ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆ ಆಗುತಿದ್ದು ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳೆದ ಎರಡು ದಿನಗಳಿಂದ ಜಿಲ್ಲಾಡಳಿತ ಎಲ್ಲಾ ಶಾಲೆ ಕಾಳೇಜುಗಳಿಗೂ ರಜೆ ಘೋಷಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಸ್ನಾನಘಟ್ಟ ಜಲಾವೃತಗೊಂಡಿದೆ.
ಮಡಿಕೇರಿ ತಾಲೂಕು ಅಬ್ಬಿ ಫಾಲ್ಸ್ ಹೋಗುವ ರಸ್ತೆಯ ಹೆಬ್ಬೆಟ್ಟಗೇರಿ ಗ್ರಾಮದ ನಂದಿ ಮೊಟ್ಟೆಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಸ್ಥಾಪನೆಗೊಂಡ ಜಿಲ್ಲೆಯ ಎರಡನೇ ಗಾಜಿನ ಸೇತುವೆ ಇದೀಗ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ. ಗ್ಲಾಸ್ ಬ್ರಿಡ್ಜ್ ನ ಕೆಳಭಾಗದಲ್ಲಿ ಭೂಕುಸಿತ ಉಂಟಾಗಿ ಸೇತುವೆ ಸ್ಥಾಪಿತವಾಗಿರುವ ಕಂಬಗಳು ಜಾರುವ ಪರಿಸ್ಥಿತಿಯಲ್ಲಿದೆ. ಕಳೆದ ರಾತ್ರಿ ಸುರಿದ ಬಾರಿ ಮಳೆಗೆ ಈ ಗುಡ್ಡ ಪ್ರದೇಶ ಸ್ವಲ್ಪಮಟ್ಟಿಗೆ ಮಣ್ಣು ಕುಸಿತವಾಗಿದ್ದು ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಇಲ್ಲಿ ಸ್ಥಾಪಿತವಾಗಿರುವ ಗಾಜಿನ ಸೇತುವೆ ಪ್ರದೇಶವು ಭೂ ಪರಿವರ್ತನೆ ಆಗಿಲ್ಲ ಎಂದು ಹೇಳಲಾಗಿದೆ. 2018 ರಲ್ಲಿ ನಡೆದ ಭೂಕುಸಿತ ಸಂದರ್ಭ ಈ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿದ್ದು ಕೆ ನಿಡುಗುಣ ಪಂಚಾಯಿತಿ ಇಲ್ಲಿ ವಸತಿ ನಿರ್ಮಿಸಲು ಮತ್ತು ಬೋರ್ವೆಲ್ ತೆಗೆಯಲು ಕೂಡ ಅನುಮತಿಯನ್ನು ನಿರಾಕರಿಸಿತ್ತು. ಆದರೆ ಈ ಗಾಜಿನ ಸೇತುವೆಗೆ ಹೇಗೆ ಅನುಮತಿ ದೊರಕಿತ್ತು ಎಂಬುದೇ ಇದೀಗ ಯಕ್ಷಪ್ರಶ್ನೆಯಾಗಿದೆ. ಜಿಲ್ಲಾಡಳಿತ ಕೂಡಲೇ ಈ ಬಗೆ ಎಲ್ಲಾ ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಂಡು ಮುಂದೆ ಒದಗ ಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.
ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಹೀಗಾಗಿ ಹೊಸದಾಗಿ ನಿರ್ಮಿಸಿದ್ದ ಉದ್ಯಾನವನ ಸಂಪೂರ್ಣವಾಗಿ ಮುಳುಗಿದೆ. ಹೀಗೆ ಮಳೆ ಮುಂದುವರಿದರೆ ಭಗಂಡೇಶ್ವರ ದೇವಾಲಯದ ಮುಂಭಾಗದ ಆವರಣಕ್ಕೂ ನೀರು ನುಗ್ಗುವ ಸಾಧ್ಯತೆಗಳಿವೆ. ಅಲ್ಲದೇ ನಾಪೋಕ್ಲು-ಭಾಗಮಂಡಲ ರಸ್ತೆ ಜಲಾವೃತವಾಗುವ ಸಾಧ್ಯತೆ ಇದೆ. ಈಗಾಗಲೇ ಭಾಗಮಂಡಲ ನಾಪೋಕ್ಲು ರಸ್ತೆ ಮೇಲೆ ಒಂದು ಅಡಿ ನೀರು ಹರಿಯುತ್ತಿದೆ.
ಮಳೆಯ ಕಾರಣಕ್ಕೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಬಳಿ ಇರುವ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ದುಬಾರೆಗೆ ಭೇಟಿ ನೀಡುವ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ತೆರಳಬೇಕಾದರೆ ಕಾವೇರಿ ನದಿ ದಾಟಿ ತೆರಳಬೇಕಿದೆ. ನದಿಗೆ ಅಡ್ಡಲಾಗಿ ಸೇತುವೆ ಇಲ್ಲದ ಕಾರಣ ಮೋಟಾರ್ ಬೋಟ್ ಗಳನ್ನು ಅವಲಂಬಿಸಬೇಕಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಗುರುವಾರದಿಂದ ಪ್ರವೇಶ ನಿಷೇಧಿಸಲಾಗಿದೆ. ನೀರಿನ ಹರಿವು ತಗ್ಗುವವರೆಗೆ ಬೋಟಿಂಗ್ ನಿಷೇದ ಮುಂದುವರೆಯಲಿದೆ. ಅರಣ್ಯ ಇಲಾಖೆಯ 4 ಮೋಟಾರು ಬೋಟ್ ಗಳ ಮೂಲಕ ಪ್ರವಾಸಿಗರನ್ನು ನದಿ ದಾಟಿಸಿ ಸಾಕಾನೆ ಶಿಬಿರಕ್ಕೆ ಕರೆದೊಯ್ದು ವಾಪಾಸು ಕರೆತರಲಾಗುತ್ತದೆ. ಇದೀಗ ಈ ಸೇವೆಯನ್ನು ನಿಲುಗಡೆಗೊಳಿಸಲಾಗಿದೆ.