ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ವರ್ಷಗಳು ಮಾತ್ರ ಬಾಕಿ ಉಳಿದಿವೆ. ಮುಂದಿನ ಚುನಾವಣೆ ಗೆಲ್ಲಲು ಈಗಿನಿಂದಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿವೆ. ಜೆಡಿಎಸ್ ಪಕ್ಷ ಸದ್ಯದ ರಾಜಕೀಯ ಸನ್ನಿವೇಶದ ಲಾಭ ಪಡೆಯುವ ನಿಟ್ಟಿನಲ್ಲಿ ತಂತ್ರಗಳನ್ನು ರೂಪಿಸಲು ಶುರುಮಾಡಿದೆ. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪಕ್ಷದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಸರಣಿ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನದಲ್ಲಿದ್ದಾರೆ.
ಜೆಡಿಎಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಹೇಳುತ್ತಲೇ ಇದ್ದಾರೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಂತೂ ಪದೇ ಪದೇ ಜೆಡಿಎಸ್ ಪಕ್ಷವನ್ನು ಕೆಣಕುತ್ತಿದ್ದಾರೆ. ಅಲ್ಲದೇ ಬಿಜೆಪಿ ನಾಯಕರು ಜೆಡಿಸ್ ಗೆಲ್ಲೋಕೆ ಸಾಧ್ಯವೇ ಇಲ್ಲ ಎಂಬ ಮಾತುಗಳನ್ನಾಡಿದರು.ಹೀಗಿರುವಾಗಲೇ ಮುಂದಿನ ಚುನಾವಣೆಗಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಉಂಟಾಗಿರುವ ಅಡ್ಡಿ ಆತಂಕಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಜೆಡಿಎಸ್ ಮುಂದಾಗಿದೆ. ಮೇಕೆದಾಟು, ಕೃಷ್ಣಾ ಮೇಲ್ಡಂಡೆ, ಮಹದಾಯಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹೋರಾಟ ನಡೆಸಲಿದೆ. ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಈ ಮಧ್ಯೆಯೇ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೈಸೂರು ನಗರ ಪಾಲಿಕೆ ಮೇಯರ್ ಗಾದಿ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ ಮೇಯರ್ ಸ್ಥಾನ ಒಲಿದಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಬಿತ್ತು. ಬಳಿಕ ಕಾಂಗ್ರೆಸ್ಗೆ ಕೈಕೊಟ್ಟು ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದರಿಂದ ಸುನಂದಾ ಪಾಲನೇತ್ರರಿಗೆ ಮೇಯರ್ ಸ್ಥಾನ ಸಿಕ್ಕಿದೆ. ಸುನಂದಾ ಪಾಲನೇತ್ರ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂಬಂಧಿಯೂ ಆಗಿದ್ದಾರೆ.

ಇತ್ತ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರಿಯಲಿದೆ ಎಂದೇ ಹೇಳಲಾಗಿತ್ತು. ನಾಯಕರುಗಳು ಕೂಡ ಅದನ್ನೇ ಹೇಳಿಕೊಂಡು ಬಂದಿದ್ದರು. ಬಿಜೆಪಿ ಅಧಿಕಾರಕ್ಕೇರಲು ಬಿಡಲ್ಲ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದರು. ಆದರೆ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಸೂಚನೆ ನೀಡಿದ ಬೆನ್ನಲ್ಲೇ ಜೆಡಿಎಸ್ ತಟಸ್ಥ ನಿಲುವು ಅನುಸರಿಸಿದೆ. ಇದರಿಂದ ಬಿಜೆಪಿಗೆ ಅಧಿಕಾರ ಹಿಡಿಯುವ ಹಾದಿ ಸುಗಮವಾಗಿದೆ. ಹೀಗಾಗಿ ಈ ಮೇಯರ್ ಚುನಾವಣೆಯ ಫಲಿತಾಂಶ ಭವಿಷ್ಯದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುನ್ನುಡಿ ಬರೆಯುತ್ತಾ ಎಂಬ ಲೆಕ್ಕಾಚಾರ ಶುರುವಾಗಿದೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಉತ್ಸಾಹದಲ್ಲಿದೆ. ಕಾಂಗ್ರೆಸ್ಗೆ ಬ್ರೇಕ್ ಹಾಕಲು ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಮೈಸೂರು ಮೇಯರ್ ಚುನಾವಣೆಯೇ ಸಾಕ್ಷಿ ಎಂದು ಕೂಡ ಹೇಳಲಾಗುತ್ತಿದೆ. ಕಾಂಗ್ರೆಸ್ ಕರೆದ ಬಿಜೆಪಿ ವಿರೋಧಿ ಪಕ್ಷಗಳ ಸಭೆಗೆ ಜೆಡಿಎಸ್ ಗೈರಾಗಿತ್ತು. ಈ ಬೆನ್ನಲ್ಲೇ ಪ್ರತಿಷ್ಟಿತ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಜೆಡಿಎಸ್ ನಡೆ ಭವಿಷ್ಯದ ಮೈತ್ರಿಗೆ ಪುಷ್ಟಿ ನೀಡಿದೆ. ಇನ್ನೊಂದೆಡೆ ತಮಗೆ ಬೆಂಬಲ ನೀಡುವುದಾಗಿ ಹೇಳಿ ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟ ಜೆಡಿಎಸ್ ವಿರುದ್ಧ ಕಾಂಗ್ರೆಸ್ಗೆ ಪ್ರಬಲ ಅಸ್ತ್ರಗಳು ಸಿಕ್ಕಿವೆ.
ಮುಂದಿನ ಚುನಾವಣೆಯಲ್ಲಿ ಕೆಳಗಿನ ಅಸ್ತ್ರಗಳನ್ನು ಬಳಸಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪ್ರಚಾರ ಮಾಡಲಿದೆ. ಜಾತ್ಯಾತೀತ ತತ್ವಕ್ಕೆ ಜೆಡಿಎಸ್ ಎಳ್ಳುನೀರು ಬಿಟ್ಟಿದೆ. ಇದು ಬಿಜೆಪಿಯ ಬಿ ಟೀಮ್ ಎಂಬುದು ಸಾಬೀತಾಗಿದೆ. ಈ ಪಕ್ಷ ನಂಬಿಕೆಗೆ ಅರ್ಹವಾದ ಪಕ್ಷವಲ್ಲ ಎಂದು ಹೇಳಲು ಮುಂದಾಗಿದೆ. ಕಾಂಗ್ರೆಸ್ ಜೊತೆಗಿನ ಮೇಯರ್ ಒಪ್ಪಂದವನ್ನು ಮೈಸೂರಿನಲ್ಲಿ ಮುರಿದಿದೆ. ಮುಂಬರುವ ದಿನಗಳಲ್ಲಿ JDSಪಕ್ಷ BJP ಜೊತೆ ಮೈತ್ರಿ ಮಾಡ್ಕೊಂದ್ರೂ ಅಚ್ಚರಿ ಇಲ್ಲ. 2023ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮೈಸೂರು ಮೇಯರ್ ಚುನಾವಣೆಯಲ್ಲಿನ ದಳಪತಿಗಳ ನಡೆಯನ್ನ ರಾಜ್ಯದ ಜನರ ಬಳಿಗೆ ತೆಗೆದುಕೊಂಡು ಹೋಗಲು ಪ್ಲಾನ್ ಮಾಡಿಕೊಂಡಿದೆ.
