
ಕವಲು ಹಾದಿಯಲ್ಲಿರುವ ಸಮಾಜ ಹಿಮ್ಮುಖವಾಗಿ ಚಲಿಸುತ್ತಿರುವುದು ಚಾರಿತ್ರಿಕ ದುರಂತ
ನಾ ದಿವಾಕರ
ಭಾಗ 1
ಪಾರಂಪರಿಕ ಅರ್ಥದಲ್ಲಿ ಚಾರಿತ್ರಿಕವಾಗಿ ಸಾಂಸ್ಥಿಕ ಧರ್ಮಗಳನ್ನು (Institutional Religions) ಮತ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದಕ್ಕೆ ಸಂವಾದಿಯಾಗಿ ʼ ಧರ್ಮ ʼ ಎಂಬ ಪದಬಳಕೆಯನ್ನು ವಿದ್ವಾಂಸರು ಸಕಾರಣವಾಗಿ, ತಪ್ಪು ಎಂದೇ ಭಾವಿಸುತ್ತಾರೆ. ಸಾಮಾನ್ಯ ಪರಿಭಾಷೆಯಲ್ಲಿ ʼ ಧರ್ಮ ʼ ಎಂಬ ಪದವನ್ನು ಜೀವನ ಶೈಲಿಯಲ್ಲಿ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿ ನಡವಳಿಕೆಗಳಲ್ಲಿ ಹಾಗೂ ಲೌಕಿಕ ಜಗತ್ತನ್ನು ನೋಡುವ ದೃಷ್ಟಿಕೋನದಲ್ಲಿ, ಜೀವನ ವಿಧಾನವಾಗಿ ಬಳಸಲಾಗುತ್ತದೆ. ಈ ಜೀವನ ವಿಧಾನದಲ್ಲಿ ಸಮಾಜಗಳು ಅನುಸರಿಸಬೇಕಾದ ರೀತಿ ರಿವಾಜುಗಳನ್ನು, ಆಚರಣೆಗಳನ್ನು, ಸಹಮಾನವರೊಡನೆ ಬದುಕುವ ಪದ್ದತಿಗಳನ್ನು ಹಾಗೂ ಮತ ರಕ್ಷಣೆಯ ಸಲುವಾಗಿ ಅನುಸರಿಸಬೇಕಾದ ವಿಧಿ ವಿಧಾನಗಳನ್ನು ಸಾಂಸ್ಥಿಕ ಮತಗಳು ಸಂಹಿತೆಗಳ ರೂಪದಲ್ಲಿ ವಿಧಿಸುತ್ತವೆ.‘
ಇಸ್ಲಾಂ, ಕ್ರೈಸ್ತ, ಯಹೂದ್ಯ ಮತಗಳಲ್ಲಿ ಈ ಸಂಹಿತೆಗಳ ಉಲ್ಲಂಘನೆಯನ್ನು ಧರ್ಮನಿಂದನೆ ಅಥವಾ ಧರ್ಮ ದ್ರೋಹ ಎಂದೇ ಭಾವಿಸಲಾಗುತ್ತದೆ. ಕ್ರೂರ ಶಿಕ್ಷೆ ವಿಧಿಸುವ ಪದ್ಧತಿ ಇಂದಿಗೂ ಸಹ ಹಲವು ದೇಶಗಳಲ್ಲಿ, ಸಮಾಜಗಳಲ್ಲಿ ಜಾರಿಯಲ್ಲಿದೆ. ಆದರೆ ಗ್ರಾಂಥಿಕವಾಗಿ ರೂಪುಗೊಳ್ಳದ , ಸಾಂಸ್ಥೀಕರಣಕ್ಕೊಳಗಾಗದ ಹಿಂದೂ ಧರ್ಮದಲ್ಲಿ ಈ ಪರಿಕಲ್ಪನೆ ಇರುವುದಿಲ್ಲ. ಆದರೂ ಇದನ್ನು ಅಳವಡಿಸುವ ನಿಟ್ಟಿನಲ್ಲಿ ಸಂಘಪರಿವಾರದಂತಹ ಸಾಂಪ್ರದಾಯಿಕ ಶಕ್ತಿಗಳು ಪ್ರಯತ್ನಿಸುತ್ತಿರುವುದರಿಂದ, ಧರ್ಮರಕ್ಷಣೆ ಎನ್ನುವುದು, ಸಾಂಸ್ಥಿಕ ಮತವನ್ನು ಕಾಪಾಡುವ ಒಂದು ಸಾಧನವಾಗಿ ಪರಿಣಮಿಸಿದೆ. ಧರ್ಮ ಅಪಾಯದಲ್ಲಿದೆ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಹುಯಿಲು ಕೇಳಿಬರುವುದನ್ನು ಈ ಪ್ರಯತ್ನದ ಒಂದು ಭಾಗವಾಗಿ ಪರಿಗಣಿಸಬೇಕಿದೆ.
ಹಾಗಾಗಿ ಈ ಸಾಂಸ್ಥೀಕರಣ ಪ್ರಕ್ರಿಯೆಯಲ್ಲೇ ಆಚರಣೆಯ ನೆಲೆಯಲ್ಲಿ ಸ್ಥಾಪಿತವಾಗಿರುವ ಧಾರ್ಮಿಕ ಸ್ಥಳಗಳು, ಪ್ರದೇಶಗಳು, ದೇವಸ್ಥಾನಗಳು ಮತ್ತು ಮಠಮಾನ್ಯಗಳು ಸಾರ್ವತ್ರೀಕರಣಕ್ಕೊಳಗಾಗಿ, ಕೆಲವು ಮೌಲ್ಯಗಳಿಗೆ ಒಳಗಾಗಿರುತ್ತವೆ. ಮತ್ತೊಂದೆಡೆ ಸಾಮಾನ್ಯ ಜನಜೀವನದಲ್ಲಿ ಸಮಾಜಗಳು ಅನುಸರಿಸುವ ವಿಧಿವಿಧಾನಗಳು ಮತ್ತು ಅನುಕರಿಸುವ ಆಚರಣೆಗಳು ಕ್ರಮೇಣವಾಗಿ ಸಾಂಸ್ಕೃತಿಕ ಮೌಲ್ಯಗಳಾಗಿ, ಜೀವನಾದರ್ಶಗಳಾಗಿ ಪರಿವರ್ತನೆ ಹೊಂದುತ್ತವೆ. ಈ ವಿಧಿವಿಧಾನಗಳನ್ನು ಅಥವಾ ಆಚರಣೆಗಳನ್ನು ಪ್ರಶ್ನಿಸುವುದು ಅಥವಾ ಖಂಡಿಸುವುದು, ಅವುಗಳ ಹಿಂದಿನ ಮೌಢ್ಯಗಳನ್ನು ನಿಕಷ್ಕೊಡ್ಡುವುದು, ಸಾಂಸ್ಥಿಕ ನೆಲೆಯಲ್ಲಿ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಸಾಂಪ್ರದಾಯಿಕ ಶಕ್ತಿಗಳಿಗೆ ಧರ್ಮ ಮತ್ತು ಸಂಸ್ಕೃತಿಯ ನಡುವೆ ಇರುವ ವ್ಯತ್ಯಾಸದ ಅರಿವು ಇಲ್ಲದಿರುವುದರಿಂದ, ಅರಿವಿದ್ದರೂ ಅದನ್ನು ಅಲಕ್ಷಿಸುವುದರಿಂದ, ಎರಡೂ ಒಂದೇ ಎಂಬ ಸಾರ್ವಜನಿಕ ತಿಳುವಳಿಕೆ ಮೂಡಿದೆ. ನವ ಭಾರತ ಈ ಒಂದು ಮನ್ವಂತರದ ದಿಕ್ಕಿನಲ್ಲಿ ಚಲಿಸುತ್ತಿರುವುದನ್ನು ಗಮನಿಸಬಹುದು.

ಡಿಜಿಟಲ್ ಯುಗದ ವೈಚಿತ್ರ್ಯಗಳು
ಆದರೆ ನಾವು 21ನೆ ಶತಮಾನದ ಡಿಜಿಟಲ್ ವಿಜ್ಞಾನದ ಉತ್ತುಂಗ ಯುಗದಲ್ಲಿದ್ದೇವೆ ಎಂಬ ಪ್ರಜ್ಞೆ ಇರುವುದೇ ಆದಲ್ಲಿ, ಈ ಸಾಂಸ್ಥೀಕರಣಕ್ಕೊಳಗಾದ ಮತಗಳು, ಧಾರ್ಮಿಕ ಜೀವನ ಶೈಲಿಯಾಗಿ ಪರಿವರ್ತನೆಯಾಗಿರುವ ಧಾರ್ಮಿಕ ಆಚರಣೆಗಳು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದನ್ನು ಅಪೇಕ್ಷಿಸಬೇಕಲ್ಲವೇ ? ಕೇಂದ್ರ ಸಚಿವರೊಬ್ಬರು ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಭಗವಾನ್ ಹನುಮಂತ ಎಂದು ಹೇಳುವುದನ್ನು ನೋಡಿದಾಗ, ನಾವು ಬೌದ್ಧಿಕವಾಗಿ ಇನ್ನೂ ಎಷ್ಟು ಹಿಂದುಳಿದಿದ್ದೇವೆ ಎಂದು ಗಾಬರಿಯಾಗುತ್ತದೆ. ಇದನ್ನು ರಾಜಕೀಯ ನೆಲೆಯಲ್ಲಿ ನಿರ್ಲಕ್ಷಿಸಬಹುದಾದರೂ, ಕಳೆದ ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಅದರಿಂದ ಉದ್ಭವಿಸಿರುವ ಮತೀಯ ದೃಷ್ಟಿಕೋನವನ್ನು ಗಮನಿಸಿದಾಗ, ಭಾರತದ ಇಂದಿನ ವಿಶಾಲ ಸಮಾಜವನ್ನು ಅತಿ ಹೆಚ್ಚು ಕಾಡುತ್ತಿರುವ ವ್ಯಥೆ ಎಂದರೆ “ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ” ಒಂದು ವಿದ್ಯಮಾನ. ಈ ಸಚಿವರ ವ್ಯಾಖ್ಯಾನವನ್ನು ಪ್ರಶ್ನಿಸುವುದೂ ಇದೇ ಸೂತ್ರಕ್ಕೆ ಒಳಪಡಬಹುದು.
ಜನಸಾಮಾನ್ಯರ ಧಾರ್ಮಿಕ ಭಾವನೆಗೂ, ಸಾಂಸ್ಥಿಕ ನೆಲೆಯ ಮತ ಅಥವಾ ಧರ್ಮದ ಸ್ಥಾವರಗಳಿಗೂ ನಡುವೆ ಅಪಾರ ಅಂತರವಿರುವುದನ್ನು ಈಗಲಾದರೂ ಗುರುತಿಸಬೇಕಲ್ಲವೇ ? ಬಾಹ್ಯಾಕಾಶದ ಪಯಣ, ಅನ್ಯ ಗ್ರಹಗಳ ಶೋಧನೆ ಇವೆಲ್ಲವೂ ವಿಜ್ಞಾನದ ಸಾಧನೆಗಳು ಆದರೆ ವೈಜ್ಞಾನಿಕ ಸಮಾಜ ಎಂದರೆ ಈ ಬೌದ್ಧಿಕ ಜ್ಞಾನಶಾಖೆಗಳನ್ನೂ ದಾಟಿ, ಆಧುನಿಕ ಸಮಾಜಕ್ಕೆ , ಭವಿಷ್ಯದ ತಲೆಮಾರಿಗೆ ಅಗತ್ಯವಾದಂತಹ ಒಂದು ವೈಚಾರಿಕ-ಪ್ರಬುದ್ಧ ಮನಸ್ಸುಗಳನ್ನು ಉತ್ಪಾದಿಸುವ ಕಾರ್ಖಾನೆ ಆಗಬೇಕಲ್ಲವೇ ? ಈ ಸಮಾಜವನ್ನು ನಿರ್ದೇಶಿಸುವ, ನಿಯಂತ್ರಿಸುವ, ನಿರ್ವಹಿಸುವ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರೂಪಿಸುವ ಜವಾಬ್ದಾರಿಯನ್ನು ಸಮಾಜದ ಕಲಿತ ವರ್ಗ ಅಥವಾ ವಿದ್ಯಾವಂತ ಸುಶಿಕ್ಷಿತ ವರ್ಗ ವಹಿಸಿಕೊಳ್ಳಬೇಕಲ್ಲವೇ ? ಹಾಗಾದಾಗ ಭಗವಂತ ಹನುಮಾನನ ಬಗ್ಗೆ ನಂಬಿಕೆ ಗೌರವ ಇದ್ದವರೂ ಸಹ, ಈ ಹೇಳಿಕೆಯನ್ನು ಒಪ್ಪದಿರುವ ಸಾಧ್ಯತೆಗಳಿರುತ್ತವೆ.

ಈ ಜವಾಬ್ದಾರಿಯು ಸಮಾಜದ ಕೈತಪ್ಪಿ ಹೋಗಿ, ಮತೀಯ ರಾಜಕಾರಣದ ವಾರಸುದಾರರಲ್ಲಿ, ಅವರನ್ನು ಕಾಪಾಡುವ ರಾಜಕೀಯ ಪಕ್ಷಗಳಲ್ಲಿ ಅಥವಾ ಸಂಕುಚಿತ ಮನೋಭಾವದ ಸಂಘಟನೆಗಳಲ್ಲಿ ನೆಲೆಗೊಂಡಾಗ, ಅಲ್ಲಿ ಸಾಂಸ್ಥಿಕ ಮತ, ಆಚರಣಾತ್ಮಕ ಧರ್ಮ ಮತ್ತು ಈ ಧರ್ಮವನ್ನು ಪ್ರತಿನಿಧಿಸುವ ನಿರ್ದಿಷ್ಟ ಭೂ ಪ್ರದೇಶಗಳು ಒಂದೇ ಆಗಿಬಿಡುತ್ತವೆ. ದಸರಾ ಉದ್ಘಾಟಿಸಲು ಆಹ್ವಾನಿತರಾಗಿರುವ ಸಾಹಿತಿ ಬಾನು ಮುಷ್ತಾಕ್ ಅವರ ಬಗ್ಗೆ ಕೆಲವು ಬಿಜೆಪಿ ನಾಯಕರ ಅಭಿಪ್ರಾಯಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಚಾಮುಂಡಿ ಬೆಟ್ಟ ಮತ್ತು ಬೆಟ್ಟದ ತಪ್ಪಲು, ಆ ಭೂ ಪ್ರದೇಶ , ಚಾಮುಂಡಿ ದೇವಿಯನ್ನು ಮಾನ್ಯ ಮಾಡದ ಅಥವಾ ಗೌರವಿಸದ-ಪೂಜಿಸದ ವ್ಯಕ್ತಿಗಳಿಗೆ ಅಸ್ಪೃಶ್ಯವಾಗಿಬಿಡುತ್ತದೆ. ಬಾನು ಮುಷ್ತಾಕ್ ಅವರಿಗೆ ಚಾಮುಂಡಿ ಬೆಟ್ಟ ಹತ್ತಲು ಅವಕಾಶ ನೀಡಕೂಡದು ಎಂಬ ಬಿಜೆಪಿಯ ಮಹಿಳಾ ಸಂಸದೆಯ ಕರೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಸಾಂಸ್ಥೀಕರಣದ ಪ್ರಭಾವ-ಪರಿಣಾಮ
ಸಾಂಸ್ಥೀಕರಣಕ್ಕೊಳಗಾದ ಮತ ಮತ್ತು ಧಾರ್ಮಿಕ ನಂಬಿಕೆಗಳು ಜನಸಾಮಾನ್ಯರ ಅಂಗಳವನ್ನು ದಾಟಿ ಸಾರ್ವಜನಿಕ ವಲಯದ ಅಭಿವ್ಯಕ್ತಿಯಾಗಿ ಪರಿಣಮಿಸಿದಾಗ, ಈ “ನಂಬಿಕೆಗಳಿಗೆ ಧಕ್ಕೆ ಉಂಟಾಗುವ” ಪ್ರಸಂಗಗಳು ಸಾಮಾಜಿಕ ಸಮಸ್ಯೆಯಾಗಿ, ಕ್ರಮೇಣ ವ್ಯಸನವಾಗಿ, ಅನ್ಯರನ್ನು ದ್ವೇಷಿಸುವ ಸಾಧನಗಳಾಗಿ ಪರಿವರ್ತನೆಯಾಗುತ್ತದೆ. ಇದರ ನಿರೂಪಣೆಗಳ ಹಕ್ಕನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮದಾಗಿಸಿಕೊಳ್ಳುತ್ತವೆ. ಇಲ್ಲಿ ವ್ಯಕ್ತಿಗತ ಅಥವಾ ವ್ಯಷ್ಟಿ ನೆಲೆಯ ಭಾವನೆಗಳು ನಗಣ್ಯವಾಗಿ, ಸಮಷ್ಟಿ ನೆಲೆಯಲ್ಲೇ ಇಡೀ ಸಮಸ್ಯೆಯನ್ನು ಬಿಂಬಿಸುವ ಪ್ರಕ್ರಿಯೆಯೂ ಚುರುಕಾಗುತ್ತದೆ. ಕೋಮು ರಾಜಕಾರಣಕ್ಕೆ, ಮತದ್ವೇಷದ ಸಾಂಘಿಕ ಚಟುವಟಿಕೆಗಳಿಗೆ ಇದು ಪ್ರಶಸ್ತ ಭೂಮಿಕೆಯಾಗಿಬಿಡುತ್ತದೆ. ತಳಮಟ್ಟದ ಸಮಾಜದಲ್ಲಿ ಸಾಮಾನ್ಯ ಜನರು ತಮ್ಮ ವೈಯುಕ್ತಿಕ ಶ್ರದ್ಧೆ-ನಂಬಿಕೆ-ಸದ್ಭಾವನೆಗಳನ್ನು ನಾಲ್ಕು ಗೋಡೆಗಳ ನಡುವೆ, ಎದೆಯಾಳದಲ್ಲಿ ಹುದುಗಿಸಿಕೊಂಡು ತಮ್ಮ ಪಾಡಿಗೆ ತಾವಿದ್ದರೂ, ಬಾಹ್ಯ ಜಗತ್ತಿನಲ್ಲಿ ಇದೇ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಕೂಗು, ಇಡೀ ಸಮಾಜವನ್ನು ಪ್ರಕ್ಷುಬ್ಧಗೊಳಿಸುತ್ತದೆ. ಪಾಕಿಸ್ತಾನವನ್ನೂ ಒಳಗೊಂಡಂತೆ, ಇಸ್ಲಾಮಿಕ್ ಮೂಲಭೂತವಾದ ಪ್ರಧಾನವಾಗಿರುವ ಮುಸ್ಲಿಂ ರಾಷ್ಟ್ರಗಳಲ್ಲಿ ಈ ವಿದ್ಯಮಾನ ಢಾಳಾಗಿ ಕಾಣುತ್ತದೆ. ಈಗ ಭಾರತವೂ ಒಂದು ನೆಲೆಯಲ್ಲಿ ಇದೇ ದಿಕ್ಕಿನಲ್ಲಿ ಸಾಗುತ್ತಿದೆ.

ಈ ಭಾವನೆಗಳು ಸಾಮಾಜಿಕವಾಗಿ ಮಡುಗಟ್ಟಿದಾಗ, ಸಾಂಸ್ಕೃತಿಕವಾಗಿ ಜಡಗಟ್ಟಿದಾಗ, ಮತೀಯ ಮೂಲಭೂತವಾದಿಗಳು ಕ್ರಮವಾಗಿ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಈ ಬೆಳವಣಿಗೆಯನ್ನು ಬಳಸಿಕೊಳ್ಳಲಾರಂಭಿಸುತ್ತಾರೆ. ಆಗ ಒಂದು ಧಾರ್ಮಿಕ ಸ್ಥಳ, ಪ್ರದೇಶ ಅಥವಾ ವಲಯ ಪ್ರಶ್ನಾತೀತವಾಗಿಬಿಡುತ್ತದೆ. ಅಲ್ಲಿ ಸಹಜವಾಗಿ ನಡೆಯಬಹುದಾದ ಅನ್ಯಾಯಗಳು, ದೌರ್ಜನ್ಯಗಳು ಮತ್ತು ತಾರತಮ್ಯಗಳೆಲ್ಲವೂ ಸಹನೀಯವಾಗಿ, ಅದನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ಆಲೋಚನೆಯೇ ಮಹಾಪರಾಧವಾಗಿ ಬಿಂಬಿಸಲ್ಪಡುತ್ತದೆ. ಒಂದು ಧರ್ಮಕ್ಷೇತ್ರದಲ್ಲಿ ಇವೆಲ್ಲವೂ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಸಾಮಾನ್ಯರನ್ನೂ ಆವರಿಸುವ ಮೂಲಕ, ವಾಸ್ತವವಾಗಿ ನಡೆಯಬಹುದಾದ ದುಷ್ಕೃತ್ಯಗಳು, ಅಪರಾಧಗಳು, ಅಮಾನುಷ ಚಟುವಟಿಕೆಗಳು ಹಾಗೂ ಸಮಾಜದಲ್ಲಿ ಬೇರೂರಿರುವ ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಎಂಬ ಚಿಂತನೆಗಳ ದುಷ್ಪರಿಣಾಮಗಳು ಪ್ರಶ್ನಾತೀತವಾಗಿಬಿಡುತ್ತದೆ.
ಆದರೆ ಸಾಂಸ್ಥಿಕ ಮತ ಮತ್ತು ಧಾರ್ಮಿಕ ಆಚರಣೆಗಳು ಜನಸಾಮಾನ್ಯರ ನಡುವೆ ಎಷ್ಟೇ ಆಳವಾಗಿ ಬೇರೂರಿದ್ದರೂ, ತನ್ನ ಪ್ರಾಚೀನ ಸಂಹಿತೆಗಳನ್ನಾಧರಿಸಿದ ಮೌಲ್ಯಗಳು ಜನರನ್ನು ಎಷ್ಟೇ ಪ್ರಭಾವಿಸಿದ್ದರೂ, ಮನುಷ್ಯ ಸಮಾಜದ ನಿತ್ಯ ವರ್ತನೆ, ಧೋರಣೆ, ನಡವಳಿಕೆ ಮತ್ತು ಚಟುವಟಿಕೆಗಳನ್ನು ರೂಪಿಸುವುದು ವರ್ತಮಾನದ ಸಮಾಜವೇ ಹೊರತು ಚರಿತ್ರೆಯ ಅರಿವು ಅಲ್ಲ. ಈ ನಡವಳಿಕೆಗಳನ್ನು ಸರಿದಾರಿಯಲ್ಲಿ ನಿರ್ವಹಿಸಲು ಚಾರಿತ್ರಿಕ-ಧಾರ್ಮಿಕ ಐತಿಹ್ಯಗಳು ನೆರವಾಗಬಹುದಾದರೂ ಅಂತಿಮವಾಗಿ ನಿರ್ಣಾಯಕವಾಗುವುದು ಆಧುನಿಕ ಜಗತ್ತು ನಿರ್ಮಿಸಿರುವ ಸಾಮಾಜಿಕ ಚೌಕಟ್ಟುಗಳು, ಸಾಂಸ್ಕೃತಿಕ ಭೂಮಿಕೆಗಳು ಮತ್ತು ಆರ್ಥಿಕ ಚಿಂತನಾಧಾರೆಗಳು. ಇವುಗಳನ್ನು ಮೂಲತಃ ಪ್ರಭಾವಿಸುವುದು ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ ಪ್ರಬಲವಾಗಿರುವ ವರ್ಗಗಳು. ವರ್ತಮಾನದಲ್ಲಿ ಕಾರ್ಪೋರೇಟ್ ಮಾರುಕಟ್ಟೆಯ ವಾಣಿಜ್ಯ ಹಿತಾಸಕ್ತಿಗಳು ಇಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.

ಪ್ರಜಾತಂತ್ರ- ಅರಿವು ಮತ್ತು ಆಚರಣೆ
ಈ ವರ್ಗಗಳೇ ಪ್ರಜಾಪ್ರಭುತ್ವದಲ್ಲೂ ಸಮಸ್ತ ಸಮಾಜವನ್ನು ನಿರ್ಬಂಧಿಸುವ, ನಿರ್ದೇಶಿಸುವ ಮತ್ತು ಹತೋಟಿಯಲ್ಲಿಡುವ ಹಕ್ಕನ್ನು ತಮಗೆ ತಾವೇ ಅರ್ಪಿಸಿಕೊಳ್ಳುವುದರಿಂದ, ಆಳುವ ವರ್ಗಗಳ ಭಾಷೆಯೇ ಸಮಾಜದ ಭಾಷೆಯೂ ಆಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರಜಾಪ್ರಭುತ್ವವನ್ನು ರಾಜಕೀಯದಿಂದ ಹೊರತಾಗಿ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲೂ ವಿಸ್ತರಿಸಲು ಕರೆ ನೀಡಿದ್ದು ಈ ಕಾರಣಕ್ಕಾಗಿಯೇ. ಬಾಬಾಸಾಹೇಬರ ಈ ಕಳಕಳಿಯ ಕರೆ ಹಾಳೆಗಳಲ್ಲಿ ಉಳಿದಿರುವುದು ವಾಸ್ತವ. ಸಮಾಜದ ಸೂತ್ರಧಾರಿಗಳಾಗಿ ಈ ಪ್ರಬಲ ವರ್ಗಗಳು, ಪ್ರಾಚೀನ ಪದ್ಧತಿಗಳನ್ನು, ಆಚರಣೆಗಳನ್ನು, ನಂಬಿಕೆಗಳನ್ನು ಮತ್ತು ಮೌಲ್ಯಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿ, ಆಧುನಿಕೀಕರಣಕ್ಕೆ ತೆರೆಯದೆ ಹೋದಾಗ, ಮಧ್ಯಕಾಲೀನ ಯುಗದ ಜೀವನಾದರ್ಶ ಮೌಲ್ಯಗಳೇ ಇಡೀ ಸಮಾಜವನ್ನು ಆವರಿಸುತ್ತವೆ. ಭಾರತದಲ್ಲಿ ಇಂದಿಗೂ ಪಿತೃಪ್ರಧಾನತೆ, ಊಳಿಗಮಾನ್ಯತೆ, ಮಹಿಳಾ ಅಧೀನತೆ, ಜಾತಿ ತಾರತಮ್ಯ ಮತ್ತು ಯಜಮಾನಿಕೆಯ ದೌರ್ಜನ್ಯಗಳು ಜೀವಂತವಾಗಿದೆ ಎಂದರೆ, ಭಾರತದ ಪ್ರಜಾಪ್ರಭುತ್ವೀಯ ಸಮಾಜ ಇನ್ನೂ ಸಹ ಆಧುನಿಕ ನಾಗರಿಕತೆಗೆ ತೆರೆದುಕೊಂಡಿಲ್ಲ ಎಂದೇ ಭಾವಿಸಬೇಕಾಗುತ್ತದೆ.
ಈ ವಾತಾವರಣದಲ್ಲೇ “ಧಾರ್ಮಿಕ ಭಾವನೆಗಳಿಗೆ ಧಕ್ಕೆ” ಎನ್ನುವ ಒಂದು ಮನೋಭಾವ ಭಾರತೀಯ ಸಮಾಜವನ್ನು ಪದೇಪದೇ ಪ್ರಕ್ಷುಬ್ಧತೆಯೆಡೆಗೆ ನೂಕುತ್ತಾ ಬಂದಿದೆ. ಕಳೆದ ಮೂರು ದಶಕಗಳಲ್ಲಿ ಈ ಘೋಷಣೆ ಸಾಂಸ್ಥೀಕರಣಗೊಂಡಿದ್ದು, ಸಾಂವಿಧಾನಿಕ ಸಂಸ್ಥೆಗಳೂ ಸಹ ಇದೇ ಪ್ರಮೇಯವನ್ನು ಆಧರಿಸಿ, ಆಡಳಿತ ಸೂತ್ರಗಳನ್ನು, ನಿಬಂಧನೆಗಳನ್ನು ರೂಪಿಸುತ್ತಿರುವುದನ್ನು ಗಮನಿಸಬೇಕಿದೆ. ಮಿಲೆನಿಯಂ ಸಮಾಜದ ಅಥವಾ ನವ ಭಾರತದ ಯುವ ಸಂಕುಲದ ದೃಷ್ಟಿಯಿಂದ ನೋಡಿದಾಗ , ಭಾರತ ಪರಂಪರಾನುಗತವಾಗಿ ರೂಢಿಸಿಕೊಂಡು ಬಂದಿದ್ದ ಜೀವನ ಮೌಲ್ಯಗಳು ಕ್ಷೀಣಿಸುತ್ತಿರುವುದನ್ನೂ ಗಮನಿಸಬೇಕಿದೆ. ಇದಕ್ಕೆ ಕಾರಣ ಸಾಂಸ್ಕೃತಿಕ ರಾಜಕಾರಣ ಮತ್ತು ಸೈದ್ದಾಂತಿಕ ಅಸ್ಮಿತೆಗಳ ನೆಲೆಯಲ್ಲಿ ಭಾರತದ ಜನಸಂಸ್ಕೃತಿ, ಬಹುತ್ವ ಮತ್ತು ಸಮನ್ವಯದ ಹಾದಿಗಳನ್ನು ಅಲ್ಲಗಳೆಯುವ, ನಿರಾಕರಿಸುವ ಅಥವಾ ಅವಮಾನಿಸುವ ಒಂದು ಹೊಸ ಪರಂಪರೆಯನ್ನು ಅನುಸರಿಸಲಾಗುತ್ತಿದೆ.
ಅಸ್ಮಿತೆಗಳ ಚೌಕಟ್ಟು ಮತ್ತು ಸಂಕೋಲೆ
ದಾರ್ಶನಿಕ ಚಿಂತಕರನ್ನು ಜಾತಿ ಅಸ್ಮಿತೆಗಳಲ್ಲಿ ಅಥವಾ ಮತೀಯ ಚೌಕಟ್ಟುಗಳಲ್ಲಿ ಕಟ್ಟಿಹಾಕುವ ಮೂಲಕ, ವಾಲ್ಮೀಕಿ-ವ್ಯಾಸರಿಂದ ಅಂಬೇಡ್ಕರ್ವರೆಗಿನ ತಾತ್ವಿಕ ಆಲೋಚನಾ ವಿಧಾನಗಳನ್ನು ಆಧುನಿಕ ಭಾರತ ಸೀಮಿತ ವಲಯಗಳಲ್ಲಿ ಬಂಧಿಸಿದೆ. ಸಹಜವಾಗಿಯೇ ಭಿನ್ನ ಆಲೋಚನಾ ಕ್ರಮಗಳೆಲ್ಲವೂ ʼ ಅನ್ಯ ಅಥವಾ ಬಾಹ್ಯ ʼ ಎನಿಸಿಕೊಳ್ಳುತ್ತವೆ. ಯಾವ ಯುಗದ ಚಾರಿತ್ರಿಕ ಅರಿವೂ ಇಲ್ಲದ ಬೃಹತ್ ಸಂಖ್ಯೆಯ ಮಿಲೆನಿಯಂ ಮಕ್ಕಳಿಗೆ 2014ರ ನಂತರದ ಭಾರತ ಮಾತ್ರ ಕಾಣಿಸುವುದು ಈ ಕಾರಣದಿಂದಲೇ. ರಾಜಕೀಯ ಹಾಗೂ ಬೌದ್ಧಿಕ ಸಂಕಥನಗಳು ತಮ್ಮ ಸಾರ್ವಕಾಲಿಕತೆ ಮತ್ತು ಸಾರ್ವತ್ರಿಕತೆಯನ್ನು ಕಳೆದುಕೊಂಡಾಗ ಹೀಗಾಗುವುದು ಸಹಜ. ಆದರೆ ಭಾರತದಲ್ಲಿ ಇದು ಅತಿರೇಕಕ್ಕೆ ಹೋಗಿದ್ದು, ಒಪ್ಪದ ಚಿಂತನೆಗಳೊಡನೆ ಅನುಸಂಧಾನ ಮಾಡುವುದರ ಬದಲು ನಿರಾಕರಿಸುವ ಅಥವಾ ಅಲ್ಲಗಳೆಯುವ ಮನೋಭಾವ ಹೆಚ್ಚಾಗುತ್ತಿದೆ.
ಹಾಗಾಗಿಯೇ ನಮ್ಮನ್ನು ಆವರಿಸಿರುವ ಮತ್ತು ಪ್ರಭಾವಿಸುತ್ತಿರುವ ಮೌಲ್ಯಗಳು ಕೋಶೀಕರಣಕ್ಕೊಳಗಾಗಿ (Cellularisation) ಸಮಾಜದ ವಿವಿಧ ವರ್ಗಗಳು, ಜಾತಿ ಮತಗಳು, ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುವ ಸಿದ್ಧ ಮಾದರಿಗಳನ್ನು ಅನುಸರಿಸುತ್ತಿವೆ. ವಿಶೇ಼ಷವಾಗಿ ಸಾಂಸ್ಕೃತಿಕ ಸಂಕಥನಗಳಲ್ಲಿ ಸಿದ್ಧಪಡಿಸಲಾಗುತ್ತಿರುವ ತಾತ್ವಿಕ ಅಚ್ಚುಗಳು (Moulds) ಮತ್ತು ಶೈಕ್ಷಣಿಕ ಹಾಗೂ ಬೌದ್ಧಿಕ (Educational & Academic) ಸಂವಾದಗಳೆಲ್ಲವೂ, ಒಂದು ನಿರ್ದಿಷ್ಟ ಅಚ್ಚಿನಲ್ಲಿ ಎರೆದು ಸಿದ್ಧಪಡಿಸಲಾದ ಸಿದ್ಧ ಮೌಲ್ಯಗಳನ್ನು (Moulded Values) ಮರುರೂಪಿಸುತ್ತಿವೆ. ಇದು ಬಹುತ್ವ ಭಾರತಕ್ಕೆ ಎದುರಾಗಿರುವ ಬಹುದೊಡ್ಡ ಸವಾಲೂ ಹೌದು, ತೊಡಕೂ ಹೌದು. ಎಲ್ಲ ಚಿಂತನೆಗಳನ್ನೂ ಸಮಕಾಲೀನಗೊಳಿಸಿ ವರ್ತಮಾನದ ಸಮಾಜಕ್ಕೆ ಅಗತ್ಯವಾದ ರೀತಿಯಲ್ಲಿ ಮರು ವ್ಯಾಖ್ಯಾನಕ್ಕೊಳಪಡಿಸಬೇಕಾದ ತುರ್ತು ಹೆಚ್ಚಾಗಿದ್ದರೂ, ವಿಶಾಲ ಸಮಾಜ ಮತ್ತು ಅದರೊಳಗಿನ ಪ್ರಬಲ ವರ್ಗಗಳು ಈ ತುರ್ತು ಕದವನ್ನು (Emergency Door) ತೆರೆಯಲು ಅವಕಾಶವನ್ನೇ ಕೊಡುತ್ತಿಲ್ಲ. ಮಿಲೆನಿಯಂ ಮಕ್ಕಳನ್ನು ಕತ್ತಲ ಕೂಪಕ್ಕೆ ತಳ್ಳುತ್ತಿರುವುದು ಈ ವಿದ್ಯಮಾನ ಎನ್ನುವುದು ಯೋಚಿಸಬೇಕಾದ ವಿಚಾರ.

ಹಾಗಾಗಿಯೇ ಸಮಾಜದಲ್ಲಿ ಸಂಭವಿಸುವ ಯಾವುದೇ ವ್ಯತ್ಯಯಗಳು, ಸಾರ್ವಜನಿಕ ಸಂಕಥನಗಳಲ್ಲಿ ವ್ಯಕ್ತವಾಗುವ ಭಿನ್ನ ತಾತ್ವಿಕ ಅಭಿಪ್ರಾಯಗಳು, ಸುತ್ತಲಿನ ಪರಿಸರದಲ್ಲಿ ಘಟಿಸುವ ಅಮಾನುಷ ಘಟನೆಗಳು ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೊಳಗಾಗುವ ವಿಚಾರಗಳು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಲು ಸಾಧ್ಯವಾಗುತ್ತಿಲ್ಲ. ಯಾವುದೋ ಒಂದು ನಿರ್ದಿಷ್ಟ ಗುಂಪು, ಪಂಗಡ ಅಥವಾ ಸಮುದಾಯದ “ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ” ಅಥವಾ ವ್ಯಕ್ತಿ ಆರಾಧನೆಯ ನೆಲೆಯಲ್ಲಿ ರೂಢಿಗತವಾಗಿರುವ “ ಸಾಮುದಾಯಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ” ಕೂಗು ಸಮಾಜದಲ್ಲಿ ಹುಯಿಲೆಬ್ಬಿಸುತ್ತದೆ. ಭಾವತಿರೇಕದ ಪ್ರತಿಕ್ರಿಯೆಗಳು, ಭಾವಾವೇಷದ ಟೀಕೆ ಮತ್ತು ವಿಮರ್ಶೆಗಳು, ಸಾಮಾಜಿಕ ಸೌಹಾರ್ದತೆಯನ್ನೇ ಭಂಗಗೊಳಿಸುವ ರೀತಿಯಲ್ಲಿ ಪ್ರಕಟವಾಗುತ್ತವೆ.
ಯಜಮಾನಿಕೆಯ ಭೂಮಿಕೆಗಳಲ್ಲಿ
ವಿಪರ್ಯಾಸವೆಂದರೆ, ಕಳೆದ ಮೂರ್ನಾಲ್ಕು ದಶಕಗಳಲ್ಲಿ ದೇಶದ ತಳಸಮುದಾಯಗಳು, ಶೋಷಿತರು, ಅಲ್ಪಸಂಖ್ಯಾತರು, ಮಹಿಳೆಯರು, ಆದಿವಾಸಿ ಬುಡಕಟ್ಟು ಸಮಾಜಗಳು ಹಾಗೂ ಹಿಂದುಳಿದ ದುರ್ಬಲ ವರ್ಗಗಳು ಸಾಗಿಬಂದಿರುವ ಕಠಿಣ ಹಾದಿಯಲ್ಲಿ “ ಮಾನವೀಯತೆಗೆ ಧಕ್ಕೆ ಉಂಟಾಗಿರುವ ” ಒಂದು ಕೂಗು ಆಗಲೀ, ಅದರ ವಿರುದ್ಧ ಪ್ರತಿರೋಧವಾಗಲೀ, ಸಾರ್ವಜನಿಕವಾಗಿ ದಾಖಲಾಗಿರುವುದನ್ನು ಕಾಣಲಾಗುವುದಿಲ್ಲ. ತೆರೆದ ಹೃದಯ, ಮುಕ್ತ ಮನಸ್ಸಿನಿಂದ ಹಿಂತಿರುಗಿ ನೋಡಿದಾಗ, ಈ ರೀತಿ ಮಾನವೀಯತೆಗೆ ಧಕ್ಕೆ ಉಂಟುಮಾಡಿದಂತಹ ನೂರಾರು ಘಟನೆಗಳು ಸಂಭವಿಸಿವೆ. ಆದರೆ ಅವೆಲ್ಲವನ್ನೂ ನಾವೇ ಕಟ್ಟಿಕೊಂಡ ಅಸ್ಮಿತೆಗಳ ಚೌಕಟ್ಟುಗಳಲ್ಲಿಟ್ಟು ನೋಡಿದ್ದೇವೆಯೇ ಹೊರತು, ಠಾಗೋರ್-ಕುವೆಂಪು ಹೇಳುವ ವಿಶ್ವಮಾನವತೆಯ ಪರಿಕಲ್ಪನೆಯಲ್ಲಿ ನೋಡಲಾಗಿಲ್ಲ.
ಹಾಗಾಗಿಯೇ ಇಂದು ಧಾರ್ಮಿಕ ಕ್ಷೇತ್ರಗಳು, ತೀರ್ಥಯಾತ್ರಾ ಸ್ಥಳಗಳು, ಧರ್ಮ-ಅಧ್ಯಾತ್ಮದ ಸ್ಥಾವರಗಳು ಹಾಗೂ ಅವುಗಳ ಸುತ್ತಲಿನ ಭೂ ಪ್ರದೇಶಗಳು ವಿಶಾಲ ಸಮಾಜದ ಆಸ್ತಿಯಾಗಿ ಉಳಿಯದೆ, ನಿರ್ದಿಷ್ಟ ಧಾರ್ಮಿಕ-ಜಾತೀಯ-ಆಧ್ಯಾತ್ಮಿಕ ಸಂಸ್ಥೆಗಳ ಯಜಮಾನಿಕೆಗಳಿಗೆ ಒಳಪಡುತ್ತಿವೆ. ಸಾರ್ವಜನಿಕ ಆಸ್ತಿಯಾಗಿ ಸಕಲರಿಗೂ ಮುಕ್ತವಾಗಿರಬೇಕಾದ ಶ್ರದ್ಧಾ ನಂಬಿಕೆಯ ತಾಣಗಳು ಕೆಲವರನ್ನು ಹೊರಗಿಡುವ ಅಥವಾ ಬಹಿಷ್ಕರಿಸುವ ವ್ಯಾವಹಾರಿಕ ವಲಯಗಳಾಗಿ ಪರಿವರ್ತನೆಯಾಗುತ್ತಿವೆ. ನವ ಉದಾರವಾದದ ಕಾರ್ಪೋರೇಟ್ ಮಾರುಕಟ್ಟೆಯ ಪ್ರಭಾವಕ್ಕೊಳಗಾಗಿ, ಈ ತಾಣಗಳನ್ನು ಒಂದೆಡೆ ಪ್ರವಾಸೋದ್ಯಮ ಮತ್ತೊಂದೆಡೆ ಜನಸಾಮಾನ್ಯರ, ನಂಬಿಕಸ್ಥರ ನಂಬಿಕೆಗಳನ್ನು, ಏಕಕಾಲಕ್ಕೆ ನಿಯಂತ್ರಿಸುವ ಔದ್ಯಮಿಕ ಹಿತಾಸಕ್ತಿಗಳು ಪ್ರಾಬಲ್ಯ ಗಳಿಸುತ್ತವೆ. ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಮಾರುಕಟ್ಟೆ ಹಿತಾಸಕ್ತಿಯನ್ನು ಕಾಪಾಡಲು ಟೊಂಕ ಕಟ್ಟಿ ನಿಂತಿರುತ್ತವೆ. ಇಲ್ಲಿ ಬಲಿಯಾಗುವುದು ಸಾಮಾಜಿಕ ಪ್ರಜ್ಞೆ ಮತ್ತು ಸಮನ್ವಯ ಭಾವ.
ಈ ನೆಲಗಳಲ್ಲಿ ಸಂಭವಿಸುವ ಘಟನೆಗಳು “ ಭಾವನೆಗಳಿಗೆ ಧಕ್ಕೆ ” ಉಂಟುಮಾಡಿದ ಕೂಡಲೇ ಇಡೀ ಸಮಾಜವೇ ಇದರಿಂದ ಬಾಧಿತವಾಗಿವೆ ಎಂದು ಬಿಂಬಿಸುವ ಮೂಲಕ, ಪಟ್ಟಭದ್ರ ಹಿತಾಸಕ್ತಿಗಳು ಇಡೀ ಪ್ರಸಂಗವನ್ನೇ ಸಾರ್ವತ್ರೀಕರಿಸಿ, ಸಾಮಾಜಿಕ ಸೌಹಾರ್ದವನ್ನು ಭಂಗಗೊಳಿಸಲು ಸಜ್ಜಾಗುತ್ತವೆ. ಆಧುನಿಕ ತಂತ್ರಜ್ಞಾನದ ಸಂವಹನ ಮಾಧ್ಯಮಗಳು ಈ ಪ್ರಕ್ರಿಯೆಗೆ ಪೂರಕವಾಗಿರುವುದು ಸಹಜ. ಅಸಹಜ ಎನಿಸುವುದು, ಈ ಮಾಧ್ಯಮಗಳನ್ನು ಆವರಿಸಿರುವ , ವಿದ್ಯುನ್ಮಾನ ಮಾಧ್ಯಮ (Visual Media) ಮತ್ತು ಸಾಮಾಜಿಕ ಮಾಧ್ಯಮಗಳ (Social Media) ವರ್ತನೆ ಮತ್ತು ನೈತಿಕತೆ. ಸಮಾಜದಲ್ಲಿ ಘಟಿಸುವ ಅಹಿತಕರ ಬೆಳವಣಿಗೆಗಳನ್ನು ಸರಿದಾರಿಗೆ ತರುವ ನೈತಿಕ ಜವಾಬ್ದಾರಿಯನ್ನು ಕಳೆದುಕೊಂಡಿರುವುದರಿಂದ ಅಥವಾ ಪ್ರಜ್ಞಾಪೂರ್ವಕವಾಗಿಯೇ ಮರೆತಿರುವುದರಿಂದಲೇ, ಈ ಸಂವಹನ ಸೇತುವೆಗಳು ಪಾತಕ ಲೋಕದ ಒಂದು ಭಾಗವಾಗಿ ಕಾಣತೊಡಗಿವೆ.

ಈ ದುರಂತ ವಿದ್ಯಮಾನದ ನಡುವೆಯೇ ನಾವು ಭಾರತೀಯ ಸಮಾಜ ಎದುರಿಸುತ್ತಿರುವ ಕೋಮುದ್ವೇಷ, ಮತದ್ವೇಷ, ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯ, ಸಾಮಾಜಿಕ ಅನ್ಯಾಯಗಳು ಹಾಗೂ ಅಸಮಾನತೆಗಳ ಸುತ್ತ ಹುತ್ತಗಳಂತೆ ಬೆಳೆಯುತ್ತಿರುವ, ಸಾರ್ವತ್ರಿಕವಲ್ಲದ ಸಾಮಾಜಿಕ ಚಿಂತನೆಗಳನ್ನು, ಉತ್ಪಾದಿತ ಅಭಿಪ್ರಾಯಗಳನ್ನು, ಸಿದ್ದ ಮೌಲ್ಯದ (Moulded Values) ಅಭಿವ್ಯಕ್ತಿಗಳನ್ನು ನಿಷ್ಕರ್ಷೆ ಮಾಡಬೇಕಿದೆ. ದಿನದಿಂದ ದಿನಕ್ಕೆ ಹಿಮ್ಮುಖವಾಗಿ ಚಲಿಸುತ್ತಿರುವ ಆಲೋಚನಾ ವಿಧಾನಗಳ ಈ ವಾತಾವರಣದಲ್ಲಿ ನಮಗೆ “ ಮಾನವೀಯತೆಗೆ ಧಕ್ಕೆ ಉಂಟಾಗುತ್ತಿದೆ ” ಎಂಬ ಕೂಗು ಹೇಗೆ ಕೇಳಿಸಲು ಸಾಧ್ಯ ? “ ಮನುಜ ಜಾತಿ ತಾನೊಂದೇ ವಲಂ “ ಎಂದು ಶತಮಾನಗಳ ಹಿಂದೆ ಹೇಳಿದ ಪಂಪನಿಂದ ದೂರವಾಗಿರುವಷ್ಟೇ ಪ್ರಮಾಣದಲ್ಲಿ ನಾವು “ ವಿಶ್ವಮಾನವ ” ಕಲ್ಪನೆಯನ್ನು ಹುಟ್ಟುಹಾಕಿದ ಠಾಗೂರ್-ಕುವೆಂಪು ಅವರಿಂದಲೂ̧ ಸಮಸಮಾಜದ ಕನಸು ಕಂಡ ಅಂಬೇಡ್ಕರ್ ಅವರಿಂದಲೂ ದೂರವಾಗಿದ್ದೇವೆ.
ಇದರ ವಿಭಿನ್ನ ಆಯಾಮಗಳನ್ನು, ವರ್ತಮಾನದ ಬೆಳವಣಿಗೆಗಳ ನಡುವೆ, ಸಮಕಾಲೀನ ದೃಷ್ಟಿಕೋನದಿಂದ ವಿಮರ್ಶೆಗೊಳಪಡಿಸಬೇಕಿದೆ.
ಮುಂದುವರೆಯುತ್ತದೆ,,,,,,,