• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕ್ರೌರ್ಯ ಮತ್ತು ಹಿಂಸೆ ಸಾಮಾಜಿಕ ವ್ಯಸನವಾದಾಗ

ನಾ ದಿವಾಕರ by ನಾ ದಿವಾಕರ
January 15, 2025
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

—–ನಾ ದಿವಾಕರ—–

ADVERTISEMENT

ಸಮಾಜದ ಗರ್ಭದಲ್ಲೇ ಮೊಳೆಯುವ ಕ್ರೌರ್ಯ ಸಾಪೇಕ್ಷವಾದಾಗ ಹಿಂಸೆ ಸ್ವೀಕೃತವಾಗುತ್ತದೆ

ಕಳೆದ ಮೂರುನಾಲ್ಕು ದಶಕಗಳಲ್ಲಿ ಭಾರತ ಕಂಡಿರುವಷ್ಟು ಕ್ರೌರ್ಯ ಮತ್ತು ಹಿಂಸೆ, ಪ್ರಾಚೀನ ಸಮಾಜವನ್ನೂ ನಾಚಿಸುತ್ತದೆ. ಮನುಷ್ಯರಲ್ಲಿ ಇತರ ಅವಗುಣಗಳಂತೆಯೇ ಆಂತರ್ಯದಲ್ಲೇ ಸೃಷ್ಟಿಯಾಗುವ ಕ್ರೌರ್ಯ ಮತ್ತು ಹಿಂಸೆ ವ್ಯಕ್ತಿಗತ ನೆಲೆಯಲ್ಲಿ ಪಡೆದುಕೊಳ್ಳುವ ರೂಪಗಳು ವಿಶಾಲ ಸಮಾಜದಲ್ಲಿ ಭಿನ್ನ ರೀತಿಯಲ್ಲಿ ವ್ಯಕ್ತವಾಗುವುದು ಮಾವನೇತಿಹಾಸದಲ್ಲಿ ಕಾಣಬಹುದಾದ ವಾಸ್ತವ. ಮಾನವ ಸಮಾಜವನ್ನು ಬೌದ್ಧಿಕವಾಗಿ ವಿಭಜಿಸುವ, ತನ್ಮೂಲಕ ಭೌತಿಕವಾಗಿ ವಿಘಟಿಸುವ ಯಾವುದೇ ಚಿಂತನಾಧಾರೆಗಳು ಈ ವಿಶಾಲ ಸಾಮಾಜಿಕ ನೆಲೆಯನ್ನು ಸಾಂಸ್ಥೀಕರಿಸುವ ಹಾದಿಗಳನ್ನು ಸದಾ ಅರಸುತ್ತಿರುತ್ತವೆ. ಮತೀಯ ಮೂಲಭೂತವಾದ, ಧಾರ್ಮಿಕ ಚೌಕಟ್ಟುಗಳಲ್ಲಿ ಸೃಷ್ಟಿಯಾಗುವ ಮತಾಂಧತೆ ಮತ್ತು ಕೋಮುವಾದ, ಭಾರತದಂತಹ ಸಮಾಜಗಳಲ್ಲಿನ ಶ್ರೇಣೀಕೃತ ವ್ಯವಸ್ಥೆಯೊಳಗಿನ ಜಾತಿ ಶ್ರೇಷ್ಠತೆ ಇವೆಲ್ಲವೂ ಈ ಸಾಂಸ್ಥೀಕರಣದ ವಾಹಕ/ನೆಲೆಗಳಾಗಿ ಪರಿಣಮಿಸುತ್ತವೆ.

 ಈ ಸಾಂಸ್ಥೀಕರಣಗೊಂಡ ಹಿಂಸೆ ಮತ್ತು ಕ್ರೌರ್ಯವನ್ನೇ ನವ ಭಾರತದ ಆಧುನಿಕ ಸಮಾಜ ತನ್ನೊಡಲಲ್ಲಿ ಇರಿಸಿಕೊಂಡು ವಿಕಾಸದತ್ತ ಸಾಗುತ್ತಿರುವುದು ವರ್ತಮಾನದ ದುರಂತಗಳಲ್ಲೊಂದು. ನಾವು ಅತ್ಯಾಧುನಿಕ ಡಿಜಿಟಲ್‌ ಯುಗದಲ್ಲಿದ್ದೇವೋ ಅಥವಾ ಇನ್ನೂ ಶತಮಾನಗಳ ಹಿಂದಿನ ಬರ್ಬರಾವಸ್ಥೆಯಲ್ಲಿದ್ದೇವೋ ಎಂದು ಅನುಮಾನ ಮೂಡುವಂತೆ, ಕಳೆದ ದಶಕಗಳಲ್ಲಿ, ಅದರಲ್ಲೂ 21ನೆಯ ಶತಮಾನದಲ್ಲಿ, ಹಿಂಸೆ ಮತ್ತು ಕ್ರೌರ್ಯವನ್ನು ಸಹನೀಯಗೊಳಿಸುತ್ತಿದ್ದೇವೆ. ಇದಕ್ಕೆ ಕಾರಣ ಭಾರತದ ವಿಶಾಲ ಸಮಾಜವನ್ನು (Broader Society) ನಿರ್ದೇಶಿಸುತ್ತಿರುವ ಮತ್ತು ಬೌದ್ಧಿಕವಾಗಿ ನಿಯಂತ್ರಿಸುತ್ತಿರುವ ಒಂದು ಆಂತರಿಕ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಜಾತಿ-ಮತದ ಶ್ರೇಷ್ಠತೆ ಇರುವಷ್ಟೇ ಪ್ರಮಾಣದಲ್ಲಿ ಇವೆರಡೂ ಪೋಷಿಸುವ ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಗಳೂ ಅಡಕವಾಗಿದೆ.

 ಸಮ್ಯಕ್‌ ದೃಷ್ಟಿಯ ಕೊರತೆ

Rahul Gandhi: ಅಸಂಬದ್ಧ ಮಾತುಗಳನ್ನು ಕೇಳುವುದನ್ನು ನಾವು ನಿಲ್ಲಿಸುವ ಸಮಯ ಬಂದಿದೆ..! #mohanbhagwat #rss

 ಹಾಗಾಗಿಯೇ ನಮ್ಮ ನಡುವೆ ಸಂಭವಿಸುತ್ತಲೇ ಇರುವ ದೌರ್ಜನ್ಯ, ತಾರತಮ್ಯ, ಕಿರುಕುಳ, ಅತ್ಯಾಚಾರ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಇವೆಲ್ಲವನ್ನೂ ನಾವು ವ್ಯಕ್ತಿ ಸ್ತರದಲ್ಲೇ ನೋಡುತ್ತಿದ್ದೇವೆ. ಬೌದ್ಧ ಧಮ್ಮ ಹೇಳಿದಂತಹ ಸಮ್ಯಕ್‌ ದೃಷ್ಟಿಕೋನವನ್ನು ನಮ್ಮ ಸಮಾಜ ತಲುಪಲು ಸಾಕಷ್ಟು ದೂರ ಕ್ರಮಿಸಬೇಕಿದೆ. ಕನಿಷ್ಠ ವಿವೇಕಾನಂದರು ಹೇಳಿದಂತಹ ಸಮಷ್ಟಿ ಪ್ರಜ್ಞೆಯನ್ನೂ ನಮ್ಮಿಂದ ರೂಢಿಸಿಕೊಳ್ಳಲಾಗುತ್ತಿಲ್ಲ. ಇದಕ್ಕೆ ಅಡ್ಡಿಯಾಗುತ್ತಿರುವುದು ವ್ಯವಸ್ಥೆಯೊಳಗೇ ಬೇರೂರಿರುವ ಯಜಮಾನಿಕತೆಯ ಸಂಸ್ಕೃತಿ ಮತ್ತು ಅದನ್ನು ವ್ಯವಸ್ಥಿತವಾಗಿ ಪೋಷಿಸುತ್ತಿರುವ ಊಳಿಗಮಾನ್ಯ-ಪಿತೃಪ್ರಧಾನ ಧೋರಣೆ ಮತ್ತು ಇದಕ್ಕೆ ನೀರೆರೆಯುವ ಬಂಡವಾಳಶಾಹಿಯ ವೈರುಧ್ಯಗಳು. ಈ ಮೂರೂ ಲಕ್ಷಣಗಳೇ ಭಾರತೀಯ ಸಮಾಜವನ್ನು ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ಆವರಿಸಿಕೊಂಡಿದ್ದು, ಇವುಗಳನ್ನು ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಸಾಂಸ್ಕೃತಿಕ ನೆಲೆಗಳು ಸಾಂಸ್ಥೀಕರಿಸುತ್ತಿವೆ.

 ಹಾಗಾಗಿಯೇ ನಮಗೆ ಸಮಾಜದಲ್ಲಿ ಮತ್ತು ಕೌಟುಂಬಿಕ ವಲಯದಲ್ಲಿ ನಡೆಯುವ ಹಿಂಸಾತ್ಮಕ ಘಟನೆಗಳು ಮತ್ತು ಅಲ್ಲಿ ಪ್ರಕಟಗೊಳ್ಳುವ ಕ್ರೌರ್ಯ-ಹಿಂಸೆ ಒಂದು ಸಾಮಾಜಿಕ ಅಸ್ವಸ್ಥತೆ ಅಥವಾ ವ್ಯಸನ (Social Malaise) ಎನಿಸಿಲ್ಲ. ಈ ಕ್ರೌರ್ಯಕ್ಕೆ ಬಲಿಯಾಗುವ, ಹಿಂಸೆಯನ್ನು ಅನುಭವಿಸುವ ಜೀವಗಳು ಸಾಮಾನ್ಯವಾಗಿ ಮೇಲ್‌ಸ್ತರದ ಹಿತವಲಯಗಳಿಂದ ಹೊರಗಿರುವುದರ ಕಾರಣ, ಮುಂದುವರೆದ ಮೇಲ್ಪದರದ ಸಮಾಜವೊಂದು (Elite society) ಹಿಂಸೆ ಮತ್ತು ಕ್ರೌರ್ಯವನ್ನು ನೋಡುವ ವಿಧಾನವನ್ನೂ ಬದಲಿಸಿಕೊಂಡಿದೆ. ಕಣ್ಣೆದುರಿನ ದೌರ್ಜನ್ಯಗಳನ್ನೂ ಸಹಿಸಿಕೊಳ್ಳುವ ಈ ಸಮಾಜ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಲ್ಲಿ ಸಂಭವಿಸುವ ಸಾವು ನೋವುಗಳನ್ನು, ಯಾತನೆಗಳನ್ನು ಸಂಭ್ರಮಿಸುವುದನ್ನೂ ನಾವು ಕಾಣುತ್ತಿದ್ದೇವೆ. ಈ ಸಾಮಾಜಿಕ ಪರಿಸರದಲ್ಲೇ ಸಾವು-ನೋವು ಎರಡೂ ಸಹ ಸಾಪೇಕ್ಷವಾಗಿಬಿಡುತ್ತವೆ.

C M Siddaramaiah:AICC ನೂತನ ಕಚೇರಿ ಉದ್ಘಾಟನೆಗೆ ಹೊರಟ ಸಿಎಂ ಸಿದ್ದರಾಮಯ್ಯ..! #mudacase #siddaramaiah #delhi

 ತತ್ಪರಿಣಾಮವಾಗಿ ಭಾರತೀಯ ಸಮಾಜದ ಕಣ್ಣಿಗೆ ಅಪರಾಧಗಳು ಕಾಣುತ್ತಿಲ್ಲ ಬದಲಾಗಿ ಅಪರಾಧಿಗಳು ಕಾಣುತ್ತಿದ್ದಾರೆ. ಎಂತಹ ಘೋರ ಅಪರಾಧಗಳು ಸಂಭವಿಸುತ್ತಿದ್ದರೂ ಅದನ್ನು ವ್ಯಕ್ತಿಗತಗೊಳಿಸುವ (Individulise) ಒಂದು ಬೌದ್ಧಿಕ ವ್ಯವಸ್ಥೆಯನ್ನೇ ನಾವು ನಿರ್ಮಿಸಿಕೊಂಡಿದ್ದೇವೆ. ಇಲ್ಲಿ ಸಂಭವಿಸುವ ಹಿಂಸೆ ಮತ್ತು ಕ್ರೌರ್ಯ ಎರಡೂ ಸಹ ವ್ಯಕ್ತಿಗತ ನೆಲೆಯಲ್ಲಿ ನಿರ್ವಚಿಸಿ ನಿಷ್ಕರ್ಷಿಸಲ್ಪಡುತ್ತದೆ. ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ವ್ಯಕ್ತಿಯನ್ನು ಆತನ/ಆಕೆಯ ಜಾತಿ-ಮತ-ಸಮುದಾಯದ ನೆಲೆಯಲ್ಲೇ ಗುರುತಿಸುವುದರಿಂದ, ಹಿಂಸೆ-ಕ್ರೌರ್ಯಕ್ಕೆ ಕಾರಣವಾಗುವ ವ್ಯಕ್ತಿಯ ಈ ಅಸ್ಮಿತೆಗಳೇ ನಮ್ಮ ಕಣ್ಣುಗಳಿಗೆ ಕವಿದ ಪೊರೆಯಾಗಿ ಪರಿಣಮಿಸುತ್ತವೆ. ಸಹಜವಾಗಿಯೇ ಅಪರಾಧವೂ ಅದರೊಳಗಿನ ಹಿಂಸೆ-ಕ್ರೌರ್ಯವೂ ಸಾಪೇಕ್ಷವಾಗಿಬಿಡುತ್ತದೆ. ಹಾಗಾಗಿ ಅಪರಾಧಗಳು ನಮ್ಮ ನಿದ್ರೆಗೆಡಿಸುತ್ತಿಲ್ಲ, ಅಪರಾಧಿಗಳು ವಿಚಲಿತಗೊಳಿಸುತ್ತಿದ್ದಾರೆ.

 ಅಸೂಕ್ಷ್ಮತೆಯ ಆಕರಗಳು

 ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಅದು ಪೋಷಿಸಿರುವ ಮೇಲ್ಪದರದ ಸಮಾಜ ಈ ಮನಸ್ಥಿತಿಯನ್ನು ಸಾಂಸ್ಥೀಕರಿಸುವಲ್ಲಿ ಯಶಸ್ವಿಯಾಗಿದೆ. ಈ ಸಾಂಸ್ಥೀಕರಣಗೊಂಡ ಸಮಾಜದಲ್ಲಿ ಮನುಜ ಸಂವೇದನೆ, ಲಿಂಗ ಸೂಕ್ಷ್ಮತೆ ಎರಡೂ ಸಹ ಹಿಂಬದಿಗೆ ಸರಿದುಬಿಡುತ್ತದೆ. ಹಾಗಾಗಿ ನಮಗೆ ಅಪರಾಧಿಗಳು/ಸಂತ್ರಸ್ತರು ವ್ಯಕ್ತಿಗಳಾಗಿ ಮಾತ್ರ ಕಾಣುತ್ತಿದ್ದಾರೆ. ಸಾಮಾಜಿಕವಾಗಿ ಪ್ರತಿನಿತ್ಯ ಸಂಭವಿಸುತ್ತಿರುವ ಅತ್ಯಾಚಾರ, ಹತ್ಯೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಹಿಂಸೆಗಳು ನಮಗೆ ಸಾಮಾಜಿಕ ರೋಗ/ವ್ಯಸನದಂತೆ ಕಾಣುತ್ತಿಲ್ಲ. ತನ್ನ ಮನೆಯ ಫ್ರಿಡ್ಜ್‌ನಲ್ಲಿ ಗೋಮಾಂಸ ಇಟ್ಟ ಅಕ್ಲಾಖ್‌ ಕೊಲೆಯಾದರೆ ಅದು ಮತ್ತೊಂದು ಸಮಾಜಕ್ಕೆ ಸಂಭ್ರಮಿಸುವ ವಿಷಯವಾಗುತ್ತದೆ. ಖೈರ್ಲಾಂಜಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾದವರು ಹೊರ ಸಮಾಜಕ್ಕೆ ಅನ್ಯರಾಗಿಬಿಡುತ್ತಾರೆ. ಕಂಬಾಲಪಲ್ಲಿಯಲ್ಲಿ ಸುಟ್ಟುಹೋದ ಜೀವಗಳು ನಿರ್ಲಕ್ಷಿತವಾಗಿಬಿಡುತ್ತವೆ. ಬಿಲ್ಲಿಸ್‌ ಬಾನೋ ಮೇಲೆ ದೌರ್ಜನ್ಯ ಎಸಗಿದವರು ಸಂಸ್ಕಾರವಂತರಾಗಿ ಸನ್ಮಾನಿಸಲ್ಪಡುತ್ತಾರೆ.

 ಇಂತಹ ಒಂದು ವಿಕೃತಿಗಳ ನಡುವೆ ಅಮಾಯಕ ಮೂಕ ಪಶು, ಒಂದು ಹಸು ತನ್ನ ಕೆಚ್ಚಲು ಕತ್ತರಿಸಿದವರು ಯಾರು ಎಂಬ ಅರಿವೇ ಇಲ್ಲದೆ ಮೌನ ವೇದನೆ ಅನುಭವಿಸುತ್ತದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಈ ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆ ಮೂಕ ಪಶುವಿನ ಮೇಲೆ ಇಂತಹ ಕ್ರೌರ್ಯ ಎಸಗಿದ ವ್ಯಕ್ತಿಯನ್ನು ಅವನ ಮತೀಯ ಅಸ್ಮಿತೆಯ ಮೂಲಕ ಗುರುತಿಸುವ ಬಿಜೆಪಿ ನಾಯಕರಿಗೆ ಅಲ್ಲೊಂದು ʼ ಜಿಹಾದ್‌ ʼ ಅಥವಾ ʼ ಭಯೋತ್ಪಾದನೆ ʼಯ ಛಾಯೆ ಕಾಣುತ್ತದೆ. ಒಂದು ವೇಳೆ ಆತ ಮುಸ್ಲಿಂ ಆಗದೆ ಅನ್ಯನಾಗಿದ್ದಲ್ಲಿ, ಇದೂ ಸಹ ಒಂದು ರಸ್ತೆ ಅಪಘಾತದಂತೆ ವಿಸ್ಮೃತಿಗೆ ಜಾರಿಬಿಡುತ್ತಿತ್ತು. ಏಕೆಂದರೆ ಆರೋಪಿಯ ಕ್ರೌರ್ಯದ ಹಿಂದೆ ಅಡಗಿರುವ ಅಮಾನುಷ ಮನಸ್ಥಿತಿಯನ್ನು ಸಮಷ್ಟಿ ನೆಲೆಯಲ್ಲಿಟ್ಟು ನೋಡುವ ವ್ಯವಧಾನವನ್ನೇ ನಮ್ಮ ಸಮಾಜ, ರಾಜಕಾರಣ ಬೆಳೆಸಿಕೊಂಡಿಲ್ಲ. ಕೆಚ್ಚಲನ್ನು ಕಳೆದುಕೊಂಡ ಮೂಕ ಪ್ರಾಣಿಗೆ ಈ ಅಸ್ಮಿತೆಗಳು ಅನಗತ್ಯವಾಗುತ್ತದೆ. ಅದರ ಮೂಕ ವೇದನೆ ಅರಣ್ಯರೋದನವಾಗಿಬಿಡುತ್ತದೆ.

 ಅಂದರೆ ನಾವು ನೋವು-ವೇದನೆ-ಯಾತನೆಗೆ ಮಾನವರಾಗಿ ಸ್ಪಂದಿಸುವುದನ್ನು ಮರೆತುಹೋಗಿದ್ದೇವೆ.  ಕನ್ನಡದ ಸುದ್ದಿಮನೆಗಳಲ್ಲಿ ಈ ಘಟನೆ ಸೃಷ್ಟಿಸುವಂತಹ ವಾದಸರಣಿಗಳು, ಪ್ಯಾನೆಲ್‌ ಚರ್ಚೆಗಳು ಮತ್ತು ಪರ-ವಿರೋಧದ ಅಭಿಪ್ರಾಯಗಳು ಎಲ್ಲಿಯೂ ಸಹ, ಈ ಕೃತ್ಯದ ಹಿಂದೆ ಅಡಗಿರಬಹುದಾದಂತಹ ಕ್ರೌರ್ಯ-ಹಿಂಸೆಯ ಸಾಮಾಜಿಕ ಆಯಾಮವನ್ನು ಮಾತನಾಡುವುದಿಲ್ಲ. ರಾಜಕೀಯ ಪಕ್ಷಗಳಿಗೆ ಇದು ಪರಸ್ಪರ ದೊಷಾರೋಪಣೆಯ ವಿಷಯವಾದರೆ, ಸಾಮಾಜಿಕವಾಗಿ ಸಕ್ರಿಯವಾಗಿರುವ ಬಹುತೇಕ ಸಂಘಟನೆಗಳಿಗೆ ಇದು ಪ್ರತಿಭಟಿಸಬೇಕಾದ ಒಂದು ಘಟನೆಯಾಗಿ ಮಾತ್ರ ಕಾಣುತ್ತದೆ . ಹಸುವಿನ ಕೆಚ್ಚಲು ಕತ್ತರಿಸಿ ಬಿಸಾಡಿದ ವ್ಯಕ್ತಿಗೂ, ತಮ್ಮದಲ್ಲದ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಗಳನ್ನು ಕೊಲ್ಲುವ ಪೋಷಕರಿಗೂ, ತನ್ನಿಚ್ಛೆಯಂತೆ ಆಹಾರ ಸೇವಿಸುವ ವ್ಯಕ್ತಿಯನ್ನು ಹತ್ಯೆ ಮಾಡುವವರಿಗೂ, ಹಸುಗಂದನನ್ನು ಗೋಡೆಗೆ ಅಪ್ಪಳಿಸಿ ಕೊಲ್ಲುವ ದುರುಳರಿಗೂ ( ಬಿಲ್ಕಿಸ್‌ ಬಾನೋ ಪ್ರಕರಣ) ಏನಾದರೂ ವ್ಯತ್ಯಾಸ ಕಾಣಲು ಸಾಧ್ಯವೇ ?

 ಆಂತರಿಕೀಕರಣದ ನೆಲೆಯಲ್ಲಿ

 ಈ ಎಲ್ಲ ಘಟನೆಗಳಲ್ಲಿ ನಮಗೆ ಕಾಣಬೇಕಿರುವುದು ಮನುಷ್ಯ ಜೀವಿಯಲ್ಲಿರುವ ಕ್ರೌರ್ಯ ಮತ್ತು ಹಿಂಸೆ. ಕಳೆದ ಮೂರು ದಶಕಗಳ ಬೆಳವಣಿಗೆಗಳು ಏಕೆ ಅಪಾಯಕಾರಿಯಾಗಿದೆ ಎಂದರೆ ಈ ಅಮಾನುಷ ಅಪಸವ್ಯಗಳನ್ನು ಸಾಂಸ್ಥೀಕರಿಸಲಾಗಿದೆ. ಅರ್ಥಾತ್‌, ಇಂತಹ ಅಮಾನವೀಯ ಕೃತ್ಯಗಳನ್ನು ತಾತ್ವಿಕ-ಸೈದ್ಧಾಂತಿಕ-ರಾಜಕೀಯ ನೆಲೆಯಲ್ಲಿ ನಿಂತು ಸಮರ್ಥಿಸಿಕೊಳ್ಳುವ ಸಮಾಜವೊಂದು ನಮ್ಮೊಳಗೆ ಸೃಷ್ಟಿಯಾಗಿದೆ. ಈ ಸಮಾಜವನ್ನು ಪೋಷಿಸುವ ಸಲುವಾಗಿಯೇ ಸಾಂಸ್ಥಿಕ-ಸಾಂಘಿಕ ನೆಲೆಗಳನ್ನು ಬಲಪಡಿಸಲಾಗಿದೆ. ಇಲ್ಲಿ ಸಾವಿರಾರು ಜನರ ಸಾವನ್ನು ಅರಗಿಸಿಕೊಳ್ಳುವುದಷ್ಟೇ ಅಲ್ಲ, ಸಮರ್ಥಿಸಿ-ಸಂಭ್ರಮಿಸುವ ಮನಸ್ಥಿತಿಯನ್ನು ಸೃಷ್ಟಿಸಲಾಗಿದೆ. ಹಾಗೆಯೇ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ-ದೌರ್ಜನ್ಯಗಳನ್ನು ಮೌನವಾಗಿ ಸಮ್ಮತಿಸುವ ಸಮಾಜವೊಂದನ್ನು ನಾವು ನಮ್ಮ ನಡುವೆಯೇ ಕಟ್ಟಿಕೊಂಡಿದ್ದೇವೆ.

ಅಧಿಕಾರ ರಾಜಕಾರಣದಲ್ಲಿ ಈ ಸಮಾಜವೇ ನಿರ್ಣಾಯಕವಾಗಿಬಿಡುತ್ತದೆ. ಕತ್ತರಿಸಿದ ಹಸುವಿನ ಕೆಚ್ಚಲು ರಾಜಕೀಯ ಸರಕು ಅಥವಾ ದಾಳವಾಗಿಬಿಡುತ್ತದೆ. ಕೆಚ್ಚಲು ಕಳೆದುಕೊಂಡ ಹಸುವಿನ ಆರ್ತನಾದ ಪಶುವೈದ್ಯರಿಗಲ್ಲದೆ ಮತ್ತಾರಿಗೂ ಕೇಳಿಸುವುದೇ ಇಲ್ಲ. ಈ ಸಮಾಜವನ್ನು ನಿರ್ದೇಶಿಸಿ, ನಿಯಂತ್ರಿಸಿ, ನಿರೂಪಿಸುವ ಒಂದು ಬೌದ್ಧಿಕ ವಲಯವನ್ನು ನವ ಉದಾರವಾದ ಡಿಜಿಟಲ್‌ ತಂತ್ರಜ್ಞಾನ ಸೃಷ್ಟಿಸಿದೆ. ದುರಂತ ಎಂದರೆ ಸಮಾಜಮುಖಿಯಾಗಿರಬೇಕಾದ ಮಾಧ್ಯಮಗಳೂ ಸಹ ಬಹುತೇಕವಾಗಿ ಈ ವಲಯವನ್ನೇ ಪ್ರತಿನಿಧಿಸುತ್ತವೆ. ಚುನಾಯಿತ/ಪರಾಜಿತ/ಪದಚ್ಯುತ ಜನಪ್ರತಿನಿಧಿಗಳು ಮನುಜ-ಲಿಂಗ-ಜೀವ ಸೂಕ್ಷ್ಮತೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರಿಂದ, ʼ ಕೆಚ್ಚಲು ಕೊಯ್ದ ʼ ಪ್ರಕರಣದ ಸುತ್ತಲಿನ ರಾಜಕೀಯ ಸಂಕಥನದ ಸಂತೆಯಲ್ಲಿ, ಕೆಚ್ಚಲು ಕಳೆದುಕೊಂಡ ಹಸು ಮೂಲೆಗುಂಪಾಗುತ್ತದೆ. ಅದರ ಅಮಾಯಕ ಮಾಲೀಕ ಅನುಕಂಪ ಮತ್ತು ನಗದು ಪರಿಹಾರದಿಂದಾಚೆಗೆ ನಗಣ್ಯನಾಗಿಬಿಡುತ್ತಾನೆ.

 ಇಲ್ಲಿ ನಮ್ಮ ಸಮಾಜದ ಅಸೂಕ್ಷ್ಮತೆ ಢಾಳಾಗಿ ಗೋಚರಿಸುತ್ತದೆ. ಭಾವರಿದೇವಿ-ಸೌಜನ್ಯ –ನಿರ್ಭಯಳಿಂದ ಅಭಯಳವರೆಗೂ ನಡೆದಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳಲ್ಲೂ ಇದೇ ಅಸೂಕ್ಷ್ಮತೆಯನ್ನು ಕಂಡಿದ್ದೇವೆ. ಅನ್ಯಾಯಕ್ಕೊಳಗಾದ ಜೀವದ ಅಸ್ಮಿತೆ ನಮ್ಮ ಪ್ರತಿಕ್ರಿಯೆ-ಪ್ರತಿರೋಧ ಎಲ್ಲವನ್ನೂ ನಿರ್ಧರಿಸುವುದರಿಂದಲೇ, ಯಾವುದೇ ಅಸ್ಮಿತೆಯಿಲ್ಲದ ಒಂದು ಮೂಕ ಪ್ರಾಣಿ ಅನಾಥವಾಗಿಬಿಡುತ್ತದೆ. ಅಮಾಯಕ ಮನುಷ್ಯ ಜೀವಗಳೂ ಅನಾಥವಾಗಿಬಿಡುತ್ತವೆ. ಸಮಾಜದ ಕಣ್ಣುಗಳಿಗೆ ಕವಿದಿರುವ ಈ ದಟ್ಟ ಪೊರೆಯನ್ನು ಕಳಚದೆ ಹೋದರೆ, ಸಮಾಜದ ಎಲ್ಲ ಸ್ತರಗಳಲ್ಲೂ ಅಂತರ್ಗತವಾಗಿರುವ ಮತ್ತು ಆಧುನಿಕ ಸಮಾಜ ಆಂತರಿಕೀಕರಿಸಿಕೊಂಡಿರುವ (Internalise) ಕ್ರೌರ್ಯ ಮತ್ತು ಹಿಂಸೆ, ನಮಗೆ ಸಾಮಾಜಿಕ ವ್ಯಸನ ಅಥವಾ ಅಸ್ವಸ್ಥತೆಯಾಗಿ (Social malaise) ಕಾಣಲು ಸಾಧ್ಯವಿಲ್ಲ.

 ಬದಲಾಗದೆ ಹೋದರೆ ????

 ಹೀಗೆ ಕಾಣದೆ ಹೋದರೆ ನಮಗೆ ಈ ರೋಗ ಮತ್ತು ವ್ಯಸನಕ್ಕೆ ಮದ್ದು ಕಂಡುಹಿಡಿಯಲೂ ಸಾಧ್ಯವಾಗುವುದಿಲ್ಲ. ಏಕೆಂದರೆ 21ನೆಯ ಶತಮಾನದಲ್ಲಿ ನಾವು ವಿಕಸಿತ ಭಾರತ ಆಗುವ ಹಾದಿಯಲ್ಲಿ ಧಾವಿಸುತ್ತಿದ್ದರೂ, ಆ ಹಾದಿಯಲ್ಲಿ ಇಂದಿಗೂ ಎದುರಾಗುತ್ತಿರುವ ಪ್ರಾಚೀನ ನಡವಳಿಕೆಗಳನ್ನು, ಆಚರಣೆಗಳನ್ನು ಹಾಗೂ ಮನಸ್ಥಿತಿಯನ್ನು ಹೋಗಲಾಡಿಸುವ ಸಮಕಾಲೀನ ಚಿಕಿತ್ಸಕ ಚಿಂತನಾವಾಹಿನಿಗಳು ಕಾಣುತ್ತಿಲ್ಲ. ಈ ಚಿಕಿತ್ಸಕ ಗುಣವುಳ್ಳ ದಾರ್ಶನಿಕರಿಗಾಗಿ ಮತ್ತೊಮ್ಮೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ ಮೊದಲಾದವರನ್ನೇ ಆಶ್ರಯಿಸಬೇಕಿದೆ. ಈ ಚಿಂತನಾಧಾರೆಗಳನ್ನೇ ಸಮಕಾಲೀನಗೊಳಿಸುವ ಮೂಲಕ ಯುವ ತಲೆಮಾರಿನ ನಡುವೆ ಮತ್ತು ವಿಶಾಲ ಸಮಾಜದಲ್ಲಿ ಮನುಜ-ಲಿಂಗ-ಜೀವ ಸೂಕ್ಷ್ಮತೆ-ಸಂವೇದನೆಗಳನ್ನು ಬೆಳೆಸಬೇಕಿದೆ. ಇದಕ್ಕೆ ಅಡ್ಡಿಯಾಗುವ ಎಲ್ಲ ರೀತಿಯ ಸಾಂಪ್ರದಾಯಿಕತೆ ಮತ್ತು ಪ್ರಾಚೀನ ಆಲೋಚನೆಗಳನ್ನೂ ಬುಡಸಮೇತ ಕಿತ್ತೊಗೆಯಬೇಕಿದೆ.

 ಇದು ಪ್ರಗತಿ ಪರ ಎಂದು ಭಾವಿಸಲ್ಪಡುವ ಸಮಾಜದ ಮೇಲಿರುವ ಸಾಂಘಿಕ ಜವಾಬ್ದಾರಿ, ಸಾಂಸ್ಥಿಕ ಹೊಣೆಗಾರಿಕೆ. ಇದಕ್ಕೆ ಪ್ರತಿಕ್ರಿಯೆ-ಪ್ರತಿರೋಧ-ಪ್ರತಿಭಟನೆ ಮುಂತಾದ ತಕ್ಷಣದ ಅಭಿವ್ಯಕ್ತಿಗಳು ಪೂರಕವಾಗಬಹುದೇ ಹೊರತು ಸಾಕಾಗುವುದಿಲ್ಲ. ನಾವು ಸಮಾಜದ ಒಳಹೊಕ್ಕು ನೋಡಬೇಕಿದೆ. ಅಲ್ಲಿರಬಹುದಾದ ಪ್ರಾಚೀನ ಚಿಂತನೆಗಳನ್ನು ಬೇರುಸಮೇತ ಕಿತ್ತೊಗೆಯಬೇಕಿದೆ. ಅಡ್ಡದಾರಿಗಳನ್ನು ತೆರವುಗೊಳಿಸಬೇಕಿದೆ. ಜಾತಿ-ಮತ ಶ್ರೇಷ್ಠತೆ, ಧಾರ್ಮಿಕ ಪಾರಮ್ಯ,  ಊಳಿಗಮಾನ್ಯ ಪಿತೃಪ್ರಧಾನತೆ, ಪುರುಷಾಧಿಪತ್ಯ, ಬಂಡವಾಳಶಾಹಿಯ ಮಾರುಕಟ್ಟೆ ಕ್ರೌರ್ಯ ಮತ್ತು ಅಸಮಾನತೆಯನ್ನು ಸೃಷ್ಟಿಸುವ ಎಲ್ಲ ಸಾಮಾಜಿಕ ನೆಲೆಗಳನ್ನೂ ಭೇದಿಸಬೇಕಿದೆ. ಈ ಹಾದಿಯಲ್ಲಿ ನಾವು ಅಳವಡಿಸಿಕೊಳ್ಳುವ ಒಳಗಣ್ಣಿಗೆ ಅಲ್ಲಿ ಹಿಂಸೆ ಮತ್ತು ಕ್ರೌರ್ಯ ಸಾಮಾಜಿಕ ವ್ಯಸನವಾಗಿ, ಅಸ್ವಸ್ಥತೆಯಾಗಿ, ಪಿಡುಗಾಗಿ ಕಾಣಲು ಸಾಧ್ಯ. ಈ ಒಳಗಣ್ಣು ತೆರೆಯಲು ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಮಾನವೀಯತೆಯೊಂದಿದ್ದರೆ ಸಾಕು.

-೦-೦-೦-೦-

Tags: BJPCongress PartyNaa Divakaraಬಿಜೆಪಿ
Previous Post

ಮೂಡ ಹಗರಣ: ಜ.27ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

Next Post

ಮುಡಾ ಕೇಸ್ CBI ವರ್ಗಾವಣೆಗೆ ಕೋರ್ಟ್ ಮೊರೆ – ಸ್ನೇಹಮಯಿ ಕೃಷ್ಣ ಪರ ವಕೀಲರ ವಾದವೇನು..? 

Related Posts

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್
ಕರ್ನಾಟಕ

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್

by ಪ್ರತಿಧ್ವನಿ
November 19, 2025
0

ಬೆಂಗಳೂರು: ನಗರದಲ್ಲಿ ಹಾಡಹಗಲೇ ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಆರೋಪಿಗಳ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಹಿಡಿಯುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದ್ದಾರೆ‌ ವಿಧಾನಸೌಧದಲ್ಲಿ...

Read moreDetails
ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

November 19, 2025
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

November 19, 2025
ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

November 19, 2025
ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

November 19, 2025
Next Post
ಮುಡಾ ಕೇಸ್ CBI ವರ್ಗಾವಣೆಗೆ ಕೋರ್ಟ್ ಮೊರೆ – ಸ್ನೇಹಮಯಿ ಕೃಷ್ಣ ಪರ ವಕೀಲರ ವಾದವೇನು..? 

ಮುಡಾ ಕೇಸ್ CBI ವರ್ಗಾವಣೆಗೆ ಕೋರ್ಟ್ ಮೊರೆ - ಸ್ನೇಹಮಯಿ ಕೃಷ್ಣ ಪರ ವಕೀಲರ ವಾದವೇನು..? 

Recent News

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR
Top Story

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

by ಪ್ರತಿಧ್ವನಿ
November 19, 2025
ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು
Top Story

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

by ಪ್ರತಿಧ್ವನಿ
November 19, 2025
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು
Top Story

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

by ಪ್ರತಿಧ್ವನಿ
November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್

ದರೋಡೆ ಆರೋಪಿಗಳ‌ ಸುಳಿವು ಸಿಕ್ಕಿದೆ: ಗೃಹ ಸಚಿವ ಪರಮೇಶ್ವರ್

November 19, 2025
ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada