ಅಹಿಂದವನ್ನು ಮತ್ತೆ ಕಟ್ಟಲು ಹೊರಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಯತ್ನಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಹೆಚ್ ಡಿ ಕುಮಾರಸ್ವಾಮಿ, ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸುತ್ತಾ ʼಅಧಿಕಾರದಲ್ಲಿದ್ದ ಐದು ವರ್ಷದಲ್ಲಿ ಅಹಿಂದ ಸಮುದಾಯಗಳ ನೆನಪು ಬರಲಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರು ಜೆಡಿಎಸ್ ನಿಂದ ಉಪಮುಖ್ಯಂತ್ರಿಯಾಗಿದ್ದ ವೇಳೆಯೂ ಅಹಿಂದ ಕಟ್ಟಿದ್ದರು. ಅದರಿಂದ ಅವರಿಗೆ ರಾಜಕೀಯ ಬೆಳವಣಿಗೆಯಾದವು. ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಅವರು ತೆಗೆದುಕೊಂಡಿದ್ದೇ ನಿರ್ಣಯ ಅಂತಿತ್ತು. ಅವರಿಗೆ ವಿರೋಧ ವ್ಯಕ್ತ ಪಡಿಸುವವರು ಯಾರೂ ಇರಲಿಲ್ಲ. ಆ ಐದು ವರ್ಷಗಳಲ್ಲಿ ಅಹಿಂದ ಸಮಾಜಗಳಿಗೆ ಯಾಕೆ ಧ್ವನಿಯಾಗಲಿಲ್ಲ. ಅವತ್ತು ಅಹಿಂದ ವರ್ಗದ ಸಮಸ್ಯೆ ಬಗೆಹರಿಸದವರು ಇವತ್ತು ಮತ್ತೆ ಯಾಕೆ ಅಹಿಂದ ಕಟ್ಟುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅವರು ಧಾರ್ಮಿಕ ಹೆಸರಿನಲ್ಲಿ ಹೋಗುತ್ತಿದ್ದಾರೆ. ಇವರು ಅಹಿಂದ ಹೆಸರಿನಲ್ಲಿ ಹೋಗುತ್ತಿದ್ದಾರೆ. ಇದೆಲ್ಲಾ ಮುಖ್ಯಮಂತ್ರಿ ಕುರ್ಚಿಗೋಸ್ಕರ ಅವರು ನಡೆಸುತ್ತಿರುವುದು. ಅವರ ಗುರಿ ಮುಖ್ಯಮಂತ್ರಿ ಗಾದಿ ಮಾತ್ರ. ಅವರು ಬಹಿರಂಗವಾಗಿ ಹೇಳದಿದ್ದರೂ ಮಾಧ್ಯಮಗಳಲ್ಲಿ ಈ ಕುರಿತು ಚರ್ಚೆ ಆಗುತ್ತಿದೆ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಹೇಳಿದ್ದಾರೆ.





