“ಭೂ ಒತ್ತುವರಿ ಪ್ರಕರಣದಲ್ಲಿ ದಂಡ ವಿಧಿಸಲು ಕೋರ್ಟ್ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು, ಅವರಿಗೆ ಭರಿಸಲಾಗದಷ್ಟು ದಂಡ ಹಾಕಲಾಗಿದೆ. ಆ ಭೂಮಿಯ ಮಾಲೀಕರ ಕುಟಂಬಕ್ಕೆ ಅನ್ಯಾಯವಾಗಿದೆ. ಅವರ ಮಗನನ್ನು ಕರೆಸಿ ಮಾತನಾಡಿದೆ. ಎಲ್ಲಾ ದಾಖಲೆಗಳನ್ನು ತೋರಿಸಿದ ಅವರು ನೈಜ ವಿಷಯ ತಿಳಿಸಿದರು. ಸರ್ಕಾರ ಈಗ ಅವರಿಗೆ ನ್ಯಾಯ ಕೊಡಬೇಕು” ಎಂದು ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೊನ್ನೆ ಸದನದಲ್ಲಿ ಬಜೆಟ್ ಅಧಿವೇಶನದ ನಡುವೆಯೇ ಮುಖ್ಯಮಂತ್ರಿಗಳ ಮುಂದೆ ಎದೆ ಬಡಿದುಕೊಂಡು ಗೋಗರೆದರು!
ಹೌದು, ಜೆಡಿಎಸ್ ನಾಯಕರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರು ಹೀಗೆ ಗೋಗರೆದರೆಂದರೆ ‘ಮಣ್ಣಿನ ಮಕ್ಕಳು’ ಎಂಬ ಬಿರುದಾಂಕಿತ ಆ ಕುಟುಂಬದ ಕಾಳಜಿ ದನಿ ಇಲ್ಲದ, ಅನ್ಯಾಯಕ್ಕೊಳಗಾದ ಮಣ್ಣಿನ ಮಕ್ಕಳ ಕುರಿತೇ ಆಗಿರುತ್ತದೆ ಎಂದು ಊಹಿಸುವುದು ಸಹಜ.
ಅದರಲ್ಲೂ ಅರಣ್ಯ ಭೂಮಿ ಒತ್ತುವರಿ ತೆರವಿನ ಕಾರ್ಯಾಚರಣೆಗಳು ಮಲೆನಾಡಿನ ಬಡ ಕೃಷಿ ಕುಟುಂಬಗಳನ್ನು ನಿದ್ದೆಗೆಡಿಸಿರುವಾಗ, ಸರ್ಕಾರಿ ಭೂಮಿ ಒತ್ತುವರಿ ಎಂದು ಭೂ ಕಬಳಿಕೆ ಕಾಯ್ದೆ(192 ಎ) ಹಳ್ಳಿಗಾಡಿನ ಹತ್ತಾರು ಗುಂಟೆ ಒತ್ತುವರಿದಾರರನ್ನೂ ಜೈಲಿಗೆ ಅಟ್ಟುತ್ತಿರುವ ಹೊತ್ತಲ್ಲಿ, ಮಣ್ಣಿನ ಮಕ್ಕಳು ಎಂಬ ಹೆಗ್ಗಳಿಕೆಯ, ರೈತ ಪರ ಪಕ್ಷ ಎಂಬ ಹೆಚ್ಚುಗಾರಿಕೆಯ ಪಕ್ಷದ ಮುಖಂಡರು ವಿಧಾನಸಭೆಯಲ್ಲಿ ಇಷ್ಟು ಭಾವಾವೇಶದಿಂದ ಕಣ್ಣೀರು ತುಂಬಿಕೊಂಡು ಮಾತನಾಡಿದ್ದಾರೆ ಎಂದರೆ ಸಹಜವಾಗೇ ಅದು ಬದುಕನ್ನೇ ಕಳೆದುಕೊಳ್ಳುವ ಆತಂಕದಲ್ಲಿ ದಿಕ್ಕೆಟ್ಟಿರುವ ಬಡ ರೈತರ ಪರವಾಗಿಯೇ ಎತ್ತಿದ ದನಿ ಎಂದು ನಿರೀಕ್ಷಿಸುವುದು ತಪ್ಪಲ್ಲ.
ಆದರೆ, ವಾಸ್ತವ ಸಂಗತಿ ಬೇರೆಯೇ. ಪಕ್ಷದ ಚಿಹ್ನೆಯಲ್ಲಿಯೇ ತೆನೆ ಹೊತ್ತ ಮಹಿಳೆಯ ಚಿತ್ರ ಇಟ್ಟುಕೊಂಡು ರಾಜ್ಯದ ಮೂಲೆಮೂಲೆಯಲ್ಲೂ ತಮ್ಮದು ರೈತ ಪರ ಪಕ್ಷ, ರೈತರಿಗಾಗಿ ಪ್ರಾಣ ಕೊಡಲೂ ಸಿದ್ಧ ಎಂದು ಘೋಷಣೆ ಹಾಕುವ ಜೆಡಿಎಸ್ ನಾಯಕರು ಸದನದಲ್ಲಿ ಹೀಗೆ ಗೋಗರೆದು, ದಂಡ ಕಡಿತ ಮಾಡುವಂತೆ ಅಂಗಾಲಾಚಿದ್ದು ಯಾವ ರೈತರ ಪರವೂ ಅಲ್ಲ! ಬದಲಾಗಿ ಈಗಲ್ಟನ್ ರೆಸಾರ್ಟ್ ಎಂಬ ಬಿಡದಿಯ ಐಷಾರಾಮಿ ರೆಸಾರ್ಟ್ ಒಂದರ ಪರವಾಗಿ, ಹಿಂದಿನ ಸರ್ಕಾರದ ಆ ರೆಸಾರ್ಟ್ ಗೆ ಹಾಕಿರುವ 982 ಕೋಟಿ ರೂ. ದಂಡ ಹೊರೆಯಾಗಿದೆ. ಅದು ಘೋರ ಅನ್ಯಾಯ. ಅದರಿಂದ ಆ ಐಷಾರಾಮಿ ಹೋಟೆಲ್ ಮಾಲೀಕರ ಸಂಸಾರ ಕಂಗಾಲಾಗಿದೆ ಎಂದೂ, ಅಂತಹ ಭಾರೀ ದಂಡ ಹಾಕಲು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ಭಾವಾವೇಶದ ಮಾತುಗಳನ್ನು ಆಡಿದ್ದಾರೆ!
ಬಿಡದಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿ ರೆಸಾರ್ಟ್ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಕ್ರಮ ಒತ್ತುವರಿ ಮಾಡಿದ ಕಂಪನಿಗೆ ದಂಡ ವಿಧಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಭೂಮಿಯ ಮೌಲ್ಯದ ಆಧಾರದ ಮೇಲೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 982 ಕೋಟಿ ರೂ. ದಂಡ ವಿಧಿಸಲಾಗಿತ್ತು. ಆದರೆ, ಸರ್ಕಾರದ ಆ ಕ್ರಮವನ್ನು ಪ್ರಶ್ನಿಸಿ ಕಂಪನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.
2018ಕ್ಕೂ ಮುನ್ನ ನಡೆದ ಈ ದಂಡ ಪ್ರಕ್ರಿಯೆಯ ಕುರಿತು ಆಗ ಪ್ರತಿಪಕ್ಷದ ಸ್ಥಾನದಲ್ಲಿದ್ದ ಎಚ್ ಡಿ ಕುಮಾರಸ್ವಾಮಿ, ಪ್ರಕರಣದಲ್ಲಿ ರೆಸಾರ್ಟ್ ಮಾಲೀಕರಿಗೆ ಅನ್ಯಾಯವಾಗಿದೆ ಎಂದು ಇದೀಗ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ವಿಷಯ ಪ್ರಸ್ತಾಪಿಸಿದ್ದರು.
ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು, “ಕೋರ್ಟ್ ಆದೇಶದಂತೆ ಒತ್ತುವರಿಯಾದ ಜಮೀನಿಗೆ ದರ ನಿಗದಿ ಮಾಡುವಲ್ಲಿ ಅಕ್ರಮ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದ ಗಾಲ್ಫ್ ಕ್ಲಬ್ ಹೊಂದಿರುವ ಅಲ್ಲಿ ಉಚಿತವಾಗಿ ಆಟಗಾರರಿಗೆ ತರಬೇತಿ ನೀಡಲಾಗುತ್ತಿದೆ. ಹಾಗಾಗಿದ್ದರೂ ಇಷ್ಟು ಭಾರೀ ಮೊತ್ತದ ದಂಡ ವಿಧಿಸಿ ನಾವು ಪಾರದರ್ಶಕ ಆಡಳಿತ ನಡೆಸಿದ್ದೇವೆ ಎಂದು ಹೇಳುತ್ತಿರುವವರಿಗೆ ಭಾರತ ರತ್ನ ನೀಡಬೇಕು” ಎಂದು ಕುಮಾರಸ್ವಾಮಿ ಆಕ್ರೋಶದಿಂದ ಹರಿಹಾಯ್ದರು. ಈ ಆಕ್ರೋಶ ಸಹಜವಾಗೇ ಸಿದ್ದರಾಮಯ್ಯ ಅವರನ್ನು ಕೆರಳಿಸಿತು. “ವಿಲ್ಲಾಗಳನ್ನು ನಿರ್ಮಿಸಿ ದುಬಾರಿ ಬೆಲೆಗೆ ಮಾರಾಟ ಮಾಡಿರುವ ಈಗಲ್ಟನ್ ರೆಸಾರ್ಟಿಗೆ ಹೆಚ್ಚಿನ ದಂಡ ವಿಧಿಸಿರುವುದು ತಪ್ಪಾಗಿದ್ದರೆ ಆ ಬಗ್ಗೆ ತನಿಖೆ ನಡೆಸಲಿ. ಆದರೆ, ಬಜೆಟ್ ಚರ್ಚೆಯ ವೇಳೆ ಈ ವಿಷಯವನ್ನು ನೀವು ಪ್ರಸ್ತಾಪಿಸುತ್ತಿರುವುದು ಏಕೆ? ಆ ರೆಸಾರ್ಟ್ ಪರ ವಕಾಲತು ವಹಿಸುತ್ತಿರುವುದರ ಹಿಂದಿನ ಕಾರಣವೇನು?” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹೌದು, ಈಗಲ್ಟನ್ ರೆಸಾರ್ಟ್ ಎಂಬುದು ಸರ್ಕಾರಿ ಜಮೀನು ಒತ್ತುವರಿ ಎಂಬ ಕಾರಣಕ್ಕೆ ಕಂದಾಯ ಇಲಾಖೆಯೋ, ಅರಣ್ಯ ಇಲಾಖೆಯೋ ಜೆಸಿಬಿ ತಂದು ನಿಲ್ಲಿಸಿ ದರ್ಪ ಮೆರೆಯುತ್ತಿರುವ ವಿಚಾರವಲ್ಲ; ರೆಸಾರ್ಟ್ ಯಾವುದೇ ಬಡ ರೈತನ ಜೋಪಡಿಯಲ್ಲ. ಅಥವಾ ಆ ಒತ್ತುವರಿ ಭೂಮಿ ಕೂಡ ಯಾವುದೋ ಹಳ್ಳಿ ಮೂಲೆಯ ಮೂರು ಕಾಸಿನ ಬೆಲೆಯ ಬಂಜರು ಭೂಮಿಯೂ ಅಲ್ಲ. ಹಾಗಿರುವಾಗ ಜೆಡಿಎಸ್ ನಾಯಕರಿಗೆ ಹೀಗೆ ಕರುಳುಕಿತ್ತುಬರುವಂತಹ ಕಕ್ಕುಲತೆ ಆ ರೆಸಾರ್ಟ್ ಮಾಲೀಕರ ಮೇಲೆ ಬರಲು ಕಾರಣವೇನು? ಎಂಬುದು ಸಹಜವಾಗಿಯೇ ಕೇಳಿಬರುತ್ತಿರುವ ಮಾತು.
ಮಲೆನಾಡಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅರಣ್ಯ ಮತ್ತು ಕಂದಾಯ ಇಲಾಖೆಗಳು ಬಡ ಒತ್ತುವರಿದಾರರ ಮೇಲೆ ಪ್ರಹಾರ ನಡೆಸುತ್ತಿವೆ. ತೀರ್ಥಹಳ್ಳಿ ತಾಲೂಕಿನ ಹಂಚದಕಟ್ಟೆ, ದೇಮ್ಲಾಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಬಡ ರೈತರ ಅರ್ಧ, ಒಂದು ಎಕರೆ ಒತ್ತುವರಿಯನ್ನೂ ತೆರವುಗೊಳಿಸಿ ದಶಕಗಳ ಸಾಗುವಳಿ ಭೂಮಿಯನ್ನು ಕಿತ್ತುಕೊಂಡು ಮನೆ-ಮನೆಯ ಮುಂದೆ ಟ್ರೆಂಚ್ ಹೊಡೆಯಲಾಗುತ್ತಿದೆ. ಇದನ್ನು ಪ್ರತಿರೋಧಿಸಿ ಸ್ಥಳೀಯ ರೈತ ಮುಖಂಡರು ನಿರಂತರ ಹೋರಾಟವನ್ನೂ ನಡೆಸುತ್ತಿದ್ದಾರೆ. 2012-13ರಲ್ಲಿ ಸರ್ಕಾರ ರಹಸ್ಯವಾಗಿ ರೈತರ ಅನುಭೋಗದಲ್ಲಿದ್ದ ಕಂದಾಯ ಜಮೀನನನ್ನು ರಾತ್ರೋರಾತ್ರಿ ಅರಣ್ಯ ಭೂಮಿ ಎಂದು ದಾಖಲೆ ತಿದ್ದುಪಡಿ ಮಾಡಿ ಇಂಡೀಕರಣ ಮಾಡಿದ ಪರಿಣಾಮ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತಿವೆ.
ಇಂತಹ ರೈತರು ಮತ್ತು ಅವರು ಬೆಳೆಯುವ ಅನ್ನದ ಬಗ್ಗೆ ಜೆಡಿಎಸ್ ನಾಯಕರಾಗಲೀ ಅಥವಾ ಮತ್ತಾವುದೇ ಪಕ್ಷದ ನಾಯಕರಾಗಲೀ ಇಷ್ಟು ವೀರಾವೇಶದ, ಭಾವಾವೇಶದ ಮಾತುಗಳನ್ನು ಆಡಿದ್ದೇ ಇಲ್ಲ!
ರಾಜಕೀಯ ಮುಖಂಡರ ಇಂತಹ ವರಸೆಯ ಬಗ್ಗೆ ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ತೀರ್ಥಹಳ್ಳಿ ಭಾಗದಲ್ಲಿ ರೈತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸುತ್ತಿರುವ ಹಿರಿಯ ಹೋರಾಟಗಾರ, ಲೇಖಕ ನೆಂಪೆ ದೇವರಾಜ್, “ಜನ ಸಾಮಾನ್ಯರು ರಾಜಕೀಯ ಮುಖಂಡರನ್ನು ಮತ ಹಾಕಿ ಆರಿಸಿ ಸದನಕ್ಕೆ ಕಳಿಸುವುದು ಜನಸಾಮಾನರು, ರೈತರು, ಬಡವರು, ದಲಿತರು, ಮಹಿಳೆಯರು ಮುಂತಾದ ಅಶಕ್ತ ಗುಂಪುಗಳ ಹಿತ ಕಾಯಲಿ, ಅವರ ಪರ ಲಾಬಿ ಮಾಡಲಿ ಎಂದೇ ವಿನಃ ಈಗಲ್ಟನ್ ರೆಸಾರ್ಟ್ ನಂತಹ ಸಾವಿರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ ಕಬಳಿಕೆದಾರರ ಪರ ವಕಾಲತು ವಹಿಸಲು ಅಲ್ಲ. ವಿಧಾನಸಭೆಯಂತಹ ಜನರ ದೇವಾಲಯದಲ್ಲಿ ನಿಂತು ಮಾತನಾಡುವಾಗ ಈ ನಾಯಕರು ಎದೆ ಬಡಿದುಕೊಂಡು ಹೀಗೆ ಮೊಸಳೆ ಕಣ್ಣೀರು ಸುರಿಸುವ ಬದಲು, ತಾವು ಮಾಡುತ್ತಿರುವುದು ಏನು ಎಂಬುದನ್ನು ತಮ್ಮ ಎದೆತಟ್ಟಿ ಆತ್ಮಾವಲೋಕನ ಮಾಡಿಕೊಳ್ಳಲಿ. ಮಲೆನಾಡಿನ ರೈತರು ಬದುಕನ್ನೇ ಕಿತ್ತುಕೊಂಡಿರುವ ಭೂ ಇಂಡೀಕರಣದಂತಹ ಮಹಾದ್ರೋಹದ ಬಗ್ಗೆ ಮಾತನಾಡಲಿ” ಎಂದು ಹೇಳಿದರು.
‘ಬಜೆಟ್ ಅಧಿವೇಶನದ ವೇಳೆ ಒಬ್ಬ ವ್ಯಕ್ತಿ ಮಾಲೀಕತ್ವದ ರೆಸಾರ್ಟ್ ವಿಷಯವನ್ನು ಎತ್ತುವ ಮೂಲಕ ಜೆಡಿಎಸ್ ನಾಯಕರು ಒಂದು ಕಡೆ ಸಾರ್ವಜನಿಕ ಹಿತಾಸಕ್ತಿಗಿಂತ ಸಾವಿರಾರು ಕೋಟಿ ಒಡೆಯನೊಬ್ಬನ ಹಿತಾಸಕ್ತಿಯೇ ತಮಗೆ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದರೆ, ಮತ್ತೊಂದು ಕಡೆ ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವ ಬಜೆಟ್ ನ ವಿವರ ಚರ್ಚೆಗೆ ಅಡ್ಡಿಬರುವ ಮೂಲಕ ಜನರ ಹಿತವನ್ನು ಬಲಿಕೊಟ್ಟಿದ್ದಾರೆ. ಅಷ್ಟಕ್ಕೂ ಸರ್ಕಾರಿ ಭೂಮಿ ಒತ್ತುವರಿ ನ್ಯಾಯಾಲಯದಲ್ಲಿಯೇ ಸಾಬೀತಾಗಿರುವಾಗ ಅಕ್ರಮ ಎಸಗಿದವರ ಪರ ವಕಾಲತು ವಹಿಸುತ್ತಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿಗಳಿಗೆ ಯಾವ ಉದ್ದೇಶವಿದೆ? ಇದು ಸರಿಯೇ’ ಎಂಬುದು ಕೂಡ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಮಾತು!
ಹಾಗಾಗಿ, ಮಣ್ಣಿನ ಮಕ್ಕಳ ಪಕ್ಷದ ನಾಯಕ ಕುಮಾರಸ್ವಾಮಿ ಅವರೇ ನಿಜಕ್ಕೂ ನಿಮ್ಮ ಕಾಳಜಿ ಯಾರ ಪರ? ಜನವಿರೋಧಿ ಕಾಯ್ದೆಗಳಿಂದಾಗಿ ಜೀವನಕ್ಕೆ ಆಸರೆಯಾಗಿದ್ದ ತುಂಡು ಭೂಮಿಯನ್ನೂ ಕಳೆದುಕೊಂದು ಬೀದಿ ಪಾಲಾಗುತ್ತಿರುವ ದುರ್ಬಲ ಸಮುದಾಯಗಳ ಬಡ ರೈತರ ಪರವಾಗಿಯೋ ಅಥವಾ ಬಹುಕೋಟಿ ಒಡೆಯರಾದ ರೆಸಾರ್ಟ್ ಮಾಲೀಕರ ಪರವೋ ಎಂಬುದು ಸಾರ್ವಜನಿಕರ ಪ್ರಶ್ನೆ.