ಬಾಗಲಕೋಟೆ: ಬಸವಣ್ಣನ ಹೆಸರು ಹೇಳುವವರು ಬಸವಣ್ಣನ ಮಾತಿನಂತೆ ನಡೆಯುತ್ತಿಲ್ಲ, ಅಂಥವರಿಗೆ ಮತ ಹಾಕುತ್ತೀರ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಜಿಲ್ಲೆಯ ಹುನಗುಂದದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಮೊದಲನೆಯದು ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು ರೂ.2,000 ದಂತೆ ವರ್ಷಕ್ಕೆ ರೂ.24,000 ನೀಡುತ್ತೇವೆ. ಎರಡನೆಯದು ರಾಜ್ಯದ ಪ್ರತೀ ಮನೆಗೆ ತಿಂಗಳಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ಅನ್ನು ನೀಡುತ್ತೇವೆ. ನಾವು ಮುಂದೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇದಕ್ಕೆ ಬದ್ಧರಿದ್ದೇವೆ ಎಂಬುದಕ್ಕೆ ಗ್ಯಾರೆಂಟಿ ಕಾರ್ಡ್ ಅನ್ನು ಕೂಡ ನೀಡಿದ್ದೇವೆ. ನಾವು ಕೊಟ್ಟ ಮಾತಿಗೆ ತಪ್ಪಿದರೆ ಒಂದು ಕ್ಷಣ ಕೂಡ ಅಧಿಕಾರದಲ್ಲಿ ಇರುವುದಿಲ್ಲ ಎಂದು ಹೇಳಿದರು.
ಇಂದು ರೈತರು ನನ್ನನ್ನು ಭೇಟಿ ಮಾಡಿ ನಂದವಾಡಿ ಏತನೀರಾವರಿ ಯೋಜನೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಮೊದಲ ಹಂತದ ಯೋಜನೆಯನ್ನು ಮಾಡಿಕೊಟ್ಟಿದ್ದೇವೆ, ಮುಂದೆ ಅಧಿಕಾರಕ್ಕೆ ಬಂದ ಮೇಲೆ ಎರಡನೇ ಹಂತದ ಯೋಜನೆಯನ್ನು ಕೂಡ ಮಾಡಿಕೊಡುತ್ತೇವೆ, ಈ ಬಗ್ಗೆ ಇಲ್ಲಿನ ರೈತರು ಯಾವುದೇ ಚಿಂತೆ ಮಾಡುವುದು ಬೇಡ. ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಬಾಗಲಕೋಟೆ ಜಿಲ್ಲೆಯಲ್ಲಿನ ಎಲ್ಲಾ ಸಂತ್ರಸ್ಥರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಮಾಡುತ್ತೇವೆಂದರು.
ಹಿಂದೆ ವಿಜಯಾನಂದ ಕಾಶಪ್ಪನವರು ಶಾಸಕರಾಗಿದ್ದಾಗ ಮಂತ್ರಿ ಪದವಿಗಾಗಿ ಲಾಭಿ ಮಾಡಿಲ್ಲ, ಅದರ ಬದಲು ಹುನಗುಂದ ಕ್ಷೇತ್ರಕ್ಕೆ ನಾನು ಕೇಳುವ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ಕೊಡಿ ಸಾಕು ಎಂದಿದ್ದರು. ಅವರು ಕೇಳಿದ್ದ ಪ್ರತೀ ಬೇಡಿಕೆಗಳನ್ನು ಈಡೇರಿಸಿದ್ದೆ, ನಮ್ಮ ಸರ್ಕಾರ ಇದ್ದಾಗ ಸುಮಾರು 4,500 ಕೋಟಿ ಅನುದಾನವನ್ನು ಹುನಗುಂದಕ್ಕೆ ನೀಡಿದ್ದೆ. ಅಕ್ಷರಧಾಮ ಸ್ಥಾಪನೆಗೆ ಅನುಮೋದನೆ ನೀಡಿ, ಹಣ ಬಿಡುಗಡೆ ಮಾಡಿಕೊಟ್ಟಿದ್ದು ನಮ್ಮ ಸರ್ಕಾರ, ಆದರೆ ಇಂದು ಕೆಲಸ ನಿಂತಿದೆ ಎಂದು ತಿಳಿಸಿದರು.
![](https://pratidhvani.com/wp-content/uploads/2023/02/sidda-1192645-1676725636-1024x576.jpg)
ನನ್ನನ್ನು ಹೊಡೆದಾಕುವುದಾದರೆ ನಾನು ಸಿದ್ಧನಿದ್ದೇನೆ
ರಾಜ್ಯದ ಜನರ ಆಸ್ತಿ, ಪ್ರಾಣ ರಕ್ಷಣೆ ಮಾಡಬೇಕಾದ ಮಂತ್ರಿಯೊಬ್ಬ ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದು ನನ್ನ ಹತ್ಯೆಗೆ ಜನರನ್ನು ಪ್ರಚೋದಿಸುತ್ತಾರೆ ಎಂದರೆ ಅಂಥವರು ಮಂತ್ರಿಯಾಗಿರಬೇಕ? ನನ್ನನ್ನು ಮುಗಿಸುವುದಕ್ಕೆ ನಿಮ್ಮೆಲ್ಲರ ಒಪ್ಪಿಗೆ ಇದೆಯಾ? ನೀವು ನನ್ನನ್ನು ಹೊಡೆದಾಕುವುದಾದರೆ ನಾನು ಸಿದ್ಧನಿದ್ದೇನೆ, ಎಲ್ಲಿಯವರೆಗೆ ರಾಜ್ಯದ ಜನರ ಆಶೀರ್ವಾದ ನನ್ನ ಮೇಲಿರುತ್ತದೆ ಅಲ್ಲಿಯವರೆಗೆ ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದರು.
ಮಹಾತ್ಮ ಗಾಂಧಿ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಗೋಡ್ಸೆ ಮೂಲಕ ಕೊಲೆ ಮಾಡಿಸಿದರು, ಬಿಜೆಪಿಯವರು ಹೇಡಿಗಳು, ನೀವು ಬೌದ್ಧಿಕವಾಗಿ ದಿವಾಳಿಯಾಗಿದ್ದೀರಿ. ಒಬ್ಬ ಸಿದ್ದರಾಮಯ್ಯ ಹೋದರೆ ಸಾವಿರಾರು ಸಿದ್ದರಾಮಯ್ಯ ಹುಟ್ಟಿ ಬರುತ್ತಾರೆ. ನಾನು ರೈತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಜನರ ಪರವಾಗಿ ಹೋರಾಟ ಮಾಡುತ್ತಿದ್ದೇನೆ, ಇದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ವಿಜಯಾನಂದ ಕಾಶಪ್ಪನವರ್ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ.
ಹಿರೇಮಠ ಅವರು ನನ್ನ ಹೆಸರು ಹೇಳಿಕೊಂಡು ಇಲ್ಲಿ ಮತ ಕೇಳುತ್ತಿದ್ದಾರಂತೆ, ನೀವು ಅಂಥವರಿಗೆ ಉಗಿದು ಕಳಿಸಿ, ನನ್ನ ಹೆಸರು ಹೇಳುವ ಯೋಗ್ಯತೆ ಅವರಿಗೆ ಇದೆಯಾ ಎಂದು ಕೇಳಿ ಎಂದ ಅವರು, ವಿಜಯಾನಂದ ಕಾಶಪ್ಪನವರ್ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ. ಕಾಶಪ್ಪನವರ್ ಗೆ ನೀಡುವ ಪ್ರತಿ ಮತ ಸಿದ್ದರಾಮಯ್ಯನಿಗೆ ಕೊಟ್ಟಂತೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.