ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಸ್ಥಾಪನಾ ಪುರಾಣವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿಯ ಕಡಲತೀರದ ಗ್ರಾಮವಾದ ಬಪ್ಪನಾಡುವಿನ ಬಹುತೇಕ ಎಲ್ಲರಿಗೂ ಪರಿಚಿತವಾಗಿದೆ. 12 ನೇ ಶತಮಾನದಲ್ಲಿ ಮುಸ್ಲಿಂ ವ್ಯಾಪಾರಿ ಬಪ್ಪಾ ಬ್ಯಾರಿ ಅವರ ದೋಣಿ ಶಾಂಭವಿ ನದಿಯಲ್ಲಿ ಮುಳುಗಿತು ಎಂದು ಕಥೆ ಹೇಳುತ್ತದೆ, ಅವರು ದುರ್ಗಾ ದೇವಿಯು ತನಗಾಗಿ ದೇವಾಲಯವನ್ನು ನಿರ್ಮಿಸಲು ಸೂಚಿಸಿದ ದರ್ಶನವನ್ನು ಪಡೆದರು. ಆ ಕಾಲದ ಜೈನ ದೊರೆಗಳು ಅದಕ್ಕಾಗಿ ಭೂಮಿಯನ್ನು ಒದಗಿಸಿದರು ಮತ್ತು ಈ ದೇವಾಲಯವನ್ನು ನಿರ್ಮಿಸಿದ ಸ್ಥಳಕ್ಕೆ ಬಪ್ಪ ಬ್ಯಾರಿಯ ಗೌರವಾರ್ಥವಾಗಿ ಬಪ್ಪನಾಡು ಎಂದು ಮರುನಾಮಕರಣ ಮಾಡಲಾಯಿತು.
ಎಂಟು ಶತಮಾನಗಳಿಂದ, ಎಲ್ಲಾ ಧರ್ಮಗಳ ಜನರು ಬಪ್ಪನಾಡು ದೇವಸ್ಥಾನದಲ್ಲಿ ದೇವಿಗೆ ಮಲ್ಲಿಗೆಯನ್ನು ಅರ್ಪಿಸುತ್ತಾರೆ ಮತ್ತು ಕರಾವಳಿ ಕರ್ನಾಟಕ ಅಥವಾ ತುಳುನಾಡು ನಿವಾಸಿಗಳು ಆ ಮೂಲಕ ಕೋಮು ಸೌಹಾರ್ದತೆಯನ್ನು ಎತ್ತಿಹಿಡಿಯುತ್ತಾರೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿರುವ ಈ ಪ್ರದೇಶದಲ್ಲಿ ತುಳುವನ್ನು ಪ್ರಧಾನವಾಗಿ ಮಾತನಾಡಲಾಗುತ್ತದೆ. ಬಪ್ಪನಾಡು ವಾರ್ಷಿಕ ಜಾತ್ರೆಯು ಲಕ್ಷಗಟ್ಟಲೆ ಭಕ್ತರು ಪಾಲ್ಗೊಳ್ಳುವ ತುಳುನಾಡಿನ ಅತ್ಯಂತ ಜನಪ್ರಿಯ ಜಾತ್ರೆಗಳಲ್ಲಿ ಒಂದಾಗಿದೆ.
ಅದಾಗ್ಯೂ, ಈ ಕ್ಷೇತ್ರದೊಂದಿಗೆ ಐತಿಹಾಸಿಕ ಸಂಬಂಧ ಇರುವ ಮುಸ್ಲಿಮರು ಈ ವರ್ಷ ಜಾತ್ರೆಯಿಂದ ದೂರ ನಿಂತಿದ್ದಾರೆ. ಮುಲ್ಕಿಯಲ್ಲಿ ಮುಸ್ಲಿಮ್ ವರ್ತಕರ ವಿರುದ್ಧ ಎಚ್ಚರಿಕೆ ಬ್ಯಾನರ್ಗಳನ್ನು ಹಾಕುವ ಹಿಂದುತ್ವ ಗುಂಪುಗಳ ಬೆದರಿಕೆಯ ನಂತರ ಮುಸ್ಲಿಂ ವರ್ತಕರು ಜಾತ್ರೆಯಿಂದ ದೂರ ಉಳಿದರು. ಜಾತ್ರೆಗೆ ಬಂದ ಮುಸ್ಲಿಂ ವ್ಯಾಪಾರಿಗಳನ್ನು ಹಿಂದುತ್ವ ಗುಂಪುಗಳ ಸದಸ್ಯರು ಹೊರಹಾಕಿದರು. ಬಪ್ಪನಾಡು ಮುಸ್ಲಿಮರ ವಿರುದ್ಧದ ತಾರತಮ್ಯವು ಈ ಪ್ರದೇಶದಲ್ಲಿನ ಕೋಮು ಉದ್ವಿಗ್ನತೆಯ ಸಮಕಾಲೀನ ಘಟನೆಗಳಿಗೆ ಮಾತ್ರವಲ್ಲದೆ ಬಪ್ಪ ಬ್ಯಾರಿಯ ಸಿದ್ಧಾಂತದ ಬದಲಾಗುತ್ತಿರುವ ಪ್ರಾಮುಖ್ಯತೆಗೆ ಸಂಬಂಧಿಸಿದ ಒಂದು ಮಾದರಿಯನ್ನು ರೂಪಿಸುತ್ತದೆ.
‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಎಂಬ ತುಳು ಯಕ್ಷಗಾನದಿಂದಾಗಿ ಬಪ್ಪನಾಡು ದೇವಸ್ಥಾನದ ಸ್ಥಾಪನಾ ಪುರಾಣವು ಮನೆಮಾತಾಗಿದೆ ಎಂದು ತುಳುನಾಡಿನ ನಿವಾಸಿಗಳು ಹೇಳುತ್ತಾರೆ. ನೃತ್ಯ, ಸಂಗೀತ ಮತ್ತು ಸಂಭಾಷಣೆಯನ್ನು ಸಂಯೋಜಿಸುವ ಸಾಂಪ್ರದಾಯಿಕ ರಂಗಭೂಮಿಯ ಪ್ರಕಾರವಾದ ಯಕ್ಷಗಾನವು ತುಳುನಾಡಿನಾದ್ಯಂತ ಜನಪ್ರಿಯವಾಗಿದೆ. ಯಕ್ಷಗಾನ ಪ್ರಸಂಗಗಳು ಅಥವಾ ಕಾರ್ಯಗಳು ಸಾಮಾನ್ಯವಾಗಿ ಮುಸ್ಸಂಜೆಯಿಂದ ಮುಂಜಾನೆಯವರೆಗೆ ನಡೆಯುತ್ತವೆ ಮತ್ತು ಅವುಗಳ ವಿಷಯಗಳನ್ನು ಹಿಂದೂ ಮಹಾಕಾವ್ಯಗಳಿಂದ ಕೂಡಾ ಬಳಸುತ್ತಷೆ.
‘ಬಪ್ಪ ಬ್ಯಾರಿ’ ಎಂದು ಹೇಳಿದಾಗ ನನ್ನ ನೆನಪಿಗೆ ಬರುವುದು ದಶಕಗಳ ಹಿಂದೆ ನಾನು ನೋಡಿದ ಯಕ್ಷಗಾನ ನಾಟಕ’ ಎನ್ನುತ್ತಾರೆ ಚಿಕ್ಕಂದಿನಿಂದಲೂ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ಯನ್ನು ವೀಕ್ಷಿಸುತ್ತಿರುವ ಮಂಗಳೂರಿನ ಚಲನಚಿತ್ರ ನಿರ್ಮಾಪಕ ನಟೇಶ್ ಉಳ್ಳಾಲ್ ಹೇಳುತ್ತಾರೆ. ಈ ಯಕ್ಷಗಾಣದಲ್ಲಿ ಎರಡು ಪ್ರಮುಖ ಪಾತ್ರಗಳನ್ನು ಹೊಂದಿದೆ. ಒಂದು ಬಪ್ಪ ಮತ್ತು ಅವನ ಶಿಷ್ಯ ಉಸ್ಮಾನ್ . ಇದು ಬಪ್ಪನಾಡು ದೇವಸ್ಥಾನವನ್ನು ಹೇಗೆ ನಿರ್ಮಿಸಲಾಯಿತು ಎಂಬ ಕಥೆಯನ್ನು ಹೇಳುತ್ತದೆ.
ಶೇಣಿ ಗೋಪಾಲಕೃಷ್ಣ ಭಟ್ ಅವರ ಪಾತ್ರದ ಚಿತ್ರಣದಿಂದಾಗಿ ನನಗೆ ಇಂದು ಬಪ್ಪನ ಕಥೆ ತಿಳಿದಿದೆ ಎಂದು ನಟೇಶ್ ಉಳ್ಳಾಲ್ ಹೇಳುತ್ತಾರೆ. ಯಕ್ಷಗಾನ ಕಲಾ ಪ್ರಕಾರದ ದಿವಂಗತ ಶೇಣಿ ಗೋಪಾಲಕೃಷ್ಣ ಭಟ್ ಅವರು 1970 ಮತ್ತು 1980 ರ ದಶಕದಲ್ಲಿ ಬಪ್ಪ ಬ್ಯಾರಿ ಅವರ ಪಾತ್ರಕ್ಕಾಗಿ ಮೆಚ್ಚುಗೆ ಪಡೆದಿದ್ದರು. “ಶೇಣಿಯವರು ನಿರ್ವಹಿಸಿದ ಪಾತ್ರ ಬಹಳ ಜನಪ್ರಿಯವಾಗಿತ್ತು. ವೇದಿಕೆಯಲ್ಲಿ ಅವರು ಮಾತನಾಡುವ ಮತ್ತು ನಡೆದುಕೊಳ್ಳುವ ರೀತಿ ಮಾನವೀಯ ಮತ್ತು ಘನತೆಯಿಂದ ಕೂಡಿತ್ತು’ ಎಂದು ನಟೇಶ್ ನೆನಪಿಸಿಕೊಳ್ಳುತ್ತಾರೆ.
ಆದಾಗ್ಯೂ, ನಟೇಶ್ ಮತ್ತು ಯಕ್ಷಗಾನವನ್ನು ಗಮನಿಸುತ್ತಾ ಬಂದಿರುವ ಇತರರು ಇತ್ತೀಚಿನ ವರ್ಷಗಳಲ್ಲಿ ಬಪ್ಪ ಬ್ಯಾರಿ ಪಾತ್ರದ ಪ್ರಸ್ತುತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಗಮನಿಸಿದ್ದಾರೆ. “ಇಂದು, ಕೆಲವು ಕ್ರಿಯೆಗಳನ್ನು ಹೊರತುಪಡಿಸಿ, ಈ ಪಾತ್ರವನ್ನು ವಿದೂಷಕ ನಡವಳಿಕೆ ಮತ್ತು ತಮ್ಮದೇ ಆದ ಸಂಸ್ಕೃತಿಯ ಹಾಸ್ಯಗಳೊಂದಿಗೆ ವ್ಯಂಗ್ಯಚಿತ್ರವಾಗಿ ಚಿತ್ರಿಸಲಾಗಿದೆ” ಎಂದು ನಟೇಶ್ ಹೇಳುತ್ತಾರೆ. ಇದನ್ನು ಮೊದಲು ಪತ್ರಕರ್ತೆ ಗ್ರೀಷ್ಮಾ ಕುತಾರ್ ಅವರು ʼಕರಾವಳಿ ಕರ್ನಾಟಕದ ಕೇಸರಿಕರಣದ 18 ಭಾಗಗಳ ಸರಣಿʼಯಲ್ಲಿ ದಾಖಲಿಸಿದ್ದಾರೆ.
ಚಲನಚಿತ್ರ ನಿರ್ಮಾಪಕರ ಮಾತುಗಳನ್ನು ಕನ್ನಡ ಬರಹಗಾರ ಮತ್ತು ಸಾಹಿತ್ಯ ವಿಮರ್ಶಕ ಪುರುಷೋತ್ತಮ ಬಿಳಿಮಲೆ ಅವರು ಪ್ರತಿಧ್ವನಿಸಿದ್ದಾರೆ, ಅವರು ಬಾಲ್ಯದಿಂದ ಈ ಯಕ್ಷಗಾಣವನ್ನು ವೀಕ್ಷಿಸುತ್ತಾ ಬಂದಿದ್ದಾರೆ. ಬ್ಯಾರಿ ಮತ್ತು ಮಲಯಾಳಂ ಭಾಷೆಗಳಲ್ಲಿನ ಸಂಭಾಷಣೆಗಳನ್ನು ಹೊರತುಪಡಿಸಿ ಪ್ರದರ್ಶನವು ಈಗ ಹೇಗೆ ಬದಲಾಗಿದೆ ಎಂಬುದನ್ನು ಗಮನಿಸಿದ್ದಾರೆ.
“ಹಿಂದೆ ಈ ಯಕ್ಷಗಾನದಲ್ಲಿ ತುಳು ಮತ್ತು ಕನ್ನಡದ ಜೊತೆಗೆ ಬ್ಯಾರಿ ಮತ್ತು ಮಲಯಾಳಂ ಭಾಷೆಯ ಸಂಭಾಷಣೆಗಳು ಇರುತ್ತಿದ್ದವು. ಆದರೆ ಈಗ, ಬ್ಯಾರಿ ಮತ್ತು ಮಲಯಾಳಂ ಬಳಕೆ ಸೀಮಿತವಾಗಿದೆ. ಮತ್ತು ಬಪ್ಪ ಬ್ಯಾರಿ ಪಾತ್ರವು ತುಳು ಮತ್ತು ಕನ್ನಡವನ್ನು ತಪ್ಪಾಗಿ ಉಚ್ಚರಿಸಿ ವಿಡಂಬನೆ ಮಾಡುತ್ತದೆ. ಈ ಪ್ರದೇಶದ ಜನಸಾಮಾನ್ಯರು ಮಾತನಾಡುವ ಭಾಷೆಗಳನ್ನು ಮಾತನಾಡಲು ಅವರಿಗೆ ತಿಳಿದಿಲ್ಲ ಎಂದು ತೋರಿಸಲು ಇದು ಒಂದು ಮಾರ್ಗವಾಗಿದೆ ”ಎಂದು ಬಿಳಿಮಲೆ ಹೇಳುತ್ತಾರೆ.
“ಆದರೆ ಇದು ಮೊದಲು ಇರಲಿಲ್ಲ. (ಶೇಣಿಯವರ) ಪಾತ್ರವು ಕನ್ನಡ ಕವಿಗಳನ್ನು ಉಲ್ಲೇಖಿಸುತ್ತಾ ಮತ್ತು ಅದೇ ಸಮಯದಲ್ಲಿ, ಅವರು ತಮ್ಮ ಮುಸ್ಲಿಂ ನೆರೆಹೊರೆಯವರೊಂದಿಗೆ ಮಾತನಾಡುವ ಮೂಲಕ ಕಲಿತ ಬ್ಯಾರಿಯಲ್ಲಿ ಕೂಡಾ ಸಂಭಾಷಣೆಗಳನ್ನು ಮಾಡುತ್ತಿದ್ದರು, ”ಎಂದು ಪುರುಷೋತ್ತಮ ಬಿಳಿಮಲೆ ಹೇಳುತ್ತಾರೆ. “ಅವರ ಪಾತ್ರವು ಒಂದೇ ಸ್ವರದಲ್ಲಿ ‘ಯಾ ಅಲ್ಲಾ’ ಮತ್ತು ‘ಅಮ್ಮ’ (ದುರ್ಗಾ ದೇವತೆ) ಎಂದು ಒಂದೇ ತೆರನಾದ ಗೌರವದಿಂದ ಕರೆಯುತ್ತಿದ್ದರು” ಎಂದು ಅವರು ಹೇಳುತ್ತಾರೆ.
ಯಕ್ಷಗಾನ ಪ್ರದರ್ಶನವು ಬಪ್ಪನಾಡು ದೇವಸ್ಥಾನವು ಮುಸ್ಲಿಂ ಸಮುದಾಯದೊಂದಿಗೆ ಹಂಚಿಕೊಳ್ಳುವ ಶತಮಾನಗಳ ಹಳೆಯ ಸಾಂಸ್ಕೃತಿಕ ಸಂಬಂಧವನ್ನು ಪುನರುಚ್ಚರಿಸುತ್ತದೆ. “ಮುಸ್ಲಿಮರು ಬ್ರಹ್ಮಕಲಶದಂತಹ ದೇವಾಲಯದ ಕಾರ್ಯಕ್ರಮಗಳ ಭಾಗವಾಗಿದ್ದಾರೆ. ತಂಡೋಪತಂಡವಾಗಿ ಬಂದು ದೇವಿಗೆ ಅಕ್ಕಿ, ಮಲ್ಲಿಗೆಯ ನೈವೇದ್ಯ ಅರ್ಪಿಸುತ್ತಾರೆ’ ಎನ್ನುತ್ತಾರೆ ಬಪ್ಪನಾಡು ದೇವಸ್ಥಾನ ಸಮಿತಿಯ ಮುಖ್ಯಸ್ಥ ಹಾಗೂ ದೇವಸ್ಥಾನಕ್ಕೆ ಭೂಮಿ ನೀಡಿದ ಜೈನ ಅರಸರ ವಂಶಸ್ಥ ದುಗ್ಗಣ್ಣ ಸಾವಂತ್.
“ಮುಸ್ಲಿಮರು ಸಹ ಜೀರ್ಣೋದ್ಧಾರ ಅಥವಾ ನವೀಕರಣ ಸಮಿತಿಯ ಭಾಗವಾಗಿದ್ದಾರೆ. ಇಲ್ಲಿ ಸಾಮರಸ್ಯ ನೆಲೆಸಿದೆ’ ಎನ್ನುತ್ತಾರೆ ದುಗ್ಗಣ್ಣ ಸಾವಂತ್. ಹಬ್ಬದ ರಾತ್ರಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ದೇವಸ್ಥಾನದಲ್ಲಿ ಬೊಂಬೆ ರಥ ಅಥವಾ ಗೊಂಬೆ ರಥವು ಬಪ್ಪ ಬ್ಯಾರಿಯ ಮುಸ್ಲಿಂ ಆಕೃತಿಯನ್ನು ಹೊಂದಿದೆ ಎಂದು ತಿಳಿಸುತ್ತಾರೆ.
ಬಪ್ಪ ಬ್ಯಾರಿ ಮನೆತನದ ವಂಶಸ್ಥರಿಗೆ ಪ್ರಸಾದ ನೀಡುವ ಪದ್ಧತಿಯನ್ನು ಈ ವರ್ಷವೂ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಅನುಸರಿಸಲಾಗಿದೆ ಎಂದು ಸಾವಂತ್ ಹೇಳುತ್ತಾರೆ. ಆದರೆ ಅದನ್ನು ಸ್ವೀಕರಿಸಿದ ಅಹ್ಮದ್ ಬಶೀರ್ ಬ್ಯಾರಿ ಹಿಂದಿನ ವರ್ಷಗಳಂತೆ ಈ ವರ್ಷ ಜಾತ್ರೆಗೆ ಹಾಜರಾಗಲಿಲ್ಲ. ಹಿಂದುತ್ವ ಗುಂಪುಗಳ ಕ್ರಮಗಳಿಂದ ಮಾತ್ರವಲ್ಲದೆ, ಹಿಂದುತ್ವ ಗುಂಪಿನ ಕಾನೂನು ಬಾಹಿರ ಕ್ರಮದ ವಿರುದ್ಧ ದೇವಸ್ಥಾನದ ಸಮಿತಿ ಮತ್ತು ಸ್ಥಳೀಯ ನಾಗರಿಕರ ಬೆಂಬಲವಿಲ್ಲದ ಕಾರಣದಿಂದ ನೊಂದ ಮುಲ್ಕಿ ಮತ್ತು ಸುತ್ತಮುತ್ತಲಿನ ಅನೇಕ ಮುಸ್ಲಿಂ ನಿವಾಸಿಗಳು ಮಾರ್ಚ್ 24 ರಂದು ನಡೆದ ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು.
ಹಿಂದುತ್ವ ಗುಂಪುಗಳ ಸದಸ್ಯರು ಕಳೆದ ತಿಂಗಳಿನಿಂದ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ ಬಪ್ಪ ಬ್ಯಾರಿಯ ಕಥೆಯನ್ನು ವಿರೂಪಗೊಳಿಸಿ ಪ್ರಸ್ತುತಪಡಿಸುತ್ತಿದ್ದಾರೆ. ಬಜರಂಗದಳದ ಸದಸ್ಯರು ವ್ಯಾಪಕವಾಗಿ ಹಂಚಿಕೊಂಡ ವಾಟ್ಸಾಪ್ ಫಾರ್ವರ್ಡ್ ಮೆಸೇಜಿನಲ್ಲಿ “ಬಪ್ಪ ಬ್ಯಾರಿ ಅವರು ದೇವಸ್ಥಾನವನ್ನು ಕಟ್ಟುವ ಮೊದಲು ಇಸ್ಲಾಂಗೆ ಮತಾಂತರಗೊಂಡ ಬೊಪ್ಪಣ್ಣ” ಎಂದು ಪ್ರಚಾರ ಮಾಡಲಾಗಿದೆ. ಈ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ ಎಂದು ಹೆಸರು ಹೇಳಲಿಚ್ಛಿಸದ ದೇವಸ್ಥಾನ ಸಮಿತಿ ಸದಸ್ಯರೊಬ್ಬರು ಹೇಳುತ್ತಾರೆ.
“ನಾವು ಅದರಿಂದ ದುಃಖಿತರಾಗಿದ್ದೇವೆ. ಈ ದೇವಾಲಯವನ್ನು ನಿರ್ಮಿಸುವಲ್ಲಿ ಮುಸ್ಲಿಮರು ಪಾತ್ರವನ್ನು ಹೊಂದಿದ್ದರು ಮಾತ್ರವಲ್ಲದೆ ಶತಮಾನಗಳಿಂದಲೂ ಮುಂದುವರೆಯುವ ಸಂಬಂಧ ಇತ್ತು. ಆದರೆ ದೇವಾಲಯದ ಆವರಣದ ಹೊರಗೆ ಬ್ಯಾನರ್ಗಳನ್ನು ಹಾಕಲಾಗಿದ್ದು, ನಾವು ಈ ಬಗ್ಗೆ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಸಮಿತಿಯ ಸದಸ್ಯರು ಹೇಳುತ್ತಾರೆ. “ಮುಸ್ಲಿಂ ವ್ಯಾಪಾರಿಗಳಿಗೆ ಅನುಮತಿ ನೀಡದಿರುವುದು ನಮ್ಮ ಉದ್ದೇಶವಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಈ ಪರಿಸ್ಥಿತಿಯನ್ನು (ರಾಜ್ಯ) ಸರ್ಕಾರವು ಭವಿಷ್ಯದಲ್ಲಿ ಪರಿಹರಿಸುತ್ತದೆ ಎಂದು ನಾವು ಭಾವಿಸುತ್ತೇವೆ, ”ಎಂದು ಸಮಿತಿಯ ಸದಸ್ಯರು ಹೇಳುತ್ತಾರೆ.