ಮಂಗಳೂರು : ಮನೆಯ ಹಿಂಬದಿಯಿದ್ದ ತಡೆಗೋಡೆ ನಿರ್ಮಾಣದ ಸಂದರ್ಭದಲ್ಲಿ ಧರೆ ಕುಸಿದ ಪರಿಣಾಮ ಮೂವರು ಕಾರ್ಮಿಕರು ದುರ್ಮರಣಕ್ಕೀಡಾದ ದಾರುಣ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗುರುಂಪು ಎಂಬಲ್ಲಿ ಸಂಭವಿಸಿದೆ. ಮೃತಪಟ್ಟ ಮೂವರು ಕಾರ್ಮಿಕರು ಗದಗ ಜಿಲ್ಲೆಯ ಮುಂಡರಗಿ ಮೂಲದವರು ಎನ್ನಲಾಗಿದ್ದು ಈ ಪೈಕಿ ಇಬ್ಬರ ಹೆಸರನ್ನು ಶಾಂತಾ ಹಾಗೂ ಸೋಮಶೇಖರ್ ದಂಪತಿ ಎಂದು ಗುರುತಿಸಲಾಗಿದೆ.
ಮೂವರು ಕಾರ್ಮಿಕರು ಗುರುಂಪು ಗ್ರಾಮದ ಅಬೂಬಕ್ಕರ್ ಎಂಬವರ ನಿವಾಸ ಹಿಂಬದಿಯಲ್ಲಿ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಇಂದು ಮಧ್ಯಾಹ್ನದ ವೇಳೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ಧರೆ ಕುಸಿದಿದೆ. ಪರಿಣಾಮ ಮೂವರು ಕಾರ್ಮಿಕರು ಮಣ್ಣಿನ ಆಳಕ್ಕೆ ಸಿಲುಕಿದ್ದಾರೆ.
ಮಣ್ಣಿನಾಳಕ್ಕೆ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆಯಲು ಸ್ಥಳೀಯ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಒಂದೂವರೆ ಗಂಟೆಯ ಕಾರ್ಯಾಚರಣೆಯ ಬಳಿಕ ಮೂವರು ಕಾರ್ಮಿಕರ ಮೃತದೇಹವನ್ನು ಹೊರತೆಗೆಯಲಾಗಿದೆ. ಮೂವರು ಕಾರ್ಮಿಕರ ಮೃತದೇಹವನ್ನು ಪೊಲೀಸರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.