ಮುಳ್ಳನ್ನು ಮುಳ್ಳಿನಿಂದಲೇ ತೆಗಿಬೇಕು ಅಂತಾರಲ್ಲ, ಅದು ಗೊತ್ತಾ..? ಬಿಜೆಪಿ ರಾಜಕೀಯದಲ್ಲಿ ಅದೇ ಸೂತ್ರವನ್ನು ಅಳವಡಿಸಿಕೊಂಡಿದೆ. ಲಿಂಗಾಯತ ಸಮುದಾಯ ಭಾರತೀಯ ಜನತಾ ಪಾರ್ಟಿಯಿಂದ ದೂರ ಆಗುವುದನ್ನು ತಪ್ಪಿಸಲು ಲಿಂಗಾಯತ ನಾಯಕ ಬಿ.ಎಸ್ ಯಡಿಯೂರಪ್ಪ ಅವರನ್ನೇ ಬಳಸಿಕೊಂಡು ತಂತ್ರಗಾರಿಕೆ ಮಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಸಭೆ ಕರೆದಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಗುಡುಗಿದ್ದಾರೆ. ಇದೆಲ್ಲಾ ಯಡಿಯೂರಪ್ಪ ಬಾಯಿಯಿಂದ ಬರುತ್ತಿರೋ ಮಾತುಗಳೋ ಎನ್ನುವ ಮಟ್ಟಕ್ಕೆ ಯಡಿಯೂರಪ್ಪ ವಾಗ್ದಾಳಿ ಮಾಡಿದ್ದಾರೆ. ಆದರೆ ಇದಕ್ಕೂ ಮುನ್ನ ಏನೇನು ನಡೆದಿದೆ ಎನ್ನುವುದನ್ನು ನೋಡಿದ್ರೆ ಶಾಕ್ ಆಗುವುದು ಖಚಿತ.
![](https://pratidhvani.com/wp-content/uploads/2023/04/blsantosh-1680682223-1024x512.jpg)
ಅಷ್ಟಕ್ಕೂ ಯಡಿಯೂರಪ್ಪ ಏನೇನು ಹೇಳಿದ್ದಾರೆ..?
![](https://pratidhvani.com/wp-content/uploads/2023/04/pic-9.jpg)
ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖಂಡರ ಸಭೆ ನಡೆಸಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ನಾನು ನಿಮ್ಮನ್ನು ಸ್ಪಷ್ಟ ಕಾರಣಕ್ಕಾಗಿ ಸಭೆ ಕರೆದಿದ್ದೇನೆ. ಚುನಾವಣಾ ದಿನಾಂಕ ನಿಶ್ಚಯ ಆಗಿದೆ. ಅಭ್ಯರ್ಥಿಗಳೂ ನಿಶ್ಚಯವಾಗಿದ್ದಾರೆ. ಜಗದೀಶ್ ಶೆಟ್ಟರ್ ಬಗ್ಗೆ ನಡೆದ ಬಗ್ಗೆ ಸತ್ಯ ಸಂಗತಿ ಹೇಳಲು ವೀರಶೈವ ಲಿಂಗಾಯತರನ್ನು ಸಭೆಗೆ ಕರೆದಿದ್ದೇನೆ. ಜಗದೀಶ್ ಶೆಟ್ಟರ್ರನ್ನ ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದೇವೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಜಗದೀಶ್ ಶೆಟ್ಟರ್ ಪರವಾಗಿ ನಿಂತು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಅವರಿಗೆ ಏನು ಅನ್ಯಾಯ ಮಾಡಿದ್ದೆವು..? ಸ್ವತಃ ಪ್ರಧಾನಿಗಳೇ ಮಾತನಾಡಿದರು. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ, ಅವರಿಗೆ ಟಿಕೆಟ್ ಕೊಡ್ತೇವೆ ಅಂದರು. ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು. ಇಷ್ಟೆಲ್ಲ ಆದಮೇಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ಗೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಜಗದೀಶ್ ಶೆಟ್ಟರ್ ಪರವಾಗಿ ನಿಲ್ಲಬೇಡಿ. ಚುನಾವಣೆಯಲ್ಲಿ ದಯನೀಯ ಸೋಲಾಗುವಂತೆ ಮಾಡಬೇಕು ಎಂದಿದ್ದಾರೆ.
ಇದೆನ್ನೆಲ್ಲಾ ಹೇಳುವಂತೆ ಯಡಿಯೂರಪ್ಪಗೆ ಹೇಳಿದ್ಯಾರು..?
ಮಾಜಿ ಸಿಎಂ ಯಡಿಯೂರಪ್ಪ ಅವರ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಯಡಿಯೂರಪ್ಪ ಏನು ಮಾಡ್ಬೇಕು ಅನ್ನೋ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದರು. 15 ನಿಮಿಷಗಳ ಕಾಲ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ತೆರಳಿದ್ದರು. ಆ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ್ದ ಯಡಿಯೂರಪ್ಪ, ಬಿ.ಎಲ್ ಸಂತೋಷ್ ಭೇಟಿ ವಿಚಾರವಾಗಿ ಹೇಳಿದ್ರು. ರಾಜ್ಯದಲ್ಲಿ ರಾಜಕೀಯ ಸ್ಥಿತಿಗತಿ ಹೇಗಿದೆ ಅನ್ನೋದ್ರ ಬಗ್ಗೆ ಚರ್ಚೆ ನಡೆಸಿದ್ರು. ನಮ್ಮ ಹಿರಿಯರಾಗಿ ಸಲಹೆ ನೀಡಿದ್ರು ಎನ್ನುವ ಮೂಲಕ ಬಿ.ಎಲ್ ಸಂತೋಷ್ ನನಗೆ ಮಾರ್ಗದರ್ಶನ ಮಾಡಿದ್ರು ಅನ್ನೋದನ್ನು ಸೂಚ್ಯವಾಗಿ ಹೇಳಿದ್ದರು. ಸಂಜೆ ಬಳಿಕ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತರ ಸಭೆ ನಡೆಸಿ ತಂತ್ರಗಾರಿಕೆ ಮಾಡಿದ್ರು.
ಬಿ.ಎಲ್ ಸಂತೋಷ್ಗೆ ಗೈಡ್ ಮಾಡಿದ್ದು ಯಾರು..?
![](https://pratidhvani.com/wp-content/uploads/2023/04/99042642.jpg)
ಸೋಮವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಅಮಿತ್ ಷಾ, ಖಾಸಗಿ ಹೊಟೇಲ್ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಸಭೆ ನಡೆಸಿದ್ದರು. ಮೊದಲು ಅಮಿತ್ ಶಾ ಮತ್ತು ಪ್ರಹ್ಲಾದ್ ಜೋಶಿ ಒನ್ ಟು ಒನ್ ಸಭೆ ನಡೆಸಿದ ಬಳಿಕ ಅರವಿಂದ ಬೆಲ್ಲದ್ ಮತ್ತು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಜೊತೆ ಸಭೆ ಮಾಡಿ ಜಗದೀಶ್ ಶೆಟ್ಟರ್ ಸೋಲಿಸಲು ತಂತ್ರಗಾರಿಕೆ ಮಾಡಿದ್ರು. ಈ ವೇಳೆ ಬಂದಂತಹ ಸಲಹೆಯನ್ನು ಅಮಿತ್ ಷಾ ಬಿ.ಎಲ್ ಸಂತೋಷ್ಗೆ ರವಾನೆ ಮಾಡಿದರು. ರಾಜ್ಯ ನಾಯಕರ ಮಾತಿಗೆ ಯಡಿಯೂರಪ್ಪ ಬೆಲೆ ಕೊಡಲ್ಲ ಎನ್ನುವ ಕಾರಣಕ್ಕೆ ಸಂತೋಷ್ ಮೂಲಕ ಸಂದೇಶ ರವಾನೆ ಮಾಡಿದ್ದರು. ಯಾವುದೇ ಕಾರಣಕ್ಕೂ ಶೆಟ್ಟರ್ಗೆ ಮತಗಳು ಹೋಗದಂತೆ ತಡೆಯಬೇಕು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕೆಂದು ಪ್ರಹ್ಲಾದ್ ಜೋಶಿಗೆ ಟಾಸ್ಕ್ ನೀಡಿದ್ದು, ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲಾಗ್ತಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.
ಬಿಜೆಪಿ ತಂತ್ರಗಾರಿಕೆ ಬಗ್ಗೆ ಶೆಟ್ಟರ್ ಏನಂತಾರೆ..?
![](https://pratidhvani.com/wp-content/uploads/2023/04/negligence-and-insult-are-the-reasons-for-me-to-quit-bjp-says-jagadish-shettar-after-joining-congress-in-view-of-karnataka-assembly-elections-2023-99551247.jpg)
ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಅವಮಾನಿತನಾಗಿ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್, ನನ್ನ ಸೋಲಿಗೆ ಯಾವುದೇ ಬಿಜೆಪಿ ನಾಯಕರು ಕರೆ ನೀಡಿದರೂ ಪ್ರಯೋಜನವಾಗಲ್ಲ. ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಷಿ, ಬಸವರಾಜ ಬೊಮ್ಮಾಯಿ ಅವರ ಕಪಿಮುಷ್ಟಿಯಲ್ಲಿ ಬಿಜೆಪಿ ಪಕ್ಷವಿದೆ. ಅಧಿಕಾರದ ಮದದಿಂದ ಪ್ರಹ್ಲಾದ್ ಜೋಷಿ ಹೀಗೆ ಮಾತನಾಡುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಜೋಷಿಯವರಿಗೆ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ. ಕ್ಷೇತ್ರದಲ್ಲೂ ಜಗದೀಶ್ ಶೆಟ್ಟರ್ ಪರವಾಗಿಯೇ ಅಲೆಯಿದ್ದು, ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಶೆಟ್ಟರ್ ಗೆಲ್ಲುತ್ತಾರೆ ಎನ್ನಲಾಗ್ತಿದೆ.
ಕೃಷ್ಣಮಣಿ