ಇಂದು ನಮ್ಮ ಮಕ್ಕಳು ಮೊಬೈಲ್ ಯುಗದಲ್ಲಿ ಬದುಕುತ್ತಿದ್ದಾರೆ. ಕೃಷಿ, ರೈತರು ಎಂದರೆ ಅವರಿಗೆ ಹೆಚ್ಚೇನೂ ಗೊತ್ತಿಲ್ಲ. ಹಿಂದಿನ ಕಾಲದಲ್ಲಿ ಕಣ ಮಾಡುವುದು ಅದರ ಜೊತೆಗೆ ಹಂತಿ ಪದಗಳನ್ನು ಹಾಡುವುದು ಇವೆಲ್ಲ ಬಹುತೇಕ ಮಕ್ಕಳಿಗೆ ಗೊತ್ತಿಲ್ಲ ಎನ್ನಬಹುದು. ಇವರಿಗೆ ತಿಳಿಸಲು ಗದಗ್ ಜಿಲ್ಲೆಯ ಅಬ್ಬಿಗೇರಿಯ ಬಸವರಾಜ್ ಪಲ್ಲೇದ್ ಅವರು ಜಾಲತಾಣಗಳ ಮೂಲಕ ಮಕ್ಕಳಿಗೆ ತಿಳಿ ಹೇಳುವ ಆನ್ ಲೈನ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಈ ಕ್ಯಾಂಪೇನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬರಹಗಾರ ಹಾಗೂ ಸಾಮಾಜಿಕ ಹೋರಾಟಗಾರರರಾದ ಬಸವರಾಜ್ ಪಲ್ಲೇದ ಏನೇನು ಹೇಳಿದ್ದಾರೆ. ಆ ಬಗ್ಗೆ ಇಲ್ಲಿ ಅವರಿಂದಲೇ ಪಡೆದ ಒಂದಿಷ್ಟು ಮಾಹಿತಿ .
ಸರ್ ಕೃಷಿ ಮತ್ತು ರೈತರ ಚಟುವಟಿಕೆಗಳ ಬಗ್ಗೆ ಆನ್ ಲೈನ್ ಕ್ಯಾಂಪೇನ್ ಯೋಚನೆ ಹೇಗೆ ಬಂತು?
ಬಾಲ್ಯದಲ್ಲಿ ನಾವು ಕಂಡ ನೆನಪು ಇಂದು ನೇಪತ್ಯಕ್ಕೆ ಸರಿಯುತ್ತಿದೆ.ಕಣ ಮಾಡಿ ಅದರ ನಡುವೆ ಮೇಟಿ ನೆಟ್ಟು ಜೊಡೆತ್ತುಗಳ ಜೊತೆ ರೂಲ ಹೊಡೆದು ಹಂತಿ ಕಟ್ಟಿ ರಾಶಿಮಾಡುತ್ತಿದ್ದ ಕಾಲ ಮರೆಯಾಗುತ್ತದೆ. ” ರಾಶಿ ಮಾಡ್ಯಾರ ನೊಡಶರಣರು ರಾಶಿ ಮಾಡ್ಯಾರ ನೊಡ,ರಾಶಿ ಮಾಡ್ಯಾರ ನೊಡ’ ಸೊಸಿ ವಿಚಾರ ಮಾಡಿ ಶರಣ ಬಸಪ್ಪನವರು ರಾಶಿ ಮಾಡ್ಯಾರ ನೊಡ” ಅಂತ ಹಂತಿ ಪದ ಹಾಡೊ ಕಾಲ, ಎಂತ ಚೆಂದ ಎನು ಅಂದ. ರಾಶಿ ಮಾಡು ಸಮಯಕ್ಕೆ ರೈತರ ಸಂತಸ ಮುಗಿಲು ಮುಟ್ಟುವ ಕ್ಷಣ ಕಣ್ಮರೆಯಾಗುತ್ತಿದೆ. ಆದ್ದರಿಂದ ಅವರು ಬಳಸುತ್ತಿರುವ ಮಾಧ್ಯಮ ಅಂದರೆ ಜಾಲತಾಣಗಳಲ್ಲಿ ಅವೇರ್ ನೆಸ್ ಮೂಡಿಸುವ ನನ್ನ ಚಿಕ್ಕ ಪ್ರಯತ್ನ. ಅದರಲ್ಲಿ ನಾನು ತಿಳಿಸಿದ ಮಾಹಿತಿ ಹೀಗಿದೆ:
ನೆನಪು ಮಾತ್ರ: ಕಣಾ ಮಾಡಿ ಹಂತಿ ಕಟ್ಟಿ ಮಾಡಿದ ಜವಾರಿ ಗೋಧಿ ರಾಶಿ,ಕಲ್ಲಿನ ರೂಲ್ ಬಂಡಿ ಬಳಸಿ ಮಾಡಿದ ಬಿಳಿಜೋಳ ರಾಶಿ ಮಾಡಿದ್ದು, ಹಂತಿ ಕಟ್ಟಿದಾಗ ಹಾಡುವ ಹಂತಿ ಪದಗಳು, ಹಬ್ಬು ಶೇಂಗಾ ರಾಸಿ ಮಾಡಿ ತೂರಿದ ರೈತರು ಮತ್ತು ರೈತರು ಮಾಡಿದ ಹಲವು ಬಗೆಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಂಗಡಿಗ ರೈತರೂ ಸಂತೋಷ ಪಡುತ್ತಿದ್ದ ಕಾಲ ಇನ್ನೂ ನೆನಪು ಮಾತ್ರ.
ಕಣ ಮಾಡುವುದು : ದೊಡ್ಡ ತಾಮ್ರದ ಕೊಡ, ಹದಿನಾರುಮಾರು ಹಗ್ಗದಿಂದ ಭಾವಿಯಿಂದ ಸೇದಿ, ಮತ್ತು ಕೆರೆ ಕಟ್ಟೆಗಳಿಂದ ನೀರನ್ನು ಹೆಗಲ ಮೇಲೆ ಹೊತ್ತು ತಂದು, ಕಣ ತುಳಿಯುತ್ತಿದ್ದ ಎತ್ತಿನ ಕಾಲುಗಳ ಮಧ್ಯ ಸುರಿಯತ್ತ, ಗಟ್ಟಯಾಗುವ ವರೆಗೆ ನೀರನ್ನು ತಂದು ಸುರಿಯಲಾಗುತ್ತಿತ್ತು ಕೊನೆಗೂ ಕಣ ಹದಕ್ಕೆ ಬಂದಾಗ ಕಣವನ್ನು ರೂಲ ಹೊಡೆದು ಡಾಂಬರ ರೋಡಿನಂತಾದಾಗ, ಕಣದ ಮಧ್ಯ ಮೇಟಿ ನೆಟ್ಟು,ದನದ ಕೊಟ್ಟಿಗೆಯಲ್ಲಿ ತೆಗೆದಿಟ್ಟ ಸೆಗಣಿಯನ್ನು ಚಕ್ಕಡಿಯಲ್ಲಿತಂದು ಸಾರಿಸಿ, ಒಣಗಿದ ನಂತರ ಪೂಜೆ ಮಾಡಿದ ನಂತರಸುರುವಾಗುತ್ತಿದ್ದವು ರಾಶಿಗಳು.
ರಾಶಿಗಳು :- ಮುಂಗಾರಿ ಜೋಳ,ಬಿಳಿ ಜೋಳಕಡ್ಲಿ,ಗೋದಿ ಅಬಬ ಎಂತಾ ರಾಸಿ, “ಮೇಟಿ”ಗೆ ಹಂತಿಕಟ್ಟುವದು’ “ರೂಲ್ “ಬಳಸಿ ರಾಶಿ ಮಾಡುವದು, ಹದಗೊಳಿಸಿ ಗಾಳಿಗಾಗಿ ಕಾದು “ಮೆಟ್ಟ” “ಗ್ವಾರಿ “”ಜಂತ ಗುಂಟಿ “ಬಳಸಿ ಗಾಳಿ ಬಿಟ್ಟಾಗ ತೂರುತ್ತಿದ್ದ ಕಾಲ ಇಂದು ಮರೀಚಿಕೆಯಾಗುತ್ತಿದೆ.
ಕಣದಲ್ಲಿಯೆ ವಿತರಣೆ : —ಕಣದಲ್ಲಿ ರಾಶಿಯಾದ ನಂತರದಲ್ಲಿ ಮನೆ ದೇವರಿಗೆ ಒಂದು ಪಾಲು ತೆಗೆದ ನಂತರ ಶ್ರಮಿಕ ರೈತ ಕಾರ್ಮಿಕರಿಗೆ ಪಾಲನ್ನು ವಿತರಿಸಲಾಗುತ್ತಿತ್ತು. ಅಲ್ಲದೆ ಆಯಗಾರರಿಗೆ ಕಣದಲ್ಲೆ ಅವರಿಗೆ ಪಾಲನ್ನು ಕೊಡುವುದು ವಾಡಿಕೆ ಆಗಿತ್ತು. ಈಗ ಆಯಾನು ಹೊಯ್ತು,ಕೃಷಿಯ ಪಾಯಾನ ಹೋಯ್ತು,ಎಲ್ಲ ಅವಸರ ಅವಸರ.ರೈತ ರಾಶಿಯನ್ನು ಮನೆಗೆ ತಂದು ಮನೆ ತುಂಬಿಸಿಕೊಳ್ಳುತ್ತಿದ್ದ ಆನಂದ, ಸಂತಸ, ಗಾಂಭೀರ್ಯ ಕಲ್ಪಸಿಕೊಂಡ್ರೆ ರೊಮಾಂಚನ ವಾಗುತ್ತಿತು. ಈಗ ಇವುಗಳಲ್ಲ ಮಂಗಮಾಯ.
ಪಾಯ ತಪ್ಪಲು ಕಾರಣ :- ಕಣಾ ಮಾಡುವುದು,ರೂಲ ಹೊಡೆಯುವದು,ರಾಶಿ ಮಾಡುವುದು ಆಗಿನ ಕಾಲದಲ್ಲಿ,ಈಗ ಎಲ್ಲಾ ಯಂತ್ರಗಳ ಮೂಲಕ.ಕಣ’ಹಂತಿ ‘ಮೇಟಿ ,ರೂಲು, ಅಂದ್ರೇ ಹಲವರಿಗೆ ತಿಳಿಯುತ್ತಿಲ್ಲ. ಇವುಗಳನ್ನು ಬಳಸಿ ಮಾಡುವ ಕೆಲಸಗಳು ಮಾಯವಾಗಿ ಹೋಗಿವೆ. ಇದಕ್ಕೆ ಕಾರಣ ಆಧುನಿಕ ತಂತ್ರಜ್ಞಾನ & ಯಂತ್ರೋಪಕರಣಗಳು. ಕೃಷಿ ಕ್ಷೇತ್ರಗಳ ಸಣ್ಣ ಸಣ್ಣ ವಿಭಜನೆ, ಜಮೀನುದಾರಿಕೆ ಕಡಿಮೆ ಯಾಗಿದ್ದು, ರೈತರಲ್ಲಿ ಅವಸರ ಪ್ರವೃತ್ತಿ. ಕಣ ಮಾಡುವ ಅತಿಯಾದ ಪರಿಶ್ರಮ. ಕಡಲೆ, ಜೋಳ, ಗೋದಿ ಬೆಳೆಗಳ ಕ್ಷೇತ್ರ ಕಡಿಮೆಯಾಗಿದ್ದು, ನಗರೀಕರಣ. ಕಣ’ ಹಂತಿ, ಮೇಟಿ, ರೂಲು ಮೆಟ್ಟು ಇವೆಲ್ಲಾ ನಮ್ಮ ಎದುರಿಗೆ ಇದ್ದವು.ಹೋದವು.ಎಲ್ಲಿ ಹೋದವು? ಎಂಬ ಪ್ರಶ್ನೆ ಉದಯಿಸುತ್ತದೆ. ಆದರೆ ಅವು ಎಲ್ಲಿಯೂ ಹೋಗಿಲ್ಲ.ಇಲ್ಲಿಯೇ ಇವೆ .ಆದರೆ ಇವುಗಳಿಂದ ನಾವು ಬಹು ದೂರ ಸಾಗಿ ಹೋಗುತ್ತಿದ್ದೇವೆ. ಿವುಗಳ ಬಗ್ಗೆ ಇಂದಿನ ಮಕ್ಕಳಿಗೆ ಶಾಲೆಯಲ್ಲಿ ತಿಳಿಸುವ ಪರೊಪಾಠ ಬೆಳೆಯಬೇಕು ಎಂಬುದು ನನ್ನ ಅಂಬೋಣ.
ಇಂತಿಪ್ಪ ಬಸವರಾಜ್ ಅವರ ಮಾಹಿತಿ. ಇದು ಇಲ್ಲಿಗೆ ಮುಗಿದಿಲ್ಲ. ಇಂತಹ ಇನ್ನೂ ಅನೇಕ ಮಾಹಿತಿಗಳನ್ನು ತಿಳಿಸುವ ತವಕ ಅವರಲ್ಲಿದೆ. ಇಂತಹ ಅಭಿಯಾನಗಳ ಇನ್ನೂ ಬರಲಿ. ಮಕ್ಕಳಿಗೆ ಮರೆತ ಪುಟಗಳ ಹಾಗೂ ಸಾಂಪ್ರದಾಯಿಕ ಮತ್ತು ಗ್ರಾಮೀಣ ಬದುಕಿನ ಅನೇಕ ಮಾಹಿತಿ ಬಸವರಾಜ್ ಅವರಿಂದ ತಿಳಿಯಲಿ ಎನ್ನುವುದು ‘ಪ್ರತಿಧ್ವನಿ’ ತಂಡದ ಹಾರೈಕೆ.