ಕಾಡಾನೆಯೊಂದು ಅಂಗಡಿಯೊಂದರ ಬೋರ್ಡ್ ಸೇರಿದಂತೆ ಕಾಂಪೌಂಡ್ ಧ್ವಂಸ ಮಾಡಿ ಪುಂಡಾಟ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ NH-169 ರ ತೀರ್ಥಹಳ್ಳಿ- ಕೊಪ್ಪ- ಶೃಂಗೇರಿ ಮಾರ್ಗದಲ್ಲಿರುವ ಕುರುವಳ್ಳಿ ಮುಖ್ಯ ರಸ್ತೆಯಲ್ಲಿ ಆನೆ ಒಡಾಡಿರುವುದು ಸಿಸಿ ಟಿವಿಯಲಿ ಸೆರೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕವನ್ನ ಹೆಚ್ಚಿಸಿದೆ.

ಈ ಹಿಂದೆ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಆನೆ ಇದೀಗ ಪಟ್ಟಣ್ಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. 2 ದಿನಗಳ ಹಿಂದೆ ಶೇಡ್ಗಾರ್, ಕಟ್ಟೆಹಕ್ಲು ಸಮೀಪ ಆನೆ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಆನೆ ಹೆಜ್ಜೆ ಗುರುತಿನ ಜಾಡನ್ನು ಹಿಡಿದು ಹುಡುಕಾಟ ನಡೆಸುತ್ತಿರುವ ಅಧಿಕಾರಿಗಳು ಕೊಪ್ಪ ತಾಲ್ಲೂಕಿನಿಂದ ತೀರ್ಥಹಳ್ಳಿ ಕಡೆಗೆ ಆನೆ ಬಂದಿರಬಹುದು ಎಂದು ಶಂಕಿಸಿದ್ದಾರೆ.






