ಕ್ರಿಕೆಟ್ಗೆ ವಿದಾಯ ಹೇಳಿದ ಭಾರತ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ.. ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ವೇದಾ ಕೃಷ್ಣಮೂರ್ತಿಯವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ವೇದಾ ಅವರು ಕರ್ನಾಟಕ ಮಹಿಳಾ ಕ್ರಿಕೆಟ್ ಕ್ಷೇತ್ರದ ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಬಲಗೈ ಬ್ಯಾಟರ್ ವೇದಾ, 48 ಅಂತರರಾಷ್ಟ್ರೀಯ ಏಕದಿನ ಮತ್ತು 76 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ವಿದಾಯ ಪತ್ರ ಹಾಕಿದ್ದಾರೆ.

‘ದೊಡ್ಡ ಕನಸುಗಳನ್ನು ಕಾಣುತ್ತಿದ್ದ ಸಣ್ಣ ಪಟ್ಟಣದ ಹುಡುಗಿ ನಾನು. ಕಡೂರಿನಲ್ಲಿ ಇದೆಲ್ಲವೂ ಆರಂಭವಾಯಿತು. ಮೊದಲ ಸಲ ಬ್ಯಾಟ್ ಕೈಗೆತ್ತಿಕೊಂಡ ದಿನ ನನಗೂ ಗೊತ್ತಿರಲಿಲ್ಲ ಬದುಕು ಎಲ್ಲಿಯವರೆಗೆ ಸಾಗಲಿದೆ ಎಂದು. ಇಷ್ಟು ದೂರ ನನ್ನ ಪಯಣ ಲಂಬಿಸುವ ಕುರಿತು ಊಹೆಯೂ ಇರಲಿಲ್ಲ. ಚಿಕ್ಕ ಗಲ್ಲಿಗಳಿಂದ ಆರಂಭವಾಗಿ ವಿಶ್ವದ ದೊಡ್ಡ ಕ್ರೀಡಾಂಗಣಗಳಲ್ಲಿ ಆಡುವವರೆಗೆ ಬೆಳೆದೆ. ಭಾರತ ತಂಡದ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದೆ. ಕ್ರಿಕೆಟ್ ನನಗೆ ಬಹಳಷ್ಟನ್ನು ನೀಡಿದೆ. ಕೇವಲ ವೃತ್ತಿಯಾಗಿ ಅಷ್ಟೇ ಅಲ್ಲ, ನಾನು ಯಾರು ಎಂಬ ಸಂವೇದನೆಯನ್ನು ಬೆಳೆಸಿತು. ಜೀವನದಲ್ಲಿ ಹೋರಾಡುವುದನ್ನು ಕಲಿಸಿತು. ಬೀಳುವುದು, ಎದ್ದು ನಿಲ್ಲುವುದು ಮತ್ತು ಸಾಗುವುದನ್ನು ಕಲಿಸಿತು. ಇವತ್ತು ನಾನು ಹೃದಯಪೂರ್ವಕವಾಗಿ ಈ ಅಧ್ಯಾಯವನ್ನು ಮುಗಿಸುತ್ತಿರುವೆ.

ಪಾಲಕರು ಮತ್ತು ಒಡಹುಟ್ಟಿದವರು, ವಿಶೇಷವಾಗಿ ಸಹೋದರಿಗೆ ನನ್ನ ಮೊದಲ ತಂಡವಾಗಿದ್ದಕ್ಕೆ ಧನ್ಯವಾದಗಳು. ನನ್ನ ಸತತ ಸ್ಪೂರ್ತಿ, ಶಕ್ತಿ ಯಾಗಿದ್ದವರು ಅವರೇ. ಕೋಚ್ಗಳು, ನಾಯಕಿಯರು ಮತ್ತು ಪೋಷಕರಿಗೆ ಧನ್ಯವಾದಗಳು. ಭಾರತ ತಂಡದಲ್ಲಿ ಆಡಲು ಅವಕಾಶ ಕೊಟ್ಟು ವಿಶ್ವಾಸವಿಟ್ಟ ಬಿಸಿಸಿಐಗೆ, ಕೆಎಸ್ಸಿಎ, ರೈಲ್ವೆಸ್ ಮತ್ತು ಕೆಐಒಸಿ ತಂಡಗಳಿಗೆ ಧನ್ಯವಾದಗಳು. ಸಹ ಆಟಗಾರ್ತಿಯರು, ಕರ್ನಾಟಕದ ನಾಯಕಿಯಾಗಿದ್ದಾಗ ಬೆಂಬಲಿಸಿದವರು, ಫಿಸಿಯೊ, ಟ್ರೇನರ್ಸ್, ಆಯ್ಕೆಗಾರರೆಲ್ಲರಿಗೂ ಋಣಿಯಾಗಿರುವೆ. ವಿಶೇಷವಾಗಿ 2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದು ಸ್ಮರಣಾರ್ಹ. ಮಹಿಳಾ ಕ್ರಿಕೆಟ್ ನೋಡುವ ದೃಷ್ಟಿಕೋನ ಬದಲಾದ ವರ್ಷ ಅದು. ಆ ಮಹತ್ವದ ಘಟ್ಟದಲ್ಲಿ ಭಾಗಿಯಾಗಿದ್ದು ಹೆಮ್ಮೆಯ ಸಂಗತಿ’ ಎಂದು ಬರೆದಿದ್ದಾರೆ.

ಹೋದ ವರ್ಷ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಅವರ ಬೀಸಾಟ ನೆನಪಿನಲ್ಲಿ ಉಳಿದಿತ್ತು. ಫಾರ್ಮ್ ಕೊರತೆ ಮತ್ತು ಗಾಯದ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿ ಮತ್ತೆ ತಂಡಕ್ಕೆ ಮರಳುತ್ತಿದ್ದರು. ಮಿಥಾಲಿ ರಾಜ್ (Mithali Raj), ಜೂಲನ್ ಗೋಸ್ವಾಮಿ(Joolan Goswamy), ಹರ್ಮನ್ ಪ್ರೀತ್ ಕೌರ್(Harman Preeth Kour), ಸ್ಮೃತಿ ಮಂದಾನ (Smirthi Mandana) ಅವರೊಂದಿಗೆ ತಂಡದಲ್ಲಿ ಆಡಿದವರು ವೇದಾ ಕೋವಿಡ್ ಪಿಡುಗಿಗೆ ವೇದಾ ಅವರ ತಾಯಿ (Cheluvanga Devi) ಮತ್ತು ಅಕ್ಕ (Vatsala Shivakumar) ಅವರು ಸಾವನ್ನಪ್ಪಿದ್ದರು. ಆಗ ವೇದಾ ತೀವ್ರ ಮಾನಸಿಕ ವೇದನೆ ಅನುಭವಿಸಿದ್ದರು. ನಂತರ ಚೇತರಿಸಿಕೊಂಡು ಕೆಲಕಾಲ ಕರ್ನಾಟಕ ತಂಡದಲ್ಲಿ ಆಡಿದ್ದರು. ಕಳೆದ ಕೆಲವು ವರ್ಷಗಳಿಂದ ವೇದಾ ಅವರು ಜಿಯೊಸ್ಸಾರ್ ವಾಹಿನಿಯಲ್ಲಿ ಕನ್ನಡ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.