ತುಮಕೂರು: ಹಿರಿಯ ರಂಗಕರ್ಮಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರನ್ನು ಸರ್ಕಾರಿ ಅಧಿಕಾರಿಗಳು ಪದೇ ಪದೇ ಕಚೇರಿಗೆ ಅಲೆದಾಡಿಸಿದ ಘಟನೆ ಗುಬ್ಬಿ ತಾಲೂಕಿನ ಭೂಮಾಪನ ಕಚೇರಿಯಲ್ಲಿ ನಡೆದಿದೆ.

ರಂಗಭೂಮಿಯ ಭೀಷ್ಮ ಎಂದೇ ಖ್ಯಾತರಾದ ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಬಿ. ಜಯಶ್ರೀ ಅವರು ಹಿರಿಯ ರಂಗಕರ್ಮಿಯಾಗಿದ್ದು, ದೇಶ–ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ. ರಂಗಚಟುವಟಿಕೆಗಳಿಗಾಗಿ ಜಿ.ವಿ. ಮಾಲತಮ್ಮ ಆರ್ಟ್ ಟ್ರಸ್ಟ್ ಹೆಸರಿನಲ್ಲಿ ತಮ್ಮದೇ ಜಮೀನಿನ 5 ಗುಂಟೆಯನ್ನು ದಾನ ಮಾಡಲು ಮುಂದಾಗಿದ್ದಾರೆ. ಸರ್ಕಾರದಿಂದಲೂ ರಂಗಚಟುವಟಿಕೆಗಳಿಗೆ ಅನುದಾನ ಮಂಜೂರಾಗಿದೆ.

ಜಮೀನು ಖಾತೆ ಪ್ರಕ್ರಿಯೆಗೆ ಅಗತ್ಯವಾದ ಸರ್ವೆ ಕಾರ್ಯಕ್ಕಾಗಿ ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿ ಒಟ್ಟು 3,500 ರೂ. ಶುಲ್ಕ ಪಾವತಿಸಲಾಗಿದೆ. ಕಚೇರಿಗೆ ಬರಲು ಹೇಳಿದ್ದ ಸರ್ವೇಯರ್ ಶಿವಾನಂದ್ ಅವರು ಕಚೇರಿಯಲ್ಲಿ ಲಭ್ಯವಿರಲಿಲ್ಲ. ಈ ಕುರಿತು ಪ್ರಶ್ನಿಸಿದಾಗ, ನಿಮ್ಮ ಕೆಲಸಕ್ಕಿಂತ ಮೇಲಾಧಿಕಾರಿಗಳ ಕೆಲಸ ಮುಖ್ಯ ಎಂದು ಬೇಜವಾಬ್ದಾರಿಯ ಉತ್ತರ ನೀಡಿದರೆಂದು ಆರೋಪಿಸಲಾಗಿದೆ. ಇದರಿಂದ ಜಯಶ್ರೀ ಅವರಿಗೆ ತೀವ್ರ ಬೇಸರ ಉಂಟಾಗಿದೆ. ಈ ಸಂದರ್ಭದಲ್ಲಿ ರಂಗತಜ್ಞ ಆನಂದರಾಜ್ ಕೂಡ ಕಚೇರಿಗೆ ಅಲೆದಿದ್ದಾರೆ ಎನ್ನಲಾಗಿದೆ.

ಮೂರು ಬಾರಿ ಅರ್ಜಿ ಸಲ್ಲಿಸಿ, ಶುಲ್ಕ ಕಟ್ಟಿದರೂ ಸಮಯಕ್ಕೆ ಸರ್ವೆ ಕಾರ್ಯವಾಗದಿರುವುದು ಇಲಾಖೆಯ ಕರ್ತವ್ಯ ಲೋಪ ಎಂದು ಜಯಶ್ರೀ ಅಸಮಾಧಾನ ವ್ಯಕ್ತಪಡಿಸಿದರು. ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕ್ಕೆ ಮನ್ನಣೆ ಸಿಗದಿದ್ದರೆ ಹೇಗೆ, ಮಾಜಿ ಸಂಸದೆ ನನಗೆ ಅಲೆದಾಡುವ ಈ ಗತಿ ಬಂದಿದೆ. ಸಾಮಾನ್ಯ ರೈತನ ಕತೆ ಏನು ಎಂದು ಪ್ರಶ್ನಿಸಿದರು.

ಸರ್ವೆ ಮೇಲ್ವಿಚಾರಕ ನಿಜಗುಣಪ್ಪ ಅವರೊಂದಿಗೆ ನಮ್ಮ ಇಲಾಖೆಯ ಕಮಿಷನರ್ ಕಚೇರಿಯಿಂದ ಮೌಖಿಕ ಆದೇಶ ಬಂದ ಹಿನ್ನಲೆ ನಿಟ್ಟೂರು ಭಾಗಕ್ಕೆ ತೆರಳಿದ್ದೇನೆ ಎಂದು ಹಾರಿಕೆ ಉತ್ತರ ನೀಡಿದ ಪರವಾನಗಿ ಸರ್ವೇಯರ್ ಶಿವಾನಂದ್ ಅವರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಬೇಕು ಎಂದು ಜಯಶ್ರೀ ಸ್ಥಳದಲ್ಲಿ ಒತ್ತಾಯಿಸಿದರು. ಸ್ಥಳಕ್ಕೆ ಧಾವಿಸಿದ ಸರ್ವೇಯರ್ ದಿನೇಶ್ ಹಾಗೂ ಬಾಹುಬಲಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಶಿವಾನಂದ್ ಅವರು ಅರ್ಜಿಗೆ ಸಹಿ ಹಾಕಿಸಲು ಸೂಚಿಸಿದ್ದ ಮತ್ತೋರ್ವ ಸರ್ವೇಯರ್ ರಂಗಸ್ವಾಮಿ ಬಂದು ಸಹಿ ಪಡೆದರು. ಸಹಾಯಕ ನಿರ್ದೇಶಕ ತಿಮ್ಮಯ್ಯ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿ ಜಯಶ್ರೀ ಅವರು ಮಾಜಿ ಸಂಸದೆ ಸ್ಥಾನಕ್ಕೆ ಕೊಂಚ ಬೆಲೆ ನೀಡಬೇಕಿತ್ತು ಎಂದು ತಿಳಿಸಿ ಬೇಸರದಲ್ಲೇ ಕಚೇರಿಯಿಂದ ಹೊರ ನಡೆದ ಘಟನೆ ನಡೆದಿದೆ.













