ಕೇರಳದ ಗರ್ಭಿಣಿ ಆನೆಯ ಅಮಾನುಷ ಹತ್ಯೆ ಘಟನೆ ಪರಿಸರ ದಿನದ ಹೊತ್ತಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ, ಆತಂಕ- ಸಂತಾಪಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಆನೆಯ ದುರಂತ ಅಂತ್ಯ ಮತ್ತು ಅದನ್ನು ಅತ್ಯಂತ ಹೇಯವಾಗಿ ಹತ್ಯೆ ಮಾಡಿದ ಮಾನವನ ವಿಕೃತಿಗೆ ಭಾವೋದ್ವೇಗದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಂದು ತಿಂಗಳ ಮರಿಯನ್ನು ಹೊಟ್ಟೆಯೊಳಗಿಟ್ಟುಕೊಂಡಿದ್ದ ಗರ್ಭಿಣಿ ಆನೆಯ ಸಾವು ಮನುಷ್ಯನ ಸ್ವಾರ್ಥ, ವನ್ಯಜೀವಿಗಳ ಬದುಕುವ ಹಕ್ಕು, ಪರಿಸರ ನಾಶ, ಸರ್ಕಾರ ಮತ್ತು ಇಲಾಖೆಗಳ ಹೊಣೆಗೇಡಿತನ, ಪಕ್ಷಪಾತ ಧೋರಣೆ ಸೇರಿದಂತೆ ಹಲವು ವಿಷಯಗಳ ಕುರಿತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗೇ ಬಹಳ ಸಂವೇದನಾಶೀಲರು, ಸೂಕ್ಷ್ಮಮತಿಗಳು ಎಂದುಕೊಂಡವರ ಜಾಣ್ಮೆಯ ಆಯ್ದ ಪ್ರತಿಕ್ರಿಯೆ, ಸ್ಪಂದನೆಗಳ ಕುರಿತ ಚರ್ಚೆಯೂ ನಡೆದಿದೆ.
ಕಳೆದ ಮೇ 27ರಂದು ಕೇರಳದಲ್ಲಿ ಸಂಭವಿಸಿದ ಹೆಣ್ಣಾನೆಯ ದುರಂತ ಅಂತ್ಯಕ್ಕೆ ಕಾರಣ; ಆ ಕಾಡಾನೆ ಬೆಳೆ ನಾಶ ಮಾಡುತ್ತದೆ ಎಂದು ಕೆಲವು ವ್ಯಕ್ತಿಗಳು ಅನಾನಸ್ ಹಣ್ಣಿನೊಳಗೆ ಸಿಡಿಮದ್ದು ತುಂಬಿ, ಅದು ತಿನ್ನುವಂತೆ ಮಾಡಿದ್ದು. ಸಿಡಿಮದ್ದು ತಿಂದ ಬಳಿಕ ಆನೆಯ ಬಾಯೊಳಗೆ ಅವು ಸಿಡಿದು ಆನೆ ಮೃತಪಟ್ಟಿದೆ. ಆನೆ ಒಂದು ತಿಂಗಳ ಗರ್ಭಿಣಿಯಾಗಿತ್ತು ಎಂಬ ವಿವರಗಳೆಲ್ಲಾ ಆನೆ ಸಾವು ಸಂಭವಿಸಿದ ವಲಯದ ಅರಣ್ಯಾಧಿಕಾರಿಗಳು ನೀಡಿದ ಮಾಹಿತಿಯಿಂದ ಹೊರಜಗತ್ತಿಗೆ ತಿಳಿದ ಸಂಗತಿ.
Also Read: ಪರಿಸರ ಉಳಿಸಿ ಎಂಬ ಘೋಷಣೆ ಸಾಕು..!
ಪ್ರಕೃತಿಯನ್ನು ಉಳಿಸಲೇಬೇಕಾದ ತುರ್ತು ಮುಂದಿದೆ ಎಚ್ಚೆತ್ತುಕೊಳ್ಳಿ..!
ಆನೆಯನ್ನೇ ಕೊಲ್ಲಲು ಅವರು ಸಿಡಿಮದ್ದು ತುಂಬಿಸಿ ಅನಾನಸ್ ಇಟ್ಟಿದ್ದರೆ? ಅಥವಾ ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಡುಹಂದಿ ಉಪಟಳದಿಂದ ಪಾರಾಗಲು ರೈತರು ಹೀಗೆ ಅನಾನಸಿನಲ್ಲಿ ಸಿಡಿಮದ್ದು ತುಂಬಿಡುವ ವಾಡಿಕೆಯಂತೆ ಇಟ್ಟಿದ್ದನ್ನು ಆನೆ ತಿಂದು ಸಾವು ಕಂಡಿತೇ ಎಂಬ ಚರ್ಚೆ ಕೂಡ ನಡೆದಿದೆ. ಆ ಭಾಗದಲ್ಲಿ ಕಾಡುಹಂದಿಗಳ ಹತ್ಯಗೆ ವನ್ಯಜೀವಿ ಕಾಯ್ದೆಯಡಿ ನೀಡಿರುವ ಅನುಮತಿಯನ್ನು ದುರ್ಬಳಕೆ ಮಾಡಿಕೊಂಡು ಆನೆ ಸಾಯಿಸಲಾಗಿದೆಯೇ ? ಎಂಬ ಅನುಮಾನಗಳೂ ಎದ್ದಿವೆ.
Also Read: ಪ್ರಭಾವಿ ಲಾಬಿಯ ಮುಂದೆ ಮಂಡಿಯೂರಿದರೆ ಪರಿಸರ ತಜ್ಞರು?
ಈ ನಡುವೆ ಘಟನೆ ನಡೆದದ್ದು ಕೇರಳದ ಮಲಪ್ಪುರಂ ಜಿಲ್ಲೆಯ ವ್ಯಾಪ್ತಿಯಲ್ಲಿ ಎಂಬುದನ್ನೇ ಮುಂದಿಟ್ಟುಕೊಂಡು ಕೇಂದ್ರ ಸಚಿವೆ ಮನೇಕಾ ಗಾಂಧಿಯವರು ಟ್ವೀಟ್ ಮಾಡಿ,”ಮಲ್ಲಪ್ಪುರಂ ಜಿಲ್ಲೆ ತೀವ್ರ ಅಪರಾಧ ಕೃತ್ಯಗಳಿಗಾಗಿಯೇ ಕುಖ್ಯಾತಿ ಹೊಂದಿದೆ. ಅದರಲ್ಲೂ ಪ್ರಾಣಿಗಳ ವಿಷಯದಲ್ಲಿ ಜಿಲ್ಲೆಯ ಕೃತ್ಯಗಳಿಗೆ ಪಾರವಿಲ್ಲ. ಅಷ್ಟಾದರೂ ಒಬ್ಬರನೇ ಒಬ್ಬ ಕಳ್ಳಬೇಟೆಗಾರರ ವಿರುದ್ಧ, ವನ್ಯಜೀವಿ ಹಂತಕರ ವಿರುದ್ಧ ಕ್ರಮಕೈಗೊಂಡಿಲ್ಲ. ಹಾಗಾಗಿ ಅವರು ಇಂತಹದ್ದನ್ನು ಮಾಡುತ್ತಲೇ ಇರುತ್ತಾರೆ. ಹಾಗಾಗಿ ನೀವೆಲ್ಲಾ ಅಲ್ಲಿನ ಸರ್ಕಾರ ಮತ್ತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ನೇರ ಕರೆಮಾಡಿ, ಇಮೇಲ್ ಮಾಡಿ ಛೀಮಾರಿ ಹಾಕಿ” ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದರು. ಅವರ ಈ ಟ್ವೀಟ್ ಬಳಿಕ ಇಡೀ ಘಟನೆಗೆ ಬೇರೆಯದೇ ಬಣ್ಣ ಬಂದಿತು.
Mallapuram is know for its intense criminal activity specially with regards to animals. No action has ever been taken against a single poacher or wildlife killer so they keep doing it.
I can only suggest that you call/email and ask for action pic.twitter.com/ii09qmb7xW— Maneka Sanjay Gandhi (@Manekagandhibjp) June 3, 2020
ಶೇ.70ರಷ್ಟು ಮುಸ್ಲಿಂ ಸಮುದಾಯದ ಬಾಹುಳ್ಯ ಹೊಂದಿರುವ ಕೇರಳದ ಈ ಮಲಪ್ಪುರಂ ಜಿಲ್ಲೆಯನ್ನು ಹೀಗೆ ಇಡಿಯಾಗಿ ಅಪರಾಧಿಯನ್ನಾಗಿ ಮಾಡಿದ ಕೇಂದ್ರದ ಬಿಜೆಪಿ ಸಚಿವೆಯ ಹಿಂದಿನ ರಾಜಕೀಯ ಉದ್ದೇಶ ಮತ್ತು ಅಲ್ಪಸಂಖ್ಯಾತ ವಿರೋಧಿ, ಕಟ್ಟರ್ ಹಿಂದುತ್ವವಾದಿ ಧೋರಣೆ ಇಡೀ ಘಟನೆಗೆ ಪರಿಸರ ಮತ್ತು ಸಹಜ ಮಾನವೀಯ ಅಂತಃಕರಣವನ್ನು ಮೀರಿ ಪೂರ್ವಗ್ರಹಪೀಡಿತ, ದ್ವೇಷ ರಾಜಕಾರಣದ ಅಜೆಂಡಾದ ಆಯಾಮವನ್ನು ನೀಡಿತು. ವಾಸ್ತವವಾಗಿ ಬಿಜೆಪಿಯ ಇಸ್ಲಮೋಫೋಬಿಯಾದ ರಾಜಕೀಯ ಅಜೆಂಡಾಕ್ಕೆ ತಕ್ಕಂತೆ ಸಚಿವೆ ಈ ಘಟನೆಯನ್ನು ತಿರುಚಿದ್ದಾರೆ ಎಂದು ‘ದಿ ವೈರ್’ ನ್ಯೂಸ್ ಪೋರ್ಟಲ್ ವರದಿ ಹೇಳಿದೆ.
Also Read: ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?
ಅದಕ್ಕೆ ಕಾರಣ; ಸಚಿವೆ ಮನೇಕಾ ಗಾಂಧಿ ತಿಳಿದಂತೆ ಆ ಆನೆ ಮಲಪ್ಪುರಂ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾವು ಕಂಡಿಲ್ಲ! ಬದಲಾಗಿ ನೆರೆಯ ಪಲಕ್ಕಾಡು ಜಿಲ್ಲೆ ವ್ಯಾಪ್ತಿಯ ಮನ್ನಾರ್ ಕಾಡ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ವ್ಯಾಪ್ತಿಗೆ ಸೇರಿದ ಈ ಜಾಗದಲ್ಲಿ ಆನೆ ಸುತ್ತಾಡಿತ್ತು. ಮಲ್ಲಪುರಂ ಮತ್ತು ಪಲಕ್ಕಾಡು ಜಿಲ್ಲೆಯ ಗಡಿ ಭಾಗದ ಹಲವು ಹಳ್ಳಿಗಳು ಆ ಪ್ರದೇಶದಲ್ಲಿ ಇದ್ದು, ತಿರುವಿಳಿಯಂಕುನ್ನು ಎಂಬ ಹಳ್ಳಿಯ ವ್ಯಾಪ್ತಿಯ ಕಾಡಿನಲ್ಲಿ ಆನೆ ಪತ್ತೆಯಾಗಿತ್ತು. ಆದರೆ, ಈ ವಾಸ್ತವಾಂಶಗಳನ್ನು ಮರೆಮಾಚಿ, ಸಚಿವೆ, ಮೋಹನ್ ಕೃಷ್ಣನ್ ಎಂಬ ಅರಣ್ಯಾಧಿಕಾರಿ ತನ್ನ ಫೇಸ್ ಬುಕ್ ನಲ್ಲಿ ಆನೆಯ ದುರಂತ ಕುರಿತು ಬರೆದ ಭಾವನಾತ್ಮಕ ಬರಹದ ಆಧಾರದ ಮೇಲೆ ಈ ಪೂರ್ವಗ್ರಹಪೀಡಿತ ಪ್ರತಿಕ್ರಿಯೆ ನೀಡಿದ್ದರು. ಮಲ್ಲಪುರಂ ಮತ್ತು ಮುಸ್ಲಿಂ ಬಾಹುಳ್ಯದ ಪ್ರದೇಶ, ಹಾಗೂ ಕೇರಳದ ಕಮ್ಯುನಿಸ್ಟ್ ಪಕ್ಷದ ಆಡಳಿತ ಮುಂತಾದ ರಾಜಕೀಯ ಮತ್ತು ಸಾಮಾಜಿಕ ಅಂಶಗಳ ಹಿನ್ನೆಲೆಯಲ್ಲಿ ಇಡೀ ವಿದ್ಯಮಾನ ಸಾಮಾಜಿಕ ಜಾಲತಾಣದಲ್ಲಿ ಈ ದೊಡ್ಡ ಪ್ರಮಾಣದ ಆಕ್ರೋಶ, ಭಾವನಾತ್ಮಕ ಸುನಾಮಿಗೆ ಕಾರಣವಾಯಿತು ವಿನಃ, ವಾಸ್ತವವಾಗಿ ವನ್ಯಜೀವಿಗಳ ಕುರಿತ ನೈಜ ಕಾಳಜಿ ಅಥವಾ ಪರಿಸರದ ಕುರಿತ ಕಾಳಜಿಯ ಕಾರಣಕ್ಕಲ್ಲ ಎಂಬ ವಾದವೂ ಈಗ ಕೇಳಿಬರುತ್ತಿದೆ.
Also Read: ವನ್ಯಜೀವಿ ಮಂಡಳಿ ಇರುವುದು ನಿಜಕ್ಕೂ ಯಾರ ಹಿತ ಕಾಯಲು?
ಈ ವಾಸ್ತವಾಂಶಗಳು ಇಡೀ ಘಟನೆಗೆ ಮತ್ತೊಂದು ಆಯಾಮ ನೀಡಿದ್ದು, ಭಾರತೀಯರ ಭಾವನಾತ್ಮಕ ಪ್ರತಿಕ್ರಿಯೆಗಳು ಎಷ್ಟರಮಟ್ಟಿಗೆ ನೈಜ, ಎಷ್ಟರಮಟ್ಟಿಗೆ ‘ಸೆಲೆಕ್ಟಿವ್’ ಮತ್ತು ಇಸ್ಲಮೋಫೋಬಿಕ್ ಎಂಬ ಕುರಿತ ಹೊಸ ಚರ್ಚೆ ಈಗ ಶುರುವಾಗಿದೆ.
ಆನೆಯ ದಾರುಣ ಹತ್ಯೆ ನಿಜಕ್ಕೂ ಆಘಾತಕಾರಿ ಮತ್ತು ಇಡೀ ಮನುಕುಲವೇ ತಲೆತಗ್ಗಿಸುವಂತಹ ಪರಮ ಕ್ರೌರ್ಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ , ಅಮಾನುಷ ಘಟನೆಯ ಬಳಿಕ ಅದು ನಡೆದ ಪ್ರದೇಶ, ಅಲ್ಲಿನ ಬಹುಸಂಖ್ಯಾತ ಸಮುದಾಯ, ಅಲ್ಲಿನ ಆಡಳಿತ ಸರ್ಕಾರದ ರಾಜಕೀಯ ಸೈದ್ಧಾಂತಿಕ ನಿಲುವು ಮುಂತಾದ ನಿಜವಾಗಿಯೂ ಘಟನೆಗೆ ಸಂಬಂಧಪಡದ ಸಂಗತಿಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಸುರಿಸುವ ಕಣ್ಣೀರು, ವ್ಯಕ್ತಪಡಿಸುವ ಕಾಳಜಿ, ಮಿಡಿಯವ ಮನಸ್ಸುಗಳು ಎಷ್ಟು ನೈಜ? ಎಷ್ಟು ಮೊಸಳೆಕಣ್ಣೀರು? ಎಷ್ಟು ಕೃತಕ? ಎಂಬ ಪ್ರಶ್ನೆಗಳಿಗೂ ಅವಕಾಶ ಮಾಡಿಕೊಟ್ಟಿದೆ.
Also Read: ಉದ್ದನೆ ದಾಡಿ, ಪೈಜಾಮ ಮತ್ತು ಮಾಧ್ಯಮಗಳ ʼಇಸ್ಲಾಮೋಫೋಬಿಯಾʼ!
ಹಾಗೆಯೇ, ಪರಿಸರ ದಿನದ ಹಿನ್ನೆಲೆಯಲ್ಲಿ ಇಡೀ ಘಟನೆಯನ್ನು ಖಂಡಿಸುವ, ನೋವಿನಿಂದ ಮಿಡಿಯುವ ಮತ್ತು ಘಟನೆಗೆ ಕಾರಣರೆಂದುಕೊಂಡು ಏಕಾಏಕಿ ಒಂದು ಸಮುದಾಯವನ್ನು, ಒಂದು ಪ್ರದೇಶವನ್ನು, ಒಂದು ರಾಜ್ಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ತೀರ್ಪು ಕೊಟ್ಟು ಹಣಿಯುವ ‘ಬಲಿಪಶು’ ವರಸೆ ಸರಿಯೇ? ಅಥವಾ, ನಿಜವಾಗಿಯೂ ಅಂತಹ ಘಟನೆಗೆ ಕಾರಣವೇನು? ವನ್ಯಜೀವಿಗಳು ನಾಡಿಗೆ ನುಗ್ಗಲು ಇರುವ ಕಾರಣವೇನು? ಅದರಲ್ಲಿ ಕಾಡು ಕಡಿದು ಪ್ರಾಣಿಗಳ ನೆಲವನ್ನು ಅತಿಕ್ರಮಿಸಿದ ಹಳ್ಳಿಗರ ತಪ್ಪಿನಷ್ಟೇ ನಗರದ ಐಷಾರಾಮಿತನಕ್ಕಾಗಿ, ಭಕಾಸುರ ಕೊಳ್ಳುಬಾಕತನಕ್ಕಾಗಿ ಅರಣ್ಯಗಳ ಮೇಲೆ ಒತ್ತಡ ಉಂಟುಮಾಡಿದ ಜನರ ಪಾಲೆಷ್ಟು? ಈಗ ಐಷಾರಾಮಿ ಮನೆಗಳಲ್ಲಿ ಕೂತು ಸತ್ತ ಆನೆಗೆ ಕಣ್ಣೀರುಗರೆಯುವ ಮಂದಿ ನಿಜವಾಗಿಯೂ ಈ ದುರಂತಕ್ಕೆ ತಾವೂ ಕಾರಣ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬಲ್ಲರೆ? ಎಂಬ ಪ್ರಶ್ನೆಗಳೂ ಇವೆ.
ನಗರಗಳ ಮಿತಿ ಇಲ್ಲದ ವಿಸ್ತರಣೆ, ಐಷಾರಾಮಿ ಬದುಕಿಗಾಗಿ ನೀರು, ವಿದ್ಯುತ್, ಖನಿಜಗಳಿಗಾಗಿ ಅರಣ್ಯಗಳನ್ನು ಬರಿದು ಮಾಡಿದ್ದು, ಐಷಾರಾಮಿ ಜೀವನಶೈಲಿಗಾಗಿ ಅರಣ್ಯ, ವನ್ಯಜೀವಿಗಳ ಮೇಲೆ ಒತ್ತಡ ತಂದದ್ದು, ಪ್ರವಾಸ, ಚಾರಣಗಳ ಮೂಲಕ ಸಂರಕ್ಷಿತ ಪ್ರದೇಶಗಳ ಮೇಲೆಯೂ ಒತ್ತಡ ಹೇರಿದ್ದು,.. ಹೀಗೆ ಕಾಡಿನ ಆನೆಯೊಂದು ನಾಡಿಗೆ ಬಂದು ಸಿಡಿಮದ್ದು ತಿಂದು ಸಾವು ಕಾಣಲು ತಾವೆಷ್ಟು ಕಾರಣ ಎಂದು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬಲ್ಲರೆ?
ಹೀಗೆ ಆತ್ಮವಿಮರ್ಶೆ ಮಾಡಿಕೊಂಡು ಕನಿಷ್ಟ ಬದುಕಿನಲ್ಲಿ ಪರಿಸರ ಪೂರಕ ಜೀವನಶೈಲಿ ರೂಢಿಸಿಕೊಂಡರೆ ಇಂತಹ ಆನ್ ಲೈನ್ ಕಣ್ಣೀರಿಗೆ ಒಂದಿಷ್ಟಾದರೂ ಬೆಲೆ, ಅಲ್ಲವೆ? ಈ ನಿಟ್ಟಿನಲ್ಲಿ ಸಣ್ಣ ಬದಲಾವಣೆಗೆ ಕಾರಣವಾದರೆ, ಆ ಅಮಾಯಕ ಆನೆಯ ಸಾವು ಮನುಷ್ಯನೆದೆಯ ಕರಗಿಸಿದ್ದು ನಿಜವೆನ್ನಬಹುದು!