
ತುಮಕೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವಿ.ಸೋಮಣ್ಣ ಈಗ ಕೇಂದ್ರದ ಎನ್ಡಿಎ ಸರ್ಕಾರದ ಅಂಗ. ಅಂದರೆ, ಅವರು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿ ನಿನ್ನೆಯೆಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧೆಗೀಳಿದು, ಹೈಕಮಾಂಡ್ ನಾಯಕರ ಅಣತಿಯಂತೆ ನಡೆದಿದ್ದ ಸೋಮಣ್ಣರಿಗೆ ಎರಡು ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದ್ದು ಇಂದು ಇತಿಹಾಸ. ಇದಾದ ಕೇವಲ 11 ತಿಂಗಳಲ್ಲಿ, ಫಿನಿಕ್ಸ್ ಹಕ್ಕಿಯಂತೆ ವಿ.ಸೋಮಣ್ಣ ರಾಜಕೀಯವಾಗಿ ಎದ್ದು ಬಂದಿದ್ದು, ರಾಷ್ಟ್ರದ ಬಿಜೆಪಿ ನಾಯಕರ ಮಾರ್ಗದರ್ಶನ ಹಾಗೂ ಸೂಚನೆಯನ್ನು ಪಾಲಿಸಿದ್ದಕ್ಕೆ ಅವರಿಗೆ ಇಂದು ಮಹತ್ವದ ಸ್ಥಾನ ಒಲಿದು ಬಂದಿದೆ.
ಕೇಂದ್ರದ ಎನ್ಡಿಎ ಸರ್ಕಾರದಲ್ಲಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ವಿ.ಸೋಮಣ್ಣ ಸಚಿವರಾಗಿದ್ದಾರೆ. ಇನ್ನು ವಿ. ಸೋಮಣ್ಣರ, ಕೈ ಹಿಡಿದಿದ್ದು ರಾಷ್ಟ್ರದ ಯಾವೆಲ್ಲಾ ನಾಯಕರುಗಳು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುವುದಾದ್ರೆ, ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಜೊತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.

ಹೌದು, ವಿ.ಸೋಮಣ್ಣ ಸೋಲುಂಡ ಬಳಿಕ ಅವರಿಂದ ರಾಜ್ಯದ ಎಲ್ಲಾ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರು ಸೋಮಣ್ಣರ ಬೆನ್ನಿಗೆ ನಿಂತಿದ್ರು. ಅದರಲ್ಲೂ 2024 ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ವಿ. ಸೋಮಣ್ಣರಿಗೆ ಶತಾಯಗತಾಯ ತುಮಕೂರು ಕ್ಷೇತ್ರದ ಟಿಕೆಟ್ ನೀಡಿಯೇ ತೀರುತ್ತೇವೆ ಎಂದು ಅವರೆಲ್ಲಾ ಪಣ ತೊಟ್ಟಿದ್ರು.
ಇದರ ಮುಂದುವರೆದ ಭಾಗವಾಗಿ, ವಿ.ಸೋಮಣ್ಣ, ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು 1.75 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದೇ ತಡ, ಜೆಡಿಎಸ್ ನಾಯಕರ ಸಹಕಾರದೊಂದಿಗೆ ಕೇಂದ್ರದಲ್ಲಿ ಸಚಿವನಾಗುವ ಹಾದಿಯನ್ನು ಸುಲಭ ಮಾಡಿಕೊಂಡರು.
ಬಿಜೆಪಿಯಿಂದ 9 ಮಂದಿಯ ಪೈಕಿ, 5 ಸಂಸದರು, ಅದರಲ್ಲಿ ಸೋಮಣ್ಣ ಮಿನಿಸ್ಟರ್!
ಇನ್ನು 2024 ರ ಲೋಕಸಭಾ ಚುನಾವಣೆಯಲ್ಲಿ 9 ಮಂದಿ ಪ್ರಬಲ ವೀರಶೈವ-ಲಿಂಗಾಯತ ಸಮುದಾಯದ ನಾಯಕರಿಗೆ ಬಿಜೆಪಿ ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿತ್ತು. ಅದರ ಪೈಕಿ ಚಿಕ್ಕೋಡಿಯ ಅಣ್ಣಾಸಾಹೇಬ್ ಜೊಲ್ಲೆ, ದಾವಣಗೆರೆಯ ಗಾಯಿತ್ರಿ ಸಿದ್ದೇಶ್ವರ್, ಬೀದರ್ನ ಭಗವಮನತ ಖೂಬಾ ಹಾಗೂ ಕೊಪ್ಪಳದ ಡಾ. ಬಸವರಾಜ ಕ್ಯಾವಟರ್ ಪರಾಭವಗೊಂಡರೆ, ಇತ್ತ ತುಮಕೂರಿನ ವಿ.ಸೋಮಣ್ಣ, ಹಾವೇರಿ-ಗದಗದ ಬಸವರಾಜ ಬೊಮ್ಮಾಯಿ, ಬೆಳಗಾವಿಯ ಜಗದೀಶ್ ಶೆಟ್ಟರ್, ಶಿವಮೊಗ್ಗದ ಬಿ.ವೈ.ರಾಘವೇಂದ್ರ ಹಾಗೂ ಬಾಗಲಕೋಟೆಯ ಪಿ.ಸಿ. ಗದ್ದೀಗೌಡರ್ ಸಂಸದರಾಗಿ ಆಯ್ಕೆಯಾದ್ರು.

ಇತ್ತ ಈ ಐವರ ಪೈಕಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವದಿಂದ, ಬಿ.ವೈ. ರಾಘವೇಂದ್ರರ ಕುಟುಂಬದಲ್ಲಿ ಸಹೋದರ ಬಿ.ವೈ.ವಿಜಯೇಂದ್ರ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ, ತಂದೆ ಬಿ. ಎಸ್.ಯಡಿಯೂರಪ್ಪ ಕೇಂದ್ರ ಬಿಜೆಪಿಯಲ್ಲಿ ಮಹತ್ವದ ಸ್ಥಾನದಲ್ಲಿರುವ ಕಾರಣ ಕ್ಯಾಬಿನೆಟ್ ಸಚಿವರಾಗುವುದರಲ್ಲಿ ಅವರು ಹಿನ್ನಡೆ ಅನುಭವಿಸಿದಂತಾಗಿದೆ. ಇನ್ನು ಪಿ.ಸಿ.ಗದ್ದೀಗೌಡರ್ ಅವರಿಗೆ ಪ್ರಾಂತ್ಯಾಧಾರದ ಮೇಲೆ ಸಚಿವ ಸ್ಥಾನ ಕೈ ತಪ್ಪಿದೆ. ಇತ್ತ ತುಮಕೂರಿನ ವಿ.ಸೋಮಣ್ಣರಿಗೆ ಜಾಕ್ಪಾಟ್ ಹೊಡೆದಿದೆ.

ಇತ್ತ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದು, ಕೇಂದ್ರದಲ್ಲಿ ಮಂತ್ರಿ ಸ್ಥಾನ ಲಾಭಿಸಿದೆ.