ಚೆನೈ : ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷದ ಜೊತೆ ಕೈ ಜೋಡಿಸಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ. ಇಂದು ಟಿವಿಕೆ ಮುಖ್ಯಸ್ಥ ನಟ ವಿಜಯ್ ಅವರ ಪಕ್ಷದ ಕಚೇರಿಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಮೈತ್ರಿ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.

ಅಲ್ಲದೆ ವಿಜಯ್ಗೆ ತಮಿಳುನಾಡಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಉಸ್ತುವಾರಿ ಗಿರೀಶ್ ಚೋಡಂಕರ್ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಪ್ರವೀಣ್ ಚಕ್ರವರ್ತಿ ನೇತೃತ್ವದ ಶಾಸಕರ ನಿಯೋಗ ಪಣಿಯೂರಿನ ಟಿವಿಕೆ ಕಚೇರಿಗೆ ತೆರಳಿ ವಿಜಯ್ಗೆ ಶಾಲು ಹೊದಿಸಿ ಆತ್ಮೀಯವಾಗಿ ಗೌರವಿಸಿದ್ದಾರೆ. ಇನ್ನೂ ಕಾಂಗ್ರೆಸ್ ನಾಯಕರ ಜೊತೆ ವಿಜಯ್ ತಮಿಳುನಾಡಿನ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಕುರಿತು ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ಕೇಳಲಿದ್ದಾರೆ.
ಸದ್ಯ ರಾಜ್ಯಪಾಲ (Rajendra Arlekar) ರಾಜೇಂದ್ರ ಅರ್ಲೇಕರ್ ಚೆನೈನಲ್ಲಿ ಲಭ್ಯವಿಲ್ಲದಿರುವ ಕಾರಣಕ್ಕೆ ಸಂಜೆಯ ವೇಳೆಗೆ ಆಗಮಿಸುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸಂಜೆಯ ಬಳಿಕ ರಾಜಕೀಯ ಚಟುವಟಿಕೆಗಳು ಇನ್ನಷ್ಟು ವೇಗ ಪಡೆಯಲಿವೆ. ಮೇ 7 ರಂದು ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಯಿದ್ದು, ಟಿವಿಕೆ ಮುಖ್ಯಸ್ಥ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ಮೈತ್ರಿ ಸರ್ಕಾರದ ರಚನೆಯೊಂದಿಗೆ ಬೇರೆ ಬೇರೆ ಪಕ್ಷಗಳ ಬೆಂಬಲಕ್ಕೆ ಯತ್ನಿಸುತ್ತಿದೆ. ಹೀಗಾಗಿ ಟಿವಿಕೆ ಮಾಡಿಕೊಂಡಿದ್ದ ಬೆಂಬಲದ ಮನವಿಗೆ ಸ್ಪಂದಿಸಿರುವ ಕಾಂಗ್ರೆಸ್, ಷರತ್ತು ಬದ್ಧ ಬೆಂಬಲ ನೀಡಲು ಮುಂದೆ ಬಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ನ ಷರತ್ತುಗಳೇನು..?
ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಯಾವುದೇ ಕೋಮುವಾದಿ ಶಕ್ತಿಗಳನ್ನು ಟಿವಿಕೆ ಈ ಮೈತ್ರಿಕೂಟದಿಂದ ದೂರವಿಡುವುದರ ಮೇಲೆ ನಮ್ಮ ಬೆಂಬಲವಿರುತ್ತದೆ. ಟಿವಿಕೆ ಮತ್ತು ತಮಿಳುನಾಡು ಕಾಂಗ್ರೆಸ್ ನಡುವಿನ ಈ ಮೈತ್ರಿಕೂಟವು ಪೆರುಂತಲೈವರ್ ಕಾಮರಾಜ್ ಅವರ ತಮಿಳುನಾಡಿನ ವೈಭವದ ದಿನಗಳನ್ನು ಮರಳಿ ತರಲು ಶ್ರಮಿಸುತ್ತದೆ, ತಂತೈ ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ಆದರ್ಶಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ಆದರ್ಶಗಳಿಗೆ ಮುಂದಿನ ವರ್ಷಗಳು ಮತ್ತು ದಶಕಗಳಲ್ಲಿ ಬಲವಾದ ಬದ್ಧತೆಯೊಂದಿಗೆ ಮುನ್ನಡೆಯುತ್ತದೆ ಎಂದು ಹೇಳಿದೆ.
ಪರಸ್ಪರ ಗೌರವ, ಸೂಕ್ತ ಹಂಚಿಕೆ ಮತ್ತು ಎರಡೂ ಪಕ್ಷಗಳ ನಡುವಿನ ಹಂಚಿಕೆಯ ಜವಾಬ್ದಾರಿಯ ಮೇಲೆ ಸ್ಥಾಪಿತವಾದ ಈ ಮೈತ್ರಿಕೂಟವು ಈ ಸರ್ಕಾರ ರಚನೆಗೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆ ಸಂಸ್ಥೆಗಳು, ಲೋಕಸಭೆ ಮತ್ತು ರಾಜ್ಯಸಭೆಗೆ ಭವಿಷ್ಯದ ಚುನಾವಣೆಗಳಿಗೂ ಸಹ ಆಗಿದೆ. ವಿಜಯ್ ಮತ್ತು ರಾಹುಲ್ ಗಾಂಧಿ ಜಂಟಿಯಾಗಿ ಜಾತ್ಯತೀತ ಮತ್ತು ಪ್ರಗತಿಪರ ಸರ್ಕಾರಕ್ಕಾಗಿ ತಮಿಳುನಾಡಿನ ಜನರ ಈ ಐತಿಹಾಸಿಕ ತೀರ್ಪನ್ನು ಗೌರವಿಸುವುದಾಗಿ ಮತ್ತು ಜನರ ಕನಸುಗಳು ಮತ್ತು ಭರವಸೆಗಳನ್ನು ವಿಶೇಷವಾಗಿ ತಮಿಳುನಾಡಿನ ಯುವಕರನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ ಎಂದು ಕಾಂಗ್ರೆಸ್ ತನ್ನ ಬೆಂಬಲವನ್ನು ಘೋಷಿಸಿದೆ.
ಆದರೆ ಸದ್ಯ ಇದರ ಹೊರತಾಗಿಯೂ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಮುಂದುವರೆದಿದ್ದು, ವಿಜಯ್ ಯಾರೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸುತ್ತಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.






