ಕನ್ನಡದ ಪ್ರಮುಖ ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದ ಬೆನ್ನಲ್ಲೇ ಬೆಂಗಳೂರು ನಗರಾದ್ಯಂತ ಪೊಲೀಸ್ ಬಂದೋಬಸ್ತ್ ಹೆಚ್ಚಿದೆ. ಶುಕ್ರವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ಬೆನ್ನಲ್ಲಿ ಪುನೀತ್ ಅವರನ್ನು ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ಆಸ್ಪತ್ರೆಯಲ್ಲೇ ಕೊನೆಯುಸಿರು ಎಳೆದಿದ್ದರು.
ಪುನೀತ್ ಸಾವಿನ ಸುದ್ದಿ ಕೇಳಿ ಆಸ್ಪತ್ರೆ ಮುಂದೆ ಅಭಿಮಾನಿಗಳ ದಂಡೇ ಜಮಾಯಿಸಿತ್ತು. ಪರಿಣಾಮ ವಿಕ್ರಮ್ ಆಸ್ಪತ್ರೆ ಇರುವ ವಸಂತ ನಗರ ಸುತ್ತಮುತ್ತ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಬಳಿಕ ಮೃತದೇಹವನ್ನು ಸದಾಶಿವನಗರದ ಪುನೀತ್ ಅವರ ಮನೆಗೆ ರವಾನಿಸಲಾಗಿತ್ತು. ಈ ವೇಳೆ ಆ ಭಾಗದಲ್ಲೂ ರಸ್ತೆ ಸಂಚಾರಕ್ಕೆ ತೊಡಕಾಗಿದೆ.
ತಮ್ಮ ಇಷ್ಟದ ನಟನ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಅಚಾತುರ್ಯ ನಡೆಸಿಯಾರು ಎಂಬ ಆತಂಕದಲ್ಲಿ ಬೆಂಗಳೂರಿನ ಅಲ್ಲಲ್ಲಿ ಪೊಲೀಸರ ತುಕಡಿಗಳು ನಿಯೋಜನಗೊಂಡಿವೆ. ಸಂಚಾರ ಪೋಲಿಸರು ಟ್ರಾಫಿಕ್ ನಿರ್ವಹಣೆಯಲ್ಲಿ ತೊಡಗಿದ್ದಾರೆ.
ನಗರಾದ್ಯಂತ 6 ಸಾವಿರ ಪೊಲೀಸರು, ಕೆಎಸ್ಆರ್ಪಿ KSRP ಪ್ಲಟೂನ್ ನಿಯೋಜನೆ ಮಾಡಲಾಗಿದ್ದು, ಭಾನುವಾರ ಮಧ್ಯ ರಾತ್ರಿ ವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಷ್ಟೇ ಜನ ಬಂದ್ರೂ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತೆ. ಈ ಸಂದರ್ಭದಲ್ಲಿ ಕುಚೇಷ್ಟೇ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕಮಿಷನರ್ ಕಮಲ್ ಪಂಥ್ ಎಚ್ಚರಿಸಿದ್ದಾರೆ.

ಮದ್ಯ ಮಾರಾಟ ನಿಷೇಧ
ಬೆಂಗಳೂರು ನಗರದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಅ.31ರ ಮಧ್ಯರಾತ್ರಿ ವರೆಗೆ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದು, ತತಕ್ಷಣವೇ ಜಾರಿಗೆ ಬರಲಿದೆ.
ರಾಜ್ಯಾದ್ಯಂತ ಚಿತ್ರಪ್ರದರ್ಶನ ಬಂದ್
ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿತ್ರಪ್ರದರ್ಶನವನ್ನು ನಿಲ್ಲಿಸಲಾಗಿದೆ. ಈ ಕುರಿತು ಮೈಸೂರಿನಲ್ಲಿ ಕರ್ನಾಟಕದ ಚಲನಚಿತ್ರ ಪ್ರದರ್ಶಕರ ಮಹಾ ಮಂಡಲ್ ಉಪಾಧ್ಯಕ್ಷ ರಾಜಾರಾಮ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಪ್ರಾರಂಭವಾಗಿರುವ ಚಿತ್ರ ಪ್ರದರ್ಶನ ಮುಂದುವರೆಯುತ್ತಿವೆ. 2.30 ಶೋ ಹಾಗೂ 4.30ಯ ನಂತರದ ಶೋಗಳು ಕ್ಯಾನ್ಸಲ್ ಆಗಿವೆ. ಚಿತ್ರರಂಗ ಮೊದಲು ಈ ಶಾಕ್ ನಿಂದ ಹೊರ ಬರಬೇಕು. ಮುಂದೆ ಯಾವಾಗ ಚಿತ್ರ ಪ್ರದರ್ಶನ ಮಾಡಬೇಕು ನೋಡೋಣ. ಪುನೀತ್ ಜೊತೆ ನಾನು ಚಾಮುಂಡಿ ಬೆಟ್ಟ ಹತ್ತಿ ಇಳಿಯುತ್ತಿದ್ದೆ. ಅವರು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದರು. ಅವರಿಗೆ ಈ ರೀತಿ ಆಗಿರೊದು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಎರಡು ದಿನ ಜಿಮ್ ಸೆಂಟರ್ಗಳು ಬಂದ್
ದೇಹವನ್ನು ದಂಡಿಸುತ್ತಾ, ಆರೋಗ್ಯ ಕಾಪಾಡಿಕೊಂಡು ಬಂದಿದ್ದ ಪುನೀತ್ ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಜಿಮ್ ಕೇಂದ್ರಗಳು ಶುಕ್ರವಾರ ಮತ್ತು ಶನಿವಾರ ಬಂದ್ ಮಾಡಿ, ಅಗಲಿದ ಆತ್ಮೀಯ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿವೆ.

ಪರೀಕ್ಷೆಗಳು ಮುಂದೂಡಿಕೆ
ರಾಜ್ಯದಲ್ಲಿ ಶನಿವಾರ ನಡೆಯಬೇಕಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎಂಬಿಎ ಪರೀಕ್ಷೆಗಳನ್ನು ಮುಂದೂಡಲಾಗಿದೆ.






