ಬೆಂಗಳೂರು : ರಾಜ್ಯದಲ್ಲಿ ಸರ್ಕಾರದ ವಿರುದ್ಧ ಉದೋಗದ ಹಕ್ಕಿಗಾಗಿ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ನೇಮಕಾತಿ ನಡೆದಿಲ್ಲ. ಕೇವಲ ಅರ್ಜಿ ಕರೆದು ಹಣವನ್ನು ಲೂಟಿ ಹೊಡೆಯುವ ಮಾರ್ಗವನ್ನು ರಾಜ್ಯ ಸರ್ಕಾರ ಕಂಡುಕೊಂಡಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರುತ್ತಿದ್ದಾರೆ.

ಈಗಾಗಲೇ ಒಂದು ಬಾರಿ ಬೀದಿಗಿಳಿದಿದ್ದ ಸ್ಪರ್ಧಾರ್ಥಿಗಳು ತಾಳ್ಮೆಯನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ನಿನ್ನೆಯಷ್ಟೇ ನಡೆದಿರುವ ಇನ್ನೊಂದು ಸ್ವರೂಪದ ಬೃಹತ್ ಹೋರಾಟ. ವಿದ್ಯಾಕಾಶಿ ಧಾರವಾಡದಲ್ಲಿ ಹೋರಾಟದ ಕಿಚ್ಚೆಬ್ಬಿಸಿದ್ದ ವಿದ್ಯಾರ್ಥಿಗಳು ಪ್ರಮುಖ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಮ್ಮ ಉದ್ಯೋಗದ ಹಕ್ಕಿಗಾಗಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರ್ಷಾನುಗಟ್ಟಲೇ ಕಷ್ಟ ಪಟ್ಟು ಓದಿ, ಸಾಲ ಮಾಡಿ ಜೀವನ ಸಾಗಿಸುತ್ತಿರುವ ಸ್ಪರ್ಧಾರ್ಥಿಗಳ ಬದುಕು ತೀರ ಸಂಕಟದಾಯಕವಾಗಿದೆ. ಆದರೂ ಸರ್ಕಾರಗಳು ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕೆಲಸಕ್ಕೆ ಮುಂದಾಗದಿರುವುದು ಯುವ ಶಕ್ತಿಯ ಪಿತ್ತ ನೆತ್ತಿಗೇರಲು ಕಾರಣವಾಗಿದೆ.
ಇದನ್ನೂ ಓದಿ : ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಈ 5 ದಾಖಲೆಗಳು ಕಡ್ಡಾಯ !
ಇನ್ನೂ ಇದೇ ಹೋರಾಟವನ್ನು ಮುಂದಿಟ್ಟುಕೊಂಡು ಫುಲ್ ಟೈಂ ರಾಜಕಾರಣಿಗಳು ಕೆಸರೆರಚಾಟಕ್ಕೆ ಮುಂದಾಗಿದ್ದಾರೆ. ಇಂದಿನ ಈ ದುಸ್ಥಿತಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ 2019ರಿಂದ 2023ರವರೆಗಿನ ನೇಮಕಾತಿಯಲ್ಲಿ ನಡೆದ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ಕಾರಣ. ಇದು ಯುವಜನರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು ಮಾತ್ರವಲ್ಲ, ದೊಡ್ಡ ಪ್ರಮಾಣದ ಖಾಲಿ ಹುದ್ದೆಗಳ ಸೃಷ್ಟಿಗೆ ಕಾರಣವಾಯಿತು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ಬಿಜೆಪಿಯ ಮೇಲೆ ಆರೋಪಿಸಿದ್ದಾರೆ.

ಇನ್ನೂ ಮೂರು ವರ್ಷಗಳಲ್ಲಿ ಸರ್ಕಾರಿ ನೇಮಕಾತಿಯತ್ತ ಗಮನಹರಿಸದೆ, ಯುವಕರಿಗೆ ದ್ರೋಹ ಬಗೆದಿರುವ ಮಹಾ ಸುಳ್ಳುಗಾರ ಸಿದ್ದರಾಮಯ್ಯ ಎಂದು ಬಿಜೆಪಿ ತಿರುಗೇಟು ನೀಡಿದೆ. ಆದರೆ ಈ ರಾಜಕೀಯ ನಾಟಕದಲ್ಲಿ ಬಲಿಪಶುವಾಗಿರುವುದು ಮಾತ್ರ ವಿದ್ಯಾರ್ಥಿಗಳೇ ಎನ್ನುವುದು ನಿಜಕ್ಕೂ ವಿಪರ್ಯಾಸ..!
ಅಲ್ಲದೆ ತಮ್ಮ ಅವಧಿಯಲ್ಲಿ 30 ಸಾವಿರ ಸರ್ಕಾರಿ ಹುದ್ದೆಗಳ ಮಾತಾಡುವ ಬಿಜೆಪಿಯು ಈ ಹೋರಾಟವನ್ನು ಹೈಜಾಕ್ ಮಾಡಲು ಯತ್ನಿಸುವ ವಿಫಲ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಸರ್ಕಾರ ಬರುವ ಮುನ್ನ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಹಗರಣಗಳು ನಡೆದು ಆಗಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹಳಷ್ಟು ಅನ್ಯಾಯವಾಗಿದೆ. ಆಗ ಪಾರದರ್ಶಕ ನೇಮಕಾತಿಗೆ ಒತ್ತು ನೀಡದ ಬಿಜೆಪಿ ನಾಯಕರು ಈಗ ಯಾವ ನೈತಿಕತೆಯಿಂದ ಹೋರಾಟ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮೂಡುತ್ತಿದೆ.
![]()
ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು ಆ ವೇಳೆ ವಿದ್ಯಾರ್ಥಿಗಳು ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಕೊರಳಲ್ಲಿದ್ದ ಬಿಜೆಪಿ ಶಾಲು ತೆಗೆದಿಟ್ಟು ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಸನ್ನಿವೇಶವೂ ನಿರ್ಮಾಣವಾಗಿತ್ತು. ಶಾಸಕ ಅರವಿಂದ್ ಬೆಲ್ಲದ್ ಭಾಷಣಕ್ಕೆ ವಿದ್ಯಾರ್ಥಿಗಳು ಕಿಡಿಕಾರಿ, ಬಿಜೆಪಿ ನಾಯಕರಿಗೆ ಮುಜುಗರ ತಂದಿಟ್ಟ ಪ್ರಸಂಗವೂ ನಡೆಯಿತು.

ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಧಾರವಾಡಕ್ಕೆ ಲಗ್ಗೆ ಇಟ್ಟಿದ್ದ ವಿದ್ಯಾರ್ಥಿಗಳು ತಮ್ಮ ಉದ್ಯೋಗದ ಹಕ್ಕಿಗಾಗಿ ಪ್ರತಿಪಾದನೆ ಮಾಡಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಅಕ್ಷರಶಃ ಇಡೀ ಕಾಂಗ್ರೆಸ್ ಸರ್ಕಾರವೇ ನಡುಗಿಹೋಗಿತ್ತು. ಆದರೆ ಈ ಹೋರಾಟದ ತೀವ್ರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ನೇಮಕಾತಿಯ ಭರವಸೆ ನೀಡಿದ್ದಾರೆ.








