ನಟಿ ರಮ್ಯಾ (Actress Ramya) ವಿರುದ್ಧ ದರ್ಶನ್ ಅವರ ಅಭಿಮಾನಿಗಳು (Darshan fans) ಸೋಶಿಯಲ್ ಮೀಡಿಯಾದಲ್ಲಿ (Social media) ಅಶ್ಲೀಲವಾಗಿ ಮೆಸೇಜ್ ಮತ್ತು ಕಾಮೆಂಟ್ ಮಾಡಿದ್ದ ವಿಚಾರವಾಗಿ ದೂರು ದಾಖಲಾಗಿದ್ದ ಕಾರಣ ಈಗಾಗಲೇ ಕೆಲವು ಆರೋಪಿಗಳು ಕಂಬಿ ಎಣಿಸಿದ್ದಾರೆ. ಇದೀಗ ಇದೇ ರೀತಿಯ ಪ್ರಕರಣದಲ್ಲಿ ಮತ್ತೆ ರಾಜ್ಯ ಮಹಿಳಾ ಆಯೋಗ ಎಂಟ್ರಿ ಆಗಿದ್ದು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

ಈ ಪತ್ರದಲ್ಲಿ ನಟ ದರ್ಶನ್ ಅವರ ಪತ್ನಿ ಹಾಗೂ ಪುತ್ರನ ಬಗ್ಗೆ ಅಶೀಲವಾಗಿ ಕಾಮೆಂಟ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಭಾಸ್ಕರ್ ಪ್ರಸಾದ್ ಎಂಬ ವ್ಯಕ್ತಿಯ ಮಾನವೀಯ ಮೇರೆಗೆ ನಾಗಲಕ್ಷ್ಮಿ ಚೌಧರಿ ಅವರು ಬೆಂಗಳೂರು ಪೊಲೀಸರಿಗೆ ಈ ಪತ್ರ ಬರೆದಿದ್ದಾರೆ.

ಈ ಪತ್ರದ ವಿಚಾರ ಹೀಗಿದೆ. “ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಶ್ರೀ ಬಿ. ಆರ್ ಭಾಸ್ಕರ್ ಪ್ರಸಾದ್, ಸಾಮಾಜಿಕ ಹೋರಾಟಗಾರರು, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರು ಆಯೋಗದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯಲ್ಲಿ ಅರ್ಜಿದಾರರು ಖ್ಯಾತ ನಟ ದರ್ಶನ್ ರವರ ಧರ್ಮ ಪತ್ನಿಯಾದ ವಿಜಯಲಕ್ಷ್ಮೀ ದರ್ಶನ್ ಹಾಗೂ ಇವರ ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣಿನ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಹಾಗೂ ರಕ್ಷಣೆ ಒದಗಿಸುವಂತೆ ಮನವಿ ಮಾಡಿರುತ್ತಾರೆ. (ಅರ್ಜಿದಾರರ ಅರ್ಜಿಯ ಪ್ರತಿಯನ್ನು ಲಗತ್ತಿಸಿದೆ).”

ಸೂಕ್ತ ಆದ್ದರಿಂದ ಅರ್ಜಿದಾರರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ 15 ದಿನಗಳೊಳಾಗಿ ಸಲ್ಲಿಸುವಂತೆ ಕೋರಿದೆ ಎಂದು ಉಲ್ಲೇಖಿಸಲಾಗಿದೆ.