ಕೊರೊನಾ ಅಬ್ಬರ ಕಡಿಮೆಯಾದರೂ ಕೂಡ ಮಹಾಮಾರಿಯನ್ನ ಅಲ್ಲಗೆಳೆಯೋ ಹಾಗಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ಮತ್ತೊಂದು ಅಲೆಯಾಗಿ ಬಂದು ಮತ್ತೊಂದು ದುರಂತಕ್ಕೆ ಮುನ್ನುಡಿ ಬರೆಯಬಹುದು. ಈ ಹಿನ್ನಲೆ ಇವತ್ತಿನಿಂದ ಮಕ್ಕಳಿಗೂ ಕೂಡ ರಾಜ್ಯದಲ್ಲಿ ವ್ಯಾಕ್ಸಿನ್ ನೀಡಲು ಆರಂಭಿಸಿದೆ ಸರ್ಕಾರ.
12 – 14 ವರ್ಷದ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ!
ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಅದೆಷ್ಟೋ ಕುಟುಂಬಗಳು ತಮ್ಮರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದೆ. ಸೋಂಕಿನ ವಕ್ರ ದೃಷ್ಟಿಯಿಂದ ನಲುಗಿದ ಕುಟುಂಬಗಳು ಕಳೆದು ಹೋದ ಬದುಕು ಮರಳಿ ಪಡೆಯಲು ಪರದಾಡ್ತಿದೆ. ಇಂತಹ ಹೊತ್ತಲ್ಲಿ ಕೊರೊನಾ ನಾಲ್ಕನೇ ಅಲೆಯ ಮುನ್ಸೂಚನೆಯೂ ಸಿಕ್ಕಿದ್ದು ಅನೇಕರ ಎದೆ ಬಡಿತ ಜೋರಾಗಿದೆ. ಈ ಮಧ್ಯೆಯೇ Precaution is better then cure ಅನ್ನೋ ಹಾಗೇ ಕೇಂದ್ರ ಆರೋಗ್ಯ ಇಲಾಖೆ ಇಂದಿನಿಂದ ದೇಶದಲ್ಲಿರುವ 12ರಿಂದ 14 ವರ್ಷದ ವಯಸ್ಸಿನ ಮಕ್ಕಳು ಲಸಿಕೆ ಪಡೆಯಲು ಅರ್ಹ ಎಂಬ ನಿಟ್ಟಿನಲ್ಲಿ ಲಸಿಕೆ ನೀಡಲು ಆರಂಭಿಸಿದೆ. ರಾಜ್ಯದಲ್ಲಿಯೂ ಕೂಡ ಆರೋಗ್ಯ ಸಚಿವ ಸುಧಾಕರ್ ಹಾಗೂ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಅಧಿಕೃತವಾಗಿ ಲಸಿಕಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು, ಮಕ್ಕಳಿಕೆ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 12 – 14 ವರ್ಷದ ಒಟ್ಟು 20 ಲಕ್ಷ ಮಕ್ಕಳು ಲಸಿಕೆ ಪಡೆಯಲು ಅರ್ಹರು!
ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಇದರ ಜೊತೆ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೂ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೂ ಕೂಡ ಚಾಲನೆ ಸಿಕ್ಕಿದೆ. ರಾಜ್ಯದ ಸುಮಾರು 20 ಲಕ್ಷ ಮಕ್ಕಳಿಗೆ ಹೈದರಾಬಾದ್ ಬಯೊಲಾಜಿಕಲ್ ಸಂಸ್ಥೆ ಅಭಿವೃದ್ದಿ ಪಡಿಸಿರುವ ಕೊರ್ಬಿವ್ಯಾಕ್ಸ್ ಲಸಿಕೆ ಕೊಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿಗೆ. ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 6-7 ಲಕ್ಷ ಮಕ್ಕಳನ್ನು ಬಿಬಿಎಂಪಿ ಗುರುತಿಸಿದ್ದು ಎಲ್ಲಾ ಮಕ್ಕಳಿಗೂ ವ್ಯಾಕ್ಸೀನ್ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.

ಜೀವಾಮೃತವನ್ನ ಪಡೆಯಲು ಮಕ್ಕಳು ಕೋವಿಡ್ ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ರಿಜಿಸ್ರ್ಟೇಶನ್ ಮಾಡಿಕೊಳ್ಳಬೇಕು. ಎಲ್ಲಾ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಲಸಿಕೆ ಲಭ್ಯವಿರಲಿದೆ. ಮೊದಲ ಡೋಸ್ ಪಡೆದ 28 ದಿನದ ನಂತರ 2ನೇ ಡೋಸ್ ವ್ಯಾಕ್ಸಿನೇಷನ್ ಪಡೆದು ಕೊಳ್ಳಬೇಕು. ಇದು ವೈರಾಣುವಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಕೂಡ ಹುಡುಕಿ ಲಸಿಕೆ ಹಾಕಿಸಲಾಗುವುದು ಅಂತ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ.
60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್!
ಇನ್ನು ಮಕ್ಕಳ ಜೊತೆ ಇವತ್ತಿನಿಂದ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೂ ಕೂಡ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಈ ಹಿಂದೆ ಅನಾರೋಗ್ಯದಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅವಕಾಶವಿತ್ತು. ಈಗ 60 ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಲಸಿಕೆಯನ್ನು ಪಡೆದು ಕೊಳ್ಳಬಹುದು. ಒಟ್ಟಿನಲ್ಲಿ ರೂಪಾಂತರಿಯ ಆರ್ಭಟ ಚೀನಾದಲ್ಲಿ ಮತ್ತೆ ಶುರುವಾಗಿರುವ ಹೊತ್ತಲ್ಲಿ ರಾಜ್ಯದಲ್ಲಿ ಕೂಡ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಮಕ್ಕಳಿಗೆ ಹಾಗೂ ಹಿರಿಯರಿಗೆ ವ್ಯಾಕ್ಸಿನ್ ಕೊಡಮಾಡಲಾಗುತ್ತಿದೆ.