ಚಿಕ್ಕಬಳ್ಳಾಪುರ ಶಾಸಕ ಹಾಗು ಆರೋಗ್ಯ ಸಚಿವ ಡಾ ಕೆ. ಸುಧಾಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸೂಚನೆಯಂತೆ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸೂಚನೆ ಕೊಡಲಾಗಿದೆ. 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರ ಸಂಪುಟ ವಿಸ್ತರಣೆ ಬಳಿಕ ಹಲವಾರು ಜನರು ಅಸಮಾಧಾನ ಹೊಂದಿದ್ದರು. ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ಡಾ ಕೆ ಸುಧಾಕರ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವಂತೆ ಕಾಂಗ್ರೆಸ್ ಸೂಚನೆ ಕೊಟ್ಟಿತ್ತು. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಜ್ಙರನ್ನೇ ನೇಮಿಸಬೇಕು ಅನ್ನೋ ನಿಯಮ ಇರುವ ಕಾರಣ ಡಾ ಸುಧಾಕರ್ ನೇಮಕ ಕಾನೂನು ಬಾಹಿರ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಅಂದಿನ ಸಿಎಂ ಕುಮಾರಸ್ವಾಮಿ. ಕುಮಾರಸ್ವಾಮಿ ವಿರುದ್ಧ ಬಹಿರಂಗ ಟೀಕಾಪ್ರಹಾರ ಮಾಡಿದ್ದ ಡಾ ಸುಧಾಕರ್, ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸುವ ಸುಳಿವು ನೀಡಿದ್ದರು. ಆ ಬಳಿಕ ಸರ್ಕಾರದ ಉಳಿವಿಗಾಗಿ ಹೆಚ್.ಡಿ ಕುಮಾರಸ್ವಾಮಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಇದನ್ನು ಅಧಿಕೃತವಾಗಿ ಟ್ವೀಟ್ ಮಾಡಿದ್ದ ಡಾ ಸುಧಾಕರ್, ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದರು ಸುಧಾಕರ್.
ರಾಜ್ಯ ಸರ್ಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ ಕೆ ಸುಧಾಕರ್ ಅವರನ್ನು ನೇಮಕ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ ಆಗಿದ್ದಾಗ ಪ್ರತಿಕ್ರಿಯೆ ನೀಡಿದ್ದ ಡಾ ಕೆ ಸುಧಾಕರ್, ಕಳ್ಳಬಟ್ಟಿ ದಂಧೆ ಕೇಸ್ನಲ್ಲಿ ಜೈಲು ವಾಸ ಅನುಭವಿಸಿದ ವ್ಯಕ್ತಿ ನನ್ನ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಮೂಲಕ ಅರ್ಜಿದಾರರ ವಿರುದ್ಧ ವ್ಯಂಗ್ಯವಾಡಿದ್ದರು. ಇನ್ನು ಹೈಕೋರ್ಟ್ ವಿಚಾರಣೆ ವೇಳೆ ಅರ್ಜಿದಾರರ ಕಳ್ಳಬಟ್ಟಿ ಕೇಸ್ ಬಗ್ಗೆ ಮಾಹಿತಿ ನೀಡ್ತೇನೆ ಎಂದಿದ್ದರು. ಆ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಆಗಿದ್ದ ಸುಧಾಕರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸುಪ್ರೀಂಕೋರ್ಟ್ ಸೂಚನೆ ಅನ್ವಯ, ಕ್ರಿಮಿನಲ್ ಕೇಸ್ ದಾಖಲು ಮಾಡಲು ಜನಪ್ರತಿನಿಧಿಗಳ ನ್ಯಾಯಾಲಯ ಸೂಚನೆ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದಕ್ಕೆ ನಿರ್ಬಂಧ ಹೇರಿಕೆ ಮಾಡಿತ್ತು. ಸುಪ್ರೀಂಕೋರ್ಟ್ ಸೂಚನೆಯಂತೆ ಅಧ್ಯಕ್ಷರ ನೇಮಕಕ್ಕೆ ನಿಯಮಾವಳಿಯನ್ನೂ ರೂಪಿಸಬೇಕು ಎಂದು ಕಟ್ಟಾಜ್ಞೆ ನೀಡಿತ್ತು. ಜಲಕಾಯ್ದೆಗೆ ಅನುಗುಣವಾಗಿ ನಿಯಮಗಳನ್ನು ರೂಪಿಸಿ ಎಂದು ಚಾಟಿ ಬೀಸಿತ್ತು. ಆ ಬಳಿಕ ಡಾ ಸುಧಾಕರ್ ರಾಜೀನಾಮೆ ನೀಡಿದರೂ ಪಿಐಎಲ್ ಅರ್ಜಿ ಸ;ಲ್ಲಿಕೆ ಮಾಡಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರನ್ನು ನಿಂಧಿಸಿದ್ದ ಕೇಸ್ನಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ಜಾಮೀನು ಸಿಗದಿದ್ದರೆ ಬಂಧನ ಆಗುವ ಸಾಧ್ಯತೆಯೂ ದಟ್ಟವಾಗಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಐಪಿಸಿ ಸೆಕ್ಷನ್ 499, 500, 501, ಹಾಗೂ 34 ರ ಅಡಿ ಪ್ರಕರಣ ದಾಖಲು ಮಾಡಲು ಸೂಚಿಸಿದೆ. ಪ್ರಕರಣ ದಾಖಲು ಮಾಡಿಕೊಂಡು ಸುಧಾಕರ್ಗೆ ಸಮನ್ಸ್ ಜಾರಿ ಮಾಡಿದೆ. ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಆಂಜನೇಯ ರೆಡ್ಡಿ, ಸಿವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮಾನನಷ್ಟದ ಪ್ರಕರಣಕ್ಕೆ ಸೂಕ್ತ ಸಾಕ್ಷಿಗಳು ಇರುವ ಕಾರಣದಿಂದಲೇ ಕೋರ್ಟ್ ಕ್ರಿಮಿನಲ್ ಕೇಸ್ಗೆ ಸೂಚಿಸಿದೆ. ಆರೋಪ ಸಾಬೀತು ಆದರೆ 2ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಶಿಕ್ಷೆ ಹಾಗು ದಂಡ ಅಥವಾ ಎರಡೂ ಕೂಡ ವಿಧಿಸಲು ಅವಕಾಶವಿದೆ. ಕ್ರಿಮಿನಲ್ ಕೇಸ್ನಲ್ಲಿ ಸಚಿವ ಸುಧಾಕರ್ ಅವರು ಸಿಲುಕಿರುವುದರಿಂದ ಸಚಿವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ನಿರೀಕ್ಷಣಾ ಜಾಮೀನು ಸಿಗದಿದ್ದಾಗ ಸುಧಾಕರ್ ಅವರ ಬಂಧನ ಮಾಡುವುದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದು. ಒಟ್ಟಿನಲ್ಲಿ ಚುನಾವಣೆಗೆ ತಯಾರಿ ನಡೆಸುವ ಸಂಧರ್ಭದಲ್ಲಿದಲ್ಲಿ ಸಂಕಷ್ಟವೊಂದು ಎದುರಾಗಿದೆ ಎನ್ನಬಹುದು.