ಮೈಸೂರಿನಲ್ಲಿ ಜಂಬೂಸವಾರಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಚಾಮುಂಡೇಶ್ವರಿ ಬೆಟ್ಟದಿಂದ ಅರಮನೆಗೆ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗ್ತಿದೆ. ಇತ್ತ ಅರಮನೆ ಅಂಗಳದಲ್ಲಿ ಐತಿಹಾಸಿಕ ರಣರೋಚಕ ವಜ್ರಮುಷ್ಟಿ ಕಾಳಗ ನಡೆಯುತ್ತಿದೆ. ಅಂಬಾವಿಲಾಸ ಅರಮನೆಯ ಕರಿಕಲ್ಲು ನಾಲ್ವರು ಜಗ ಜಟ್ಟಿಗಳು ಕುಸ್ತಿ ಮಾಡುತ್ತಿದ್ದಾರೆ. ಮೊದಲು ಅರಮನೆಯ ಶ್ವೇತವರಾಹ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಕೆ ನಂತರ ಜಟ್ಟಿಗಳಿಗೆ ಕೆಂಪುಮಣ್ಣು, ಮಟ್ಟಿ ಮಣ್ಣು, ಅರಿಶಿನ-ಕುಂಕುಮ, ಕಣ್ಣು ಕಪ್ಪು ಬಳಿದುಕೊಂದು ಕಾಳಗ ನಡೆಸಿದ್ದಾರೆ.
ಐತಿಹಾಸಿಕ ವಜ್ರಮುಷ್ಠಿ ಕಾಳಗದಲ್ಲಿ ಜಟ್ಟಿ ಜನಾಂಗದ ನಾಲ್ವರು ಪೈಲ್ವಾನರು ಕಾದಟ ನಡೆಸುತ್ತಿದ್ದಾರೆ. ಬೆಂಗಳೂರು, ಚನ್ನಪಟ್ಟಣ, ಮೈಸೂರು ಮತ್ತು ಚಾಮರಾಜನಗರದ ನಾಲ್ವರು ಜಟ್ಟಿಗಳ ಈ ಬಾರಿ ಭಾಗಿಯಾಗಿರುವ ಜಟ್ಟಿಗಳು. ಮೈಸೂರಿನ ಬಲರಾಮ್ ಜಟ್ಟಿ, ಚಾಮರಾಜನಗರದ ಶ್ರೀನಿವಾಸ್ ಜಟ್ಟಿ, ಬೆಂಗಳೂರಿನ ನಾರಾಯಣ್ ಜಟ್ಟಿ ಹಾಗೂ ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಭಾಗಿಯಾಗಿದ್ದು, ಚಾಮರಾಜನಗರದ ಶ್ರೀನಿವಾಸ್ ಜಟ್ಟಿ ಹಾಗೂ ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ನಡುವೆ ಕಾದಟ ನಡೆದಿದೆ. ಮೈಸೂರಿನ ಬಲರಾಮ್ ಜಟ್ಟಿ ಹಾಗೂ ಬೆಂಗಳೂರಿನ ನಾರಾಯಣ್ ಜಟ್ಟಿ ನಡುವೆ 2ನೇ ಸೆಣಸಾಟ ನಡೆದಿದೆ. ಉಸ್ತಾದ್ಗಳ ಉಪಸ್ಥಿತಿಯಲ್ಲಿ ವಜ್ರಮುಷ್ಟಿ ಆಯುಧ ಹಿಡಿದ ಇಬ್ಬರೂ ಜಟ್ಟಿಗಳ ಕಾದಾಟ ನಡೆದಿದೆ.
ಆನೆ ದಂತದಿಂದ ಮಾಡಿದ ವಜ್ರಮುಷ್ಟಿ ಆಯುಧವನ್ನು ಕೈಗೆ ಧರಿಸಿ ಕಾಳಗ ನಡೆಸಿದ್ದಾರೆ. ಹಣೆಯಲ್ಲಿ ರಕ್ತ ಚಿಮ್ಮುವವರೆಗೆ ಜಟ್ಟಿಗಳು ಕುಸ್ತಿ ಮಾಡಿದ್ದು, ರಕ್ತ ಚಿಮ್ಮಿದ ಬಳಿಕ ಕಾಳಗ ಸಮಾಪ್ತಿ ಆಗಿದೆ. ಆ ಬಳಿಕ ದೇವರಿಗೆ ಪೂಜೆ ಸಲ್ಲಿಸಿದ್ದು, ಇನ್ಮುಂದೆ ಜಂಬೂಸವಾರಿ ಆರಂಭಿಸುವ ಕಾರ್ಯಗಳು ಶುರು ಆಗಿವೆ. ಈ ವರ್ಷ ಇಂತಹ ಜಟ್ಟಿಗಳನ್ನು ಕಳುಹಿಸುತ್ತೇವೆ ಎಂದು ರಾಜಮನೆತನಕ್ಕೆ ಮೊದಲೇ ತಿಳಿಸಲಾಗುತ್ತದೆ. ದಸರಾ ಆರಂಭಕ್ಕೆ ಎರಡು ತಿಂಗಳು ಇರುವಾಗ ಆಯ್ಕೆ ಆದವರಿಗೆ ತರಬೇತಿ ನೀಡಲಾಗುತ್ತದೆ. ಈ ಬಾರಿ ಮೂವರು ಅನುಭವಿಗಳಾಗಿದ್ದು, ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗದಲ್ಲಿ ಭಾಗಿ ಆಗಿದ್ದಾರೆ.
ಬೆಂಗಳೂರಿನ ನಾರಾಯಣ ಜಟ್ಟಿ 9ನೇ ಬಾರಿಗೆ ವಜ್ರಮುಷ್ಠಿ ಕಾಳಗದಲ್ಲಿ ಭಾಗಿಯಾದ್ರೆ, ಮೈಸೂರಿನ ಬಲರಾಮ್ ಜಟ್ಟಿ 4ನೇ ಬಾರಿಗೆ ಹಾಗೂ ಚಾಮರಾಜನಗರದ ಶ್ರೀನಿವಾಸ್ ಜಟ್ಟಿ 3ನೇ ಬಾರಿಗೆ ಭಾಗಿಯಾಗಿದ್ದಾರೆ. ರಾಜಮಾತೆ ಪ್ರಮೋದ ದೇವಿ ಹಾಗು ಮೊಮ್ಮೊಗ ಆದ್ಯವೀರ್ ಜೊತೆಗೆ ಅರಮನೆ ಮೇಲೆ ನಿಂತು ಜಟ್ಟಿಕಾಳಗ ವೀಕ್ಷಿಸಿದ್ದಾರೆ. ಆ ಬಳಿಕ ಬನ್ನಿ ಪೂಜೆ ನೆರವೇರಿಸಿದ್ದಾರೆ ರಾಜವಂಶಸ್ಥ ಯಧುವೀರ್. ಇದೀಗ ಜಂಬೂಸವಾರಿ ಸಿದ್ಧತೆಗಳು ಆರಂಭವಾಗಿದ್ದು, ಅಂಬಾರಿ ಕಟ್ಟುವ ಕೆಲಸ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ನಂದಿ ಧ್ವಜ ಪೂಜೆಗೆ ಸಕಲ ತಯಾರಿಗಳು ನಡೆಯುತ್ತಿವೆ. ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ರಾಜಕಳೆ ಬಂದಿದ್ದು, ಜಂಬೂಸವಾರಿ ನೋಡುಗರ ಕಣ್ಮನ ಸೆಳೆಯಲಿದೆ.