ಡಿ.ಕೆ ಶಿವಕುಮಾರ್ ಸರಿಯಾಗಿ ಇದ್ದಿದ್ರೆ ನಾವು ಮುಖ್ಯಮಂತ್ರಿಗಳ ಭೇಟಿಯ ಪ್ರಮೇಯವೇ ಬರ್ತಾ ಇರಲಿಲ್ಲ ಎಂದು ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ. ಎಲ್ಲೋ ಹಳ್ಳಿ ಕಡೆ ಮಾಡುವ ರಾಜಕೀಯವನ್ನು, ಬೆಂಗಳೂರು ನಗರದಲ್ಲಿ ಮಾಡ್ತಿದ್ದಾರೆ. ಬೆಂಗಳೂರು ನಗರದ ಜೀವನ ಶೈಲಿಯೇ ಬೇರೆ, ಅಭಿವೃದ್ಧಿಯೇ ಬೇರೆ. ಮಳೆ ನೀರು ಚರಂಡಿ ಕಾಮಗಾರಿಗೆ ವರ್ಲ್ಡ್ ಬ್ಯಾಂಕ್ನಿಂದ 1,700 ಕೋಟಿ ಸಾಲ ತೆಗೆದುಕೊಂಡು, 250 ಕೋಟಿ ಟೆಂಡರ್ ಮಾಡಿದ್ರೆ ಯಾರಿಗೆ ಲಾಭ..? ಹೊರ ರಾಜ್ಯದ ಗುತ್ತಿಗೆದಾರರ ಅನುಕೂಲಕ್ಕೆ ತಾನೇ ಮಾಡ್ತಿದ್ದೀರಾ..? ಯಾಕೆ ಇಲ್ಲಿನ ಗುತ್ತಿಗೆದಾರರಿಗೆ ಕೊಟ್ಟರೆ ನಿಮಗೆ ಕಷ್ಟ ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ಆಂಧ್ರದ ಗುತ್ತಿಗೆದಾರರಿಗೆ ಕೊಟ್ಟರೆ ಅವರು ಯಾರು ಇಲ್ಲಿ ಬಂದು ಹೇಳಲ್ಲ ಅಂತಾ ಹೊರ ರಾಜ್ಯದವರಿಗೆ ಟೆಂಡರ್ ಕೊಟ್ಟಿದ್ದೀರಾ..? ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಗುತ್ತಿಗೆದಾರರ ಹೇಳ್ಬಿಡ್ತಾರೆ ಅಂತಾ 2000 ಕೋಟಿ ಮಾರಾಟಕ್ಕೆ ಇಟ್ಟಿದ್ದೀರಾ..? ಎಂದಿರುವ ಮುನಿರತ್ನ ಡಿ.ಕೆ ಶಿವಕುಮಾರ್ ಬಿಜೆಪಿಗೆ ಬರೋದು ಕನಸಿನ ಮಾತು ಎಂದಿದ್ದಾರೆ. ಕಾಂಗ್ರೆಸ್ನಲ್ಲಿ 135 ಶಾಸಕರಿಗೆ ಡಿ.ಕೆ ಶಿವಕುಮಾರ್ ಸುಮ್ಮನೆ ಇರೋಕೆ ಬಿಟ್ಟಿಲ್ಲ. ಇನ್ನೂ ಇಲ್ಲಿ ಬಂದು ಏನ್ ಮಾಡ್ತಾರೋ ಸದ್ಯಕ್ಕೆ ಅವರು ಅಲ್ಲೇ ಇರಲಿ ಎಂದಿದ್ದಾರೆ. ಹಿಂದೂವಾಗಿ ಹುಟ್ಟಿರೋದು ಹಿಂದೂವಾಗಿ ಸಾಯ್ತೀನಿ ಅನ್ನೋರು ಕನಕಪುರದಲ್ಲಿ ಅಷ್ಟು ದೊಡ್ಡ ಬೆಟ್ಟವನ್ನು ಯೇಸು ಶಿಲುಬೆಗಾಗಿ ಯಾಕೆ ಜಾಗ ಕೊಟ್ಟರು..? ಎಂದು ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಮೈ ಬ್ರದರ್ಸ್ ಮೈ ಸಿಸ್ಟರ್ಸ್ ಅಂದ್ರಲ್ಲ, ಆಗ ಹಿಂದೂ ನೆನಪು ಆಗಿಲ್ಲವಾ..? ಎಂದಿರುವ ಮುನಿರತ್ನ, ಹಿಂದೂಗಳು ಸತ್ತಾಗ ಅವರ ಮನೆಗೆ ಹೋಗಿಲ್ಲ..? ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿ ಯಾಕೆ ಕಪ್ಪು ಬಟ್ಟೆ ಹಾಕಿದ್ದು..? ಗಂಗಾನದಿಗೆ ಹೋಗಿ ಯಾಕೆ ಮುಳುಗಿ ಬಂದಿದ್ದು..? ಯಾಕೆ ಇದನ್ನೇ ಎರಡು ವರ್ಷಗಳ ಹಿಂದೆ ಮಾಡಿಲ್ಲ..? ಮುಖ್ಯಮಂತ್ರಿ ಆಗೋಕಷ್ಟೇ ಎಲ್ಲವನ್ನೂ ಮಾಡ್ತಿದ್ದಾರೆ ಎಂದು ಮುನಿರತ್ನ ವಾಗ್ದಾಳಿ ಮಾಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಾನೂನು ಹೋರಾಟ ವಿಚಾರದ ಬಗ್ಗೆ ಮಾತನಾಡಿ, ಹೇಗೋ ನನ್ನ ಮುಳುಗಿಸೋಕೆ ಹೊರಟಿದ್ದಾರೆ, ಏನ್ ಆಗುತ್ತೋ ನೋಡೋಣ ಎಂದ ಸವಾಲು ಹಾಕಿದ್ದಾರೆ. ಇತ್ತೀಚಿಗಷ್ಟೇ ಜೈಲು ಪಾಲಾಗಿದ್ದ ಆರ್.ಆರ್ ನಗರ ಶಾಸಕ ಮುನಿರತ್ನ, ಜಾಮೀನು ಪಡೆದು ಹೊರ ಬಂದಿದ್ದಾರೆ. ಇದೀಗ ಕಾನೂನು ಸಂಘರ್ಷ ಮಾಡುತ್ತಿರುವ ಶಾಸಕರು, ಸರ್ಕಾರ ಉದ್ದೇಶಪೂರ್ವಕವಾಗಿ ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.