ಯಾದಗಿರಿ: ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಉಲ್ಬಣಗೊಂಡು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಜರುಗಿದೆ.
ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿತ್ರಮ್ಮ (35) ಬುಧವಾರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.
ಗ್ರಾಮಕ್ಕೆ ನೀರು ಪೂರೈಸುವ ಪೈಪ್’ನಲ್ಲಿ ಚರಂಡಿ ನೀರು ಸೇರ್ಪಡೆಯಾದ ಪರಿಣಾಮ ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ವಾಂತಿ ಬೇಧಿ ಉಲ್ಬಣವಾಗಿದೆ.
30 ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಫೆ. 14 ರಂದು 24 ಜನ, ಫೆ.15 ರಂದು 6 ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 15 ಜನ ದಾಖಲಾಗಿದ್ದು, ತೆಲಂಗಾಣದ ನಾರಾಯಣಪೇಟೆಯಲ್ಲಿ 3, ಉಳಿದವರಿಗೆ ಅನಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾಸ್ಪತ್ರೆಗೆ ಡಿಎಚ್ಒ ಭೇಟಿ
ಕಲುಷಿತ ನೀರು ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಡಿಎಚ್’ಒ ಡಾ.ಗುರುರಾಜ ಹಿರೇಗೌಡರ್, ಜಿಲ್ಲಾ ಸರ್ಜನ್ ಡಾ.ರಿಜ್ವಾನಾ ಭೇಟಿ ನೀಡಿ ಪರಿಶೀಲನೆ ನಡೆಸಿ, ರೋಗಿಗಳನ್ನು ಗುಣಪಡಿಸಲು ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ ಹಿರೇಗೌಡರ್ ಸುದ್ದಿಗಾರರೊಂದಿಗೆ ಮಾತನಾಡಿ, 30 ಜನ ಅಸ್ವಸ್ಥಗೊಂಡಿದ್ದು, 15 ಜನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಮಗೆ ಮಾಹಿತಿ ಬಂದ ತಕ್ಷಣ ಅನಪುರ, ಪಿಎಚ್’ಸಿ ಕೊಂಕಲ್ ನಲ್ಲಿ ಸರ್ವೇಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಅನಪುರ ಗ್ರಾಮದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದರು.
ಒಂದೊಂದು ತಂಡದಲ್ಲಿ ಒಬ್ಬ ಮೆಡಿಕಲ್ ಆಫೀಸರ್, ಪಿಎಚ್ ಸಿಒ, ಮೂರು ಸಿಎಎಚ್’ಸಿ ಗಳು, ಎಚ್’ಐಒಯು ಹಾಗೂ ನಾಲ್ಕು ಆಶಾ ಕಾರ್ಯಕರ್ತರನ್ನು ನೇಮಿಸಲಾಗಿದೆ. ಅಧಿಕಾರಿಗಳ ತಂಡ ಅನಪುರ ಗ್ರಾಮದಲ್ಲಿ ಬೀಡು ಬಿಟ್ಟಿದೆ ಎಂದು ವಿವರಿಸಿದರು.
ಕಲುಷಿತ ನೀರು ಸೇವನೆಯಿಂದ ಈ ಘಟನೆಯಾಗಿದೆ ಎಂಬ ಶಂಕೆಯಿದೆ. ಕರೆಮ್ಮ ದೇವಸ್ಥಾನ, ಚೌಡ ಕಟ್ಟಿ ಓಣಿಯಲ್ಲಿ ಪೈಪ್ ಲೈನ್ ಸೋರಿಕೆಯಿಂದ ಆಗಿದೆ ಎಂಬ ಶಂಕೆಯಿದೆ. ಗ್ರಾಮದ ನೀರಿನ ಟ್ಯಾಂಕ್, ಕೊಳವೆ ಬಾವಿಯಿಂದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಕುಡಿಯಲು ಯೋಗ್ಯವಲ್ಲದ ನೀರಿನ ಮೂಲ ಕೂಡಲೇ ನಿಲ್ಲಿಸಲು ಪಂಚಾಯಿತಿ ಪಿಡಿಒ ಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.