ನಿಗದಿತ ಅವಧಿಗಿಂತ ಒಂದು ದಿನ ಮುಂಚೆಯೇ ಸಂಸತ್ ಅಧಿವೇಶನ ಮುಕ್ತಾಯಗೊಂಡಿದೆ.
ಹಿಂದಿನ ಅಧಿವೇಶನದಲ್ಲಿ ʼಅಶಿಸ್ತುʼ ತೋರಿಸಿದ್ದರು ಎಂಬ ಕಾರಣಕ್ಕೆ ಈ ಅಧಿವೇಶನಕ್ಕೆ 12 ರಾಜ್ಯಸಭಾ ಸಂಸದರನ್ನು ಅಮಾನತು ಮಾಡಲಾಗಿತ್ತು. ಅನಿಶ್ಚಿತತೆಯ ನೆರಳಿನಲ್ಲಿ ನವೆಂಬರ್ 29 ರಂದು ಪ್ರಾರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನವು ಬುಧವಾರದಂದು ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿ ಅಂತ್ಯ ಕಂಡಿದೆ!
ಸದನಗಳಲ್ಲಿ 11 ಮಸೂದೆಗಳನ್ನು ಅಂಗೀಕರಿಸುವ ಮೂಲಕ ಇದು ಮುಕ್ತಾಯಗೊಂಡಿದೆ.
ಲೋಕಸಭೆಯಲ್ಲಿ 82 ಪ್ರತಿಶತ ಮತ್ತು ರಾಜ್ಯಸಭೆಯಲ್ಲಿ 48 ಪ್ರತಿಶತ ಸದಸ್ಯರನ್ನು ಹೊಂದಿರುವ ಸರ್ಕಾರವು, ಅಧಿವೇಶನ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ. ಚರ್ಚೆಗಳಿಲ್ಲದೆ ಮಸೂದೆಗಳನ್ನು ಅಂಗೀಕಾರ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಉಭಯ ಸದನಗಳನ್ನು ಮುಂದೂಡಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, 24 ದಿನಗಳಲ್ಲಿ 18 ಕಲಾಪಗಳು ನಡೆದಿವೆ. ಅಧಿವೇಶನದಲ್ಲಿ, 13 ಮಸೂದೆಗಳನ್ನು (ಲೋಕಸಭೆಯಲ್ಲಿ 12 ಮತ್ತು ರಾಜ್ಯಸಭೆಯಲ್ಲಿ ಒಂದು) ಮಂಡಿಸಲಾಯಿತು. ಸಂಸತ್ತಿನ ಉಭಯ ಸದನಗಳಿಂದ ಹನ್ನೊಂದು ಮಸೂದೆಗಳನ್ನು ಅಂಗೀಕರಿಸಲಾಯಿತು, ಇದು ವರ್ಷಕ್ಕೆ ಅನುದಾನಕ್ಕಾಗಿ ಪೂರಕ ಬೇಡಿಕೆಗಳಿಗೆ ಸಂಬಂಧಿಸಿದ ಒಂದು ವಿನಿಯೋಗ ಮಸೂದೆಯನ್ನು ಒಳಗೊಂಡಿದೆ. ಈ ಮಸೂದೆಗಳಲ್ಲಿ ಕೃಷಿ ಕಾಯ್ದೆ ಹಿಂತೆಗೆತ ಮಸೂದೆ, ಅಣೆಕಟ್ಟು ಸುರಕ್ಷತಾ ಮಸೂದೆ, ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ಸೇವೆಯ ವೇತನಗಳು ಮತ್ತು ಷರತ್ತುಗಳು) ತಿದ್ದುಪಡಿ ಮಸೂದೆ, ದೆಹಲಿಯಲ್ಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ, ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ ಮತ್ತು ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ ಸೇರಿವೆ ಎಂದು ಸಚಿವ ಜೋಷಿ ತಿಳಿಸಿದ್ದಾರೆ.

ಜೈವಿಕ ವೈವಿಧ್ಯ (ತಿದ್ದುಪಡಿ) ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಉಭಯ ಸದನಗಳ ಜಂಟಿ ಸಮಿತಿಗೆ ಉಲ್ಲೇಖಿಸಲಾಗಿದೆ, ರಾಷ್ಟ್ರೀಯ ಡೋಪಿಂಗ್ (ಡ್ರಗ್ಸ್) ವಿರೋಧಿ ಮಸೂದೆ, ವನ್ಯಜೀವಿ (ರಕ್ಷಣೆ) ತಿದ್ದುಪಡಿ ಮಸೂದೆ, ಚಾರ್ಟರ್ಡ್ ಅಕೌಂಟೆಂಟ್ಗಳು, ವೆಚ್ಚ ಮತ್ತು ಕೆಲಸದ ಲೆಕ್ಕಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳು ( ತಿದ್ದುಪಡಿ) ಮಸೂದೆ, ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ ಮತ್ತು ಮಧ್ಯಸ್ಥಿಕೆ ಮಸೂದೆಯನ್ನು ವಿವರವಾದ ಚರ್ಚೆಗಾಗಿ ಸ್ಥಾಯಿ ಸಮಿತಿಗಳಿಗೆ ಕಳುಹಿಸಲಾಗಿದೆ.
ಸರ್ಕಾರವು ವಿವಿಧ ಶಾಸನಗಳ ಬಗ್ಗೆ ಸರಿಯಾದ ಚರ್ಚೆಗಳನ್ನು ನಡೆಸುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ. “ಸಂಸತ್ತಿನ ಅಧಿವೇಶನಗಳು ಕೊನೆಗೊಳ್ಳುತ್ತವೆ, ಪ್ರತಿ ದಿನವೂ ಸರ್ಕಾರವು ಉತ್ತರಿಸದೇ ತಪ್ಪಿಸಿಕೊಳ್ಳುತ್ತಿದೆ. ಪತ್ರಿಕಾಗೋಷ್ಠಿಗಳಲ್ಲಿ ಪ್ರಜಾಪ್ರಭುತ್ವದ ಕೊಲೆಯನ್ನು ಸಮರ್ಥಿಸುತ್ತಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷಗಳಿಗೆ ಮಾತನಾಡಲು ಸರಿಯಾದ ಅವಕಾಶ ಸಿಕ್ಕಾಗ, ನಾವು ಸರ್ಕಾರಕ್ಕೆ ನಿಯಮ ಪುಸ್ತಕದಿಂದ ಮಾಸ್ಟರ್ಕ್ಲಾಸ್ ನೀಡಿದ್ದೇವೆʼ ಎಂದು ಮೇಲ್ಮನೆಯಿಂದ ಅಮಾನತುಗೊಂಡಿರುವ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯಾನ್ ಸದನವನ್ನು ಮುಂದೂಡಿದ ನಂತರ ಟ್ವೀಟ್ ಮಾಡಿದ್ದಾರೆ.
ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸಿದವರು ವಿರೋಧ ಪಕ್ಷದ ಸಂಸದರು ಎಂದು ಸರ್ಕಾರ ಹೇಳಿದೆ. “ಬೆಲೆ ಏರಿಕೆಯ ಸಮಸ್ಯೆಯನ್ನು ಚರ್ಚಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಇದಕ್ಕೆ, ಸಭಾಪತಿ ಮತ್ತು ಸ್ಪೀಕರ್ ಅವಕಾಶ ನೀಡಿದಾಗ ಯಾರೂ ಸಿದ್ಧರಿರಲಿಲ್ಲ. ಹಣಕಾಸು ಸಚಿವರು ಜೂಡ ಉತ್ತರಿಸಲು ಹಾಜರಿದ್ದರು ಎಂದು ಜೋಶಿ ಹೇಳಿದರು.
ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಜೋಶಿ ಹೇಳಿದರು. ಶೂನ್ಯ ವೇಳೆಯಲ್ಲಿ ಸದಸ್ಯರು ಎತ್ತಿರುವ ಸಮಸ್ಯೆಗಳನ್ನು ಸರ್ಕಾರ ಪರಿಶೀಲಿಸಬೇಕು ಮತ್ತು ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಸೂಚಿಸಿದ್ದರು. ಆದರೆ ಅಡಚಣೆಗಳು ಅದಕ್ಕೆ ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ,’’ ಎಂದರು.
ಮಸೂದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಜೋಶಿ , ʼಇದು ಆಧಾರರಹಿತ ಆರೋಪ. ಪ್ರತಿಪಕ್ಷಗಳು ಸದನ ನಡೆಸಲು ಬಿಡಬೇಕಿತ್ತುʼಎಂದರು.