ಯಕೃತ್ ದಾನ ಮಾಡಲು ಹೋಗಿ ಪ್ರಾಣ ತೆತ್ತ ಉಪನ್ಯಾಸಕಿ
ಉಪನ್ಯಾಸಕಿಯೊಬ್ಬರು ಸಂಬಂಧಿಯೊಬ್ಬರ ಜೀವ ಉಳಿಸಿಲು ಹೋಗಿ ತಮ್ಮದೇ ಪ್ರಾಣ ಕಳೆದಕೊಂಡ ಹೃದಯವಿದ್ರಾವಕ ಘಟನೆಯಿದು. ಸಂಕಷ್ಟಕ್ಕೆ ಸಿಲುಕಿದವರ ಬದುಕಿಗೆ ನೆರವಾಗಲು ಹೋಗಿ ಅದೇ ಅವರ ಬದುಕಿಗೂ ಮುಳುವಾಗಿರುವ ಬೇಸರದ ಘಟನೆ. ಇಡೀ ಕುಟುಂಬ ಮಾತ್ರವಲ್ಲದೇ ಸಂಬಂಧಿಕರು, ಪರಿಚಯಸ್ಥರಲ್ಲಿ ಈ ಘಟನೆ ಆಕ್ರಂದನಕ್ಕೆ ಕಾರಣವಾಗಿದೆ. ಅದರಲ್ಲೂ ನಾಲ್ಕು ವರ್ಷದ ಪುಟ್ಟ ಮಗುವನ್ನು ಅಗಲಿರುವ ಮನ ಮಿಡಿಯುವ ಸನ್ನಿವೇಶ. ಇದು ನಡೆದಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ.ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಉಪನ್ಯಾಸಕಿಯಾಗಿ ಕೆಲ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಅರ್ಚನಾ ಕಾಮತ್(34) ಜೀವ ಕಳೆದುಕೊಂಡವರು. ಮೃತರು ಪತಿ ಚಾರ್ಟರ್ಡ್ ಅಕೌಂಟೆಂಟ್ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಬಯಸಿದ್ದರು ಅರ್ಚನಾ. ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅರ್ಚನಾ ಕಾಮತ್ ಅವರು ಸೋಂಕಿಗೆ ತುತ್ತಾಗಿದರು. ಇದಕ್ಕಾಗಿ ಅವರಿಗೆ ಚಿಕಿತ್ಸೆ ನಡೆದಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಜೀವ ಕಳೆದುಕೊಂಡಿದ್ದಾರೆ