ವಿಶೇಷ ವರದಿ..
ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಇರಾನ್- ಇಸ್ರೇಲ್ ಹಾಗೂ ಅಮೆರಿಕದ ನಡುವಿನ ಯುದ್ಧಕ್ಕೆ 21 ದಿನಗಳಾಗುತ್ತಿವೆ. ಕಳೆದ ಫೆಬ್ರವರಿ 28ರಂದು ಏಕಾಏಕಿ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ರಣಕಹಳೆಯೂದಿದ್ದಾರೆ. ಇದಾದ ಬೆನ್ನಲ್ಲೇ ಇರಾನ್ನ ಸರ್ವೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆಗೆ ಅಮೆರಿಕ ಇಸ್ರೇಲ್ ಕಾರಣವಾಗಿವೆ. ಇದಾದ ಬಳಿಕ ಕೆರಳಿರುವ ಇರಾನ್ ಅಮೆರಿಕ ಹಾಗೂ ಇಸ್ರೇಲ್ಗಳ ಮೇಲೆ ಪ್ರತೀಕಾರದ ದಾಳಿ ಘೋಷಿಸಿದೆ.
ಈ ಮೂಲಕ ತನ್ನ ನಾಯಕನ ಹತ್ಯೆಯ ಸೇಡನ್ನು ಇಟ್ಟುಕೊಂಡು ನಿರಂತರ ದಾಳಿಗಳನ್ನು ಮುಂದುವರೆಸಿವೆ. ಹೀಗಾಗಿ ಜಾಗತಿಕವಾಗಿ ಯುದ್ಧದ ಕಾರ್ಮೋಡ ಕವಿದಿದ್ದು, ಇರಾನ್ ತನ್ನ ಸುತ್ತಮುತ್ತಲಿನ ಕುವೈತ್, ಓಮಾನ್, ಕತಾರ್, ಸೌದಿ ಹಾಗೂ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ವಾಯುನೆಲೆಗಳನ್ನು ಧ್ವಂಸ ಮಾಡಿದೆ. ಹೀಗೆ ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಏರುತ್ತಲೇ ಇದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಯುದ್ಧೋನ್ಮಾದದಿಂದಾಗಿ ಜಾಗತಿಕವಾಗಿ ನಾನಾ ವಲಯಗಳಲ್ಲಿ ಕೃತಕ ಅಭಾವ ಉಂಟಾಗುತ್ತಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದಾಳಿ – ಪ್ರತಿದಾಳಿಗಳು ಜಾಗತಿಕವಾಗ ನಾನಾ ರೀತಿಯ ಅವಶ್ಯಕ ವಸ್ತುಗಳ ಕೊರತೆಗೆ ಕಾರಣವಾಗುತ್ತಿವೆ. ಇದರ ಮೊದಲ ಭಾಗವಾಗಿಯೇ ಇರಾನ್ ತನ್ನ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದ ಪರಿಣಾಮ ಭಾರತದಲ್ಲಿ ತೈಲದ ಕೊರತೆ ಎದುರಾಗಿದ್ದು, ನಿಮಗೆ ಗೊತ್ತೇ ಇದೆ. ಅದರಲ್ಲೂ ಕಳೆದ ಒಂದು ವಾರದಿಂದಲೂ ಸಿಲಿಂಡರ್ ಗ್ಯಾಸ್ ಪೊರೈಕೆಯಿಲ್ಲದೆ ದೇಶದ ಹೋಟೆಲ್, ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತದ ಮನವಿಗೆ ಸ್ಪಂದಿಸಿದ ಇರಾನ್ ಭಾರತದ ತೈಲ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಆದರೂ ಅಲ್ಲಿನ ದಾಳಿಗಳು ನಿಲ್ಲುತ್ತಿಲ್ಲ, ಹೀಗಾಗಿ ಕೆಲವೇ ದಿನಗಳಲ್ಲಿ ತೈಲ ಅಭಾವದ ಜೊತೆಗೆ ಎಲ್ಪಿಜಿಯ ಅಭಾವವೂ ಕಾಡುವ ಭೀತಿಯು ಎದುರಾಗಿದೆ.
ಇದಕ್ಕೆ ಕಾರಣವನ್ನು ಗಮನಿಸಿದಾಗ, ಪ್ರತಿ ಗಂಟೆಯೂ ಪರಿಸ್ಥಿತಿ ನಿರಂತರವಾಗಿ ಉಲ್ಬಣಗೊಳ್ಳುತ್ತಲೇ ಇದೆ. ಇರಾನ್ ಇಸ್ರೇಲ್ನ ಹೈಫಾದಲ್ಲಿರುವ ಪ್ರಮುಖ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಗಳು ದಾಳಿಯನ್ನು ಸಂಪೂರ್ಣವಾಗಿ ತಡೆಯಲು ವಿಫಲವಾಗಿವೆ. ಇದು ಇಸ್ರೇಲ್ ಮೇಲೆ ಇರಾನ್ ನಡೆಸಿದ ಅತಿದೊಡ್ಡ ದಾಳಿಯಾಗಿದೆ. ಹೈಫಾ ಬಂದರು ಭಾರತ-ಇಸ್ರೇಲ್ ವ್ಯಾಪಾರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ಇಸ್ರೇಲ್ನ ಇಂಧನ, ಬಂದರು ಮತ್ತು ಮೂಲಸೌಕರ್ಯ ವಲಯಗಳಲ್ಲಿ ಭಾರತವು ಪ್ರಮುಖ ಪಾಲುದಾರನಾಗಿದೆ. ಹೀಗಾಗಿ ಹೈಫಾ ತೈಲ ಸಂಸ್ಕರಣಾ ಘಟಕವೂ ಇಸ್ರೇಲ್ನ ಶೇಕಡಾ 50 ರಿಂದ 60ರಷ್ಟು ಸಾರಿಗೆ ಸೇರಿದಂತೆ ಇತರ ವಲಯಗಳಿಗೆ ತೈಲ ಪೊರೈಕೆ ಮಾಡುತ್ತಿತ್ತು. ಆದರೆ ಇದರ ಬುಡಕ್ಕೆ ಇರಾನ್ ಬೆಂಕಿ ಇಟ್ಟಿರುವುದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆರಳುವಂತೆ ಮಾಡಿದೆ. ಹೀಗಾಗಿ ಇಸ್ರೇಲ್ ಕೂಡ ತನ್ನ ಪ್ರತಿದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಇದನ್ನೂ ಓದಿ : ವಾಣಿಜ್ಯ ಎಲ್ಪಿಜಿ ಕೊರತೆ: ಕೇಂದ್ರಕ್ಕೆ ಮುಖ್ಯಮಂತ್ರಿ ಪತ್ರ
ಅಲ್ಲದೆ ಅಮೆರಿಕ ಹಾಗೂ ಇಸ್ರೇಲ್ ಸಖ್ಯ ಬೆಳೆಸಿರುವ ಕತಾರ್ ಮೇಲೂ ಇರಾನ್ ಮಿಸೈಲ್, ಡ್ರೋನ್ ದಾಳಿ ನಡೆಸಿವೆ. ಅಲ್ಲಿನ ಎಲ್ಎನ್ಜಿ ಗ್ಯಾಸ್ ಘಟಕದ ಮೇಲೂ ಭೀಕರ ಅಟ್ಯಾಕ್ ಆಗಿದೆ. ಇದರಿಂದ ಕತಾರ್ನಿಂದ ಭಾರತಕ್ಕೆ ರವಾನೆಯಾಗುತ್ತಿರುವ ಅನಿಲಕ್ಕೂ ಹೊಡೆತ ಬೀಳುವ ಆತಂಕ ಎದುರಾಗಿದೆ. ಇನ್ನೂ ಪ್ರಮುಖವಾಗಿ ವಿಶ್ವದ ಶೇ.17ರಷ್ಟು ನೈಸರ್ಗಿಕ ಅನಿಲ ಪೂರೈಕೆಯ ಕಾರ್ಯವನ್ನು ಕತಾರ್ನ ಇದೊಂದೇ ಘಟಕ ಮಾಡುತ್ತಿತ್ತು. ಈ ಮೂಲಕ ಜಾಗತಿಕವಾಗಿ ಅನಿಲ ಪೊರೈಕೆಯ ಮಹತ್ವದ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಮುಖ್ಯವಾಗಿ ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕದ ಮೇಲಿನ ದಾಳಿಯಿಂದ ಕತಾರ್ಗೆ ವಾರ್ಷಿಕವಾಗಿ ಸುಮಾರು 20 ಬಿಲಿಯನ್ ಡಾಲರ್ನಷ್ಟು ಆದಾಯಕ್ಕೆ ಕೊಕ್ಕೆ ಬೀಳುವ ಆತಂಕವೂ ಕಾಡುತ್ತಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ ಈ ರಾಸ್ ಲಫಾನ್ ಎಲ್ಎನ್ಜಿಯ ಮೇಲಿನ ದಾಳಿಯಿಂದ ನೈಸರ್ಗಿಕ ಅನಿಲ ಪೊರೈಕೆಯಲ್ಲಿ ಭಾರಿ ತೊಂದರೆಯಾಗಲಿದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್ಎನ್ಜಿ ಪೂರೈಕೆಯಲ್ಲಿ ಮುಂದಿನ 4 ರಿಂದ 5 ವರ್ಷಗಳವರೆಗೆ ಸಮಸ್ಯೆಯಾಗುವ ಕಳವಳವೂ ಕಾಡುತ್ತಿದೆ ಎಂದು ಜಾಗತಿಕ ಮಟ್ಟದ ವಿಶ್ಲೇಷಣೆಗಳು ತಿಳಿಸಿವೆ. ಅಲ್ಲದೆ ರಂಜಾನ್ ಮಾಸದ ಈ ಪವಿತ್ರ ತಿಂಗಳಲ್ಲಿ ಸಹೋದರ ಮುಸ್ಲಿಂ ರಾಷ್ಟ್ರದಿಂದ ಕತಾರ್ ಹಾಗೂ ಸುತ್ತಲಿನ ಪ್ರದೇಶವು ಈ ರೀತಿಯ ಭೀಕರ ದಾಳಿಗೆ ಒಳಗಾಗುತ್ತದೆ ಎಂದು ನಾನು ನನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಕತಾರ್ನ ಇಂಧನ ಸಚಿವ ಅಲ್ ಕಾಬಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ದಾಳಿಯಿಂದ ಎಲ್ಲವೂ ಸರಿಯಾಗಲು ವರ್ಷಗಳೇ ಬೇಕಾಗಬಹುದು. ಎಸ್6 ಟ್ರೇನ್ನಿಂದ ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆಯಾಗುತ್ತಿತ್ತು. ಒಂದೆಡೆ ಈ ದಾಳಿಯಿಂದ ವಿಶ್ವದ ಇತರೆ ರಾಷ್ಟ್ರಗಳಿಗೆ ಸಮಸ್ಯೆಯಾಗುವುದರ ಜತೆಗೆ ಕತಾರ್ನ್ನು 10ರಿಂದ 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ. ದಾಳಿಯಿಂದ ಹಾನಿಯಾಗಿರುವ ಘಟಕದ ಪುನರ್ನಿರ್ಮಾಣಕ್ಕೆ 26 ಬಿಲಿಯನ್ ಡಾಲರ್ ಬೇಕಾಗಬಹುದು ಎಂದು ಅಲ್ಲಿನ ಇಂಧನ ಸಚಿವಾಲಯ ತಿಳಿಸಿದೆ. ವಿಶೇಷವಾಗಿ, ಜಗತ್ತಿನ ಅತಿದೊಡ್ಡ ಗ್ಯಾಸ್ ಟು ಲಿಕ್ವಿಡ್ ಘಟಕಗಳಲ್ಲಿ ಒಂದಾದ ಕತಾರ್ನ ‘ಪರ್ಲ್ ಜಿಟಿಎಲ್’ ಘಟಕವೂ ಇರಾನ್ ದಾಳಿಯಿಂದ ಸ್ಥಗಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತಕ್ಕೆ ಕತಾರ್ ಪ್ರಮುಖ ಎಲ್ಪಿಜಿ ಮತ್ತು ಎಲ್ಎನ್ಜಿ ಪೂರೈಕೆಯ ರಾಷ್ಟ್ರವಾಗಿದ್ದು, ಭಾರತ ಶೇಕಡಾ 50 ರಷ್ಟು ಗ್ಯಾಸ್ ಅವಲಂಬನೆಯನ್ನು ಈ ಘಟಕದ ಮೇಲೆ ಹೊಂದಿದೆ. ಹೀಗಾಗಿ ದಿನಕಳೆದಂತೆ ಭಾರತದಲ್ಲಿ ಗ್ಯಾಸ್ ಅಭಾವ ಇನ್ನಷ್ಟು ಉಲ್ಭಣವಾಗುವ ಸಾಧ್ಯತೆಗಳು ದಟ್ಟವಾಗಿವೆ.

ಇದಕ್ಕೆ ಪ್ರತಿಯಾಗಿ ಇರಾನಿನ ಪ್ರಮುಖ ಅನಿಲ ಘಟಕವಾಗಿರುವ ಸೌತ್ ಪಾರ್ಸ್ ಮೇಲೆ ಇಸ್ರೇಲ್ ರಣ ಭೀಕರ ದಾಳಿ ನಡೆಸಿದೆ. ಜಾಗತಿಕ ಆರ್ಥಿಕತೆಯ ಮೇಲೆ ಈಗಾಗಲೇ ಆಘಾತದ ಅಲೆಗಳನ್ನು ಸೃಷ್ಟಿಸಿರುವ ಸಂಘರ್ಷವು, ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನತೆಯತ್ತ ಕೊಂಡೊಯ್ಯುತ್ತಿದೆ. ಪಶ್ಚಿಮ ಏಷ್ಯಾದ ಇತರ ಭಾಗಗಳಲ್ಲಿನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇರಾನ್ ತನ್ನ ದಾಳಿಯನ್ನು ಮುಂದುವರೆಸಿದೆ, ಹೀಗಾಗಿ ನಿರಂತರ ದಾಳಿಗಳ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರ ಜೇಬು ಸುಡುವುದು ಪಕ್ಕಾ ಆದಂತಾಗಿದೆ.
ಇತ್ತ, ಇರಾನ್ ಇಸ್ರೇಲ್ ಮೇಲೆ ಮಾತ್ರವಲ್ಲದೆ, ಗಲ್ಫ್ ರಾಷ್ಟ್ರಗಳಲ್ಲಿನ ಇಂಧನ ಘಟಕಗಳನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿದ್ದು, ಸೌತ್ ಪಾರ್ಸ್ ದಾಳಿಗೆ ಪ್ರತೀಕಾರವಾಗಿ ಕತಾರ್ ನ ರಾಸ್ ಲಫಾನ್ ಎಲ್ಎನ್ಜಿ ಗ್ಯಾಸ್ ಸೌಲಭ್ಯದ ಮೇಲೆ ದಾಳಿ ಮಾಡಿದೆ. ಇನ್ನು, ಕುವೈತ್ ನಲ್ಲಿರುವ ಮಿನಾ ಅಬ್ದುಲ್ಲಾ ಸಂಸ್ಕರಣಾಗಾರ ಹಾಗೂ ಮಿನಾ ಅಲ್-ಅಹ್ಮದಿ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ. ಅಷ್ಟೇ ಅಲ್ಲದೆ ಸೌದಿ ಅರೇಬಿಯಾದ ತೈಲ ಮೂಲ ಸೌಕರ್ಯಗಳನ್ನೇ ಅತಿ ಹೆಚ್ಚಾಗಿ ಗುರಿಯಾಗಿಸುತ್ತಿದ್ದು, ಮ್ರೆಫ್ ಸಂಸ್ಕರಣಾಗಾರ, ರಾಸ್ ತನುರಾ ತೈಲ ಘಟಕ, ದುಬೈನ ರುವಾಯಿಸ್ ಸಂಸ್ಕರಣಾಗಾರ ಸಂಕೀರ್ಣ ಹೀಗೆ ಹಲವು ದೇಶಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದೆ. ಈ ಮೂಲಕ ಅಮೆರಿಕ ಹಾಗೂ ಇಸ್ರೇಲ್ಗಳ ವಿರುದ್ಧ ಇರಾನ್ ತನ್ನ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದೆ.
ಇರಾನ್ ತನ್ನ ಪ್ರತೀಕಾರದ ದಾಳಿಯನ್ನು ಹೀಗೆ ಮುಂದುವರೆಸಿದೆ, ದಿನದಿಂದ ದಿನಕ್ಕೆ ಏರಿಕೆಯಾಗುವ ಯುದ್ಧದ ತೀವ್ರತೆಯು ಜನಸಾಮಾನ್ಯರ ಜೀವನದ ಮೇಲೆ ಭಾರಿ ಪರಿಣಾಮಕ್ಕೂ ಕಾರಣವಾಗುತ್ತಿದೆ. ಬಹುಪಾಲು ಇಂಧನ ಹಾಗೂ ಗ್ಯಾಸ್ ಪೊರೈಕೆಯಲ್ಲಿ ಗಲ್ಫ್ ದೇಶಗಳನ್ನು ನಂಬಿರುವ ಭಾರತಕ್ಕೆ ಈ ಎಲ್ಲ ಘಟನೆಗಳು ಮುಂದಿನ ಅಪಾಯದ ಸೂಚನೆಯನ್ನು ನೀಡಿವೆ. ಭಾರತದ ನಗರಗಳಿಂದ ಹಳ್ಳಿಗಳಿಗೂ ಈ ಯುದ್ಧದ ಎಫೆಕ್ಟ್ ತಟ್ಟಿದ್ದು, ಗ್ಯಾಸ್ ಸಹವಾಸವೇ ಬೇಡ ಎಂದು ಜನರು ಸೌದೆ ಒಲೆಗಳತ್ತು ಮುಖ ಮಾಡುವ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆ.
ಹೀಗೆ ಯುದ್ಧ ಮುಂದುವರೆದರೆ ಜಾಗತಿಕವಾಗಿ ಸಮಾಜದ ನಾನಾ ಕ್ಷೇತ್ರಗಳೂ ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸುವ ಭೀತಿಯನ್ನೂ ಎದುರಿಸುತ್ತಿವೆ. ಒಂದು ವೇಳೆ ಆ ಪರಿಸ್ಥಿತಿ ಬಂದರೆ ಅದಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ನೆತನ್ಯಾಹು ಈ ಇಬ್ಬರೇ ಹೊಣೆಗಾರರು ಎಂಬುವುದು ಸದ್ಯದ ಚರ್ಚೆಯಾಗಿದೆ.






