ಕಳೆದ ಮಂಗಳವಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗ್ರೇಟರ್ ನೋಯ್ಡಾದಲ್ಲಿ ಬಹಳ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಇದರಲ್ಲಿ ಸಂಘ ಪರಿವಾರದ ಬಗ್ಗೆ ಒಲವುಳ್ಳ ಸಂಪಾದಕರು ಮತ್ತು ನಿರೂಪಕರಿದ್ದರು. ಇದೊಂದು ಖಾಸಗಿ ಸಭೆಯಾಗಿತ್ತು. ಬಹುಷಃ ಉತ್ತರಪ್ರದೇಶ ಚುನಾವಣೆ ಕುರಿತಂತೆ ಚರ್ಚೆ ನಡೆದಿದೆ. ಏಕೆಂದರೆ ಸಭೆಯಲ್ಲಿ ಉತ್ತರಪ್ರದೇಶದ ಆರ್ಎಸ್ಎಸ್ ಪ್ರಮುಖರಿದ್ದರು. ಬಿಜೆಪಿಪರ ಹೇಗೆ ಕೆಲಸ ಮಾಡಬೇಕು ಎಂದು ಭಾಗವತ್ ಮತ್ತು ಪತ್ರಕರ್ತರು ಚರ್ಚಿಸಿರುತ್ತಾರೆ. ಅದಕ್ಕೆ ತಕ್ಕಂತೆ ಪ್ರತಿಫಲದ ಗಾತ್ರದ ಬಗ್ಗೆಯೂ ಚರ್ಚೆ ನಡೆದಿರುತ್ತೆ ಅಲ್ಲವೆ? ಇಲ್ಲದಿದ್ದರೆ, ಖಾಸಗಿಯಾಗಿ ಮತ್ತು ಗುಪ್ತವಾಗಿ, ಅದಕ್ಕಿಂತ ಮುಖ್ಯವಾಗಿ ಬಿಜೆಪಿ ಪರ ಇರುವ ಪತ್ರಕರ್ತರೊಂದಿಗಷ್ಟೇ ಸಭೆ ನಡೆದಿದೆ ಎಂದರೆ ಅಲ್ಲಿ ಒಂದು ನಿರ್ದಿಷ್ಟ ಅಜೆಂಡಾದ ಚರ್ಚೆ ನಡೆದಿರುತ್ತದೆ.
ಸಭೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ಆರ್ಎಸ್ಎಸ್ನ ಪ್ರಾದೇಶಿಕ ಮುಖ್ಯಸ್ಥ ಸೂರ್ಯ ಪ್ರಕಾಶ್ ಟೋಂಕ್, ಅದರ ರಾಷ್ಟ್ರೀಯ ಸಂವಹನ ಮುಖ್ಯಸ್ಥ ರಾಮ್ ಲಾಲ್ ಮತ್ತು ಮುಖ್ಯವಾಹಿನಿಯ ಸುದ್ದಿ ವಾಹಿನಿಗಳ ಸಂಪಾದಕರು ಉಪಸ್ಥಿತರಿದ್ದರು.
ಸುದರ್ಶನ ನ್ಯೂಸ್ ಸಂಪಾದಕ ಸುರೇಶ್ ಚವ್ಹಾಂಕೆ, ಆಜ್ ತಕ್ ಕಾರ್ಯನಿರ್ವಾಹಕ ಸಂಪಾದಕ ಮತ್ತು ನಿರೂಪಕ ಸಯೀದ್ ಅನ್ಸಾರಿ, ನೆಟ್ವರ್ಕ್ 18 ಗ್ರೂಪ್ ಮ್ಯಾನೇಜಿಂಗ್ ಎಡಿಟರ್ ಬ್ರಿಜೇಶ್ ಕುಮಾರ್ ಸಿಂಗ್, ಎಬಿಪಿ ನ್ಯೂಸ್ ಉಪಾಧ್ಯಕ್ಷ ಸುಮಿತ್ ಅವಸ್ಥಿ ಭಾಗವಹಿಸಿದ್ದರು. ಇವರೆಲ್ಲರ ಭಾಗವತ್ ಜೊತೆ ಇರುವ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಇವರಲ್ಲದೇ ಎಬಿಪಿ ನ್ಯೂಸ್ ನಿರೂಪಕ ವಿಕಾಸ್ ಭದೌರಿಯಾ, ಇಂಡಿಯಾ ಟುಡೇ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ನಿರೂಪಕ ಗೌರವ್ ಸಾವಂತ್, ನ್ಯೂಸ್ 24 ಸಂಪಾದಕಿ ಅನುರಾಧಾ ಪ್ರಸಾದ್, ಇಂಡಿಯಾ ಟುಡೇ ಗ್ರೂಪ್ ಸುದ್ದಿ ನಿರ್ದೇಶಕಿ ಸುಪ್ರಿಯಾ ಪ್ರಸಾದ್ ಮತ್ತು ಟೈಮ್ಸ್ ನೆಟ್ವರ್ಕ್ ಸಮೂಹ ಸಂಪಾದಕಿ ನವಿಕಾ ಕುಮಾರ್ ಕೂಡ ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಸುಮಾರು ಎಂಟು ಪತ್ರಕರ್ತರನ್ನು ನ್ಯೂಸ್ಲಾಂಡ್ರಿ ಸಂಪರ್ಕಿಸಿದೆ. ಕೆಲವರು ಕರೆಗಳನ್ನು ಸ್ವೀಕರಿಸಿಲ್ಲ, ಇತರರು ಹಾಜರಾಗಿದ್ದನ್ನು ನಿರಾಕರಿಸಿದರು, ಆದರೆ ಕೆಲವರು ಏನಾಯಿತು ಎಂದು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಸಭೆ ನಡೆದಿದ್ದು, ಅಲ್ಲಿ ಆರ್ಎಸ್ಎಸ್ ಬಗ್ಗೆ ಸಾಮಾನ್ಯ ಚರ್ಚೆ ನಡೆದಿದೆ ಎಂದು ಸುಪ್ರಿಯಾ ಪ್ರಸಾದ್ ಖಚಿತಪಡಿಸಿದ್ದಾರೆ. “ಸಭೆಯಲ್ಲಿ ಇನ್ನೂ ಅನೇಕ ಜನರು ಇದ್ದರು,” ಎಂದು ಅವರು ಹೇಳಿದರು.
ಸಯೀದ್ ಅನ್ಸಾರಿ ಅವರು ಛಾಯಾಚಿತ್ರದಲ್ಲಿ ಉಪಸ್ಥಿತರಿದ್ದರೂ ಮತ್ತು ಇತರ ಪತ್ರಕರ್ತರು ಅವರು ಅಲ್ಲಿಗೆ ಬಂದಿದ್ದಾರೆ ಎಂದು ದೃಢಪಡಿಸಿದರೂ, ಅಂತಹ ಸಭೆ ನಡೆದಿಲ್ಲ ಎಂದು ಸಂಪೂರ್ಣವಾಗಿ ನಿರಾಕರಿಸಿದರು.

“UPSC ಜಿಹಾದ್” ಖ್ಯಾತಿಯ, ಆ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲು ತುಳಿದು ಬಂದ ಸಂಘ ಪರಿವಾರದ ಸಂಗಡಿಗ, ಸುದರ್ಶನ್ ಟಿವಿ ಸಂಪಾದಕ ಸುರೇಶ ಚವ್ಹಾಂಕೆ ಅವರು ಸಭೆಯಲ್ಲಿ ತಾವು ಇರಲಿಲ್ಲ ಎಂದು ಹೇಳಿದರು.
“ಅಂತಹ ಸಭೆ ನಡೆದಿದೆ ಎಂದು ನಿಮಗೆ ಯಾರು ಹೇಳಿದರು? ಅಂತಹ ಯಾವುದೇ ಸಭೆ ನಡೆದಿಲ್ಲ . ನಡೆದಿದ್ದರೂ ನಾನು ಭಾಗವಹಿಸಿಲ್ಲ. ಸಭೆ ನಡೆದಿದ್ದರೂ ಅದು ದೇಶವಿರೋಧಿ ಸಭೆಯಲ್ಲ, ಆದರೂ ನೀವು ಯಾಕೆ ವಿಚಾರಿಸುತ್ತಿದ್ದೀರಿ?ʼ ಎಂದು ಸಿಟ್ಟಾದರು.
ನಂತರ ಚವ್ಹಾಂಕೆ ಅವರು ನ್ಯೂಸ್ಲಾಂಡ್ರಿ ವರದಿಗಾರನ ಹೆಸರನ್ನು ಕೇಳಿದ್ದಾರೆ. ಕೇವಲ ಸಂಪಾದಕರು ಇನ್ನೊಬ್ಬ ಸಂಪಾದಕರಿಗೆ ಫೋನ್ ಮಾಡಬೇಕು ಎಂದು ಗುಡುಗಿದ್ದಾರೆ. ಇದು ಚವ್ಹಾಂಕೆ ಅವರ ತಿಕ್ಕಲುತನ ಮತ್ತು ಒಣ ಜಂಭ.
ನ್ಯೂಸ್ಲಾಂಡ್ರಿ ಸಂಪಾದಕರು ಚವ್ಹಾಂಕೆ ಅವರಿಗೆ ದೂರವಾಣಿ ಕರೆ ಮಾಡಿದಾಗ ಚವ್ಹಾಂಕೆಯವರು ಎಂದಿನ ಶೈಲಿಯಲ್ಲಿ ಅಪೂರ್ಣ ಮತ್ತು ಗೊಂದಲದ ಉತ್ತರ ಕೊಟ್ಟಿದ್ದಾರೆ.
ಅಂತಿಮವಾಗಿ ತಾವು ಭಾಗವಹಿಸಿದ್ದನ್ನು ಒಪ್ಪಿಕೊಂಡ ಅವರು, ಮೋಹನ್ ಭಾಗವತ್ ಅವರ ಗ್ರೇಟರ್ ನೋಯ್ಡಾ ಪ್ರವಾಸದ ಸಂದರ್ಭದಲ್ಲಿ ಈ ಸಭೆ ನಡೆದಿದೆ ಎಂದು ಹೇಳಿದ್ದಾರೆ. “ಇದು ಪತ್ರಿಕಾಗೋಷ್ಠಿಯಾಗಿರಲಿಲ್ಲ ಅಥವಾ ಯಾವುದೇ ಅಜೆಂಡಾ ಇರಲಿಲ್ಲ. ಇದೊಂದು ಸಾಮಾನ್ಯ ಭೇಟಿಯಾಗಿತ್ತು. ಇದು ವರ್ಷಕ್ಕೊಮ್ಮೆ ನಡೆಯುತ್ತದೆ. ಇದು RSS ಸಂವಹನ ವಿಭಾಗದ ಸಭೆಯಾಗಿದ್ದು, ಈ ಹಿಂದೆ ಭಾಗವಹಿಸುವವರು ಸಹ ಭಾಗವಹಿಸಿದ್ದರು. ಇದರಲ್ಲಿ ಹೊಸದೇನೂ ಇಲ್ಲ” ಎಂದಿದ್ದಾರೆ.
ಎಬಿಪಿ ನ್ಯೂಸ್ನ ವಿಕಾಸ್ ಭದೌರಿಯಾ ಅವರು ಸಭೆಯಲ್ಲಿ ಭಾಗವಹಿಸಿದ್ದೆ ಎಂದು ನ್ಯೂಸ್ಲಾಂಡ್ರಿಗೆ ತಿಳಿಸಿದ್ದಾರೆ.
“ಇದು ಸಾಮಾನ್ಯ ಸಭೆಯಾಗಿತ್ತು. ಮಾತುಕತೆಗೆ ಯಾವುದೇ ಅಜೆಂಡಾ ಇರಲಿಲ್ಲ”ಎಂದು ಅವರು ಹೇಳಿದ್ದಾರೆ. “ಭಾಗವತ್ ಅವರು ವರ್ಷಕ್ಕೊಮ್ಮೆ ಮಾಧ್ಯಮದ ಜನರನ್ನು ಭೇಟಿ ಮಾಡುತ್ತಾರೆ. ಇದರಿಂದ ಜನರು ಆರ್ಎಸ್ಎಸ್ ಅನ್ನು ಹತ್ತಿರದಿಂದ ಅರ್ಥ ಮಾಡಿಕೊಳ್ಳಬಹುದು” ಎಂಬುದು ಭಧೌರಿಯಾ ವಿವರಣೆ.
ಸಭೆಯಲ್ಲಿ, “ಆರ್ಎಸ್ಎಸ್ ಕಾರ್ಯನಿರ್ವಹಿಸುವ ರೀತಿ, ಆರ್ಎಸ್ಎಸ್ನ ಗೋಚರ ದೃಷ್ಟಿಕೋನವನ್ನು ಮುದ್ರಿಸಲಾಗಿದೆಯೇ ಮತ್ತು ಆರ್ಎಸ್ಎಸ್ ನಿಜವಾಗಿಯೂ ತನ್ನನ್ನು ಚಿತ್ರಿಸಿಕೊಂಡ ರೀತಿಯಲ್ಲಿಯೇ ಕೆಲಸ ಮಾಡುತ್ತದೆಯೇ ಎಂಬ ವಿಷಯಗಳನ್ನು “ಮುಕ್ತವಾಗಿ ಚರ್ಚಿಸಲಾಗಿದೆ” ಎಂದು ಅವರು ಹೇಳಿದರು.
“ಚರ್ಚೆಗಳು ಬರವಣಿಗೆ ಅಥವಾ ಪ್ರಕಟಣೆಗಾಗಿ ನಡೆಯುತ್ತಿಲ್ಲ, ಆರ್ಎಸ್ಎಸ್ ಅನ್ನು ಅರ್ಥ ಮಾಡಿಕೊಳ್ಳಲು ಮಾತ್ರ” ಎಂದು ಭದೌರಿಯಾ ಹೇಳಿದರು. “ನಮ್ಮಲ್ಲಿ ಕೆಲವರು ಅನೇಕ ವರ್ಷಗಳಿಂದ ಭೇಟಿಯಾಗುತ್ತಿದ್ದೇವೆʼ ಎಂದರು.
ಸಂವಾದದ ಸಮಯದಲ್ಲಿ ಭಾಗವತ್ ಏನು ಹೇಳಿದರು? ಎಂಬ ಪ್ರಶ್ನೆಗೆ ಉತ್ತರಿಸಿದ ಭಧೌರಿಯಾ,
“ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಮಾಧ್ಯಮಗಳು ಸಕಾರಾತ್ಮಕ ಸುದ್ದಿಗಳ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಭಾಗವತ್ ಅವರು ನೆರೆದಿದ್ದ ಪತ್ರಕರ್ತರಿಗೆ ಹೇಳಿದರು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಚರ್ಚೆ ನಡೆದಿದೆಯೇ? ಎಂಬ ಪ್ರಶ್ನೆಗೆ ʼಹೆಚ್ಚೇನೂ ಇಲ್ಲ ʼ ಎಂದು ಭದೌರಿಯಾ ಹೇಳಿದರು.
ನ್ಯೂಸ್ಲಾಂಡ್ರಿ ಸುಮಿತ್ ಅವಸ್ತಿ, ಅನುರಾಧಾ ಪ್ರಸಾದ್, ನವಿಕಾ ಕುಮಾರ್ ಮತ್ತು ಗೌರವ್ ಸಾವಂತ್ ಅವರನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮಂಗಳವಾರದ ಸಭೆಯಲ್ಲಿದ್ದ ಆರ್ಎಸ್ಎಸ್ ಪ್ರಾದೇಶಿಕ ಮುಖ್ಯಸ್ಥ ಸೂರ್ಯ ಪ್ರಕಾಶ್ ಟೋಂಕ್, ಸಭೆಯಲ್ಲಿ ಆರ್ಎಸ್ಎಸ್ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ. ”ಚರ್ಚೆಯಲ್ಲಿ ಸುದ್ದಿಯಾಗುವಂಥದ್ದೇನೂ ಇರಲಿಲ್ಲ. ತುಸು ಸಂಪರ್ಕದಲ್ಲಿರುವ ಪತ್ರಕರ್ತರನ್ನು ಚರ್ಚೆಗೆ ಕರೆಯಲಾಗಿತ್ತು. ಮಾಧ್ಯಮವು ದೊಡ್ಡದಾಗಿದೆ. ಆದರೆ ಆರ್ಎಸ್ಎಸ್ಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಸೀಮಿತ ಜನರೊಂದಿಗೆ ಚರ್ಚಿಸಲಾಗಿದೆʼ ಎಂದು ಟೋಂಕ್ ತಿಳಿಸಿದ್ದಾರೆ.
ಭಾಗವತ್ ಪತ್ರಕರ್ತರೊಂದಿಗೆ ಸಂವಾದ ನಡೆಸುವುದು ಹೊಸದೇನಲ್ಲ. ಕಳೆದ ಡಿಸೆಂಬರ್ನಲ್ಲಿ ಅವರು ದೆಹಲಿಯಲ್ಲಿ “ಪ್ರಸಿದ್ಧ ದಿನಪತ್ರಿಕೆಗಳ 52 ಸಂಪಾದಕರು ಮತ್ತು ಸುದ್ದಿ ವಾಹಿನಿಗಳ ನಿರೂಪಕರನ್ನು ಭೇಟಿಯಾಗಿದ್ದರು. ನಂತರ ಮುಂಬೈನಲ್ಲಿ “ಪ್ರಮುಖ ಪತ್ರಿಕೆಗಳ 18 ಸಂಪಾದಕರು ಭಾಗವತ್ ಅವರನ್ನು ಭೇಟಿಯಾದರು. ಸೆಪ್ಟೆಂಬರ್ 2019 ರಲ್ಲಿ, ಅವರು ದೆಹಲಿಯಲ್ಲಿ “30 ದೇಶಗಳ 80 ಪತ್ರಕರ್ತರನ್ನು” ಭೇಟಿಯಾಗಿದ್ದರು.
ಹೀಗೆ ಕದ್ದು ಮುಚ್ಚಿ ನಮ್ಮ ರಾಜ್ಯದಲ್ಲೂ ಆರ್ಎಸ್ಎಸ್ ಪ್ರಮುಖರು ಮತ್ತು ಕೆಲವು ಆಯ್ದ ಪತ್ರಕರ್ತರೊಂದಿಗೆಸಭೆಗಳು ನಡೆಯುತ್ತಿರಬಹುದೇ? ಕೆಲವು ಚಾನೆಲ್ಗಳ ಕಾರ್ಯವೈಖರಿ ನೋಡಿದರೆ, ಖಂಡಿತ ನಡೆಯುತ್ತವೆ ಎನ್ನಬಹುದು.






