ನಾ ದಿವಾಕರ
( ಕೃಪೆ : ಸಂವಾದ ಮಾಸಪತ್ರಿಕೆಯ ಜೂನ್ ಸಂಚಿಕೆಯಿಂದ )
ಭಾಗ 1
ಸ್ವತಂತ್ರ ಭಾರತದ ಸುದ್ದಿ ಮಾಧ್ಯಮ ಜಗತ್ತಿನ ಎಂಟು ದಶಕಗಳ ಪಯಣವನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದು. ಮೊದಲ ಮೂರು ದಶಕಗಳ (1947-77) ಜನಪರ ದನಿಯಾಗಿ, ತದನಂತರದ ಎರಡು ದಶಕಗಳ (1978-1998) ಆಳುವವರ ದನಿಯಾಗಿ , 21ನೆ ಶತಮಾನದ ಡಿಜಿಟಲ್-ವಿದ್ಯುನ್ಮಾನ ಯುಗದ ಕಾರ್ಪೋರೇಟ್ ಬಂಡವಾಳಶಾಹಿ ಮಾರುಕಟ್ಟೆ ದನಿಯಾಗಿ. ಈ ಮೂರೂ ಹಂತಗಳಲ್ಲಿ ಅಪವಾದಗಳನ್ನು ಗುರುತಿಸಬಹುದಾದರೂ, ಒಟ್ಟಾರೆಯಾಗಿ ನೋಡಿದಾಗ ಭಾರತದ ಮಾಧ್ಯಮ ಜಗತ್ತು ತನ್ನ ಸ್ವಾತಂತ್ರ್ಯಪೂರ್ವದ ಆಶಯಗಳಿಂದ ವಿಮುಖವಾಗಿರುವುದೇ ಅಲ್ಲದೆ, ಸ್ವಾತಂತ್ರ್ಯೋತ್ತರ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಂದಲೂ ದೂರವಾಗಿರುವುದನ್ನು ಗಮನಿಸಬಹುದು.
ಸ್ವಾತಂತ್ರ್ಯಪೂರ್ವದಲ್ಲಿ ವಸಾಹತು ಆಳ್ವಿಕೆಯ ದಬ್ಬಾಳಿಕೆಯನ್ನೇ ಕೇಂದ್ರೀಕರಿಸಿಕೊಂಡು ಪತ್ರಿಕೋದ್ಯಮದ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಿಯಾಶೀಲವಾಗಿ ತೊಡಗಿದ್ದ ಅಂಬೇಡ್ಕರ್, ಗಾಂಧಿ ಇನ್ನೂ ಅನೇಕ ನಾಯಕರಿಗೆ ಮಾಧ್ಯಮ ಎನ್ನುವುದು ಕೇವಲ ಜನರಿಗೆ ಸುದ್ದಿ ತಲುಪಿಸುವ ಅಕ್ಷರ ಸೇತುವೆವೆ ಆಗಿರಲಿಲ್ಲ. ಸಾಮಾಜಿಕ-ರಾಜಕೀಯ ಅರಿವು, ಸೈದ್ಧಾಂತಿಕ ಪ್ರಜ್ಞೆಯನ್ನು ಮೂಡಿಸುವ ಹಾಗೂ ಶೋಷಣೆಯ ವಿರುದ್ಧ ದನಿ ಎತ್ತುವ ಸಂದೇಶಾತ್ಮಕ ವಾಹಕವಾಗಿ ಪತ್ರಿಕೋದ್ಯಮವನ್ನು ಕಾಣಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಈ ಪಯಣದಲ್ಲಿ ಹೊಸ ಆಯಾಮಗಳನ್ನು ಸೃಷ್ಟಿಸಿ, ನಿರ್ಲಕ್ಷಿತ ತಳಸಮಾಜದಲ್ಲಿ ವಿಮೋಚನೆಯ ಪ್ರಖರ ದನಿಯನ್ನು ಮೂಡಿಸಲು ಪ್ರಯತ್ನಿಸಿದ್ದರು.
ಭಾರತದ ಮಾಧ್ಯಮ ಇತಿಹಾಸದ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಅಲಕ್ಷಿಸಿ ಮುಂದುವರೆಯಲು ಸಾಧ್ಯವಿಲ್ಲ. ಮಾಧ್ಯಮವನ್ನು ಕುರಿತ ಅಂಬೇಡ್ಕರ್ ಅವರ ಕೆಲವು ಸಂದೇಶಗಳು ಇಂತಿವೆ : “ಪತ್ರಿಕೆಗಳು ಕೇವಲ ಮೇಲ್ವರ್ಗದವರ ಅಥವಾ ಆಡಳಿತಗಾರರ ವಕ್ತಾರರಾಗಿರಬಾರದು. ಸಮಾಜದಲ್ಲಿ ಶೋಷಿತರಾದವರ, ದೀನ-ದಲಿತರ ನೋವುಗಳಿಗೆ ಸ್ಪಂದಿಸಬೇಕು. ಪತ್ರಕರ್ತರು ಯಾವುದೇ ವ್ಯಕ್ತಿ ಪೂಜೆಗೆ (Hero-worship) ಜೋತುಬೀಳಬಾರದು. ವ್ಯಕ್ತಿ ಆರಾಧನೆಯು ದೇಶದ ಹಿತಾಸಕ್ತಿಗೆ ಮಾರಕ ಎಂದು ಅವರು ಎಚ್ಚರಿಸಿದ್ದರು. ಪತ್ರಕರ್ತರು ಯಾವುದೇ ಒತ್ತಡಗಳಿಗೆ ಮಣಿಯದೆ ಸಮಾಜದ ಕರಾಳ ವಾಸ್ತವಗಳನ್ನು ನಿರ್ಭಯವಾಗಿ ಹೊರತರಬೇಕು. ” ಈ ಉದಾತ್ತ ಚಿಂತನೆಗಳೇ ಸ್ವತಂತ್ರ ಭಾರತದ ಮಾಧ್ಯಮ ಜಗತ್ತಿನ ಬುನಾದಿಯಾಗಬೇಕಿತ್ತು. ದುರದೃಷ್ಟವಶಾತ್ ವಸಾಹತು ದಾಳಿಯ ಮತ್ತೊಂದು ರೂಪ ಕಾರ್ಪೋರೇಟ್ ಮಾರುಕಟ್ಟೆ ದಾಳಿ ಸಂವಹನದ ಸೇತುವೆವೆಗಳನ್ನು ಭ್ರಷ್ಟಗೊಳಿಸಿದೆ.
ವರ್ತಮಾನದ ದುಸ್ಥಿತಿ ಮತ್ತು ದುರವಸ್ಥೆ
2026 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (World Press Freedom Index) ಭಾರತವು ಒಟ್ಟು 180 ದೇಶಗಳ ಪೈಕಿ 157ನೇ ಸ್ಥಾನವನ್ನು ಪಡೆದುಕೊಂಡಿದೆ. ‘ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್’ (RSF) ಸಂಸ್ಥೆಯು ಬಿಡುಗಡೆ ಮಾಡಿದ ಈ ವರದಿಯಲ್ಲಿ, ಭಾರತದ ಒಟ್ಟು ಸ್ಕೋರ್ 32.96. 2025ರಲ್ಲಿ ಭಾರತ 151ನೆಯ ಸ್ಥಾನದಲ್ಲಿತ್ತು. ಅಂದರೆ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕ್ಷೀಣಿಸುತ್ತಿರುವುದನ್ನು ಈ ವರದಿ ಸೂಚಿಸುತ್ತದೆ. ಕೇಂದ್ರ ಸರ್ಕಾರ ಈ ರೀತಿಯ ಸ್ವತಂತ್ರ ಸಂಸ್ಥೆಗಳ ಯಾವುದೇ ಸಮೀಕ್ಷೆ, ಸೂಚ್ಯಂಕ ಮತ್ತು ಶ್ರೇಯಾಂಕಗಳನ್ನೂ ಒಪ್ಪುವುದಿಲ್ಲ. ಒಂದು ಹಂತದಲ್ಲಿ ಇದು ಭಾರತ ವಿರೋಧಿ ಪಿತೂರಿ ಎಂದೇ ಪರಿಭಾವಿಸುತ್ತದೆ. ಈ ದ್ವಂದ್ವಗಳನ್ನು (Dichotomies) ಹೊರಗಿಟ್ಟು ನೋಡಿದಾಗ, ನಾವು ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಎರಡು ನೆಲೆಗಳಲ್ಲಿ ವ್ಯಾಖ್ಯಾನಿಸಬಹುದು.
ಮೊದಲನೆಯದು ಮುದ್ರಣ, ವಿದ್ಯುನ್ಮಾನ ಹಾಗೂ ಈಗ ಡಿಜಿಟಲ್ ಸಂವಹನ ಕ್ಷೇತ್ರದ ಮೇಲೆ ಪ್ರಭುತ್ವದ ನಿರ್ಬಂಧ, ನಿಯಂತ್ರಣ ಹಾಗೂ ಪರೋಕ್ಷ ಪ್ರಭಾವ. ಪ್ರಜಾಪ್ರಭುತ್ವದ ನಾಲ್ಕನೆ ಸ್ತಂಭ ಎಂದು ಪರಿಗಣಿಸಲ್ಪಟ್ಟರೂ ಚುನಾಯಿತ ಸರ್ಕಾರಗಳಿಗೆ ಈ ಸಂವಹನ ಸೇತುವೆವೆಗಳು ಸದಾ ಕಣ್ಗಾವಲಿನಲ್ಲಿರಬೇಕಾದ ಸಾಧನಗಳ ಹಾಗೆಯೇ ಕಾಣುತ್ತವೆ. ನರೇಂದ್ರ ಮೋದಿ ಸರ್ಕಾರ ಈ ನಿರ್ಬಂಧಗಳನ್ನು ಕಾಯ್ದೆ, ಕಾನೂನು ನಿಯಮಗಳ ಮುಖಾಂತರವೇ ಹೇರುತ್ತಿರುವುದನ್ನು ಕಳೆದ ಹತ್ತು ವರ್ಷಗಳಲ್ಲಿ ಗಮನಿಸಿದ್ದೇವೆ. ಪತ್ರಕರ್ತರಲ್ಲಿ, ಸಂಪಾದಕರಲ್ಲಿ ಕಾನೂನು ಭೀತಿಯನ್ನು ಸೃಷ್ಟಿಸುವ ಒಂದು ಮಾದರಿ ಈಗ ಜಾರಿಯಲ್ಲಿದೆ.
ಪತ್ರಕರ್ತರ ರಕ್ಷಣಾ ಸಮಿತಿ (CPJ) ವರದಿಯ ಅನುಸಾರ 2014-25ರ ಅವಧಿಯಲ್ಲಿ 150ಕ್ಕೂ ಹೆಚ್ಚು ಪತ್ರಕರ್ತರು ವೃತ್ತಿಗೆ ಸಂಬಂಧಿಸಿದಂತೆ ಬಂಧನ, ವಿಚಾರಣೆಗಳನ್ನು ಎದುರಿಸಿದ್ದಾರೆ. ಕನಿಷ್ಠ 36 ಪತ್ರಕರ್ತರು ಸೆರೆವಾಸ ಅನುಭವಿಸಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 40 ಪತ್ರಕರ್ತರ ಹತ್ಯೆಗಳೂ ದಾಖಲಾಗಿವೆ. ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಮಾಜದಲ್ಲಿ ರಾಜಕೀಯ ಪ್ರಾಬಲ್ಯ ಮತ್ತು ಸಂಪರ್ಕ ಇರುವ ಒಂದು ಪ್ರಬಲ ಶಕ್ತಿ ಪತ್ರಿಕೋದ್ಯಮವನ್ನು ನಿರಂತರ ಭೀತಿಯಲ್ಲಿರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವುದು ಸ್ಪಷ್ಟವಾಗುತ್ತದೆ. ತತ್ಪರಿಣಾಮವಾಗಿ ಭಾರತದಲ್ಲಿ ತನಿಖಾ ಪತ್ರಿಕೋದ್ಯಮ (Investigative Journalism) ಬಹುಮಟ್ಟಿಗೆ ಇಲ್ಲವಾಗಿದೆ. ನಿರ್ಭೀತಿಯಿಂದ ಸುದ್ದಿ ಮಾಡುವುದು ಅಥವಾ ಸತ್ಯ ಹೇಳುವುದು ಪತ್ರಕರ್ತರಿಗೆ ದುಸ್ಸಾಹಸವಾಗಿ ಕಾಣುತ್ತದೆ.
ನಿರ್ಬಂಧ-ನಿಬಂಧನೆಗಳ ರಾಜಕಾರಣ
ಈ ವಾತಾವರಣದ ಚಾರಿತ್ರಿಕ ಮೂಲವನ್ನು ನಾವು 1975ರ ತುರ್ತುಪರಿಸ್ಥಿತಿಯಲ್ಲಿ ಗುರುತಿಸಬಹುದು. ಈ ಕರಾಳ ಪರಿಸ್ಥಿತಿಯಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರು, ವಿದೇಶಿ ಪತ್ರಕರ್ತರನ್ನೂ ಸೇರಿದಂತೆ, ಬಂಧನಕ್ಕೊಳಗಾಗಿದ್ದರು.
ತುರ್ತುಪರಿಸ್ಥಿತಿಯನ್ನು ಜೂನ್ 25ರಂದು ಘೋಷಿಸಿದರೂ, 28ರವರೆಗೂ ಯಾವುದೇ ಪತ್ರಿಕೆಗಳು ಮುದ್ರಣವಾಗಲಿಲ್ಲ. ಇಂಡಿಯನ್ ಎಕ್ಸ್ಪ್ರೆಸ್ ಖಾಲಿ ಹಾಳೆಯನ್ನು ಪ್ರಸರಣ ಮಾಡುವ ಮೂಲಕ ತನ್ನ ಪ್ರತಿರೋಧ ವ್ಯಕ್ತಪಡಿಸಿತ್ತು. ಭಾರತದ ಇಡೀ ಪತ್ರಿಕಾ ವಲಯ ತುರ್ತುಪರಿಸ್ಥಿತಿಯ ವಿರುದ್ಧ ದನಿ ಎತ್ತಿದ್ದವು. ಭಾವನಾತ್ಮಕ ನೆಲೆಯಲ್ಲಿ ನೋಡಿದಾಗ ಅಂದು ನಿರ್ಮಾಣವಾಗಿದ್ದ ವಾತಾವರಣದ ಒಂದು ದಟ್ಟ ಛಾಯೆಯನ್ನು ಈಗಲೂ ಕಾಣುತ್ತಿದ್ದೇವೆ. ಅಷ್ಟೇ ಅಲ್ಲ ಇಂದೊಮ್ಮೆ ತುರ್ತುಪರಿಸ್ಥಿತಿ ಹೇರಿದರೂ, ದೇಶದ ಹಿತರಕ್ಷಣೆ, ದೇಶದ್ರೋಹಿಗಳ ನಿಯಂತ್ರಣ, ವಿದೇಶಿ ಕೈವಾಡದಿಂದ ರಕ್ಷಣೆ ಇತ್ಯಾದಿ ಸಮರ್ಥನೆಗಳನ್ನು ಮುದ್ರಣ ಮಾಧ್ಯಮಗಳಲ್ಲೂ ಕಾಣುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
ಎರಡನೆಯದಾಗಿ ಮಾಧ್ಯಮಗಳನ್ನು ವಿಮರ್ಶಾತ್ಮಕವಾಗಿ ನೋಡುವಾಗ ಪತ್ರಿಕಾ ಸಮೂಹಗಳು ಮತ್ತು ಡಿಜಿಟಲ್ ಟಿವಿ ವಾಹಿನಿಗಳು ಸ್ವತಃ ಕಟ್ಟಿಕೊಂಡಿರುವ ರಕ್ಷಾ ಕವಚಗಳನ್ನು, ಭದ್ರಕೋಟೆಗಳನ್ನು, ಆಶ್ರಯ ತಾಣಗಳನ್ನು ಮತ್ತು ರಾಜಕೀಯ ಪ್ರಭಾವಳಿಗಳನ್ನು ಗಮನಿಸಬೇಕಾಗುತ್ತದೆ. ಮುದ್ರಣ ಮಾಧ್ಯಮಗಳಲ್ಲಿ ರಾಜಕೀಯ ಒಲವು, ಆಡಳಿತಾರೂಢ ಪಕ್ಷದ ಸಾಂಗತ್ಯ ಮತ್ತು ಸಾಂಸ್ಥಿಕ ಹಿತಾಸಕ್ತಿಗಳು ಹಿಂದಿನಿಂದಲೂ ಗುರುತಿಸಬಹುದಾದ ವಿದ್ಯಮಾನ. ಸ್ವತಂತ್ರ ಮಾಧ್ಯಮ (Independent Media) ಎಂದು ಗುರುತಿಸಬಹುದಾದ ಪತ್ರಿಕೆಗಳ ಸಂಖ್ಯೆ ಬೆರಳೆಣಿಕಯಷ್ಟು. ಎಂಟು ದಶಕಗಳಿಂದಲೂ ಗುರುತಿಸಬಹುದಾನ ಸಮಾನ ಲಕ್ಷಣ ಎಂದರೆ ಚುನಾಯಿತ ಸರ್ಕಾರಗಳು ಯಾವುದೇ ಪಕ್ಷದ್ದಾಗಿದ್ದರೂ, ಪತ್ರಿಕೆಗಳು ತಮ್ಮ ರಾಜಕೀಯ ನಿಲುವುಗಳನ್ನು ಬದಲಾಯಿಸದೆ ಇರುವುದು. ಕೆಲವು ಮಾತ್ರ ತಟಸ್ಥ ನೀತಿಯ ಹೆಸರಿನಲ್ಲಿ ಅತ್ತಿತ್ತ ವಾಲುತ್ತಿರುತ್ತವೆ.
ಈ ರೀತಿ ತಮ್ಮದೇ ಸಾಂಸ್ಥಿಕ ಹಿತಾಸಕ್ತಿ ಹಾಗೂ ತಾತ್ವಿಕ ಚೌಕಟ್ಟುಗಳನ್ನು ರಕ್ಷಿಸುವ ಸಲುವಾಗಿ ಮಾಧ್ಯಮಗಳು ಅವಲಂಬಿಸುವುದು ಸಾಮಾನ್ಯವಾಗಿ ಸರ್ಕಾರಕ್ಕೆ ಸನಿಹ ಇರುವ ಬಂಡವಾಳಿಗ ವರ್ಗವನ್ನು ಮತ್ತು ಕೈಗಾರಿಕೋದ್ಯಮಿಗಳನ್ನು. ಈ ಬಂಡವಾಳಿಗರೇ ಮೂಲ ಹೂಡಿಕೆದಾರರಾದಾಗ ಪತ್ರಿಕೆಯನ್ನು ಕಡಿಮೆ ದರ-ಹೆಚ್ಚು ಪುಟ ಸೂತ್ರದಲ್ಲಿ ಜನರಿಗೆ ತಲುಪಿಸಲಾಗುತ್ತದೆ. ಮುದ್ರಣ ಮಾಧ್ಯಮ ವಲಯದಲ್ಲಿ ಮಾರುಕಟ್ಟೆ ಪೈಪೋಟಿ ಆರಂಭವಾದದ್ದು ಈ ಹೊಸ ಪರ್ವದ ಉಗಮದಿಂದ. ಇಲ್ಲಿ ಪತ್ರಿಕಾ ಸಮೂಹಗಳಿಗೆ ತಾತ್ವಿಕ ಚೌಕಟ್ಟುಗಳಿಗಿಂತಲೂ ಸಾಂಸ್ಥಿಕ ಅಸ್ತಿತ್ವ ಮತ್ತು ಪ್ರಸರಣ ಸಂಖ್ಯೆ ಮುಖ್ಯವಾಗುತ್ತದೆ. ಓದುಗರು-ವಾಚಕರು ನೀಡುವ ಚಂದಾ ಹಣ ಸಾಂಸ್ಥಿಕ ಆದಾಯದಲ್ಲಿ ಅಲ್ಪಾಂಶ ಮಾತ್ರ ಇರುವುದರಿಂದ, ಈ ಪತ್ರಿಕೆಗಳು ಪುನಃ ಸರಕು-ಸೇವೆ-ಸೌಕರ್ಯ ಮಾರುಕಟ್ಟೆಯನ್ನು ಅವಲಂಬಿಸುತ್ತವೆ.
ಮಾರುಕಟ್ಟೆ ಆರ್ಥಿಕತೆಯ ಸಂಕೋಲೆ
ಈ ಪರಾವಲಂಬಿ ಲಕ್ಷಣದ ಪರಿಣಾಮವನ್ನು ವರ್ತಮಾನದ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ, ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲೂ ಗಮನಿಸಬಹುದು. ಸುದ್ದಿಗಿಂತಲೂ ಭಾವಚಿತ್ರಕ್ಕೆ ಹೆಚ್ಚಿನ ಜಾಗ ನೀಡುವುದು ಹಾಗೂ ಸಂಪಾದಕೀಯ ಪುಟದಲ್ಲಿ ಪ್ರಕಟವಾಗುವ ವಿಭಿನ್ನ ಬರಹಗಾರರ ಲೇಖನಗಳಿಗೆ ಪದಮಿತಿಯನ್ನು ನಿಗದಿಪಡಿಸುವುದು ಈ ಮಾರುಕಟ್ಟೆ ಪ್ರಕ್ರಿಯೆಯ ಒಂದು ಮಗ್ಗುಲು. (ಸಾಮಾಜಿಕ ಹೋರಾಟಗಾರರಾದ ಅರುಣಾ ರಾಯ್ ಈ ಪದಮಿತಿಯ ಕಲ್ಪನೆಯನ್ನು ಬ್ರಹ್ಮ ರಾಕ್ಷಸ (Super Monster) ಎಂದು ಬಣ್ಣಿಸುತ್ತಾರೆ ). ಈ ಮಾದರಿಯನ್ನು ಸಾರ್ವತ್ರೀಕರಿಸಿ, ಸರ್ವಸಮ್ಮತ ನೀತಿಯನ್ನಾಗಿ ರೂಪಿಸಲೆಂದೇ ʼ ಯುವ ಜನಾಂಗ ಉದ್ದುದ್ದ ಲೇಖನಗಳನ್ನು ಓದುವುದಿಲ್ಲ , ಎಂಬ ಮಿಥ್ಯೆಯನ್ನೂ ಸೃಷ್ಟಿಸಲಾಗಿದೆ. ಸಂಪಾದಕೀಯ ಲೇಖನಗಳು 400 ರಿಂದ 700 ಪದಗಳಿಗೆ ಸೀಮಿತವಾಗಿರಬೇಕಾಗುತ್ತದೆ.
ಇಲ್ಲಿ ಉಳಿದ ಹಾಳೆಗಳನ್ನು ಆಕ್ರಮಿಸಲು ಮಾರುಕಟ್ಟೆ ಜಾಹೀರಾತುಗಳು ತುದಿಗಾಲಲ್ಲಿ ನಿಂತಿರುತ್ತವೆ. ಇದನ್ನೂ ಮೀರಿದಂತೆ ರಾಜಕೀಯ ಮಾರುಕಟ್ಟೆಯ ಹಾಲಿ/ಮಾಜಿ/ಸಂಭಾವ್ಯ ಜನಪ್ರತಿನಿಧಿಗಳು, ಅವರ ಹಿಂಬಾಲಕರು, ಅನುಯಾಯಿಗಳು ಅವರವರ ಜನ್ಮದಿನದ ಸಂಭ್ರಮಕ್ಕಾಗಿ ಬಳಸಿಕೊಳ್ಳುತ್ತಾರೆ. ಮಾರುಕಟ್ಟೆ ಸರಕುಗಳು ಪೂರ್ಣಪುಟವನ್ನು ಆವರಿಸುವಷ್ಟೇ ಪ್ರಮಾಣದಲ್ಲಿ ರಾಜಕೀಯ ಚಹರೆಗಳೂ ಕಾಣುತ್ತವೆ. ಮೊದಲ ಮೂರ್ನಾಲ್ಕು ಪುಟ ಈ ಚಿತ್ರಪಟಗಳಿಗೇ ಸೀಮಿತವಾಗುವ ಪ್ರಸಂಗಗಳನ್ನೂ ನೋಡುತ್ತಲೇ ಬಂದಿದ್ದೇವೆ. ಅಧಿಕಾರಾರೂಢ ಸರ್ಕಾರಗಳೂ ಸಹ ತಮ್ಮ ʼ ಸಾಧನೆ ʼಯನ್ನು ಜನತೆಗೆ ಮುಟ್ಟಿಸಲು ಈ ಪುಟಗಳನ್ನೇ ಅವಲಂಬಿಸುತ್ತಾರೆ. ದೊಡ್ಡ ನಾಯಕನ ದೊಡ್ಡ ಚಿತ್ರ , ಸಮೀಪವರ್ತಿಗಳ ಚಿಕ್ಕ ಚಹರೆ ಮತ್ತು ಪುಟದ ಸುತ್ತಲೂ ತೋರಣದಂತೆ ಹರಡುವ ಹಿಂಬಾಲಕ ಪಡೆಯ ಮುಖಗಳು ಇತ್ತೀಚಿನ ಮುದ್ರಿತ ಪತ್ರಿಕೆಗಳಲ್ಲಿ ಸಾಮಾನ್ಯವಾಗಿದೆ.
ಸುದ್ದಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಹುಡುಕುತ್ತಿದ್ದ ಕಾಲದಿಂದ ನಾವೀಗ ಜಾಹೀರಾತುಗಳ ನಡುವೆ ಸುದ್ದಿಗಾಗಿ ಹುಡುಕಾಡುವ ಹಂತವನ್ನು ತಲುಪಿದ್ದೇವೆ. ಜಾಹೀರಾತುಗಳ ಆದಾಯ ಮತ್ತು ಅಧಿಕಾರ ರಾಜಕಾರಣದ ಕೃಪಾಕಟಾಕ್ಷ , ಈ ಎರಡು ರಕ್ಷಾ ಕವಚಗಳ ನಡುವೆ ಮುದ್ರಿತವಾಗಿ ಜನರನ್ನು ತಲುಪುವ ಪತ್ರಿಕೆಗಳು ಅನೇಕ ಸಂದರ್ಭಗಳಲ್ಲಿ ಕರಪತ್ರಗಳಂತೆ ಕಾಣುವುದೂ ಉಂಟು. ತಮ್ಮ ಸಾಂಸ್ಥಿಕ ಅಸ್ಥಿತ್ವದ ದೃಷ್ಟಿಯಿಂದ ಇದು ಅನಿವಾರ್ಯ ಎಂಬ ಸಮರ್ಥನೆಯ ಹಿಂದೆ, ನಿರ್ದಿಷ್ಟ ರಾಜಕೀಯ ಪಕ್ಷಗಳ ಬಗ್ಗೆ ಇರುವ ನಿಷ್ಠೆ ಮತ್ತು ಅದರಿಂದಲೂ ಉದ್ಭವಿಸುವ ವಂದಿಮಾಗಧ ಲಕ್ಷಣಗಳು ಮುದ್ರಣ ವಲಯದ ಪತ್ರಿಕೋದ್ಯಮವನ್ನು ಅಕ್ಷರಶಃ ಕಾರ್ಪೋರೇಟ್ ಮಾರುಕಟ್ಟೆಯ ಜಗುಲಿಯಲ್ಲಿ ನಿಲ್ಲಿಸಿದೆ. ಕೆಲವು ಅಪವಾದಗಳನ್ನಷ್ಟೇ ಇಲ್ಲಿ ಗುರುತಿಸಲು ಸಾಧ್ಯ.
(ಮುಂದುವರೆಯುವುದು )






