
ಕವಲು ಹಾದಿಯಲ್ಲಿರುವ ಸಮಾಜ ಹಿಮ್ಮುಖವಾಗಿ ಚಲಿಸುತ್ತಿರುವುದು ಚಾರಿತ್ರಿಕ ದುರಂತ
ನಾ ದಿವಾಕರ
ಭಾಗ 2
ಭದ್ರ ತಳಪಾಯದೊಂದಿಗೆ ಸುರಕ್ಷಿತವಾಗಿ ಬೇರೂರಿರುವ ಯಾವುದೇ ಸಾಂಸ್ಥಿಕ ಮತ ಮತ್ತು ಅದರಿಂದ ನಿರ್ದೇಶಿಸಲ್ಪಡುವ ಧರ್ಮ-ಧಾರ್ಮಿಕ ಆಲೋಚನಾ ಕ್ರಮಗಳು, ತಾನು ಪ್ರತಿನಿಧಿಸುವ ಸಮಾಜದ ಎಲ್ಲ ಸಮುದಾಯಗಳನ್ನೂ, ಎಲ್ಲ ಸ್ತರಗಳಲ್ಲೂ ಪ್ರಭಾವಿಸುವ ಮೂಲಕ, ಆಯಸ್ಕಾಂತೀಯ ಆಕರ್ಷಣೆಯನ್ನು ಸಹಜವಾಗಿಸುತ್ತದೆ. ಜನಸಾಮಾನ್ಯರ ದೃಷ್ಟಿಯಲ್ಲಿ ಬದುಕಿನ ವಾಸ್ತವತೆಗಳಿಗಿಂಗಲೂ, ಈ ಗ್ರಾಂಥಿಕ ಧರ್ಮ ಬೋಧನೆಗಳು ಮತ್ತು ಮಾರ್ಗದರ್ಶಿ ಸೂತ್ರಗಳು ಅಪ್ಯಾಯಮಾನ ಎನಿಸುತ್ತವೆ. ಇತರ ಸಮೀಪದ ಉದಾಹರಣೆಯನ್ನು ನೆರೆರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಗುರುತಿಸಬಹುದು. ಈ ಧಾರ್ಮಿಕ ಆಲೋಚನಾ ಕ್ರಮಗಳು ಪಾರಂಪರಿಕ ಚೌಕಟ್ಟಿನಿಂದ, ಸಾಂಪ್ರದಾಯಿಕ ಸಂಕೋಲೆಗಳಿಂದ ಮುಕ್ತವಾಗದೆ, ಯಥಾಸ್ಥಿತಿಯಲ್ಲಿ ಜನರ ಬೌದ್ಧಿಕ ಬೆಳವಣಿಗೆಯನ್ನು ಪ್ರಭಾವಿಸಿದಾಗ, ನಿರ್ದಿಷ್ಟ ಭೂ ಪ್ರದೇಶದ ರಾಜಕೀಯ, ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ಶೈಕ್ಷಣಿಕ ವಾತಾವರಣಗಳೂ ತಮ್ಮ ಆಧುನಿಕತೆಯ ಮುಖವಾಡವನ್ನು ಕಳಚಿಕೊಂಡು , ಪ್ರಾಚೀನ ಮೌಲ್ಯಗಳೆಡೆಗೆ ಸಾಗತೊಗುತ್ತವೆ.
ಭಾರತದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಶತಮಾನಗಳಿಂದಲೂ ಬೇರೂರಿರುವ , ಇಂದು ಜಾತ್ಯತೀತ (Secular) ಎಂದು ವ್ಯಾಖ್ಯಾನಿಸಲ್ಪಡುವ, ಸಮನ್ವಯ ಸಂಸ್ಕೃತಿ ಮತ್ತು ಜೀವನಾದರ್ಶಕಗಳು, ಈ ದೇಶವನ್ನು ಇಂತಹ ಅಪಾಯದಿಂದ ತಪ್ಪಿಸಿವೆ. ಆದರೆ ಈ ಗುಣಾತ್ಮಕತೆಯನ್ನು ಭಂಗಗೊಳಿಸಿ ದೇಶವನ್ನು ಮತ್ತೊಮ್ಮೆ ಮಧ್ಯಕಾಲೀನ ಸಾಮಾಜಿಕ ವ್ಯವಸ್ಥೆಯೆಡೆಗೆ ಕೊಂಡೊಯ್ಯುವ ಪ್ರಯತ್ನಗಳು ಚಲನಶೀಲತೆಯಿಂದ ಇಂದಿಗೂ ನಡೆಯುತ್ತಲೇ ಇವೆ. ಸಾಂಪ್ರದಾಯಿಕ ಹಿಂದೂ, ಮುಸ್ಲಿಂ ಸಮಾಜಗಳಲ್ಲಿ ಕಾಣಬಹುದಾದ ಈ ಪ್ರಯತ್ನಗಳೇ ಭಾರತದಲ್ಲಿ ಪ್ರಜಾಪ್ರಭುತ್ವದ ಆದಿ ಮೌಲ್ಯಗಳು ಆಗಿಂದ್ದಾಗ್ಗೆ ದಾಳಿಗೊಳಗಾಗುವುದನ್ನು ಗುರುತಿಸಬಹುದು. ಈ ಸಮಾಜಗಳಲ್ಲಿ ಪ್ರಜಾಸತ್ತೆಯ, ಸಂವಿಧಾನದ ಮಾನವೀಯ ಮೌಲ್ಯಗಳು ತಳಸ್ತರದ ಸಮಾಜವನ್ನು ತಲುಪುವ ಮುನ್ನವೇ, ಸಾಂಪ್ರದಾಯಿಕ ಶಕ್ತಿಗಳ ಭಾವತೀವ್ರತೆಯ (Passionate) ಧಾರ್ಮಿಕ ಚಿಂತನೆಗಳು ಸಮಾಜದ ಎಲ್ಲ ಸ್ತರಗಳನ್ನೂ ಆಕ್ರಮಿಸಿರುತ್ತವೆ. ಈ ಆಕ್ರಮಣದ ವಿರುದ್ಧ ಹೋರಾಡಲು ಅಗತ್ಯವಾದ ಬೌದ್ಧಿಕ-ಸಾಂಘಿಕ-ಸಾಂಸ್ಥಿಕ ಸಾಧನಗಳನ್ನು ಸಮರ್ಪಕವಾಗಿ, ಸಕಾಲಿಕವಾಗಿ, ಬಳಸಿಕೊಳ್ಳಲಾಗದ ಒಂದು ದೇಶ, ಸಹಜವಾಗಿಯೇ ಸಾಂಪ್ರದಾಯಿಕತೆಯ ಕಡೆಗೆ ಹೊರಳಿ, ನಿರಂಕುಶಾಧಿಕಾರಕ್ಕೆ ಬಲಿಯಾಗುತ್ತದೆ. ಪಾಕಿಸ್ತಾನ ಸಮೀಪದ ನಿದರ್ಶನ.
ಬಹುತ್ವದ ನೆಲೆಗಳಲ್ಲಿ ಆಧಿಪತ್ಯ
ಭಾರತದಲ್ಲಿ ಸಾಂಸ್ಕೃತಿಕ -ಭಾಷಾ ವೈವಿಧ್ಯತೆ ಮತ್ತು ಧಾರ್ಮಿಕ ಭಿನ್ನತೆಗಳು ಈ ಅಪಾಯಕಾರಿ ಪ್ರಕ್ರಿಯೆಯನ್ನು ತಡೆಗಟ್ಟಿದ್ದು, ನಮ್ಮ ಸಂವಿಧಾನ ಬಹುದೊಡ್ಡ ರಕ್ಷಾ ಕವಚವಾಗಿ ಪರಿಣಮಿಸಿದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಈ ಸಾಂವಿಧಾನಿಕ ಬೇರುಗಳನ್ನೇ ಸಡಿಲಗೊಳಿಸುವ, ತನ್ಮೂಲಕ ಇನ್ನೂ ಬೇರೂರದ ಪ್ರಜಾಪ್ರಭುತ್ವದ ನೆಲೆಗಳನ್ನು ಹಂತಹಂತವಾಗಿ ಶಿಥಿಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಜಕೀಯವಾಗಿ ಇದು ಸಾಧ್ಯವಾಗುವುದು ಕಷ್ಟವಾದರೂ, ಸಾಮಾಜಿಕವಾಗಿ ಸಾಂಸ್ಕೃತಿಕ ನೆಲೆಗಳಲ್ಲಿ ಇದನ್ನು ಆಗುಮಾಡುವ ಸಾಂಘಿಕ ಚಟುವಟಿಕೆಗಳು ಕ್ರಿಯಾಶೀಲವಾಗಿವೆ. ಭಾರತದ ಮುಸ್ಲಿಂ ಸಮಾಜ ತನ್ನದೇ ಆದ ಸೆಕ್ಯುಲರ್ ರಾಜಕೀಯ ಶಕ್ತಿಯೊಂದನ್ನು ರೂಪಿಸಲು ವಿಫಲವಾಗಿರುವುದಕ್ಕೆ ಈ ಸಾಂಪ್ರದಾಯಿಕ-ಧಾರ್ಮಿಕ ಶಕ್ತಿಗಳ ಬಿಗಿಹಿಡಿತವೇ ಕಾರಣ ಎನ್ನುವುದನ್ನು ಒಪ್ಪಲೇಬೇಕಿದೆ. ಶತಮಾನಗಳಿಂದಲೂ ಸಾಮಾಜಿಕ ಸುಧಾರಣೆಯ ಬೌದ್ಧಿಕ ಪ್ರಯತ್ನಗಳಿಗೆ ಮುಕ್ತವಾಗಿರುವ ಹಿಂದೂ ಸಮಾಜವನ್ನೂ, ಸಂಘಪರಿವಾರ, ಸಾಂಪ್ರದಾಯಿಕತೆಯ ಸಂಕೋಲೆಗಳಲ್ಲಿ ಬಂಧಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ವರ್ತಮಾನದಲ್ಲಿ ಇದರ ಫಲಿತಗಳು ಗೋಚರಿಸುವುದಿಲ್ಲ ಆದರೆ ಭವಿಷ್ಯದಲ್ಲಿ ಭೀಕರವಾಗಿ ಇಡೀ ಸಮಾಜಗಳನ್ನು ಆವರಿಸುತ್ತವೆ. \

ಇದರಿಂದಾಚೆ ನೋಡಿದಾಗ, ಸಾಂಸ್ಥೀಕರಣಗೊಂಡ ಮತ-ಧರ್ಮಗಳು ತಾವು ಪ್ರತಿನಿಧಿಸುವ ಪ್ರದೇಶಗಳ ಮೇಲೆಯೂ ಆಧಿಪತ್ಯ ಸಾಧಿಸುವುದನ್ನು ಸಾಮಾನ್ಯವಾಗಿ ಗುರುತಿಸಬಹುದು. ತಳಸ್ತರದ ಜನಸಾಮಾನ್ಯರನ್ನು ಹಾಗೂ ಮೇಲ್ಪದರದ ಸುಶಿಕ್ಷಿತರನ್ನು ಸಮಾನವಾಗಿ ಆವರಿಸುವ ಈ ಗ್ರಾಂಥಿಕ ಆಲೋಚನಾ ಕ್ರಮಗಳು , ಜನರ ಶ್ರದ್ಧೆ ನಂಬಿಕೆಗಳನ್ನೇ ಬಂಡವಾಳವಾಗಿಸಿಕೊಂಡು, ಪ್ರಾದೇಶಿಕ ಆಧಿಪತ್ಯ, ಸಾಮಾಜಿಕ ಪ್ರಾಬಲ್ಯ, ಸಾಂಸ್ಕೃತಿಕ ಪಾರಮ್ಯ ಮತ್ತು ಆಳ್ವಿಕೆಯ ಅಧಿಕಾರವನ್ನು ಪಡೆಯಲು ಯತ್ನಿಸುತ್ತವೆ. ಈ ಪ್ರಕ್ರಿಯೆಯಲ್ಲೇ ಸಮಾಜದಲ್ಲಿ ಇದ್ದಿರಬಹುದಾದ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಎಲ್ಲವನ್ನೂ ಪ್ರಶ್ನಿಸುವ ಮನಸ್ಥಿತಿಗಳನ್ನು ಸದ್ದಿಲ್ಲದೆಯೇ ನೇಪಥ್ಯಕ್ಕೆ ಸರಿಸಲಾಗುತ್ತದೆ. ಜನಸಮೂಹದ ಮೇಲೆ ಫ್ಯಾಸಿಸಂ ತನ್ನ ಹಿಡಿತ ಸಾಧಿಸುವಲ್ಲಿ ಈ ತಂತ್ರಗಳನ್ನೇ ಬಳಸುವುದನ್ನು ಇತಿಹಾಸ ನಿರೂಪಿಸಿದೆ. ಭಾರತದಲ್ಲಿ ಸಂಘಪರಿವಾರದ ಬಲಪಂಥೀಯ ರಾಜಕಾರಣದ ಬಲವರ್ಧನೆಯ ಹಿನ್ನೆಲೆಯಲ್ಲಿ ಈ ಸಂಭಾವ್ಯ ಅಪಾಯ ಇರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.
ಹೀಗೆ ಜನರ ಶ್ರದ್ಧಾನಂಬಿಕೆಗಳ ಹೆಸರಿನಲ್ಲಿ ಧರ್ಮಕ್ಷೇತ್ರಗಳ ಮೇಲೆ ಯಜಮಾನಿಕೆಯನ್ನು ಸ್ಥಾಪಿಸುವುದು ಎಲ್ಲ ಧರ್ಮಗಳಲ್ಲೂ ಕಾಣಬಹುದಾದ ವಿದ್ಯಮಾನ. ಒಂದು ದೇವಸ್ಥಾನ, ಮಸೀದಿ, ದರ್ಗಾ, ಚರ್ಚ್, ಗುರುದ್ವಾರ ಯಾವುದೇ ಧಾರ್ಮಿಕ ಪೂಜಾಸ್ಥಳಗಳು ನೆಲೆಗೊಂಡಿರುವ ಭೂ ಪ್ರದೇಶವನ್ನು ʼ ಪಾವಿತ್ರ್ಯತೆ ʼಯ ನೆಪದಲ್ಲಿ ಧಾರ್ಮಿಕ ಸಂಸ್ಥೆಗಳು ತಮ್ಮದಾಗಿಸಿಕೊಳ್ಳುತ್ತವೆ. ಹಾಗೆಯೇ ಈ ಪಾವಿತ್ರ್ಯತೆಯನ್ನು ಕಾಪಾಡುವ ಸ್ವ-ಅಧಿಕಾರವನ್ನೂ ಪಡೆದುಕೊಳ್ಳುತ್ತವೆ. ಮೈಸೂರಿನ ಚಾಮುಂಡಿಬೆಟ್ಟ ವಿಜಯನಗರ ಕಾಲದಿಂದಲೂ, ನಾಲ್ವಡಿಯವರ ಆಳ್ವಿಕೆಯಲ್ಲೂ ಸಾರ್ವಜನಿಕ ಸ್ವತ್ತಾಗಿದ್ದುದು, ಈಗ ಹಿಂದೂ ಧರ್ಮದ ಆಸ್ತಿ ಎಂದು ಪ್ರತಿಪಾದಿಸುತ್ತಿರುವ ಇತ್ತೀಚಿನ ಬೆಳವಣಿಗೆಯನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಇಲ್ಲಿ ಜನರ ನಂಬಿಕೆಗಳೇ ಬಂಡವಾಳವಾದರೆ, ಸಾಂಸ್ಥಿಕ ಅಸ್ತಿತ್ವ-ಅಸ್ಮಿತೆಯೇ ಪ್ರಧಾನ ಅಸ್ತ್ರವಾಗುತ್ತದೆ. ಬಿಜೆಪಿ ನಾಯಕರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಈ ಧಾರ್ಮಿಕ ನೆಲೆಯಲ್ಲೇ ವಿರೋಧಿಸುತ್ತಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿದ ಯಾವುದೇ ಪೂಜಾಸ್ಥಳಗಳು , ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿರುವುದಿಲ್ಲ ಎಂಬ ಶಾಸನಬದ್ಧ ನಿಬಂಧನೆಗಳ ಹೊರತಾಗಿಯೂ, ರಾಜಕೀಯ ನಾಯಕರ ಚರ್ಚೆ ಇದರ ಸುತ್ತಲು ಇರುವುದು ಅಪ್ರಬುದ್ದತೆಯ ಸಂಕೇತ. ದೇವಸ್ಥಾನವನ್ನು ಹಿಂದೂಗಳ ಆಸ್ತಿ ಎಂದು ಭಾವಿಸುವವರಿಗೆ, ಅದು ನೆಲೆಸಿರುವ ಬೆಟ್ಟ ಸಾರ್ವತ್ರಿಕವಾದ ಸ್ವತ್ತು ಎನ್ನುವ ಕನಿಷ್ಠ ಪರಿವೆಯಾದರೂ ಇರಬೇಕು.

ಸಾಮಾಜಿಕ ಮೌಲ್ಯಗಳು ಧರ್ಮಕ್ಷೇತ್ರಗಳು
ಹೀಗೆ ಪೂಜಾಸ್ಥಳಗಳಷ್ಟೇ ಅಲ್ಲದೆ ಅವುಗಳು ನೆಲೆಸುವ ಪ್ರದೇಶದ ಮೇಲೆಯೂ ಯಜಮಾನಿಕೆಯನ್ನು ಸ್ಥಾಪಿಸುವ ಧರ್ಮಗಳು ಅಥವಾ ಧಾರ್ಮಿಕ ಸಂಸ್ಥೆಗಳು ಆಯಾ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳನ್ನೂ ಗಮನಿಸುತ್ತಿರಬೇಕಲ್ಲವೇ ? ಪವಿತ್ರ ಎನ್ನಲಾಗುವ ಒಂದು ಭೂ ಪ್ರದೇಶದಲ್ಲಿ ಅಥವಾ ಸೀಮಿತ ತಾಣದಲ್ಲಿ ಮಾನವೀಯ ಮೌಲ್ಯಗಳ ಬೀಜಗಳನ್ನು ಬಿತ್ತುವುದು ಯಾರ ಜವಾಬ್ದಾರಿ ? ಧರ್ಮಶ್ರೇಷ್ಠತೆ ಮತ್ತು ಕ್ಷೇತ್ರ ಪಾವಿತ್ರ್ಯತೆಯ ನೈತಿಕ ಹೊಣೆ ಹೊತ್ತ ಸಂಸ್ಥೆಗಳು ಅಥವಾ ಅದನ್ನೇ ತಮ್ಮ ಮತಬ್ಯಾಂಕ್ನಂತೆ ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಳ್ಳುವ ರಾಜಕೀಯ ಪಕ್ಷಗಳು ಈ ಜವಾಬ್ದಾರಿಯನ್ನು ಹೊರಬೇಕಲ್ಲವೇ ? ಒಂದು ಪವಿತ್ರ ತೀರ್ಥಕ್ಷೇತ್ರದಲ್ಲಿ ಮನುಷ್ಯ ಸಮಾಜದ ಮೇಲೆ ಯಾವುದೇ ರೀತಿಯ ಅಮಾನುಷ ದೌರ್ಜನ್ಯಗಳಾಗದಂತೆ ಎಚ್ಚರವಹಿಸಬೇಕಾದ್ದು, ಧಾರ್ಮಿಕ ಕರ್ತವ್ಯಗಳಲ್ಲಿ ಒಂದು ಅಲ್ಲವೇ ? ಇದು ಧಾರ್ಮಿಕ ಎನ್ನುವುದಕ್ಕಿಂತಲೂ, ನೈತಿಕತೆಯ ಪ್ರಶ್ನೆ, ಮಾನವೀಯತೆಯ ಪ್ರಶ್ನೆ.
ಒಂದು ವೇಳೆ ಅಲ್ಲಿ ಮಹಿಳೆಯರ ಅತ್ಯಾಚಾರ, ಕೊಲೆ, ಭೂ ಕಬಳಿಕೆಯಂತಹ ಊಳಿಗಮಾನ್ಯ ಚಟುವಟಿಕೆಗಳು, ಕೋಮು/ಮತದ್ವೇಷದ ದಾಳಿಗಳು ಸಂಭವಿಸಿದ್ದೇ ಆದಲ್ಲಿ, ಅಥವಾ ಅಸ್ಪೃಶ್ಯತೆ-ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ಪದ್ದತಿಗಳು ಜಾರಿಯಾಗಿದ್ದಲ್ಲಿ, ಅದನ್ನು ತಡೆಗಟ್ಟುವ, ನಿಯಂತ್ರಿಸುವ, ನಿವಾರಿಸುವ ನೈತಿಕ ಜವಾಬ್ದಾರಿಯನ್ನು ಅಲ್ಲಿನ ಸಮಾಜವಷ್ಟೇ ಅಲ್ಲದೆ, ಅದನ್ನು ನಿರ್ದೇಶಿಸುವ ಮತೀಯ/ಧಾರ್ಮಿಕ ಸಂಸ್ಥೆಗಳ ಮೇಲೆ ಸಹ ಇರುತ್ತದೆ. ಇಂತಹ ಯಾವುದೇ ಕ್ಷೇತ್ರ/ಪ್ರದೇಶವಾದರೂ ಬಾಹ್ಯ ಸಮಾಜದಿಂದ ಹೊರತಾದ ʼ ದ್ವೀಪ ʼಗಳಾಗಿ ಇರಲು ಸಾಧ್ಯವಿಲ್ಲ. ಹೊರಗಿನ ಸಮಾಜದಲ್ಲಿ ರೂಢಿಗತವಾಗಿರುವ ದುಶ್ಚಟಗಳು, ದುಷ್ಕೃತ್ಯಗಳು ಮತ್ತು ಸಮಾಜಘಾತುಕ ಚಟುವಟಿಕೆಗಳಿಂದ, ಈ ಪ್ರದೇಶಗಳೂ ಮುಕ್ತವಾಗಿರಲು ಸಾಧ್ಯವಿಲ್ಲ. ಹೊರಗಿನ ಮಾರುಕಟ್ಟೆಯ ಪ್ರಭಾವ ಮತ್ತು ಲೌಕಿಕ ಬದುಕಿನ ವ್ಯತ್ಯಯಗಳೆಲ್ಲವನ್ನೂ ಇಲ್ಲಿಯೂ ಕಾಣಬಹುದು. ಏಕೆಂದರೆ ದೇಶದ ಎಲ್ಲ ಮೂಲೆಗಳಿಂದಲೂ ಸಾಮಾನ್ಯ ಜನರು, ಜಾತಿ-ಧರ್ಮಗಳ ಗಡಿಯನ್ನು ದಾಟಿ ಈ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ದೈವಭಕ್ತಿ, ಸಾರ್ವತ್ರಿಕ ಲಕ್ಷಣವಾಗಿರುವುದರಿಂದ, ತೀರ್ಥಸ್ಥಳಗಳು ಯಾತ್ರಾ ಸ್ಥಳಗಳಾಗಿ, ನವ ಉದಾರವಾದದ ವಾತಾವರಣದಲ್ಲಿ ವಾಣಿಜ್ಯೀಕರಣಗೊಂಡ ಔದ್ಯಮಿಕ ಕ್ಷೇತ್ರಗಳಾಗಿ ಪರಿವರ್ತನೆಯಾಗುತ್ತವೆ. ಸಹಜವಾಗಿಯೇ ಬಾಹ್ಯ ಸಮಾಜದ ಎಲ್ಲ ಅಧ್ವಾನಗಳು ಇಲ್ಲೂ ನೆಲೆ ಕಾಣುತ್ತವೆ.
ಹಾಗಾಗಿ ಅಲ್ಲಿಯೇ ನೆಲೆಸಿರುವ, ಅದನ್ನೇ ತಮ್ಮ ಪುಣ್ಯಭೂಮಿ ಎಂದು ಶ್ರದ್ಧೆಯಿಂದ ಭಾವಿಸಿ, ಬದುಕು ಸವೆಸುತ್ತಿರುವ ಅಥವಾ ನಿರ್ದಿಷ್ಟ ದೇವರುಗಳ ಆರಾಧನೆಗಾಗಿ ಅಲ್ಲಿಗೆ ಆಗಮಿಸುವ ಜನರು ಯಾವುದೇ ರೀತಿಯ ದೌರ್ಜನ್ಯಗಳಿಗೆ ತುತ್ತಾಗದಂತೆ ಎಚ್ಚರ ವಹಿಸುವುದು, ಸರ್ಕಾರ ಮತ್ತು ಕಾನೂನು ವ್ಯವಸ್ಥೆಯ ಸಾಂವಿಧಾನಿಕ ಹೊಣೆಯಾದರೂ, ಈ ಪ್ರದೇಶದ ವಾರಸುದಾರಿಕೆಯನ್ನು ವಹಿಸುವ ಸಂಸ್ಥೆ/ಪಕ್ಷಗಳೂ ಸಹ ಈ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಬೇಕಾಗುತ್ತದೆ. ಧಾರ್ಮಿಕವಾಗಿ ಅತ್ಯುನ್ನತ ಮಾನವೀಯ ಮೌಲ್ಯಗಳಿಗೆ ಕಟಿಬದ್ದವಾಗಿರುವ ಯಾವುದೇ ಸಮಾಜವು ಇಂತಹ ಭೂ ಪ್ರದೇಶಗಳಲ್ಲಿ, ಪರ್ವತ ಶ್ರೇಣಿಗಳಲ್ಲಿ, ಬೆಟ್ಟ ಪ್ರದೇಶಗಳಲ್ಲಿ, ಮಾನವತೆಗೇ ಭಂಗ ತರುವಂತಹ ಅಮಾನುಷ/ಅನಾಗರಿಕ ಚಟುವಟಿಕೆಗಳು ನಡೆಯದಂತೆ ಎಚ್ಚರ ವಹಿಸುವುದು ಅತ್ಯವಶ್ಯ. ಇದನ್ನೇ ನಾವು ಸಾಮಾನ್ಯ ಪರಿಭಾಷೆಯಲ್ಲಿ ʼ ಸಾಮಾಜಿಕ-ಸಾರ್ವಜನಿಕ ಪ್ರಜ್ಞೆ ʼ ಎಂದು ವ್ಯಾಖ್ಯಾನಿಸುತ್ತೇವೆ. ನವ ಭಾರತದಲ್ಲಿ ನಶಿಸಿಹೋಗುತ್ತಿರುವ ಮೌಲ್ಯ ಇದೇ ಎಂದರೆ ತಪ್ಪೇನಲ್ಲ. ಏಕೆಂದರೆ ಅಮಾನುಷತೆ ಮತ್ತು ದೌರ್ಜನ್ಯಗಳನ್ನು ನಾವು ನೋಡುವ ದೃಷ್ಟಿಗೆ ಧರ್ಮದ-ಜಾತಿಯ ಪೊರೆ ಕವಿದಿದೆ.
ಔದಾತ್ಯ – ಔಚಿತ್ಯ ಮತ್ತು ವಾಸ್ತವತೆ
ಪರಿಶುದ್ಧತೆ ಅಥವಾ ಪಾವಿತ್ರ್ಯತೆ ಎನ್ನುವ ಉದಾತ್ತ ಲಕ್ಷಣಗಳನ್ನು ಸಮಾಜದಲ್ಲಿ ಉಳಿಸಿಕೊಳ್ಳಬೇಕಾದರೆ, ಕೇವಲ ಆ ಪ್ರದೇಶದ ಜನರಷ್ಟೇ ಅಲ್ಲದೆ ಅಂತಹ ಕ್ಷೇತ್ರಗಳ ಬಗ್ಗೆ ಗೌರವಾದರ ಇರುವ ಪ್ರತಿ ವ್ಯಕ್ತಿಯೂ ಅಲ್ಲಿ ನಡೆಯುವ ಅಮಾನುಷ ದುಷ್ಕೃತ್ಯಗಳನ್ನು ಗಮನಿಸಬೇಕಾಗುತ್ತದೆ. ಹಾಗೊಮ್ಮೆ ಅಂತಹ ಘಟನೆಗಳು ಸಂಭವಿಸಿದಾಗ, ಅದನ್ನು ಖಂಡಿಸುವ, ವಿಮರ್ಶಿಸುವ ಮತ್ತು ವಿರೋಧಿಸುವ ಹಕ್ಕನ್ನು ಸಹ ಇದೇ ಸಮಾಜ ಸಹಜವಾಗಿ ಪಡೆದುಕೊಳ್ಳುತ್ತದೆ. ಆಧುನಿಕ ಸಮಾಜದಲ್ಲಿ, ಆರ್ಥಿಕ ಅಸಮಾನತೆಗಳೊಂದಿಗೇ, ಸಹಜ ಎನಿಸಿಕೊಂಡಿರುವ ಅತ್ಯಾಚಾರ/ಕೊಲೆ/ಅಸ್ಪೃಶ್ಯತೆಯಂತಹ ಅಮಾನವೀಯ ಘಟನೆಗಳು ಸಂಭವಿಸಿದಾಗ, ಅದನ್ನು ವಿರೋಧಿಸಿ, ದಾಳಿಗೊಳಗಾದ ಸಂತ್ರಸ್ತರ ಪರ ನಿಂತು ನ್ಯಾಯ ಕೇಳುವುದು ಯಾವುದೇ ನಾಗರಿಕತೆಯು ಸಮ್ಮಾನಿಸಲೇಬೇಕಾದ ಹಕ್ಕು. ಇದು ಕೇವಲ ಸಾಂವಿಧಾನಿಕ ಹಕ್ಕಲ್ಲ, ಬದಲಾಗಿ, ಮನುಷ್ಯ ಸಮಾಜದ ಉನ್ನತಿಯನ್ನು ಬಯಸುವ ಪ್ರತಿಯೊಂದು ಜೀವಿಯ ನೈತಿಕ ಹಕ್ಕು ಸಹ ಹೌದು.

ಈ ದೃಷ್ಟಿಯಿಂದ ನೋಡಿದಾಗ, ಆಕ್ರಮಣಕ್ಕೊಳಗಾದ ಮಹಿಳೆಯರು, ತಳಸಮುದಾಯಗಳು, ದುರ್ಬಲ ವರ್ಗದ ಬಡ ಜನರು, ತಮ್ಮ ಕಳೆದುಕೊಂಡ/ಪಡೆಯಲಾಗದ ಹಕ್ಕುಗಳಿಗಾಗಿ, ಮತ್ತು ತಮ್ಮ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಹೋರಾಡುವುದನ್ನು ಸ್ವಾಗತಿಸಬೇಕಾದ್ದು ಪ್ರಜ್ಞೆ ಇರುವಂತಹ ಸಮಾಜದ ನೈತಿಕ ಆದ್ಯತೆಯಾಗಬೇಕು. ಬಾಹ್ಯ ಸಮಾಜದ ಪ್ರಜ್ಞಾವಂತ ಜನತೆ ಈ ನೊಂದ ಜನತೆಗೆ ದನಿಗೂಡಿಸುವುದು ಸಹ ಪ್ರಜ್ಞಾವಂತ ಸಮಾಜ ಒಪ್ಪಲೇಬೇಕಾದ ಹಕ್ಕು. ಭಾರತದ ಸಂವಿಧಾನ ಇದಕ್ಕೆ ಅವಕಾಶ ಕಲ್ಪಿಸುತ್ತದೆ. ಪ್ರಯಾಗದಲ್ಲಿ ನಡೆದ ಕಾಲ್ತುಳಿತದ ಸಾವುಗಳಾಗಲೀ, ಧರ್ಮಸ್ಥಳದ ಸುತ್ತಲಿನ ಪ್ರದೇಶಗಳಲ್ಲಿ ನಡೆದಿದೆ ಎನ್ನಲಾಗುವ ನೂರಾರು ಅಸಹಜ ಸಾವುಗಳಾಗಲೀ, ಪ್ರಶ್ನಾರ್ಹವಾಗುವುದು ಈ ನೆಲೆಯಲ್ಲೇ ಅಲ್ಲವೇ ? ಇದನ್ನು ವಿರೋಧಿಸಿದ ಮಾತ್ರಕ್ಕೆ ಆ ಕ್ಷೇತ್ರದ/ಪ್ರದೇಶದ ಪಾವಿತ್ರ್ಯತೆಗೆ ಧಕ್ಕೆ ಬರುವುದಿಲ್ಲ. ಅಲ್ಲಿ ಅನುಸರಿಸಲಾಗುವ ಧಾರ್ಮಿಕತೆಗೂ ಭಂಗ ಆಗುವುದಿಲ್ಲ. ಬದಲಾಗಿ ಅಲ್ಲಿನ ಸಮಾಜದಲ್ಲಿರಬಹುದಾದ ಅನಿಷ್ಠಗಳನ್ನು ಪರಿಚಯಿಸುತ್ತದೆ. ದೈವಭಕ್ತಿಗಿಂತಲೂ ಕ್ಷೇತ್ರ ಭಕ್ತಿ ತೀವ್ರತೆ ಪಡೆದುಕೊಂಡಾಗ, ಭಕ್ತಿಯ ರೂಪವೇ ಬದಲಾಗಿ, ಭಾವಾತಿರೇಕದ ಅಭಿವ್ಯಕ್ತಿಯಾಗಿಬಿಡುತ್ತದೆ.
ಭೂ ಪ್ರದೇಶಗಳಿಗೆ ಭಾವನೆಗಳು ಇರಲು ಸಾಧ್ಯವಿಲ್ಲ. ಅದನ್ನು ತನ್ನದಾಗಿಸಿಕೊಂಡು ಅದಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು ಬೆಳೆಸಿಕೊಳ್ಳುವುದು ಮಾನವ ಸಮಾಜ. ಈ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬೇಕಿರುವುದು, ಅಂತಹ ಕ್ಷೇತ್ರ/ಪ್ರದೇಶಗಳಲ್ಲಿ ದೌರ್ಜನ್ಯಗಳು ಸಂಭವಿಸಿದಾಗಲೇ ಹೊರತು, ಅಮಾನುಷ ದೌರ್ಜನ್ಯಗಳನ್ನು ವಿರೋಧಿಸಿದಾಗ ಅಲ್ಲ. ಧರ್ಮಕ್ಷೇತ್ರ ಎಂದು ಕರೆಯಲ್ಪಡುವ ಯಾವುದೇ ಮತದ ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯಾಚಾರ/ಕೊಲೆ ಇತ್ಯಾದಿಗಳು ನಡೆದಾಗ, ಸಜೀವ ಪ್ರಜ್ಞೆ ಇರುವ ಸಮಾಜವು ಧಿಗ್ಗನೆದ್ದು ಪ್ರತಿಭಟಿಸುವುದು , ನಾಗರಿಕತೆಯ ಲಕ್ಷಣ. ಆ ಘಟನೆಗಳ ಸತ್ಯಾಸತ್ಯತೆಗಳನ್ನು, ದುಷ್ಕೃತ್ಯ ಎಸಗಿದ ವ್ಯಕ್ತಿಗಳ ಅಪರಾಧ ಅಥವಾ ನಿರಪರಾಧಿತ್ವವನ್ನು ಸಾಬೀತುಪಡಿಸುವುದು ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಯ ಜವಾಬ್ದಾರಿ. ಇದನ್ನೂ ಮೀರಿ ವಿಶಾಲ ಸಮಾಜದ ಮೇಲೆ ಸಹ ಒಂದು ನೈತಿಕ-ಸಾಂವಿಧಾನಿಕ ಪ್ರಜ್ಞಾಪೂರ್ವಕ ಜವಾಬ್ದಾರಿ ಇರುವುದನ್ನು ಒಪ್ಪಲೇಬೇಕಲ್ಲವೇ ?
ಪ್ರಜ್ಞೆ ಅರಿವು ಮತ್ತು ಜವಾಬ್ದಾರಿ

ಭಾರತೀಯ ಸಮಾಜದಲ್ಲಿ ಕಳೆದುಹೋಗುತ್ತಿರುವುದು ಈ ಸಾಮಾಜಿಕ/ಸಾರ್ವಜನಿಕ ಪ್ರಜ್ಞೆ ಎನ್ನುವುದು ಹಲವಾರು ಘಟನೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಘಾಸಿಗೊಳಗಾಗುವ ಮಾನವೀಯ ಮೌಲ್ಯಗಳು ಮತ್ತು ಮಾನವತೆಯ ಔದಾತ್ಯಗಳು ಆಧುನಿಕ/ಸುಶಿಕ್ಷಿತ ಸಮಾಜವನ್ನು ಎಚ್ಚರಿಸುತ್ತಲೇ ಇರಬೇಕು. ಅಧಿಕಾರ ರಾಜಕಾರಣದ ಜನಪ್ರತಿನಿಧಿಗಳಿಗೆ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ಇದು ಅನುಷಂಗಿಕ (Secondary) ವಿಚಾರ ಎನಿಸಬಹುದು ಆದರೆ ಸಜೀವ ಪ್ರಜ್ಞೆ ಇರುವ ಸಮಾಜಕ್ಕೆ ಇದು ಆಘಾತಕರವಾಗಿ ಕಾಣಲೇಬೇಕು. ದುರಂತ ಎಂದರೆ, ನವ ಭಾರತೀಯ ಸಮಾಜದಲ್ಲಿ ಈ ಸಾಮಾಜಿಕ ಪ್ರಜ್ಞೆ ಕ್ರಮೇಣ ನಶಿಸುತ್ತಿದೆ. ಏಕೆಂದರೆ ನಾವು ಅಮಾನುಷ ಅಪರಾಧಗಳನ್ನು, ಪಾತಕ ಲೋಕವನ್ನು ಜಾತಿ, ಮತ ಮತ್ತು ಧಾರ್ಮಿಕ ಅಸ್ಮಿತೆಗಳ ಚೌಕಟ್ಟುಗಳಲ್ಲಿ ವಿಂಗಡಿಸಿ, ನಿಷ್ಕರ್ಷೆ ಮಾಡುವ ಒಂದು ಮನೋಭಾವವನ್ನು ರೂಢಿಸಿಕೊಳ್ಳುತ್ತಿದ್ದೇವೆ. ಜೊತೆಗೇ ಅನ್ಯಾಯ-ದೌರ್ಜನ್ಯಗಳನ್ನು ಸಮೀಪ ದೃಷ್ಟಿಯಿಂದ (Myopic view) ನೋಡುವ ಸಂಕುಚಿತ ಮನೋಭಾವವನ್ನೂ ರೂಢಿಸಿಕೊಂಡಿದ್ದೇವೆ. ಚಾಮುಂಡಿ ಬೆಟ್ಟದ ಪಾವಿತ್ರ್ಯತೆಯ ಬಗ್ಗೆ ಮಾತನಾಡುವವರು ಹಲವು ವರ್ಷಗಳ ಹಿಂದೆ ಅಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಾಗ, ಆಕೆಯನ್ನೇ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.
ಹೀಗೆ ಸಂತ್ರಸ್ತರನ್ನೇ ಶಂಕಿತರನ್ನಾಗಿ ನೋಡುವ ಹೊಸ ಆಲೋಚನಾ ವಿಧಾನವೇ ಮಿಲೆನಿಯಂ ಯುವ ಸಮೂಹವನ್ನು ಭ್ರಮಾಧೀನಗೊಳಿಸುತ್ತಿದೆ. ಭಾರತದಲ್ಲಿ ಪ್ರತಿ ಗಂಟೆಗೆ 51 ಮಹಿಳೆಯರು ದೌರ್ಜನ್ಯಕ್ಕೊಳಗಾಗುತ್ತಿರುವುದಾಗಿ ಅಧಿಕೃತ ವರದಿಗಳೇ ಹೇಳುತ್ತವೆ. ಮಹಿಳಾ ದೌರ್ಜನ್ಯದ ಪ್ರಮಾಣ 2018ರಲ್ಲಿ ಪ್ರತಿ ಲಕ್ಷಕ್ಕೆ ಶೇಕಡಾ 58.8ರಷ್ಟಿದ್ದುದು 2022ರ ವೇಳೆಗೆ ಶೇಕಡಾ 66.4ಕ್ಕೆ ಏರಿದೆ. 2022ರಲ್ಲೇ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 51,656. ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಹೀನ ಘಟನೆಗಳು ನಿತ್ಯ ವರದಿಯಾಗುತ್ತಿರುತ್ತವೆ. ಹಾಗಾದರೆ, ಭರತಭೂಮಿʼಯನ್ನು ದೈವೀಕರಿಸಿ ಆರಾಧಿಸುವ ಮನಸುಗಳಿಗೆ ಧಕ್ಕೆ ಉಂಟಾಗಿರಬೇಕಲ್ಲವೇ ? ನಮ್ಮ ನೆಲದಲ್ಲೆ, ನಮ್ಮವರಿಂದಲೇ ನಡೆಯುತ್ತಿರುವ ದೌರ್ಜನ್ಯ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಿಂಚಿತ್ತಾದರೂ ಕದಡಬೇಕಲ್ಲವೇ ? ಈ ಅಮಾನುಷತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಂಸ್ಕೃತಿಕ/ಧಾರ್ಮಿಕ ಸಂಸ್ಥೆಗಳು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿವೆ ?

ನಮ್ಮ ಪವಿತ್ರ ನೆಲದಲ್ಲಿ ಅಮಾನುಷ ಎನಿಸುವಂತಹ ಯಾವುದೇ ಕೃತ್ಯಗಳು ಸಂಭವಿಸಕೂಡದು ಎಂಬ ಸಾಮಾಜಿಕ ಪ್ರಜ್ಞೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ಉದ್ಧೀಪನಗೊಳಿಸುವುದು ನಾಗರಿಕತೆಯ ಲಕ್ಷಣ. ʼ ಧಾರ್ಮಿಕ ಭಾವನೆಗಳಿಗೆ ಧಕ್ಕೆ ʼ ಉಂಟಾದಾಗ ಉಗ್ರ ಪ್ರತಿಭಟನೆ ನಡೆಸುವ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾಂಪ್ರದಾಯಿಕ ಸಮಾಜಗಳು ಈ ನಿಟ್ಟಿನಲ್ಲಿ ಬಹುದೊಡ್ಡ ಅಡ್ಡಗೋಡೆಗಲಾಗಿವೆ. ಸಾಂಸ್ಥಿಕವಾಗಿ ಹಂಚಲಾಗಿರುವ ಅಸ್ಮಿತೆಯ ಮಸೂರಗಳನ್ನು ಇಡೀ ಸಮಾಜಕ್ಕೆ ತೊಡಿಸಿರುವುದರಿಂದಲೇ, ʼ ಇದು ನಮ್ಮ ಸಮಸ್ಯೆ ಅಲ್ಲ ಬಿಡಿ ʼ ಎಂಬ ಮನಸ್ಥಿತಿ ಬೇರೂರುತ್ತಿದೆ. ಈ ಮಸೂರದ ಪ್ರಭಾವದಿಂದಲೇ, ಧರ್ಮಸ್ಥಳದ ಸುತ್ತ ನಡೆದಿದೆ ಎನ್ನಲಾಗುವ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯಗಳು , ಹಿಂದುತ್ವ ರಾಜಕಾರಣವನ್ನು ಪ್ರಭಾವಿಸಿಲ್ಲ. 21ನೆ ಶತಮಾನದ ಮೂರನೆ ದಶಕದಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಯೊಂದಿಗೇ, ಡಿಜಿಟಲ್ ಯುಗವನ್ನು ಪ್ರವೇಶಿಸುತ್ತಿರುವ ನವ ಭಾರತವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮನದಲ್ಲಿ ಏಳುವ/ಏಳಬೇಕಾದ ಪ್ರಶ್ನೆ ; “ ನಮ್ಮ ಸಾಮಾಜಿಕ ಪ್ರಜ್ಞೆಗೆ ಏನಾಗಿದೆ ? ” ಎಂದಲ್ಲವೇ ?
ಮಾನವಪ್ರಜ್ಞೆಯ ಶೋಧದಲ್ಲಿ
ಧರ್ಮಸ್ಥಳದ ಸುತ್ತ ನಡೆದಿರುವ ಅಸಹಜ ಸಾವುಗಳ ವಿವಾದವೂ ಸಹ ಇದೇ ಮಾದರಿಯಲ್ಲಿ ಸಾಗುತ್ತಿದ್ದು, ಅಲ್ಲಿ ಅಮಾನುಷ ಕೃತ್ಯಗಳಿಗೆ ಬಲಿಯಾದ ಜೀವಗಳಿಗಿಂತಲೂ, ಕ್ಷೇತ್ರದ ಪಾವಿತ್ರ್ಯತೆಯನ್ನೇ ಪ್ರಧಾನವಾಗಿ ಪರಿಗಣಿಸುವ ಸಾಂಪ್ರದಾಯಿಕ ಮನಸುಗಳು , ನೊಂದ ಸಂತ್ರಸ್ತರಿಗೆ ಅವರ ಕುಟುಂಬ ಸದಸ್ಯರ ನೋವಿಗೆ ಸ್ಪಂದಿಸುತ್ತಿಲ್ಲ. “ ಧರ್ಮಸ್ಥಳಕ್ಕೆ ಧಕ್ಕೆ ಉಂಟಾಗುತ್ತಿದೆ ” ಎಂಬ ಕೂಗಿನ ಅಬ್ಬರದಲ್ಲಿ, ತಮ್ಮ ವೈಯುಕ್ತಿಕ ಘನತೆ, ಗೌರವ, ವ್ಯಕ್ತಿಗತ ಸ್ಥಾನಮಾನ, ಬದುಕಿನ ಸ್ಥಿತ್ಯಂತರಗಳಿಗೇ ಧಕ್ಕೆ ಉಂಟಾಗಿರುವ ಮಹಿಳೆಯರ, ಶೋಷಿತರ ವೇದನೆಯ ದನಿ, ಅಂತರಾಳದ ನೋವು, ನಮಗೆ ಗಟ್ಟಿಯಾಗಿ ಕೇಳಿಸಬೇಕಲ್ಲವೇ ? ಈ ಅಪರಾಧಗಳಿಗೆ ಕಾರಣ ಕ್ಷೇತ್ರವಲ್ಲ, ಅಲ್ಲಿರುವ ಒಂದು ಸಮಾಜ, ಆ ಸಮಾಜದಲ್ಲಿರುವ ವಿಕೃತ ಮನಸ್ಸುಗಳು ಮತ್ತು ಪಾತಕ ಜಗತ್ತು. ಇದನ್ನು ಹೋಗಲಾಡಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿ ಎನಿಸುವುದಿಲ್ಲವೇ ? ರಾಜಕೀಯ ಪಕ್ಷಗಳಿಗೆ ಹೀಗನಿಸುವುದಿಲ್ಲ ಏಕೆಂದರೆ, ಮತಬ್ಯಾಂಕುಗಳು ಎಲ್ಲವನ್ನೂ ನುಂಗಿಹಾಕುತ್ತವೆ.
ಅಧಿಕಾರ ರಾಜಕಾರಣದಿಂದ ಹೊರತಾಗಿ, ಒಂದು ಸಮಾಜವಾಗಿ ನಾವು ಮಾನವ ಪ್ರಜ್ಞೆಯನ್ನು ಸಾಮಾಜೀಕರಣಗೊಳಿಸುವತ್ತ, ಸಾರ್ವತ್ರೀಕರಣಗೊಳಿಸುವ ಕಡೆಗೆ ಸಾಗುವುದು ನಮ್ಮ ಆದ್ಯತೆಯಾಗಬೇಕಿದೆ. ಬಹುತ್ವ-ಸೆಕ್ಯುಲರಿಸಂ ಈ ಪದಗಳನ್ನು ಬದಿಗಿಟ್ಟು ನೋಡಿದಾಗಲು, ಮೂಲತಃ ನಾವು ಬದುಕುತ್ತಿರುವುದು ಮಾನವ ಸಮಾಜ ಎಂಬ ಪ್ರಜ್ಞೆ ನಮ್ಮೊಳಗಿರಬೇಕು. ಆ ಸಮಾಜವನ್ನು ಆರೊಗ್ಯಕರವಾಗಿ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಸಾಮಾಜಿಕ ಸಂಘಟನೆಗಳೂ ಗಂಭೀರ ಆಲೋಚನೆ ಮಾಡಬೇಕಿದೆ. ನಮ್ಮನ್ನು ನಾವು ನಾಗರಿಕತೆ ಇರುವವರು (Civilised) ಎಂದು ಗುರುತಿಸಿಕೊಳ್ಳುವುದೇ ಆದರೆ ಅನಾಗರಿಕತೆಯ ಲಕ್ಷಣಗಳನ್ನು ತೊಡೆದುಹಾಕುವುದು ನಮ್ಮ ನೈತಿಕ ಜವಾಬ್ದಾರಿ ಅಲ್ಲವೇ ? ಕಂಡೂ ಕಾಣದ ಮೌನ, ನಿಷ್ಕ್ರಿಯತೆ ಅಥವಾ ನಿರ್ಲಿಪ್ತತೆ ನಮ್ಮೊಳಗಿನ ಅಲ್ಪ ಮಾನವ ಪ್ರಜ್ಞೆಯನ್ನೂ ತೊಳೆದುಹಾಕಿಬಿಡುತ್ತದೆ. ಈ ಪ್ರಜ್ಞೆ-ಎಚ್ಚರ ನಮ್ಮಲ್ಲಿರಬೇಕು. ಆಗ ಮಿಲೆನಿಯಂ ಯುವ ಸಮೂಹಕ್ಕೆ ವರ್ತಮಾನದ ಸಮಾಜ ದಿಕ್ಸೂಚಿಯಾಗಲು ಸಾಧ್ಯ. ಇಲ್ಲವಾದಲ್ಲಿ ನಾವು ಇತಿಹಾಸದ ವಿಸ್ಮೃತಿಯ ಕೂಪದಲ್ಲೇ ಪರ್ಯಾವಸಾನಗೊಳ್ಳಬೇಕಾಗುತ್ತದೆ.
-೦-೦-೦-













