ಹಣದ ಆಸೆಗಾಗಿ ಕೆಲವು ಜನ ಯಾವ ಲೆವೆಲ್ಗೂ ಇಳಿತಾರೆ ಅನ್ನೋದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಉದಾಹರಣೆ ದೊರೆತಿದ್ದು ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದ ಕುದ್ದುಪದವು ಎನ್ನುವಲ್ಲಿ ವ್ಯಕ್ತಿಯೋರ್ವ ಕೇರಳ ರಾಜ್ಯದ ಆಸ್ಪತ್ರೆಗಳ ದ್ರವ ತ್ಯಾಜ್ಯವನ್ನು ಕರ್ನಾಟಕದ ಪ್ರದೇಶಗಳಲ್ಲಿ ಸುರಿಯುವ ಮೂಲಕ ಹಣ ಪಡೆದು ತ್ಯಾಜ್ಯ ದಂಧೆ ನಡೆಸುತ್ತಿದ್ದಾನೆ.
ಈತನ ಈ ಕೃತ್ಯದಿಂದಾಗಿ ಊರಿಗೆ ಊರೇ ದುರ್ನಾತ ಬೀರುತ್ತಿದೆ. ಈ ಸಂಬಂಧ ಸ್ಥಳೀಯ ಗ್ರಾಮಪಂಚಾಯತ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಮೂಲಗಳ ಪರಿಶೀಲನೆಯನ್ನು ನಡೆಸಿದ್ದು, ಕೆಲವು ಬಾವಿಗಳಲ್ಲಿ ಈ ತ್ಯಾಜ್ಯದ ಅಂಶಗಳು ಪತ್ತೆಯಾಗಿವೆ.

ಬಂಟ್ವಾಳ ತಾಲೂಕಿನ ಕುದ್ದುಪದವು ನಿವಾಸಿ ಗೋಪಾಲ ಪಾಟಾಳಿ ಎನ್ನುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ತ್ಯಾಜ್ಯ ದಂಧೆ ಆರೋಪವನ್ನು ಹೊರಿಸಿದ್ದು, ದ್ರವ ತ್ಯಾಜ್ಯಗಳನ್ನು ತರುವ ಟ್ಯಾಂಕರ್ ಅನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರಿಗೂ ಒಪ್ಪಿಸಿದ್ದಾರೆ. ಆದರೆ ಈ ಕೃತ್ಯವನ್ನು ಮುಂದುವರಿಸಿರುವ ಗೋಪಾಲ ಪಾಟಾಳಿ ಇದೀಗ ದ್ರವ ತ್ಯಾಜ್ಯವನ್ನು ತನ್ನ ತೋಟಗಳಿಗೆ ಬಿಡುವ ಜೊತೆಗೆ ಪಕ್ಕದಲ್ಲೇ ಹರಿಯುವ ಸಣ್ಣ ತೋಡಿಗೂ ಬಿಡಲಾರಂಭಿಸಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.
ಕೇರಳದಲ್ಲಿ ತ್ಯಾಜ್ಯಗಳನ್ನು ಸಾರ್ವಜನಿಕವಾಗಿ ಎಸೆಯಲು ನಿಷೇಧ ಹೇರಿರುವ ಕಾರಣ ಅಲ್ಲಿನ ತ್ಯಾಜ್ಯಗಳನ್ನು ಕರ್ನಾಟಕದ ಪ್ರದೇಶಗಳಲ್ಲಿ ಡಂಪ್ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗಡಿ ಭಾಗದಲ್ಲಿ ಕೇರಳದಿಂದ ತರುವ ಕೋಳಿ ತ್ಯಾಜ್ಯ, ಆಸ್ಪತ್ರೆಯ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯೋದು ಸಾಮಾನ್ಯವಾಗಿದ್ದು, ಈ ಸಂಬಂಧ ಹಲವು ಕಡೆಗಳಲ್ಲಿ ಗ್ರಾಮಸ್ಥರು ಈ ಪ್ರಕ್ರಿಯೆಗಳನ್ನು ತಡೆದು ಪ್ರತಿಭಟಿಸಿದ ಘಟನೆಗಳೂ ನಡೆದಿವೆ.

ತ್ಯಾಜ್ಯ ದಂಧೆ ಮೂಲಕ ಕುದ್ದುಪದವಿನಲ್ಲಿ ಶೌಚಾಲಯದ ತ್ಯಾಜ್ಯ ಸುರಿಯುವ ವ್ಯಕ್ತಿ ಒಂದು ಟ್ಯಾಂಕರ್ ಗೆ ಹತ್ತು ಸಾವಿರ ರೂಪಾಯಿ ಪಡೆಸುಕೊಳ್ಳುತ್ತಿದ್ದಾರೆ ಎನ್ನುವ ಆರೋಪವೂ ಇದೆ. ರಾಸಾಯನಿಕ ಮಿಶ್ರಿತ ಈ ತ್ಯಾಜ್ಯದ ಸಂಪರ್ಕದಿಂದಾಗಿ ಗ್ರಾಮಸ್ಥರಲ್ಲಿ ದೇಹದಲ್ಲಿ ತುರಿಕೆಯಂತಹ ಲಕ್ಷಣಗಳೂ ಕಂಡು ಬಂದಿದೆ.
ಈ ಸುದ್ದಿ ಓದಿದ್ದೀರಾ? ವಿಧಾನ ಪರಿಷತ್ ಸದಸ್ಯರಾಗಿ ಮೂವರ ನಾಮನಿರ್ದೇಶನ; ಅಂಕಿತ ಹಾಕಿದ ರಾಜ್ಯಪಾಲರು
ಈ ಸಂಬಂಧ ಗ್ರಾಮಸ್ಥರು ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡಿದ್ದು, ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳೂ ದ್ರವತ್ಯಾಜ್ಯ ಎಸೆದ ಸ್ಥಳದ ಪರಿಶೀಲನೆಯನ್ನೂ ನಡೆಸಿದ್ದಾರೆ. ಅಲ್ಲದೆ ತ್ಯಾಜ್ಯ ಸುರಿಯುವವರ ವಿರುದ್ಧ ಪೋಲೀಸ್ ದೂರನ್ನೂ ನೀಡಿದ್ದಾರೆ.
ರಾಸಾಯನಿಕಯುಕ್ತ ತ್ಯಾಜ್ಯದ ನೀರು ಗ್ರಾಮದ ಹಲವು ಬಾವಿಗಳಿಗೂ ಸೇರಿರುವ ಸಂಶಯ ವ್ಯಕ್ತವಾಗಿದ್ದು, ಹಲವು ಬಾವಿಗಳ ನೀರಿನ ಪರೀಕ್ಷೆಯನ್ನೂ ನಡೆಸಲಾಗಿದೆ. ಪರೀಕ್ಷೆಯಲ್ಲಿ ಕೆಲವು ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರದಿಗಳೂ ಬಂದಿದ್ದು, ಜನ ಕುಡಿಯುವ ನೀರಿಗಾಗಿಯೂ ಪರದಾಟ ನಡೆಸಬೇಕಾದ ಸ್ಥಿತಿ ಬಂದೊದಗಿದೆ. ತ್ಯಾಜ್ಯ ಸುರಿಯುವ ಟ್ಯಾಂಕರ್ ಅನ್ನು ಒಂದು ಬಾರಿ ಹಿಡಿದು ಪೋಲೀಸರಿಗೆ ಒಪ್ಪಿಸಿದ್ದರೂ, ಕರ್ನಾಟಕದ ನೊಂದಾಯಿತ ಟ್ಯಾಂಕರ್ ಗಳಲ್ಲಿ ತ್ಯಾಜ್ಯ ನೀರನ್ನು ಸುರಿಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೂ, ಪೋಲೀಸ್ ಇಲಾಖೆ ಮತ್ತು ಸ್ಥಳೀಯ ಪಂಚಾಯತ್ ತ್ಯಾಜ್ಯ ದಂಧೆ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿಲ್ಲ ಅನ್ನೋ ಆರೋಪವೂ ಗ್ರಾಮಸ್ಥರದ್ದಾಗಿದೆ.