ಮೈಸೂರು : ಬಂಡೀಪುರದಲ್ಲಿ ಸಫಾರಿ ಮಾಡಿದ ಪ್ರಧಾನಿ ಮೋದಿಗೆ ಹುಲಿ ಕಾಣಲಿಲ್ಲ ಎಂಬ ವಿಪಕ್ಷಗಳ ಟೀಕೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಗುಜರಾತ್ನ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲ ಯಾಕೆ ಕಾಂಗ್ರೆಸ್ಸಿಗರು ಹೂಳಿಡುತ್ತಾರೆ..? ಸಿದ್ದರಾಮಯ್ಯ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಮೇ 10ರಂದು ಈ ಭಯ ಮತ್ಯಾವ ರೀತಿಯಲ್ಲಿ ಗೋಚರವಾಗುತ್ತೆ ನೋಡಿ ಎಂದು ಗುಡುಗಿದ್ದಾರೆ.
ಪ್ರಧಾನಿ ಮೋದಿ ವನ್ಯಜೀವಿಗಳ ಮೇಲೆ ಕಾಳಜಿಯಿಂದಾಗಿ ದೆಹಲಿಯಿಂದ ಬಂಡಿಪುರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ ನೀವು ಸಿಎಂ ಆಗಿದ್ದವರು. ಆದರೆ ಒಂದು ದಿನವು ಬಂಡಿಪುರ, ನಾಗರಹೊಳೆಗೆ ಭೇಟಿ ನೀಡಲಿಲ್ಲ. ಮೈಸೂರಿಗೆ ಬಂದು ಕುರಿಯ ಚರ್ಬಿ ಹೋಗಿದ್ದವರು ನೀವು. ನಿಮ್ಮಿಂದ ನಮ್ಮ ಪ್ರಧಾನಿಗಳಿಗೆ ಹುಲಿ ಬಗ್ಗೆ ಪಾಠದ ಅವಶ್ಯಕತೆಯಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ರು.
![](https://pratidhvani.com/wp-content/uploads/2023/04/modd-2-1024x678.jpg)
ಏರ್ಫೋರ್ಸ್ನ ಮೂರು ಹೆಲಿಕಾಪ್ಟರ್ಗಳು ಏಕಕಾಲಕ್ಕೆ ಬಂದ ಕಾರಣ ಶಬ್ದ ಹೆಚ್ಚಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಇಷ್ಟು ಕನಿಷ್ಟ ಲೋಕ ಜ್ಞಾನವು ನಿಮಗೆ ಇಲ್ಲವಾ ಹೇಳಿ.. ? ಭ್ರಷ್ಟರ ಪಾಲಿಗೆ ಹುಲಿಯಂತಿದ್ದ ಲೋಕಾಯುಕ್ತ ಎಂಬ ಹುಲಿಯನ್ನೇ ಮುಗಿಸಿದ್ರಿ ನೀವು. ನಿಮ್ಮಿಂದ ನಮಗೆ ಪಾಠದ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕೆಎಂಎಫ್ನಲ್ಲಿ ಅಮುಲ್ ವಿಲೀನಗೊಳಿಸುತ್ತಾರೆ ಎಂಬ ವಿಚಾರವಾಗಿ ಇದೇ ವೇಳೆ ಸ್ಪಷ್ಟನೆ ನೀಡಿದ ಪ್ರತಾಪ್ ಸಿಂಹ, ನಮ್ಮ ಸರ್ಕಾರ ಘಂಟಾಘೋಷವಾಗಿ ವಿಲೀನಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೂ ವಿಪಕ್ಷಗಳು ಸುಳ್ಳು ಪ್ರಚಾರ ಮಾಡುತ್ತಿವೆ. ಮೊದಲು ಹಿಂದಿ ಹೇರಿಕೆ ಎಂದವರು ಈಗ ಅಮುಲ್ ಹೇಳಿಕೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ರು.