ಸೋಮವಾರ ತಡರಾತ್ರಿ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೂಳಿಗೆ ಪ್ರಾರ್ಥಮಿಕ ಶಾಲೆಯ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ಧ್ವಂಸಮಾಡಿ ಶಾಲಾ ಹಿಂಭಾಗದ ಕೈತೋಟವನ್ನು ನಾಶಪಡಿಸಿದ ಘಟನೆ ನಡೆದಿದೆ.
ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರ ಮನೆಯಿಂದ ಕೂಗಳತೆ ದೂರದಲ್ಲಿರುವ ಈ ಶಾಲೆಯುಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಶಾಲೆಗೆ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮ್ಮ ಕೈಲಾದ ಮಟ್ಟಿಗೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ, ಕೈತೋಟ, ಸರಸ್ವತಿ ದೇವಿ, ಮಹಾತ್ಮ ಗಾಂಧೀಜಿ ಮತ್ತು ವಿವೇಕಾನಂದರ ವಿಗ್ರಹಗಳನ್ನು ಸ್ಥಾಪಿಸಿ ಮಕ್ಕಳಿಗೆ ದೇಶಾಭಿಮಾನ ಮೂಡುವಲ್ಲಿ ಅವಿರತವಾಗಿ ಶ್ರಮವಹಿಸುತ್ತಿದ್ದರು. ಶಾಲಾ ಉಪಾಧ್ಯಾಯರುಗಳು ಮಕ್ಕಳಿಗೆ ಕೈತೋಟದ ಅರಿವನ್ನುಮೂಡಿಸಿದ್ದರು.
ಇಂತಹ ದುಷ್ಕೃತ್ಯಗಳಿಗೆ ಹಾರೋಗೂಳಿಗೆ ಮತ್ತು ಅದರ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವೆ ಕಾರಣವೆಂದು ಹೇಳಲಾಗುತ್ತಿದೆ. ರಾತ್ರಿಹೊತ್ತು ಕುಡಿದು ಗಲಾಟೆ ಮಾಡುವುದು ಹಳ್ಳಿಯಲ್ಲಿ ನಿರಂತರವಾಗಿ ನಡೆದು ಬರುತ್ತಿದೆ. ಇಂತಹ ದುಷ್ಕೃತ್ಯವನ್ನು ಎಸಗಿದ ದುಷ್ಕರ್ಮಿಗಳ ವಿರುದ್ಧ ಪಂಚಾಯಿತಿ ಮತ್ತು ಶಾಲಾ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
![](https://pratidhvani.com/wp-content/uploads/2021/12/WhatsApp-Image-2021-12-28-at-11.44.13-AM-1024x473.jpeg)
ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಹಾರೋಗೂಳಿಗೆ ಯ ಪ್ರಜ್ಞಾವಂತ ನಾಗರಿಕರು ಹಲವು ಬಾರಿ ಪ್ರಯತ್ನ ಮಾಡಿದ್ದಾರೆ. ಪಂಚಾಯಿತಿಯಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಂಡರೂ ಸಹ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ನಿಷ್ಕ್ರಿಯತೆಯಿಂದ ಇಂತಹ ಕೃತ್ಯಗಳು ಹಳ್ಳಿಗಳಲ್ಲಿ ನಡೆಯುತ್ತಿದೆ.
![](https://pratidhvani.com/wp-content/uploads/2021/12/WhatsApp-Image-2021-12-28-at-11.44.23-AM-1024x768.jpeg)
ಸಾಮಾಜಿಕ ಹೋರಾಟಗಾರ ಎಚ್ .ಎಂ. ವೆಂಕಟೇಶ್ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ಜಾಗೃತರಾಗಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ಆಗದಂತೆ ತಡೆಯದಿದ್ದರೆ ಇನ್ನಷ್ಟು ಅನಾಹುತಗಳು ದೌರ್ಜನ್ಯಗಳು ಹಳ್ಳಿಗಳಲ್ಲಿ ನಡೆಯುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.