ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಪಕ್ಷಾಂತರ ಪರ್ವ ಆರಂಭವಾಗಿದೆ. ಸಚಿವ ವಿ. ಸೋಮಣ್ಣ ಬಿಜೆಪಿಗೆ ರಾಜೀನಾಮೆ ನೀಡುವ ಮಾತು ಹರಡಿರುವ ಬೆನ್ನಲ್ಲೇ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ವದಂತಿಗೆ ಪುಷ್ಠಿ ನೀಡಿದಂತಾಗಿದೆ.
ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದ ಬಳಿ ನಿರ್ಮಿಸಲಾಗಿರುವ ಕುವೆಂಪು ಸಂಯುಕ್ತ ವಸತಿ ಬಡಾವಣೆಯ ಪ್ರವೇಶದ್ವಾರವನ್ನು ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ವಿ ಸೋಮಣ್ಣ ಉದ್ಘಾಟಿಸಿದ್ದಾರೆ.
ಇದಕ್ಕೂ ಮುನ್ನ, ಡಿಕೆ ಸುರೇಶ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ವಿ ಸೋಮಣ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಬಳಿಕ ಇಬ್ಬರು ಪ್ರತ್ಯೇಕವಾಗಿ ನಿಂತು ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಎಂಎಲ್’ಸಿ ಎಸ್.ರವಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ನಾನು ಕನಕಪುರ ತಾಲೂಕಿನವನು. ಕನಕಪುರ ಉಪನಗರವಾಗಿ ಕಾರ್ಯಾರಂಭ ಮಾಡಲಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಮಧ್ಯೆ ನಮ್ಮ 40 ಎಕರೆ ಜಾಗ ಬಂದಿತ್ತು. ಸಮಸ್ಯೆ ಉಂಟಾಗಿತ್ತು. ನಾನೇ ಸಮಸ್ಯೆ ಬಗೆಹರಿಸಿದ್ದೇನೆ. ಇದೀಗ ಉದ್ಘಾಟನೆ ಸಹಾ ಆಗಿದೆ. ರಾಜಕಾರಣ ಇರುತ್ತದೆ ಹೋಗುತ್ತದೆ. ಇದ್ದಾಗ ಕೆಲಸ ಮಾಡುಬೇಕು ಎಂದರು.
ಡಿಕೆ ಸಹೋದರರನ್ನು ಹೊಗಳಿದ ವಿ ಸೋಮಣ್ಣ
ಕನಕಪುರ ತಾಲೂಕಿನ ಅಭಿವೃದ್ಧಿಗೆ ಡಿಕೆ ಸಹೋದರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಎಂದು ಡಿಕೆ ಸಹೋದರರನ್ನು ಸಚಿವ ವಿ ಸೋಮಣ್ಣ ಹಾಡಿ ಹೊಗಳಿದರು.
ನನ್ನದು ಅಭಿವೃದ್ಧಿ ಪಾರ್ಟಿ. ಇನ್ನು ಹತ್ತು ವರ್ಷಕ್ಕೆ ಕನಕಪುರ ಇನ್ನೊಂದು ಬೆಂಗಳೂರು ಆಗಲಿದೆ. ರಾಯಸಂದ್ರದ ಬಡಾವಣೆ ಡಿಕೆ ಸಹೋದರರು, ಎಂಎಲ್’ಸಿ ರವಿ ಸಹಕಾರದಿಂದ ಆಗಿದೆ. ಕೆಲಸ ಮಾಡುವುದು ಒಂದೇ ನನ್ನ ದಾರಿ ಎಂದರು.






