ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ. ನಾವು ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಒಪ್ಪಿ, ಅದರಂತೆ ನಡೆದುಕೊಳ್ಳುತ್ತಿದ್ದೇವೆ. ಯಾವುದೇ ಒಂದು ಸರ್ಕಾರ ಸಂವಿಧಾನ ಬದ್ಧವಾಗಿ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವುದು ಅದರ ಕರ್ತವ್ಯ ಮತ್ತು ಜವಾಬ್ದಾರಿ. ಸಮಾಜದ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕಾಗುತ್ತದೆ, ಸುಖೀ ರಾಜ್ಯ, ಸಾಮರಸ್ಯದ ಸಮಾಜ, ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ಭೂ ಸುಧಾರಣೆ ಕಾಯಿದೆ ಜಾರಿಯಾಗಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿಯ ಹಿರಿಯಡಕದಲ್ಲಿ ಇಂದು ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭವನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಮಾತನಾಡಿದ ಅವರು, ಭಾರತ ಬಹುತ್ವದ ದೇಶ. ನಮ್ಮ ಸಂವಿಧಾನದ ಮೂಲ ತತ್ವಗಳು ಸಹಿಷ್ಣುತೆ ಮತ್ತು ಸಹಬಾಳ್ವೆ ಆಗಿವೆ. ಇಂತಹಾ ದೇಶ ಅಭಿವೃದ್ಧಿಯನ್ನು ಕಾಣಬೇಕಾದರೆ ದೇಶದಲ್ಲಿ ಶಾಂತಿ, ನೆಮ್ಮದಿ ಇರಬೇಕು ಮತ್ತು ಸಮಾಜದಲ್ಲಿ ಸಾಮರಸ್ಯ ಇರಬೇಕು. ಅಶಾಂತಿ, ಅಭದ್ರೆತೆಯಿಂದ ಕೂಡಿರುವ ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಈ ವರ್ಷ ನಾವು 75ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುವವರಿದ್ದೇವೆ, ಸಂವಿಧಾನ ಜಾರಿಯಾಗಿ 72 ವರ್ಷವಾಗಿದೆ ಆದರೂ ನಮಗೆ ಜಾತ್ಯಾತೀತ, ಸಮಸಮಾಜದ, ಸಾಮಾಜಿಕ ನ್ಯಾಯದ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಸಮಾನತೆಯನ್ನು ಸಾಧಿಸಬೇಕಾದರೆ ಅವಕಾಶಗಳಿಂದ ವಂಚಿತರಾದ ಜನರಿಗೆ ಅವಕಾಶಗಳನ್ನು ನೀಡಿ, ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದ್ದಾರೆ.
ಮೊದಲಿಗೆ ಭೂಮಿಯ ಒಡೆತನದು ಹಕ್ಕು ಉಳ್ಳವರ ಬಳಿ ಮಾತ್ರ ಇತ್ತು, ಇವರ್ಯಾರು ಉಳುಮೆ ಮಾಡುತ್ತಾ ಇರಲಿಲ್ಲ. ಈ ಭೂಮಿಯಲ್ಲಿ ಗೇಣಿದಾರರು ಉಳುಮೆ ಕೆಲಸ ಮಾಡುತ್ತಿದ್ದರು. ಈ ಭೂಮಿಯ ಸಮಾನ ಹಂಚಿಕೆಯಾಗಬೇಕು ಎಂದು ಕರಾವಳಿ, ಮಲೆನಾಡು ಭಾಗದಲ್ಲಿ ಹೋರಾಟಗಳು ನಡೆದವು. 1954 ರಲ್ಲಿ ಕರ್ನಾಟಕದಲ್ಲಿ ಜಮೀನ್ದಾರಿ ಕಾಯ್ದೆ ಜಾರಿಗೆ ಬಂತು. ಆ ನಂತರ ಜಮೀನ್ದಾರಿ ರದ್ದತಿ ಕಾಯ್ದೆ ಜಾರಿಯಾಗಬೇಕು ಎಂದು ಹೋರಾಟ ನಡೆದವು. ಇದರಿಂದಾಗಿ 1960 ರಲ್ಲಿ ಗೇಣಿದಾರರ ಕಾಯ್ದೆ ಜಾರಿಗೆ ಬಂತು. ಗೇಣಿದಾರರಿಗೆ ರಕ್ಷಣೆ ನೀಡುವುದು ಈ ಕಾಯ್ದೆಯ ಉದ್ದೇಶವಾಗಿತ್ತು ಎಂದಿದ್ದಾರೆ.
ಬಡವರು, ದಲಿತರು ಆಸ್ತಿ ಸೃಷ್ಟಿ ಮಾಡುವುದು, ಅದನ್ನು ಬೇರೆಯವರು ಅನುಭವಿಸುತ್ತಿದ್ದರು. ಹೀಗಾಗಿ 1960 ರಲ್ಲಿ ಕಾಯ್ದೆ ಜಾರಿಗೆ ಬಂದಿತ್ತು. ಈ ಕಾಯ್ದೆಯಲ್ಲಿನ ದೋಷಗಳನ್ನು ಸರಿಪಡಿಸಲು 1974 ರಲ್ಲಿ ಭೂ ಸುಧಾರಣಾ ಕಾಯಿದೆ ತರಲಾಯಿತು. ಆಗ ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಗಳು. ವಿನೋಬಾ ಭಾವೆ ಅವರ ಭೂದಾನ ಚಳವಳಿ ಅರಸು ಅವರಿಗೆ ಪ್ರೇರಣೆ ನೀಡಿತ್ತು. ಈ ಕಾಯಿದೆ ಜಾರಿಯಾದ ಮೇಲೆ ರಾಜ್ಯದಲ್ಲಿ ಒಟ್ಟು ಆರು ಲಕ್ಷ ಜನರಿಗೆ ಭೂಒಡೆತನದ ಹಕ್ಕು ಸಿಕ್ಕಿತು. ಆದರೆ ಇಂದು ಭೂಸುಧಾರಣಾ ಕಾಯ್ದೆಯ ಬಹುಮುಖ್ಯ ಸೆಕ್ಷನ್ ಗಳಾದ 79(a), (b), (c) ಅನ್ನು ರದ್ದು ಮಾಡಲಾಗಿದೆ, ಸೆಕ್ಷನ್ 80, ಸೆಕ್ಷನ್ 63 ಅನ್ನು ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಜಮೀನು ಖರೀದಿಸಲು ಇದ್ದ ಆದಾಯದ ಮೀತಿ ಇಲ್ಲವಾಗಿದೆ, ಕೃಷಿಕರಲ್ಲದವರಿಗೆ ಜಮೀನು ಖರೀದಿಸಲು ಅವಕಾಶ ನೀಡಲಾಗಿದೆ, ತಪ್ಪು ಮಾಹಿತಿ ನೀಡಿದವರಿಗೆ ಶಿಕ್ಷೆ ನೀಡಲು ಇದ್ದ ಅವಕಾಶವನ್ನು ರದ್ದು ಮಾಡಲಾಗಿದೆ, ಕುಟುಂಬವೊಂದಕ್ಕೆ ಹೊಂದಲು ಇದ್ದ ಭೂಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ 20,000 ಕೋಟಿ ಬೆಲೆ ಬಾಳುವ ಜಮೀನಿನ ಪ್ರಕರಣಗಳು ರದ್ದಾದವು. ಇದರಿಂದ ಉಳ್ಳವರು ಭೂಮಿಯ ಒಡೆಯರಾಗಿದ್ದಾರೆ ಎಂದು ಹೇಳಿದ್ದಾರೆ.
![](https://pratidhvani.com/wp-content/uploads/2022/03/FotoJet-22-1-1024x733.jpg)
ಯಾಕೆ ಈ ರೀತಿ ಬದಲಾವಣೆ ಮಾಡಿದ್ದು ಎಂದು ಪ್ರಶ್ನೆ ಮಾಡಿದರೆ ಭ್ರಷ್ಟಾಚಾರ ಜಾಸ್ತಿಯಾಗಿತ್ತು ಎಂದು ಸರ್ಕಾರ ಉತ್ತರ ನೀಡಿತ್ತು. ಕೆಲವು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ವರದಿ ಬಂದಿತ್ತು, ಅದರಲ್ಲಿ ಹೋಟೆಲ್ ಗಳಲ್ಲಿ ತಿಂಡಿ ಬೆಲೆ ಹಾಕಿದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಬೆಲೆ ನಿಗದಿ ಮಾಡಿದ್ದಾರೆ ಎಂದಿತ್ತು. ಇಂಥಾ ಮಾನಗೆಟ್ಟವರ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದವರು ಈ ಸರ್ಕಾರ ಸರ್ಕಾರಿ ಟೆಂಡರ್ ಗಳಲ್ಲಿ 40% ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಂಘದ ಅಧ್ಯಕ್ಷ ಕೆಂಪಯ್ಯ ಅವರು ಪತ್ರಿಕೆಗಳ ಮುಂದೆ ಇದನ್ನೇ ಹೇಳಿದ್ದಾರೆ. ನಾ ಖಾವೂಂಗಾ, ನಾ ಖಾನೆದೂಂಗ ಎನ್ನುವ ನರೇಂದ್ರ ಮೋದಿ ಅವರು ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕರಾವಳಿಯ ಜನ ರಾಜಕೀಯ ವಿಚಾರದಲ್ಲಿ ಪ್ರಬುದ್ಧರು. ಹಾಗಾಗಿ ಇಂಥಾ ವಿಷಯಗಳ ಬಗ್ಗೆ ಚಿಂತನೆ ಮಾಡಬೇಕು ಎಂದಿದ್ದಾರೆ.
ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆಯ ಅವಧಿ ವರೆಗೆ ದೇಶದ ಮೇಲಿದ್ದ ಒಟ್ಟು ಸಾಲ ರೂ. 53 ಲಕ್ಷ ಕೋಟಿ, ಮೋದಿ ಅವರ ಆಡಳಿತದಲ್ಲಿ ಈ ಸಾಲಿನ ಅಂತ್ಯಕ್ಕೆ ಆಗುವ ಒಟ್ಟು ಸಾಲ ರೂ. 152 ಲಕ್ಷ ಕೋಟಿ. ದೇಶ ಉದ್ಧಾರ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಕೇವಲ ಎಂಟು ವರ್ಷದಲ್ಲಿ ಸುಮಾರು 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ.
ನೋಟು ಅಮಾನ್ಯೀಕರಣಕ್ಕೆ ಮೊದಲು ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ಸುಮಾರು 11 ಜನರು ಉದ್ಯೋಗ ಮಾಡುತ್ತಿದ್ದರು. ಇದರಲ್ಲಿ 60% ಕೈಗಾರಿಕೆಗಳು ಮುಚ್ಚಿ ಹೋದ ಕಾರಣ ಈಗ ಕೇವಲ 2.5 ಕೋಟಿ ಉದ್ಯೋಗ ಮಾತ್ರ ಉಳಿದಿದೆ. 2018 ರ ಮಾರ್ಚ್ ನಲ್ಲಿ ರಾಜ್ಯದ ಒಟ್ಟು ಸಾಲ ಇದ್ದದ್ದು ರೂ. 2,48,000 ಕೋಟಿ. 2022-23 ನೇ ಸಾಲಿಗೆ ಈ ಸಾಲ ರೂ. 5,18,000 ಕೋಟಿಗೆ ಹೆಚ್ಚಾಗಲಿದೆ.
ಒಂದು ಕಡೆ ಬಡವರಿಂದ ಭೂಮಿಯನ್ನು ಕಸಿದು ಉಳ್ಳವರಿಗೆ ನೀಡಿದ್ದಾರೆ, ಇನ್ನೊಂದು ಕಡೆ ಬಡವರ ಉದ್ಯೋಗವನ್ನು ಕಿತ್ತುಕೊಂಡಿದ್ದಾರೆ. ಸಾಲ ಮಾಡಿ ದೇಶವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಜನರು ಗಂಭೀರವಾಗಿ ಯೋಚಿಸಬೇಕು.
ಸಂವಿಧಾನ, ಪ್ರಜಾಪ್ರಭುತ್ವ, ದೇಶ ಉಳಿಯಬೇಕು ಎನ್ನುವುದಾದರೆ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವವರನ್ನು ತಿರಸ್ಕರಿಸಬೇಕು. ಅಭಿವೃದ್ಧಿ ಪರವಾಗಿ ಇರುವವರನ್ನು ಆಶೀರ್ವದಿಸಬೇಕು.