
ಡಿ ಸುರೇಶ್ ಕುಮಾರ್
(ಮೂಲ : Why is three-language policy Controversial : The Hindu 23rd Februrary 2025)
ಕನ್ನಡಕ್ಕೆ : ನಾ ದಿವಾಕರ
ಕೇಂದ್ರ ಸರ್ಕಾರವು ತನ್ನ ನೂತನ ಶೈಕ್ಷಣಿಕ ನೀತಿಗನುಗುಣವಾಗಿ ತಮಿಳುನಾಡು ರಾಜ್ಯಕ್ಕೆ “ ಉದಯೋನ್ಮುಖ ಭಾರತಕ್ಕಾಗಿ ಶಾಲೆಗಳ ಉದಯ (Prime Minister Schools for Rising India- ಪಿಎಂಶ್ರೀ ) ಪ್ರಧಾನಮಂತ್ರಿ ಯೋಜನೆ “ ಯ ಅಡಿಯಲ್ಲಿ ನೀಡಬೇಕಾದ 2,152 ಕೋಟಿ ರೂಗಳ ಅನುದಾನವನ್ನು ತಡೆಹಿಡಿದಿದೆ. ತಮಿಳುನಾಡು ಸರ್ಕಾರ ಈ ಯೋಜನೆಗೆ ಸೇರಲು ನಿರಾಕರಿಸಿರುವ ಕಾರಣ ನೀಡಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ತಮಿಳುನಾಡು ಸರ್ಕಾರವು ಪಿಎಂಶ್ರೀ ಯೋಜನೆಯಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದ್ದರೂ ಸಹ , ಈ ಯೋಜನೆಯಡಿಯಲ್ಲೇ ಹೊಸ ಶಿಕ್ಷಣ ನೀತಿ -2020ನ್ನು ಅನುಷ್ಟಾನಗೊಳಿಸುವ ಕಡ್ಡಾಯ ನಿಯಮ ಇರುವುದರಿಂದ, ರಚನಾತ್ಮಕ ನೆಲೆಯಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹೊಸ ಶಿಕ್ಷಣ ನೀತಿಯ (ಎನ್ಇಪಿ) ಬಗ್ಗೆ ತಮಿಳುನಾಡು ಸರ್ಕಾರದ ಪ್ರಮುಖ ಆಕ್ಷೇಪ ಎಂದರೆ ಅದು ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲು ಸೂಚಿಸುತ್ತದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ನಿಟ್ಟಿನಲ್ಲಿ ಯಾವುದೇ ರಿಯಾಯಿತಿ ನೀಡಲು ನಿರಾಕರಿಸಿದ್ದು, ತಮಿಳುನಾಡು ಸಂವಿಧಾನದೊಡನೆ ಹೊಂದಿಕೊಂಡು ಮುಂದೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಮುಖ್ಯಮಂತ್ರಿ ಎಮ್. ಕೆ. ಸ್ಟಾಲಿನ್ ಸಂವಿಧಾನದ ಯಾವ ನಿಯಮಗಳು ಈ ರೀತಿ ಕಡ್ಡಾಯ ಮಾಡುತ್ತವೆ ಎಂದು ಪ್ರಶ್ನಿಸಿದ್ದು, ತಮಿಳುನಾಡು ಸರ್ಕಾರವು ಈ ರೀತಿಯ ಬ್ಲಾಕ್ ಮೇಲ್ ತಂತ್ರಗಳಿಗೆ ಮಣಿಯವುದಿಲ್ಲ ಮತ್ತು ರಾಜ್ಯವು ಚಾರಿತ್ರಿಕವಾಗಿ ಅಳವಡಿಸಿಕೊಂಡಿರುವ ದ್ವಿ ಭಾಷಾ ನೀತಿಯನ್ನು ರದ್ದುಪಡಿಸುವುದಿಲ್ಲ ಎಂದು ಖಚಿತವಾಗಿ ಹೇಳಿದ್ದಾರೆ.

ಎನ್ಇಪಿ 2020 ಏನು ಹೇಳುತ್ತದೆ ?
ಹೊಸ ಶಿಕ್ಷಣ ನೀತಿ-2020 ತ್ರಿಭಾಷಾ ನೀತಿಯನ್ನು ಉಳಿಸಿಕೊಂಡಿದ್ದು, ಈ ಕಲ್ಪನೆಯನ್ನು 1968ರ ಹೊಸ ಶಿಕ್ಷಣ ನೀತಿಯಲ್ಲೇ ಮೊದಲು ಅಳವಡಿಸಲಾಗಿತ್ತು. ಆದಾಗ್ಯೂ ಅಂದಿನ ಸನ್ನಿವೇಶದಲ್ಲಿ ಶಿಕ್ಷಣ ನೀತಿಯು ಹಿಂದಿ ಭಾಷೆಯನ್ನು ದೇಶಾದ್ಯಂತ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿತ್ತು. ಹಿಂದಿ ಭಾಷಿಕ ರಾಜ್ಯಗಳು ಹಿಂದಿ, ಇಂಗ್ಲಿಷ್ ಮತ್ತು ದಕ್ಷಿಣ ಭಾರತದ ಭಾಷೆಗಳಿಗೆ ಆದ್ಯತೆ ನೀಡಿ, ಆಧುನಿಕ ಭಾರತೀಯ ಭಾಷೆಯೊಂದನ್ನು ಶಾಲೆಗಳಲ್ಲಿ ಬೋಧಿಸತಕ್ಕದ್ದು ಹಾಗೂ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಸ್ಥಳೀಯ ರಾಷ್ಟ್ರೀಯ ಭಾಷೆಯನ್ನು ಬೋಧಿಸಬೇಕು ಎಂದು ಹೇಳಲಾಗಿತ್ತು.ಇದಕ್ಕೆ ತದ್ವಿರುದ್ಧವಾಗಿ ಎನ್ಇಪಿ 2020ರಲ್ಲಿ ಇನ್ನೂ ಹೆಚ್ಚಿನ ನಮ್ಯತೆಯನ್ನು (Flexibility) ಒದಗಿಸಲಾಗಿದ್ದು ಯಾವುದೇ ರಾಜ್ಯದ ಮೇಲೆ ನಿರ್ದಿಷ್ಟ ಭಾಷೆಯನ್ನು ತಾಂತ್ರಿಕವಾಗಿ ಹೇರುವುದಿಲ್ಲ ಎಂದು ಹೇಳಲಾಗಿದೆ.
ಆದರೆ ಎನ್ಇಪಿ 2020ರಲ್ಲಿ “ ಮಕ್ಕಳು ಕಲಿಯುವ ಮೂರು ಭಾಷೆಗಳು ರಾಜ್ಯಗಳ, ಪ್ರದೇಶಗಳ ಮತ್ತು ನಿರ್ದಿಷ್ಟವಾಗಿ ಶಿಕ್ಷಣಾರ್ಥಿಗಳ ಆಯ್ಕೆಯ ಪ್ರಶ್ನೆಯಾಗಿರುತ್ತದೆ, ಆದರೆ ಕನಿಷ್ಠ ಮೂರರಲ್ಲಿ ಎರಡು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ ” ಎಂದು ಹೇಳಲಾಗಿದೆ. ಇದು ಏನನ್ನು ಸೂಚಿಸುತ್ತದೆ ಎಂದರೆ, ರಾಜ್ಯದ ಭಾಷೆಯೊಡನೆ ಹೆಚ್ಚುವರಿಯಾಗಿ, ಮಕ್ಕಳು ಎರಡರಲ್ಲಿ ಒಂದು ಭಾರತೀಯ ಭಾಷೆಯನ್ನು ಕಲಿಯಬೇಕಾಗುತ್ತದೆ, ಇದು ಹಿಂದಿ ಭಾಷೆಯೇ ಆಗಬೇಕಿಲ್ಲ. ಈ ನೀತಿಯು ದ್ವಿ ಭಾಷಾ ಬೋಧನೆಗೆ ಹೆಚ್ಚು ಒತ್ತು ನೀಡುವುದಲ್ಲದೆ, ಮನೆಯ ಭಾಷೆ ಅಥವಾ ಮಾತೃಭಾಷೆ ಮತ್ತು ಇಂಗ್ಲಿಷ್ ಭಾಷೆಯನ್ನು ಬೋಧಿಸುವಂತೆ ಸೂಚಿಸುತ್ತದೆ. ಇಲ್ಲಿ ಎದ್ದು ಕಾಣುವ ಒಂದು ಅಂಶ ಎಂದರೆ, ಸಂಸ್ಕೃತ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ತ್ರಿ ಭಾಷಾ ಸೂತ್ರದಡಿಯಲ್ಲಿ ಆಯ್ಕೆಯ ಭಾಷೆಯಾಗಲು ಅವಕಾಶ ಕಲ್ಪಿಸಲಾಗಿದೆ.

ತಮಿಳುನಾಡಿನಲ್ಲಿ ಏಕೆ ವಿರೋಧ ಇದೆ ?
ತಮಿಳುನಾಡು ಚಾರಿತ್ರಿಕವಾಗಿ ಹಿಂದಿ ಭಾಷಾ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿದೆ. 1937ರಲ್ಲಿ ಮದ್ರಾಸ್ನ ಸಿ. ರಾಜಗೋಪಾಲಾಚಾರಿ (ರಾಜಾಜಿ) ನೇತೃತ್ವದ ಸರ್ಕಾರವು ಸೆಕಂಡರಿ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಪಠ್ಯವಾಗಿ ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಮುಂದಿರಿಸಿತ್ತು. ಜಸ್ಟಿಸ್ ಪಕ್ಷವು ಇದನ್ನು ತೀವ್ರವಾಗಿ ವಿರೋಧಿಸಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ತಾಳಮುತ್ತು ಮತ್ತು ನಟರಾಜನ್ ಎಂಬ ಇಬ್ಬರು ಯುವ ನಾಯಕರು ಮೃತಪಟ್ಟಿದ್ದರು. ಈ ನಾಯಕರು ಹಿಂದಿ ವಿರೋಧಿ ಆಂದೋಲನದ ಐಕನ್ಗಳಾಗಿ ರೂಪುಗೊಂಡಿದ್ದರು. ಅಂತಿಮವಾಗಿ ರಾಜಾಜಿ ರಾಜೀನಾಮೆ ನೀಡಬೇಕಾಯಿತು. ಬ್ರಿಟೀಷ್ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿತ್ತು.
1965ರಲ್ಲಿ ಭಾರತದಲ್ಲಿ ದೇಶಾದ್ಯಂತ ಹಿಂದಿ ಭಾಷೆಯನ್ನು ಏಕೈಕ ಅಧಿಕೃತ ಭಾಷೆಯಾಗಿ (Official Language) ಅನುಷ್ಠಾನಗೊಳಿಸಲು ಇದ್ದ ಅಂತಿಮ ಗಡುವು ಸಮೀಪಿಸುತ್ತಿರುವಂತೆ, ತಮಿಳುನಾಡಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ಉಲ್ಬಣಿಸಿ, 70 ಜನರು ಪೊಲೀಸ್ ಗೋಲಿಬಾರ್ನಲ್ಲಿ ಹಾಗೂ ಆತ್ಮಾಹುತಿಯ ಮೂಲಕ ಮೃತಪಟ್ಟಿದ್ದರು. 1967ರಲ್ಲಿ ಸಂಸತ್ತಿನಲ್ಲಿ ಅಧಿಕೃತ ಭಾಷೆಗಳ (ತಿದ್ದುಪಡಿ) ಕಾಯ್ದೆಯನ್ನು ಅನುಮೋದಿಸಿದಾಗ ಈ ಪ್ರತಿಭಟನೆಗಳು ಮರುಕಳಿಸಿದ್ದವು. ಈ ತಿದ್ದುಪಡಿಯ ಮೂಲಕ 1968ರ ಅಧಿಕೃತ ಭಾಷಾ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ತ್ರಿ ಭಾಷಾ ನೀತಿಯ ಅನುಸಾರ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವುದು ಈ ನಿರ್ಣಯದ ಮುಖ್ಯಾಂಶವಾಗಿತ್ತು.

ಜನವರಿ 1968ರಲ್ಲಿ ಮದ್ರಾಸ್ ವಿಧಾನಸಭೆಯಲ್ಲಿ, ಸಿ.ಎನ್. ಅಣ್ಣಾದೊರೈ ನೇತೃತ್ವದ ಡಿಎಂಕೆ ಸರ್ಕಾರವು ಒಂದು ನಿರ್ಣಯವನ್ನು ಕೈಗೊಂಡು, ತ್ರಿ ಭಾಷಾ ನೀತಿಯನ್ನು ರದ್ದುಪಡಿಸಲು ತೀರ್ಮಾನಿಸಲಾಗಿತ್ತು. ಹಾಗೆಯೇ ತಮಿಳುನಾಡಿನ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಪಠ್ಯಕ್ರಮದಿಂದ ತೆಗೆದುಹಾಕುವ ನಿರ್ಣಯವನ್ನು ಅನುಮೋದಿಸಲಾಗಿತ್ತು. ಅಂದಿನಿಂದಲೂ, ರಾಜ್ಯವು ತನ್ನ ದ್ವಿ ಭಾಷಾ ನೀತಿಯನ್ನು ದೃಢನಿಶ್ಚಯದೊಂದಿಗೆ ಅನುಸರಿಸುತ್ತಾ ಬಂದಿದ್ದು ಇಂಗ್ಲಿಷ್ ಮತ್ತು ತಮಿಳು ಭಾಷೆಗಳನ್ನಷ್ಟೇ ಬೋಧಿಸಲಾಗುತ್ತಿದೆ. ಆಡಳಿತಾರೂಢ ಡಿಎಂಕೆ ಮತ್ತು ಪ್ರಧಾನ ವಿರೋಧ ಪಕ್ಷ ಎಐಎಡಿಎಂಕೆ ಒಳಗೊಂಡಂತೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಈ ನೀತಿಯನ್ನು ತಿದ್ದುಪಡಿ ಮಾಡಲು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿವೆ. 2019ರಲ್ಲಿ ರಾಜ್ಯದ ತೀವ್ರ ವಿರೋಧದ ಪರಿಣಾಮವಾಗಿ ಕಸ್ತೂರಿ ರಂಗನ್ ಸಮಿತಿಯು ಎನ್ಇಪಿ ಕರಡು ಪ್ರತಿಯಲ್ಲಿ ಹಿಂದಿ ಕಲಿಕೆ ಕಡ್ಡಾಯ ಮಾಡುವ ನಿಯಮವನ್ನು ತೆಗೆದುಹಾಕಿತ್ತು.
ತ್ರಿ ಭಾಷಾ ನೀತಿ ಮತ್ತು ಹಿಂದಿ ಹೇರಿಕೆಯ ಭೀತಿ
ತಮಿಳುನಾಡಿನ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ-ಭಾಷಾ-ಸಾಂಸ್ಕೃತಿಕ-ರಾಜಕೀಯ ಕಾರ್ಯಕರ್ತರು ತ್ರಿ ಭಾಷಾ ನೀತಿಯನ್ನು ಒಂದು ಮಂಜಿನ ಪರದೆಯ ರೂಪದಲ್ಲೇ ನೋಡುತ್ತಾರೆ. ಅಷ್ಟೇ ಅಲ್ಲದೆ ಹಿಂಬಾಗಿಲಿನಿಂದ ಹಿಂದಿ ಹೇರಿಕೆಯ ತಂತ್ರವಾಗಿ ಕಾಣುತ್ತಾರೆ. ವಾಸ್ತವವಾಗಿ ಅನುಷ್ಠಾನದ ಹಂತದಲ್ಲಿ, ಭಾಷಾ ಬೋಧಕರ ಹಾಗೂ ಕಲಿಕಾ ಸಾಮಗ್ರಿಗಳ ಕೊರತೆಯ ಕಾರಣದಿಂದ, ತ್ರಿ ಭಾಷಾ ನೀತಿಯು ಅನಿವಾರ್ಯವಾಗಿ ಹಿಂದಿ ಬೋಧನೆಗೆ ಎಡೆಮಾಡಿಕೊಡುತ್ತದೆ. ಮೇಲಾಗಿ, ಕೇಂದ್ರ ಸರ್ಕಾರ ಹಾಗೂ ಪ್ರಮುಖ ಬಿಜೆಪಿ ನಾಯಕರು ಹಿಂದಿ ಭಾಷೆಯನ್ನು ಪ್ರೋತ್ಸಾಹಿಸುವ ಅಭಿಪ್ರಾಯವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಲೇ ಇರುವುದನ್ನೂ ಗಮನಿಸಬೇಕಿದೆ. 2019ರಲ್ಲಿ ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ನಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಬೋಧಕರನ್ನು ನೇಮಕ ಮಾಡಲೆಂದೇ 50 ಕೋಟಿ ರೂಗಳನ್ನು ನಿಗದಿಪಡಿಸಲಾಗಿತ್ತು.

ವಿಮರ್ಶಕರು ಹೇಳುವಂತೆ, ಕೇಂದ್ರ ಸರ್ಕಾರದ ನಡವಳಿಕೆಗಳಿಗೂ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸುವ ಅದರ ಮಾತುಗಳಿಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾದೇಶಿಕ ಭಾಷಾ ಬೋಧಕರ ನೇಮಕಾತಿಗಾಗಿ ಪ್ರಯತ್ನಗಳನ್ನೇ ಮಾಡದಿರುವುದು ಹಾಗೂ ವಿಂಧ್ಯ ಪರ್ವತದಿಂದಾಚೆಗಿನ ರಾಜ್ಯಗಳ ಶಾಲೆಗಳಲ್ಲಿ ದಕ್ಷಿಣ ಭಾರತದ ಭಾಷೆಗಳ ಬೋಧನೆಗಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದು ಕೇಂದ್ರ ಸರ್ಕಾರದ ಈ ನಡೆಯನ್ನು ಸಾಕ್ಷೀಕರಿಸುತ್ತದೆ. ಧರ್ಮೇಂದ್ರ ಪ್ರಧಾನ್ ಅವರು ತಮಿಳುನಾಡಿಗೆ ಅನುದಾನವನ್ನು ತಡೆಹಿಡಿದಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ತ್ರಿ ಭಾಷಾ ನೀತಿಯನ್ನು ಪಾಲಿಸುವುದರ ಬಗ್ಗೆ ಯಾವುದೇ ಭಿನ್ನ ಅಭಿಪ್ರಾಯ ಅಥವಾ ಸಮಾಲೋಚನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಮ್. ಕೆ. ಸ್ಟಾಲಿನ್ ಅವರಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ವರ್ತಿಸುವಂತೆ ಕೇಂದ್ರ ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲದೆ 2020ರ ಹೊಸ ಶಿಕ್ಷಣ ನೀತಿ (ಎನ್ಇಪಿ)ಯನ್ನು ತಮಿಳು ನಾಡು ಸರ್ಕಾರವು ಸಮೀಪ ದೃಷ್ಟಿಯಿಂದ (Myopic view) ನೋಡುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟಾಲಿನ್, ಕೇಂದ್ರ ಸರ್ಕಾರವು ಎನ್ಇಪಿ ಜಾರಿಗೊಳಿಸುವ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಧರ್ಮೆಂದ್ರ ಪ್ರಧಾನ್ ಅವರ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ. ಡಿಎಂಕೆ ಮತ್ತು ತಾವು ಇರುವವರೆಗೂ ತಮಿಳು ಮತ್ತು ತಮಿಳುನಾಡಿನ ಹಿತಾಸಕ್ತಿಗಳ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಟಾಲಿನ್ ಸ್ಪಷ್ಟವಾಗಿ ಘೋಷಿಸಿದ್ದಾರೆ.

ಮುಂದಿನ ಹಾದಿ ಯಾವುದು ?
ಈ ಸಮಸ್ಯೆಗೆ ಇರಬಹುದಾದ ಏಕೈಕ ಸಂಭಾವ್ಯ ಪರಿಹಾರ ಎಂದರೆ ರಚನಾತ್ಮಕ ಸಮಾಲೋಚನೆ, ಮಾತುಕತೆ ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಡುವೆ ಆಚರಣಾತ್ಮಕ ನೆಲೆಯಲ್ಲಿ ರಾಜಿ ಮಾಡಿಕೊಳ್ಳುವುದೇ ಆಗಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಶಿಕ್ಷಣವನ್ನು ಕೇಂದ್ರ ಪ್ರಭುತ್ವದಿಂದ ಪ್ರತ್ಯೇಕಿಸಿ ಸಂವಿಧಾನದ ಸಹವರ್ತಿ ಪಟ್ಟಿಗೆ ಸೇರಿಸಿರುವುದರಿಂದ, ಈ ವಿಚಾರದಲ್ಲಿ ಪರಸ್ಪರ ಸಮಾಲೋಚನೆಯೇ ಸೂಕ್ತ ಮಾರ್ಗವಾಗುತ್ತದೆ. ಗಮನಾರ್ಹವಾದ ಸಂಗತಿ ಎಂದರೆ, ತಮಿಳುನಾಡು ತನ್ನ ದೀರ್ಘ ಕಾಲದ ದ್ವಿ ಭಾಷಾ ನೀತಿಯ ಹೊರತಾಗಿಯೂ ಶೈಕ್ಷಣಿಕ ವಲಯದಲ್ಲಿ ಇತರ ಹಲವು ರಾಜ್ಯಗಳಿಗಿಂತಲೂ ಉತ್ತಮ ಸಾಧನೆ ಮಾಡಿದೆ. ಶಾಲಾ ಪ್ರವೇಶಾತಿಯ ಹೆಚ್ಚಳ, ಶಾಲೆಯಿಂದ ಹೊರಬೀಳುವ ಶಿಕ್ಷಣಾರ್ಥಿಗಳು ಕಡಿಮೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ. ತೃತೀಯ ಭಾಷೆಯನ್ನು ಬೋಧಿಸುವ ವಿಚಾರದಲ್ಲಿ ಉದ್ಭವಿಸುವ ಭಿನ್ನಾಭಿಪ್ರಾಯಗಳು, ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಸಮಗ್ರ ಶಿಕ್ಷಣ ಯೋಜನೆಗೆ ಅನುದಾನ ನೀಡುವ ಪ್ರಕ್ರಿಯೆಗೆ ಅಡ್ಡಿಯಾಗಬಾರದು.
-೦-೦-೦-೦-










