ಸಂಕ್ರಾಂತಿ ಕಳೆಯುತ್ತಲೇ ನಿರೀಕ್ಷೆಯಂತೆ ಆಡಳಿತ ಪಕ್ಷ ಬಿಜೆಪಿಯಲ್ಲಿ ಸಂಪುಟ ಪುನರ್ ರಚನೆಯ ಕುರಿತ ಕೂಗು ಮೊಳಗಿದೆ.
ಪ್ರಮುಖವಾಗಿ ಎರಡೂವರೆ ವರ್ಷಗಳಿಂದ ಬಿಜೆಪಿಯ ಪಾಲಿನ ಸೊಲ್ಲಿಗರಂತೆಯೇ(ವಿಷಲ್ ಬ್ಲೋವರ್ಸ್ !) ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹಾಗೂ ರಾಜ್ಯ ಬಿಜೆಪಿಯ ‘ರೆಬೆಲ್ ಸ್ಟಾರ್’ ಎಂದೇ ಬ್ರಾಂಡ್ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಮ್ಮೆ ಸಂಪುಟ ಪುನರ್ ರಚನೆಯ ತಮ್ಮ ದನಿ ಮೊಳಗಿಸಿದ್ದಾರೆ.
ಈ ಹಿಂದೆಯೇ ರಾಜ್ಯ ಬಿಜೆಪಿಯ ಹುಬ್ಬಳ್ಳಿ ಕಾರ್ಯಕಾರಿಣಿಯ ವೇದಿಕೆಯ ಬದಿಯಿಂದಲೇ ಈ ಇಬ್ಬರು ಪಕ್ಷದ ಹಿರಿಯ ನಾಯಕರು ಸಚಿವ ಸ್ಥಾನ ತ್ಯಜಿಸಬೇಕು. ಸಚಿವ ಸಂಪುಟದಲ್ಲಿ ಹೊಸಬರಿಗೆ ಮತ್ತು ಅವಕಾಶವಂಚಿತರಿಗೆ ಅವಕಾಶ ಕಲ್ಪಿಸುವ ಮೂಲಕ, ಹಿರಿಯ ನಾಯಕರು ಚುನಾವಣೆಗಾಗಿ ಪಕ್ಷ ಸಜ್ಜುಗೊಳಿಸಲು ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಅಲ್ಲದೆ, ಸಂಕ್ರಾಂತಿಯ ಬಳಿಕ ಕೂಡಲೇ ಸಂಪುಟ ಪುನರ್ ರಚನೆಯಾಗಬೇಕು. ಈಗಾಗಲೇ ವಿವಿಧ ಸಂದರ್ಭಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರವಹಿಸಿರುವವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಆ ಮೂಲಕ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು ಎಂದೂ ಅವರು ಪಕ್ಷದ ವರಿಷ್ಠರಿಗೆ ಬಹಿರಂಗ ಹೇಳಿಕೆಯ ಮೂಲಕವೇ ಆಗ್ರಹಿಸಿದ್ದರು.
ಇದೀಗ ಸಂಕ್ರಾಂತಿ ಕಳೆಯುತ್ತಲೇ ಯತ್ನಾಳ್ ಮತ್ತು ರೇಣುಕಾಚಾರ್ಯ ತಮ್ಮ ಬಂಡಾಯದ ಭಾವುಟವನ್ನು ಮತ್ತೊಮ್ಮೆ ಹಾರಿಸಿದ್ದು, ಕೆಲವು ಸಚಿವರು ಸರ್ಕಾರದ ಭಾಗವಾಗಿದ್ದುಕೊಂಡು ಜನರ ಕೆಲಸ ಮಾಡುವ ಬದಲು ಸ್ವಾರ್ಥದಲ್ಲಿ ಮುಳುಗಿದ್ದಾರೆ. ಸ್ವತಃ ಪಕ್ಷದ ಶಾಸಕರನ್ನೇ ಕಡೆಗಣಿಸಿ, ಅವರ ಮಾತುಗಳಿಗೆ ಕವಡೆ ಕಿಮ್ಮತ್ತು ನೀಡದೆ ದರ್ಪ ಮೆರೆಯುತ್ತಿದ್ದಾರೆ. ಅಧಿಕಾರಕ್ಕಾಗಿಯೇ ಬಂದಿರುವ ಇಂಥವರನ್ನು ಕಿತ್ತು ಹಾಕಬೇಕು. ಅಂಥಹವರಿಂದ ಪಕ್ಷಕ್ಕಾಗಲೀ ಸರ್ಕಾರಕ್ಕಾಗಲೀ ಯಾವ ಪ್ರಯೋಜನವೂ ಇಲ್ಲ. ಇತ್ತೀಚಿನ ಉಪ ಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕೂಡ ಇಂಥಹವರೇ ಕಾರಣ ಎಂದು ಸಚಿವರ ವಿರುದ್ಧ ಇಬ್ಬರೂ ನಾಯಕರು ಕಿಡಿಕಾರಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಇಬ್ಬರೂ ನಾಯಕರು, ಕೂಡಲೇ ಸಚಿವ ಸಂಪುಟ ಪುನರ್ ರಚನೆಯಾಗಬೇಕು ಮತ್ತು ಸರ್ಕಾರ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿರುವ ಸಚಿವರುಗಳನ್ನು ಕಿತ್ತು ಹಾಕಬೇಕು. ಹೊಸಬರು ಮತ್ತು ಅವಕಾಶವಂಚಿತರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಮುಂದಿನ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವೇಗಕ್ಕೆ ತಕ್ಕಂತೆ ಪಕ್ಷವನ್ನು ಸಂಘಟಿಸಲು ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಸಿಎಂ ಬೊಮ್ಮಾಯಿ ಅವರನ್ನು ಖುದ್ದು ಭೇಟಿಯಾಗಿ ಮಾರ್ಚ್ ಒಳಗೇ ಸಂಪುಟ ಪುನರ್ ರಚನೆಯಾಗಬೇಕು. ಮಾರ್ಚ್ ಬಳಿಕ ಮಾಡಿದರೆ ಉಳಿದ ಒಂದು ವರ್ಷದಲ್ಲಿ ಹೊಸ ಸಚಿವರು ಏನೂ ಮಾಡಲಾಗದು. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವರಿಕೆ ಮಾಡಲಾಗುವುದು ಎಂದೂ ಆ ಇಬ್ಬರೂ ನಾಯಕರು ಮಾಧ್ಯಮ ಹೇಳಿಕೆಗಳಲ್ಲಿ ಖಚಿತಪಡಿಸಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ, ‘ಕೆಲವು ಅಧಿಕಾರಕ್ಕಾಗಿಯೇ ಬಂದಿರುವ’ ಬಿಜೆಪಿಯ ಸಚಿವರ ವಿರುದ್ಧ ಪಕ್ಷದ ಹಲವು ಶಾಸಕರಿಗೆ ತೀವ್ರ ಅಸಮಾಧಾನವಿದೆ. ಆದರೆ, ಎಲ್ಲರೂ ಇಂತಹ ವಿಷಯಗಳಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಿಲ್ಲ. ಆದರೆ, ಹಾಗೇ ಶಾಸಕರನ್ನು ತುಚ್ಛವಾಗಿ ಕಾಣುವ, ಅವರ ಮಾತುಗಳಿಗೆ ಕಿಮ್ಮತ್ತು ಕೊಡದ ಸಚಿವರನ್ನು ಕಿತ್ತುಹಾಕಿ, ಅವರ ಅಸಮಾಧಾನವನ್ನು ನಿವಾರಿಸಿದೇ ಇದ್ದಲ್ಲಿ, ಮುಂದಿನ ಚುನಾವಣೆಯಲ್ಲಿ ಅದು ಪಕ್ಷಕ್ಕೆ ಪೆಟ್ಟು ಕೊಡಲಿದೆ. ಹೀಗೆ ಕೆಲವು ಸಚಿವರ ನಡವಳಿಕೆಯ ಕಾರಣಕ್ಕೆ ಪಕ್ಷ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಈ ಇಬ್ಬರೂ ನಾಯಕರು ತೀರಾ ಸ್ಪಷ್ಟವಾಗಿಯೇ ಪಕ್ಷದ ವರಿಷ್ಠರಿಗೆ ಮತ್ತು ಸ್ವತಃ ಸಿಎಂ ಬೊಮ್ಮಾಯಿ ಅವರಿಗೆ ಎಚ್ಚರಿಕೆಯ ಸಂದೇಶವಾಗಿ ರವಾನಿಸಿದ್ದಾರೆ.
ಅಂದರೆ, ಪರೋಕ್ಷವಾಗಿ ಇದು ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಮತ್ತು ತಮ್ಮಿಬ್ಬರೂ ಸೇರಿದಂತೆ ಅವಕಾಶವಂಚಿತರಿಗೆ ಅವಕಾಶ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಈ ನಾಯಕರು ಪುನರುಚ್ಛರಿಸಿದ್ದಾರೆ.
ಹಾಗೆ ನೋಡಿದರೆ; ಸಂಕ್ರಾಂತಿಯ ಗಡುವು ನೀಡಿ ಸರ್ಕಾರದಲ್ಲಿ ಬದಲಾವಣೆಯ ಕಣಿ ಹೇಳಿದ್ದು ಕೇವಲ ನಿರಂತರ ಬಂಡಾಯಗಾರರೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಇಬ್ಬರು ನಾಯಕರು ಮಾತ್ರವಲ್ಲ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಕೂಡ ಎರಡು ವಾರದ ಹಿಂದೆ ಶೇ.40ರ ಕಮೀಷನ್ ವಿಷಯದಲ್ಲಿ ತಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದ ವಿಷಯ ಪ್ರಸ್ತಾಪಿಸುತ್ತಾ, ಗುತ್ತಿಗೆದಾರರನ್ನು ಸುಲಿಗೆ ಮಾಡಿ ಬದುಕುತ್ತಿರುವ ಸರ್ಕಾರ ತನ್ನ ಕಾರ್ಯಶೈಲಿ ಬದಲಾಯಿಸಿಕೊಳ್ಳಬೇಕು ಮತ್ತು ತಪ್ಪಿತಸ್ಥರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸಂಕ್ರಾಂತಿಯ ಗಡುವು ನೀಡಿದ್ದರು.

ಅಷ್ಟೇ ಅಲ್ಲದೆ, ಸರ್ಕಾರಿ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮೀಷನ್ ಪಡೆದಿರುವ ಸಚಿವರು ಮತ್ತು ಸರ್ಕಾರದ ಆಯಕಟ್ಟಿನ ಸ್ಥಳದಲ್ಲಿರುವ ವ್ಯಕ್ತಿಗಳ ವಿವರಗಳನ್ನು ಸಾಕ್ಷ್ಯಾಧಾರಸಹಿತ ಬಿಡುಗಡೆ ಮಾಡಿದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೇ ಮರಣಶಾಸನ ಬರೆದಂತಾಗಲಿದೆ. ಪಿಡಬ್ಲ್ಯುಡಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ನಾಲ್ವರು ಮುಖ್ಯ ಎಂಜಿನಿಯರ್ಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಆ ಹಗರಣದಲ್ಲಿ 25ಕ್ಕೂ ಹೆಚ್ಚು ಸಚಿವರು ಮತ್ತು ಶಾಸಕರು ಭಾಗಿಯಾಗಿದ್ದು, ಅವರುಗಳ ಹೆಸರುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದೂ ಕೆಂಪಣ್ಣ ಹೇಳಿದ್ದರು.
ಈ ನಡುವೆ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿಯವರಿಗೆ ಬರೆದಿದ್ದಾರೆ ಎನ್ನಲಾಗಿರುವ ಪತ್ರ ಬಿಜೆಪಿಯ ದೆಹಲಿ ವರಿಷ್ಠರ ನಿದ್ದೆಗೆಡಿಸಿದ್ದು, ಬಿಟ್ ಕಾಯಿನ್ ಹಗರಣದ ಬೀಸುವ ದೊಣ್ಣೆಯಿಂದ ಪಾರಾಗುವ ಮುನ್ನವೇ ಶೇ.40ರ ಕಮೀಷನ್ ದಂಧೆಯ ಹಗರಣ ಎದ್ದುಕೂತಿದೆ. ಜೊತೆಗೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ಈಗಾಗಲೇ ರಾಜ್ಯಪಾಲರಿಗೆ ಪತ್ರ ಬರೆದು ಸರ್ಕಾರದ ವಜಾಕ್ಕೇ ಆಗ್ರಹಿಸಿದೆ. ಹಾಗೇ ಗುತ್ತಿಗೆದಾರರ ಸಂಘ ಮೇಲಿಂದ ಮೇಲೆ ಗಡುವು ನೀಡುತ್ತಾ ದಾಖಲೆ ಬಹಿರಂಗಪಡಿಸುವ ಬೆದರಿಕೆ ಒಡ್ಡುತ್ತಿದೆ. ಅದು ಸಾಲದು ಎಂಬಂತೆ ಕಳೆದ ವಾರ ಸ್ವತಃ ಸಿಎಂ ಬೊಮ್ಮಾಯಿ ಅವರ ಗೃಹ ಭದ್ರತಾ ಸಿಬ್ಬಂದಿಯೇ ಡ್ರಗ್ಸ್ ಪೆಡರ್ಲ್ಸ್ ಆಗಿ ಕೆಲಸ ದಂಧೆ ಮಾಡಿ ಮತ್ತೊಂದು ಮುಜುಗರ ತಂದಿದ್ದಾರೆ.
ಈ ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಸಂಪೂರ್ಣ ಸಚಿವ ಸಂಪುಟದ ಪುನರ್ ರಚನೆಗೆ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ನಾಯಕತ್ವ ಬದಲಾದರೂ ಅಚ್ಚರಿ ಇಲ್ಲ. ಯಾಕೆಂದರೆ, ಬಿಟ್ ಕಾಯಿನ್ ಹಗರಣ, ಶೇ.40ರ ಕಮೀಷನ್ ಹಗರಣ ಮತ್ತು ಇದೀಗ ಡ್ರಗ್ಸ್ ಪ್ರಕರಣಗಳೆಲ್ಲವೂ ಹೋಗಿ ಬಂದು ಸಿಎಂ ಸುತ್ತಲೇ ಸುತ್ತುತ್ತಿವೆ. ಇದು ಜನಸಾಮಾನ್ಯರ ಕಣ್ಣಲ್ಲಿ ಸರ್ಕಾರ ಮತ್ತು ಪಕ್ಷವನ್ನು ಕೆಟ್ಟದಾಗಿ ಬಿಂಬಿಸುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಈ ಎಲ್ಲಾ ಸಂಗತಿಗಳು ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಲಿವೆ ಮತ್ತು ಅಂತಿಮವಾಗಿ ಅದು ಚುನಾವಣೆಯಲ್ಲಿ ಪಕ್ಷಕ್ಕೆ ಪೆಟ್ಟು ಕೊಡಲಿದೆ. ಹಾಗಾಗಿ ಇನ್ನೂ ಚುನಾವಣೆಗೆ ಒಂದು ವರ್ಷ ಇರುವಾಗಲೇ ನಾಯಕತ್ವ ಬದಲಾವಣೆ ಮಾಡುವ ಮೂಲಕ ಮುರುಗೇಶ್ ನಿರಾಣಿ ಅವರಿಗೆ ಪಟ್ಟ ಕಟ್ಟಿ ಕಾರ್ಪೊರೇಟ್ ಗೆಟಪ್ಪಿನಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಬಹುದೆ? ಎಂಬ ಯೋಚನೆ ಹೈಕಮಾಂಡ್ ಮನಸ್ಸಿನಲ್ಲಿದೆ.
ಆ ಬದಲಾವಣೆಯ ಸೂಚನೆ ಅರಿತೇ ಯತ್ನಾಳ್ ಮತ್ತು ರೇಣುಕಾಚಾರ್ಯ ಸಂಕ್ರಾಂತಿ ಕಳೆಯುತ್ತಲೇ ಈ ‘ಪಥ ಬದಲಾವಣೆ’ ದಾಳ ಉರುಳಿಸಿದ್ದಾರೆ. ಆದರೆ, ಸದ್ಯ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಒತ್ತಡದಲ್ಲಿರುವ ಹೈಕಮಾಂಡ್ ಸದ್ಯ ಆ ಚುನಾವಣೆಗಳು ಮುಗಿಯುವವರೆಗೆ ರಾಜ್ಯದ ಕಡೆ ಗಮನ ಹರಿಸುವುದು ದುಃಸಾಧ್ಯ. ಹಾಗಾಗಿ ಸದ್ಯಕ್ಕೆ ಬೊಮ್ಮಾಮಿಯವರ ಸಂಪುಟ ಬೀಸುವ ದೊಣ್ಣೆಯಿಂದ ಪಾರು ಎಂಬುದು ನಿಜ!






