ಕಾಂಗ್ರೆಸ್’ನ ತೀವ್ರ ಪ್ರತಿರೋಧದ ಬಳಿಕ ಪಕ್ಷದ ಅಧಿಕೃತ ಟ್ವಿಟರ್ ಖಾತೆ, ರಾಹುಲ್ ಗಾಂಧಿಯ ಖಾತೆ ಸೇರಿದಂತೆ ಲಾಕ್ ಆಗಿದ್ದ ಇತರ ಕಾಂಗ್ರೆಸ್ ನಾಯಕರ ಖಾತೆಗಳನ್ನು ಅನ್ಲಾಕ್ ಮಾಡಲಾಗಿದೆ. ದೆಹಲಿಯ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಫೋಟೋವನ್ನು ಟ್ವಿಟರ್’ನಲ್ಲಿ ಹಂಚಿಕೊಂಡ ಕಾರಣಕ್ಕಾಗಿ ತಾತ್ಕಾಲಿಕವಾಗಿ ಹಲವು ಕಾಂಗ್ರೆಸ್ ಮುಖಂಡರ ಅಕೌಂಟ್ ಲಾಕ್ ಮಾಡಲಾಗಿತ್ತು.
ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾದ ರೋಹನ್ ಗುಪ್ತಾ ಅವರು, ಎಲ್ಲಾ ಕಾಂಗ್ರೆಸ್ ಟ್ವಿಟರ್ ಖಾತೆಗಳನ್ನು ಮತ್ತೆ ತೆರೆಯಲಾಗಿದೆ. ಅನ್ಲಾಕ್ ಮಾಡಲು ಯಾವುದೇ ಕಾರಣವನ್ನು ಟ್ವಿಟರ್ ನೀಡಿಲ್ಲ, ಎಂದು ಹೇಳಿದ್ದಾರೆ.
ಟ್ವಿಟರ್ ಖಾತೆ ತೆರೆಯಲ್ಪಡುತ್ತಿದ್ದಂತೆಯೇ, ಕಾಂಗ್ರೆಸ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ‘ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ.
ತಮ್ಮ ಟ್ವಟರ್ ಖಾತೆ ಅಮಾನತುಗೊಂಡ ನಂತರ ಶುಕ್ರವಾರದಂದು ರಾಹುಲ್ ಗಾಂಧಿಯವರು ಟ್ವಿಟರ್ ವಿರುದ್ದ ತೀವ್ರವಾದ ವಾಗ್ದಾಳಿ ನಡೆಸಿದ್ದರು. ನಮ್ಮ ರಾಜಕಾರಣದ ವ್ಯಾಖ್ಯಾನವನ್ನು ಬರೆಯಲು ಟ್ವಿಟರ್’ಗೆ ನಾವು ಅವಕಾಶ ನೀಡುವುದಿಲ್ಲ. ಟ್ವಿಟರ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದೆ, ಎಂದು ಹೇಳಿದ್ದರು.
“ಇದು ರಾಹುಲ್ ಗಾಂಧಿ ಮೇಲೆ ಆದ ದಾಳಿಯಲ್ಲ. ಇದು ರಾಹುಲ್ ಗಾಂಧಿಯನ್ನು ಮೌನವಾಗಿಸುವ ಕೆಲಸವಲ್ಲ. ನನಗೆ 19-20 ಮಿಲಿಯನ್ ಫಾಲೊವರ್ಸ್ ಇದ್ದಾರೆ. ನೀವು ಅವರ ಅಭಿಮತದ ಹಕ್ಕಿಗೆ ಧಕ್ಕೆ ಉಂಟು ಮಾಡುತ್ತಿದ್ದೀರಾ. ಇದು ಕೇವಲ ಅನ್ಯಾಯ ಮಾತ್ರವಲ್ಲ, ತಾನು ನಿರ್ಲಿಪ್ತ ಸಾಮಾಜಿಕ ಜಾಲತಾಣವೆಂದು ಹೇಳಿಕೊಳ್ಳುವ ಟ್ವಿಟರ್’ನ ಆದರ್ಶಗಳ ಉಲ್ಲಂಘನೆಯೂ ಆಗಿದೆ,” ಎಂದು ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದರು.

ಭಾರತೀಯರಾಗಿ ನಾವು ಪ್ರಶ್ನೆ ಕೇಳಬೇಕು. ಕೇಂದ್ರ ಸರ್ಕಾರಕ್ಕೆ ಕೃತಜ್ಞವಾಗಿರುವ ಕಂಪೆನಿಯೊಂದು ನಮ್ಮ ರಾಜಕಾರಣದ ವ್ಯಾಖ್ಯಾನವನ್ನು ಬರೆಯುವುದೇ? ಪರಿಸ್ಥಿತಿ ಇಲ್ಲಿಗೆ ತಲುಪಬೇಕಿದೆಯೇ? ಅಥವಾ ನಮ್ಮ ರಾಜಕಾರಣದ ವ್ಯಾಖ್ಯಾನವನ್ನು ಬರೆಯುವವರು ನಾವೇ ಆಗಿರಬೇಕೆ?, ಎಂದು ಪ್ರಶ್ನಿಸಿದ್ದಾರು.
ಭಾರತದಲ್ಲಿ ಟ್ವಿಟರ್ ವಿರುದ್ದ ಅಸಹನೆ ಹಾಗೂ ಪ್ರತಿರೋಧ ಹೆಚ್ಚಾಗುತ್ತಿದ್ದಂತೆಯೇ, ಟ್ವಿಟರ್ ತನ್ನ ಭಾರತದ ಮುಖ್ಯಸ್ಥರನ್ನು ಅಮೇರಿಕಾಕ್ಕೆ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಮನೀಷ್ ಮಹೇಶ್ವರಿ ಅವರು ಅಮೇರಿಕಾದಲ್ಲಿ ಹಿರಿಯ ನಿರ್ದೇಶಕರ ಸ್ಥಾನಕ್ಕೆ ಭಡ್ತಿ ಹೊಂದಿ ವರ್ಗಾವಣೆಗೊಂಡಿದ್ದಾರೆ.