹ ವಿಶೇಷವಾಗಿ ಎಲ್ಲರಿಗೂ ಪ್ರೇರಣೆ ನೀಡಿ ಜ್ಞಾನೋದಯ ಮಾಡುವಂತಹದ್ದು ಎಂದರೆ ತಪ್ಪಾಗಲಾರದು.
ವಾಸ್ತವಿಕ ಅರಿವಿನ ಸ್ಥಿತಿಯಲ್ಲಿರುವ ಮನುಷ್ಯನೇ ಹೆಚ್ಚು ಸುಖಿ ಎಂದು ಸಾರಿದನು. ಕ್ಷಣಿಕ ಸುಖಕ್ಕಾಗಿ ಸಾಗರದಷ್ಟು ದು:ಖವನ್ನು ಪಡುವವರು ಅನೇಕರಿದ್ದು, ಬುದ್ಧನ ಉಪದೇಶಗಳನ್ನು ಒಮ್ಮೆ ಓದಿದರೆ ಅವರಿಗೆ ಬದುಕಿನ ನಿಜವಾದ ಅರ್ಥ ದೊರೆಯುತ್ತದೆ.
ನಮ್ಮ ಭಾರತದ ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ರವರೂ ಸಹ ಬುದ್ಧನ ತತ್ವಗಳಿಗೆ ಮನಸೋತು ಬುದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಎಲ್ಲರಿಗೂ ತಿಳಿದದ್ದೇ. ಈ ಲೇಖನದಲ್ಲಿ ಬುದ್ಧನ ತತ್ವಗಳ ಕುರಿತು ಈಗಿನ ಮನುಕುಲವು ಅನುಸರಿಸಬಹುದಾದ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಾಗಿದೆ.
ಪ್ರೀತಿಯೇ ಎಲ್ಲಕೂ ಪರಿಹಾರ!
ಬುದ್ಧನ ಅನೇಕ ಬೋಧನೆಗಳು ಪ್ರೀತಿಯ ಮಹತ್ವ ಮತ್ತು ತೆರೆದ ಮನಸ್ಸಿನ ಸ್ಥಿತಿಯ ಸುತ್ತ ಸುತ್ತುವರಿದಿರುತ್ತದೆ. ನೀವು ಮತ್ತು ನಿಮ್ಮ ಮನಸ್ಸು ಸದಾ ಪ್ರೀತಿಯಿಂದ ಕೂಡಿದ್ದರೆ, ನಕಾರಾತ್ಮಕ ಚಿಂತನೆಗಳಿಗೆ ಜಾಗವೇ ಇರುವುದಿಲ್ಲವೆಂಬ ಸತ್ಯವನ್ನು ಬುದ್ಧ ಬೋದಿಸಿದ್ದ. ಯಾವುದೇ ಸಂದರ್ಭದಲ್ಲಿ ನೀವು ಸಂತೋಷದಿಂದಿರಿ ಎಲ್ಲ ನೋವಿವೂ ಇದೇ ಮದ್ದು ಎಂಬ ಒಂದಂಶದ ಮಾತು ಎಲ್ಲ ಕಾಲಕೂ ಸರ್ವಕಾಲಿಕ.
ವರ್ತಮಾನ ಪ್ರಸ್ತುತ ಕಾಲದ ನಿಜ ಶಕ್ತಿ
ಬುದ್ಧನು ಆತನ ಉಪದೇಶಗಳಲ್ಲಿ ವರ್ತಮಾನ ಕಾಲದ ಬಗ್ಗೆ ಹೆಚ್ಚು ಉಲ್ಲೇಖಿಸಿದ್ದಾನೆ. ಮನುಷ್ಯನು ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ಚಿಂತಿಸದೆ ವರ್ತಮಾನ ಕಾಲದಲ್ಲಿ ಒದಗಿರುವ ಸ್ಥಿತಿಯನ್ನು ತೃಪ್ತಿ ಮನೋಭಾವದಿಂದ ಸ್ವೀಕರಿಸಿದ ವ್ಯಕ್ತಿ ಪ್ರಪಂಚದಲ್ಲೇ ಹೆಚ್ಚು ಸುಖಮಯ ವ್ಯಕ್ತಿಯಾಗುತ್ತಾನೆ ಹಾಗೂ ವಾಸ್ತವಿಕವಾಗಿ ಜೀವನವನ್ನು ಅನುಸರಿಸುವ ವಿಧಾನವನ್ನು ಅಭ್ಯಾಸ ಮಾಡಿಕೊಂಡರೆ ಬದುಕು ಸುಂದರ. ಈ ವಿಚಾರವು ಇತ್ತೀಚಿನ ಕಾರ್ಪೊರೇಟ್ ಜಗತ್ತಿನಲ್ಲಿ ನಮಗೆ ನೀಡುವ ಗುರಿಯನ್ನು ಸುಲಭವಾಗಿ ಸಾಧಿಸಲು ಅತ್ಯುತ್ತಮ ಸಾಧನವಾಗಿದೆ.
ಒಳಮನಸ್ಸನ್ನು ಒಮ್ಮೆ ಅವಲೋಕಿಸಿ
ಬುದ್ಧನು ಎಲ್ಲರಿಗೂ ತಮ್ಮ ಒಳಮನಸ್ಸನ್ನು ಮೊದಲು ಅವಲೋಕಿಸಲು ತಿಳಿಸುತ್ತಾನೆ. ಏಕೆಂದರೆ, ನಿಜವಾದ ಐಶ್ವರ್ಯ ಇರುವುದು ನಮ್ಮೊಳಗೇ ಹೊರತು ಹೊರಗಲ್ಲ. ಎಷ್ಟೇ ಹೊರಜಗತ್ತಿನಲ್ಲಿ ಪ್ರಾಪಂಚಿಕವಾಗಿ ಸುಖವನ್ನು ಕಂಡುಕೊಂಡರೂ ಸಹ ನಿಜವಾದ ಶಾಂತಿ ಸಿಗುವುದು ಒಳಮನಸ್ಸಿನ ಸಂತೋಷದಿಂದ ಎಂಬುದು ಎಷ್ಟೋ ಜನರಿಗೆ ಅರಿವೇ ಇರುವುದಿಲ್ಲ.
ಬಯಕೆಗಳನ್ನು ತೊರೆಯಿರಿ
ಜ್ಞಾನೋದಯಕ್ಕೆ ನಿಜವಾದ ಮಾರ್ಗವೆಂದರೆ ನಿಮ್ಮ ಬಯಕೆ ಅಥವಾ ಆಸೆಗಳನ್ನು ನಿಮ್ಮಿಂದ ತೊರೆಯಲು ಅವಕಾಶ ಕೊಡಿ. ಆಸೆ ಇಟ್ಟುಕೊಂಡು ಜ್ಞಾನೋದಯಕ್ಕೆ ಪ್ರಯತ್ನಿಸುವವನು ನಿಜವಾದ ಮೂರ್ಖ.
ಮನಸ್ಸನ್ನು ಶಿಸ್ತಿನೆಡೆಗೆ ಕೊಂಡೊಯ್ಯಿರಿ
ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ, ಅದು ನಮ್ಮನ್ನು ಆಳುತ್ತದೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಎಷ್ಟೇ ಬುದ್ಧಿವಂತರಾದರೂ ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿಲ್ಲದಿದ್ದರೆ ನಿಮ್ಮ ಸಾಧನೆ ಶೂನ್ಯಕ್ಕೆ ಸಮ. ಆದ್ದರಿಂದ ಮನಸ್ಸನ್ನು ಶಿಸ್ತಿನ ಹಾದಿಯಲ್ಲಿ ಕ್ರಮಿಸಿ. ವಾಸ್ತವಿಕವಾಗಿ ಅದರಿಂದ ಲಾಭವಾಗದಿದ್ದರೂ
ಇತರರ ಮೇಲಿನ ಸಹಾನುಭೂತಿ ಇರಲಿ
ಭೂಮಿ ಮೇಲಿನ ಪ್ರತಿಯೊಂದ ಜೀವಿಯೂ ಒಬ್ಬರಿಗೊಬ್ಬರು ಪರಸ್ಪರ ಸಂಪರ್ಕದಲ್ಲಿರಲೇಬೇಕು. ಜೀವಿತ ಮತ್ತು ನಿರ್ಜೀವಿತ ವಸ್ತುಗಳೂ ಸಹ ಪ್ರಾಕೃತಿಕವಾಗಿ ಸಹಜೀವನ ನಡೆಸಲು ಪರಸ್ಪರ ಅವಲಂಬಿಸಿರುವುದನ್ನು ನೀವು ಗಮನಿಸಬಹುದು. ಇತರರ ಸಹಕಾರವಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ. ಹೀಗಿರುವಾಗ, ಸ್ವಾರ್ಥವನ್ನು ಮೈಗೂಡಿಸಿಕೊಂಡರೆ ಪ್ರಯೋಜನವೇನು. ಇತರರ ಮೇಲೆ ನಾವು ತೋರಿಸುವ ನಿಜವಾದ ಸಹಾನುಭೂತಿಯಿಂದ ಪ್ರಾಪಂಚಿಕ ಸಮಸ್ಯೆಗಳನ್ನು ಸುಲಭಾವಾಗಿ ಪರಿಹರಿಸಬಹುದು.
ಬುದ್ಧನ ಬೋಧನೆಗಳು ಪ್ರೀತಿಯ ಸುತ್ತ ಸುತ್ತುವರಿದಿದ್ದು, ಅದಕ್ಕೆ ಇನ್ನೊಂದು ಆಯಾಮವೇ ಸಹಾನುಭೂತಿ. ಒಬ್ಬರ ಮೇಲೆ ಮತ್ತೊಬ್ಬರು ತೋರಿಸುವ ಸಹನಾ ಮನೋಭಾವವೇ ವಿಶ್ವದ ಅತ್ಯತ್ತಮ ಮಾನವ ಶಕ್ತಿ. ಇದರಿಂದ ಮಾತ್ರ ಪ್ರಪಂಚದ ವಿಕೋಪಗಳನ್ನು ಸುಲಭವಾಗಿ ನಿವಾರಿಸಬಹುದು ಎಂಬುದು ಎಲ್ಲಾ ಕಾಲಕ್ಕೂ ಸಲ್ಲುವ ಮತ್ತು ಮನುಕುಲಕ್ಕೆ ಅಗತ್ಯವಾದ ಬುದ್ಧನ ತತ್ವಾದರ್ಶಗಳು. ಮಹೋನ್ನತ ತತ್ವ.
ನಡುರಾತ್ರಿಯಲಿ ಹೆಂಡತಿ ಮಕ್ಕಳನ್ನು ಬಿಟ್ಟ, ಎಲ್ಲವನ್ನು ತೊರೆದು ನಿಂತ, ಅಧ್ಯಾತ್ಮಕ್ಕಿಂತ ಇದ್ದಲ್ಲೆ ಸಣ್ಣ ಸಣ್ಣ ಖುಷಿಗಳ ಅರಸುತ್ತಾ ಬೆನ್ನಿಗೆ ಜಂಗಮದ ಕಣ್ಣುಗಳ ನಮಗೆ ಗೊತ್ತಿಲ್ಲದಂತೆಯೇ ಅಂಟಿಸಿಕೊಂಡು ಪ್ರತಿ ನಿಮಿಷವನ್ನು ಉತ್ಕಟವಾಗಿ ಬದುಕುವ ಪರಿಯಲ್ಲೇ ಇಡೀ ಬದುಕು ಅಡಗಿದೆ ಎನ್ನುವ ಅದ್ಭುತ ಸತ್ಯವ ಹೇಳುತ್ತಲೇ ಇರುವ ಬುದ್ಧ ನಮ್ಮೊಳಗೆ ಚಿಗುರೊಡೆಯುತ್ತಲಿರುವವರೆಗೂ ಇವನ ಅಸ್ತಿತ್ವ ಎಂದಿಗೂ ಪ್ರಸ್ತುತ.