ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಜಾಗ ಶ್ರೀರಾಮನು ಜನಿಸಿದ ಸ್ಥಳ, ಅಲ್ಲಿ ಶ್ರೀರಾಮರ ಅರಮನೆಯನ್ನು ಧ್ವಂಸ ಮಾಡಿ ಬಾಬರಿ ಮಸೀದಿ ಕಟ್ಟಲಾಗಿದೆ ಎನ್ನುವುದು ಹಿಂದೂಗಳ ಆರೋಪ ಆಗಿತ್ತು. ಅದನ್ನು ಸುಧೀರ್ಘ ಕಾನೂನು ಹೋರಾಟದ ಬಳಿಕ ಒಪ್ಪಿಕೊಂಡ ಸುಪ್ರೀಂಕೋರ್ಟ್, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಅದರಂದ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಸ್ಥಾಪನೆ ಮಾಡಿ ಶ್ರೀರಾಮ ಮಂದಿರ ನಿರ್ಮಾಣವನ್ನು ಮಾಡಬಹುದು ಎಂದು ತೀರ್ಪು ನೀಡಿತ್ತು. ಈಗಾಗಲೇ ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಲೋಕಾರ್ಪಣೆಯೂ ಆಗಿದೆ. ಇದೀಗ ವಾರಣಾಸಿ ಮಸೀದಿ ವಿಚಾರ ಪ್ರಚಲಿತಕ್ಕೆ ಬಂದಿದೆ.
![](https://pratidhvani.com/wp-content/uploads/2024/02/46c35c9d14f8aeed2be9e216b880be14_original.webp)
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ಸನ್ನಿಧಿಯಿದೆ. ಇದು ಹಿಂದೂಗಳಿಗೆ ಮುಕ್ತಿಧಾಮ ಎನ್ನುವುದು ನಂಬಿಕೆ. ಇಲ್ಲಿರುವ ಜ್ಞಾನವಾಪಿ ಮಸೀದಿಯೂ ಶಿವನ ದೇವಸ್ಥಾನವನ್ನು ನೆಲಸಮ ಮಾಡಿ ನಿರ್ಮಾಣ ಮಾಡಿರುವ ಮಸೀದಿ ಎನ್ನುವ ಆರೋಪ ಕೇಳಿ ಬಂದಿತ್ತು. ಭಾರತೀಯ ಪುರಾತತ್ವ ಇಲಾಖೆ ಸರ್ವೇ ಮಾಡಿ ವರದಿ ನೀಡುವಂತೆ ಸೂಚನೆಯನ್ನೂ ಕೊಟ್ಟಿತ್ತು. ಆ ಬಳಿಕ ವಾದಿಗಳು ಪ್ರತಿವಾದಿಗಳಿಗೆ ಸರ್ವೇ ವರದಿ ಹಸ್ತಾಂತರಕ್ಕೂ ಸೂಚನೆ ಕೊಟ್ಟಿತ್ತು. ಅದರಲ್ಲಿ ಹಿಂದೂ ದೇವತೆಗಳು, ಕನ್ನಡ, ತೆಲುಗು, ದೇವನಾಗರಿ ಸೇರಿದಂತೆ ದೇವಸ್ಥಾನ ಎಂಬುದಕ್ಕೆ ಬೇಕಾದ ಪುರಾವೆಗಳು ದೊರೆತಿವೆ ಎನ್ನುವುದು ಬಹಿರಂಗ ಆಗಿತ್ತು. ಇಷ್ಟೆಲ್ಲಾ ಆದ ಬಳಿಕ ಕೋರ್ಟ್ ಹಿಂದೂಗಳು ಪೂಜೆ ಸಲ್ಲಿಸಲು ಅವಕಾಶ ನೀಡಿ ಆದೇಶ ಮಾಡಿದೆ.
![](https://pratidhvani.com/wp-content/uploads/2024/02/varanasi-ayodhya-tour-package-jpg.webp)
ಕಾನೂನು ವ್ಯಾಪ್ತಿಯಲ್ಲಿ ನಮ್ಮ ಕೆಲಸ ಮಾಡಿದ್ದೀವಿ. ಈಗ ಕಾಶಿ ವಿಶ್ವನಾಥ ಟ್ರಸ್ಟ್ಗೆ ಪೂಜೆಗೆ ಅವಕಾಶ ಸಿಕ್ಕಿದೆ. ಪೂಜೆಗೆ ಅರ್ಚಕರು, ಭಕ್ತರು ಎಲ್ಲರಿಗೂ ಅವಕಾಶವಿದೆ. 7 ದಿನದ ಒಳಗಾಗಿ ಜಿಲ್ಲಾಡಳಿತ ಪೂಜೆಗೆ ಪೂರಕ ವ್ಯವಸ್ಥೆ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ. ಇದು ಹಿಂದೂಗಳಿಗೆ ಜ್ಞಾನವಾಪಿ ವಿಚಾರದಲ್ಲಿ ಸಿಕ್ಕಿರುವ ಮೊದಲ ಯಶಸ್ಸು ಎಂದು ಹಿಂದೂಪರ ವಕೀಲ ವಿಷ್ಣು ಶಂಕರ್ ಜೈನ್ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ವಿಶ್ವನಾಥನ ದರ್ಶನ ಎಲ್ಲರಿಗೂ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಮುಸ್ಲಿಂ ಧರ್ಮಗುರು ಮೌಲಾನ ಖಲೀದ್ ರಷೀದ್ ಮಾತನಾಡಿ, ವಾರಣಾಸಿಯ ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಕೋರ್ಟ್ ಆದೇಶ ನೀಡಿದೆ, ಕೋರ್ಟ್ ನಮಗೂ ಹೆಚ್ಚಿನ ಸಮಯ ನೀಡಿದೆ. ನಾವು ಮುಸ್ಲೀಮರ ಪರವಾಗಿ ಮೇಲ್ಮನವಿ ಹೋಗ್ತೀವಿ, ಮುಸ್ಲೀಮರಿಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆಯಿದೆ ಎಂದಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ 890 ಪುಟಗಳ ವರದಿ ತಯಾರಿಸಿ ಕೋರ್ಟ್ಗೆ ಸಲ್ಲಿಕೆ ಮಾಡಿತ್ತು. ಆ ಬಳಿಕ ಕೋರ್ಟ್ ಆದೇಶ ನೀಡಿದ್ದು, ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ಮೂರ್ತಿಗಳಿವೆ. ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಬಹುದು. 1993ಕ್ಕೂ ಮೊದಲು ನೆಲಮಾಳಿಗೆಯಲ್ಲಿ ಪೂಜೆಗಳು ನಡೆಯುತ್ತಿದ್ದವು. ಸೋಮನಾಥ ವ್ಯಾಸ ಕುಟುಂಬ ನಿಯಮಿತ ಪೂಜೆ ಸಲ್ಲಿಸುತ್ತಿತ್ತು. 1993ರ ಬಳಿಕ ಪೂಜೆ ನಿಲ್ಲಿಸಿದ್ದಕ್ಕೆ ಯಾವುದೇ ಸಕಾರಾತ್ಮಕ ಕಾರಣಗಳಿಲ್ಲ. ‘ವ್ಯಾಸ’ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸುವ ಹಕ್ಕು ಹಿಂದೂಗಳಿಗಿದೆ. ಕಾಶಿ ವಿಶ್ವನಾಥ ಟ್ರಸ್ಟ್ ಉಸ್ತುವಾರಿಯಲ್ಲಿ ಪೂಜೆ ನಡೆಯಲಿ ಎಂದಿದೆ ಕೋರ್ಟ್.
2023 ರ ಸೆಪ್ಟೆಂಬರ್ 25 ರಂದು ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರ್ಚಕ ಶೈಲೇಂದ್ರ ವ್ಯಾಸ ಎಂಬುವರು ಕೋರ್ಟ್ಗೆ ಅರ್ಜಿ ಹಾಕಿದ್ದರು. 2024 ರ ಜನವರಿ 17 rಂದು ಅರ್ಜಿ ಪುರಸ್ಕರಿಸಿದ ಕೋರ್ಟ್ ವಾದ-ಪ್ರತಿವಾದಕ್ಕೆ ಅವಕಾಶ ಮಾಡಿಕೊಟ್ಟಿತ್ತು. 2024ರ ಜನವರಿ 24 ರಂದು ಜ್ಞಾನವಾಪಿ ಮಸೀದಿಯನ್ನು ಸುಪರ್ದಿಗೆ ಪಡೆಯಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿತ್ತು. ಆ ಬಳಿಕ ASI ಸರ್ವೇ ವರದಿ ಹಂಚಿಕೊಳ್ಳಲಾಗಿತ್ತು. ಜನವರಿ 25ರಂದು ವಾರಣಾಸಿ ಜಿಲ್ಲಾಡಳಿತ ಕಬ್ಬಿಣದ ಸರಳು ಜೊತೆಗೆ ತಂತಿಬೇಲಿ ಹಾಕಿತ್ತು. ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯ ಕೀ ವಶಕ್ಕೆ ಪಡೆದಿತ್ತು. ಜನವರಿ 26 ರಂದು ಜ್ಞಾನವಾಪಿ ಮಸೀದಿ ಹಿಂದೂ ಮಂದಿರ ಕೆಡವಿ ಕಟ್ಟಿದ್ದು ಎಂದು ವಕೀಲರು ಬಹಿರಂಗ ಮಾಡಿದ್ದರು. ಜನವರಿ 31ರಂದು ಪೂಜೆಗೆ ಕೋರ್ಟ್ ಸೂಚನೆ ಕೊಟ್ಟಿದೆ. ಹಿಂದೂಗಳಿಗೆ ಸಿಕ್ಕ ಜಯ ಎಂದು ಬಣ್ಣಿಸಲಾಗ್ತಿದೆ.
#Varanasi #Ayodhya #Uttarapradesha