ಮಂಡ್ಯ: ವಿರೂಪಾಕ್ಷಪ್ಪ ಹಾಗೂ ಅವರ ಕುಟುಂಬವನ್ನು ಬಿಜೆಪಿ ಸರ್ಕಾರ ರಕ್ಷಣೆ ಮಾಡುತ್ತಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಏನು ಮಾಡಬೇಕು ಅದನ್ನ ಮಾಡುವಂತೆ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮಾಜಿ ಸಿಎಂ ಸದಾನಂದ ಗೌಡ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತವನ್ನು ಮುಚ್ಚಿದ ಕಾಂಗ್ರೆಸ್ ಎಸಿಬಿ ತಂದು ರಕ್ಷಣೆ ಮಾಡಿಕೊಂಡರು. ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದು ಬಿಜೆಪಿ. ಲೋಕಾಯುಕ್ತ ಬಂದ ಮೇಲೆ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಹಸ್ತಕ್ಷೇಪ ಮಾಡಲ್ಲ. ಖಂಡಿತವಾಗಿಯೂ ವಿರೂಪಾಕ್ಷಪ್ಪ ಅವರನ್ನು ರಕ್ಷಣೆ ಮಾಡುವ ಉದ್ದೇಶ ಈ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಮಿತ್ ಶಾಗೆ ಕಪ್ಪ ಕಾಣಿಕೆ ನೀಡಲು ವಿರೂಪಾಕ್ಷಪ್ಪ ಹಣ ಸಂಗ್ರಹಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರ ನಡೆದು ಬಂದಂತಹ ದಾರಿ ಉಂಟಲ್ಲ. ಕಳ್ಳನ ಮನಸ್ಸು ಒಳಗೊಳಗೆ ಅಂತ ಎಂದರು.

ನಾರಾಯಣ್ ಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಮಾತನಾಡಿ, ಸಂಜೆಗೆ ಅವರೇ ಯಾತ್ರೆಯನ್ನು ಲೀಡ್ ಮಾಡ್ತಾರೆ. ಸೋಮಣ್ಣ, ನಾರಾಯಣ್ ಗೌಡ ಸೇರಿದಂತೆ ನಮ್ಮ ಜೊತೆ ಇರುವವರು ಯಾರು ಹೋಗಲ್ಲ. ಬಿಜೆಪಿ ಕಡೆ ಒಳ್ಳೆಯ ಅಲೆ ಬರ್ತಿದೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿ ನಮ್ಮ ಕೊಡುಗೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಉದ್ದ ನಾಲಿಗೆ ಇದೆ ಅರಿ ಬಡ್ತಾರೆ ಅಷ್ಟೆ. ಹೆದ್ದಾರಿ ಮಾಡಿದ್ದು ಬಿಜೆಪಿ ಅಂತ ಎಲ್ಲರಿಗೂ ಗೊತ್ತಿದೆ. ನಾವು ಮತ್ತೆ ಮತ್ತೆ ಸಮರ್ಥನೆ ಮಾಡ್ಕೊಳ್ಲೋದು ಸರಿಯಲ್ಲ ಎಂದರು.
ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಿದಾಗ ಖಂಡಿತವಾಗಿಯೂ ಯಾವುದಾದರೂ ಘೋಷಣೆ ಮಾಡ್ತಾರೆ. ಮಂಡ್ಯ ಅಭಿವೃದ್ಧಿ ಆದರೆ ಇಂಡಿಯಾ ಅಭಿವೃದ್ಧಿ ಆಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚುನಾವಣೆ ಬಂದಾಗ ರಾಷ್ಟ್ರ ನಾಯಕರು ಬರೋದು ಸಹಜ. ನೆಹರು, ಇಂದಿರಾಗಾಂಧಿ ಕಾಲದಿಂದಲೂ ಬರ್ತಾ ಇದ್ದಾರೆ. ಆಯಾ ಆಯಾ ಪಕ್ಷದ ನಾಯಕರು ಪಕ್ಷದ ಪರ ಬರ್ತಾರೆ.ಇವತ್ತು ದುರ್ದೈವ ಕಾಂಗ್ರೆಸ್ಗೆ ರಾಷ್ಟ್ರಮಟ್ಟದಲ್ಲಿ ನಾಯಕರು ಇಲ್ಲ. ಜೆಡಿಎಸ್ ಪ್ರಾದೇಶಿಕ ಪಕ್ಷ. ರಾಷ್ಟ್ರದಲ್ಲಿ ಇದೀಗ ಒಂದೇ ಪಕ್ಷ ಜಗತ್ತು ಒಪ್ಪಿಕೊಳ್ಳುವ ಪಕ್ಷ ಬಿಜೆಪಿ. ಹೀಗಾಗಿ ಅದರ ಲಾಭ ಪಡೆದುಕೊಳ್ಳುವ ಕೆಲಸ ನಾವು ಮಾಡ್ತಾ ಇದ್ದೀವಿ ಎಂದು ತಿಳಿಸಿದರು.