ಬಲಪಂಥೀಯರು ಹಾಗೂ ಹಿಂದುತ್ವವಾದಿಗಳು ಹಕ್ಕು ಸಾಧಿಸಲು ಪ್ರಯತ್ನ ಪಡುತ್ತಿರುವ ಮಾಜಿ ರಾಷ್ಟ್ರಪತಿ, ಇಸ್ರೋ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಆರ್ಎಸ್ಎಸ್ ಜೊತೆ ತನ್ನನ್ನು ಗುರುತಿಸಿಕೊಳ್ಳುವುದು ಇಷ್ಟವಿರಲಿಲ್ಲವೆಂದು ಅವರ ಕುರಿತು ಬಂದಿರುವ ನೂತನ ಪುಸ್ತಕ “ಕಲಾಂ: ದಿ ಅನ್ಟೋಲ್ಡ್ ಸ್ಟೋರಿ” ಹೇಳಿದೆ.
ಕಲಾಂ ಅವರು ʼಆರ್ಎಸ್ಎಸ್ ಬಗ್ಗೆ ಸಹಾನುಭೂತಿʼ ಹೊಂದಿದ್ದಾರೆಂಬ ಆರೋಪದ ಬಗ್ಗೆ ಅವರ ಸ್ನೇಹಿತರು ಎಚ್ಚರಿಸಿದ ನಂತರ ನಾಗ್ಪುರದ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಬೇಕಿದ್ದ ಕಾರ್ಯಕ್ರಮವನ್ನು ಒಮ್ಮೆ ರದ್ದುಗೊಳಿಸಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಈ ಪುಸ್ತಕವನ್ನು ಕಲಾಂ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದ ಆರ್ಕೆ ಪ್ರಸಾದ್ ಅವರು ಬರೆದಿದ್ದು, ಉನ್ನತ ಮಟ್ಟದ ರಾಜಕೀಯ ನಾಯಕರೊಂದಿಗಿನ ಕಲಾಂ ಅವರ ಸಂಬಂಧ ಮತ್ತು ಕೆಲವು ವಿವಾದಗಳ ಹಿಂದಿನ ಸತ್ಯದ ಮೇಲೆ ಹೊಸ ಬೆಳಕನ್ನು ಈ ಪುಸ್ತಕ ಚೆಲ್ಲುತ್ತದೆ.
ಆಗಿನ ರಾಷ್ಟ್ರಪತಿ ಕಲಾಂ ರ ಭೇಟಿಯ ಬಗ್ಗೆ ಪ್ರಚಾರ ಮಾಡಿಕೊಂಡಿದ್ದರಿಂದ ಧಿಡೀರ್ ರದ್ದುಪಡಿಸುವಿಕೆ ಬಗ್ಗೆ ಆರ್ಎಸ್ಎಸ್ ನಾಯಕತ್ವಕ್ಕೆ ಬೇಸರ ತಂದಿತ್ತು. ಹಾಗಾಗಿ, ಕಲಾಂ ನಂತರ ಭೇಟಿ ನೀಡಿದಾಗ ಆರ್ಎಸ್ಎಸ್ ಪ್ರಮುಖರು ಆ ಕಾರ್ಯಕ್ರಮಕ್ಕೆ ಹಾಜರಾಗದೆ ಕಲಾಂ ವಿರುದ್ಧದ ಅಸಮಾಧಾನ ಹೊರಹಾಕಿದ್ದರು ಎಂಬ ವಿಚಾರವು ಬಹಿರಂಗಗೊಂಡಿದೆ.

ಕಲಾಂ ಅವರು ಅಂತಿಮವಾಗಿ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು ಮತ್ತು ಅವರು ಆರಂಭದಲ್ಲಿ ಒಪ್ಪಿಕೊಂಡ ದಿನಾಂಕದ ಒಂದು ತಿಂಗಳ ನಂತರ ಆರ್ಎಸ್ಎಸ್ ನ ಆಂತರಿಕ ತರಬೇತಿಯಲ್ಲಿ ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡಿದರು. ಆದರೆ, ಸಂಘಟನೆಯ ಪ್ರಮುಖರು ಯಾರೂ ಇತ್ತ ಸುಳಿದಿರಲಿಲ್ಲ ಎಂದು ಪುಸ್ತಕವನ್ನು ಉಲ್ಲೇಖಿಸಿ ndtv.com ವರದಿ ಮಾಡಿದೆ.
“ಮೇ 2014 ರಲ್ಲಿ, ನಮ್ಮ ಕಚೇರಿಗೆ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿತ್ತು. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ತರಬೇತಿ ಶಿಬಿರದಲ್ಲಿ ಯುವ ಆರ್ಎಸ್ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಕಲಾಂ ಮಾತನಾಡಲು ಅವರು ಬಯಸಿದ್ದರು”. ಶಿಬಿರವು ಜೂನ್ 12 ರಂದು ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನ ಕಲಾಂ ಅವರನ್ನು ಅವರಿಗೆ ಅನುಕೂಲಕರ ದಿನಾಂಕದಂದು ಭೇಟಿ ಮಾಡಲು ಬಯಸಿದ್ದರು. ರಾಮ್ ಮಾಧವ್ ನಂತರ ಕಲಾಂ ಅವರನ್ನು ಭೇಟಿ ಮಾಡಿದ್ದರು. ಬಳಿಕ ಅವರು (ಕಲಾಂ) ತರಬೇತಿ ಶಿಬಿರದ ಸಮಾರೋಪ ದಿನ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲು ನಿರ್ಧರಿಸಲಾಯಿತು. ” ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ಆದರೆ, ಕಲಾಂ ಅವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇಷ್ಟವಿಲ್ಲದ ಅವರ ಕೆಲವು ಸ್ನೇಹಿತರು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸಲಹೆ ನೀಡಿದರು. ಗೆಳೆಯರಿಂದ ಪಡೆದ ಸಲಹೆಯ ಪರಿಣಾಮವಾಗಿ, ಕಲಾಂ ತಮ್ಮ ಮನಸ್ಸನ್ನು ಬದಲಾಯಿಸಿದರು. ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದರೆ ಅವರನ್ನು “ಆರ್ಎಸ್ಎಸ್ ಬಗ್ಗೆ ಸಹಾನುಭೂತಿ” ಉಳ್ಳವರು ಎಂದು ಕರೆಯುತ್ತಾರೆ. ಹಾಗೂ ಸಂಘಪರಿವಾರ ಅವರ (ಕಲಾಂ) ಹೆಸರನ್ನು ದುರುಪಯೋಗಪಡಿಸಿಕೊಳ್ಳಲು ಕಾರಣವಾಗಬಹುದು” ಎಂದು ಕಲಾಂ ಸ್ನೇಹಿತರು ಎಚ್ಚರಿಕೆ ನೀಡಿದ್ದರು.

ಮನಸು ಬದಲಿಸಿಕೊಂಡ ಕಲಾಂ, ಆರ್ಎಸ್ಎಸ್ ನಾಯಕರೊಂದಿಗೆ ಮಾತನಾಡಲು ಪ್ರಸಾದ್ ಜೊತೆಗೆ ತಿಳಿಸಿದ್ದರು. “ಆರ್ಎಸ್ಎಸ್ನ ವ್ಯಕ್ತಿಯೊಂದಿಗೆ ಮಾತನಾಡಲು ನನಗೆ ತುಂಬಾ ಕಷ್ಟವಾಯಿತು. ಹಠಾತ್ ಆಗಿ ಹಿಂದೆ ಸರಿದಿದ್ದಕ್ಕಾಗಿ (ಆರ್ಎಸ್ಎಸ್) ನಾಯಕತ್ವವು ಸಿಟ್ಟಾಯಿತು. ಕಲಾಂ ಅವರ ಭೇಟಿಯ ಬಗ್ಗೆ ಪ್ರಚಾರಕ್ಕಾಗಿ ಆರ್ಎಸ್ಎಸ್ ವ್ಯವಸ್ಥೆಗಳನ್ನು ಮಾಡಿತ್ತು,” ಎಂದು ಅವರು ಪುಸ್ತಕದಲ್ಲಿ ತಿಳಿಸಿದ್ದಾರೆ.
