ಮೋದಿ ಆಪ್ತ, ರಾಜಕಾರಣಿ ಪ್ರಫುಲ್ ಪಟೇಲ್ ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡ ನಂತರ ಗೋ ಮಾಂಸ ಮಾರಾಟ ನಿಷೇಧ, ಗೂಂಡಾ ಕಾಯ್ದೆ ಜಾರಿ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹ, ಖಾಸಗಿ ಭೂಮಿ ವಶಪಡಿಸಿಕೊಳ್ಳುವ ಕಾಯ್ದೆ, ಮದ್ಯ ಮಾರಾಟ ನಿಷೇಧ ತೆರವು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧವನ್ನು ಒಳಗೊಂಡ ಹಲವು ಮಸೂದೆ, ವಿಧೇಯಕಗಳನ್ನು ಪರಿಚಯಿಸಿದ್ದರು. ಇದು ದ್ವೀಪದ ಜನರ ವಿರೋಧಕ್ಕೆ ಕಾರಣವಾಗಿದ್ದು, ಲಕ್ಷದ್ವೀಪದಲ್ಲಿ ಇದೇ ಮೊದಲ ಬಾರಿಗೆ ಪ್ರತಿಭಟನೆಯ ಕಾವು ಕಂಡುಬಂದಿತ್ತು. ಈ ಬಗ್ಗೆ ಕಾನೂನು ಹೋರಾಟಕ್ಕೂ ಚಾಲನೆ ಸಿಕ್ಕಿದ್ದು ಕೇರಳ ಹೈಕೋರ್ಟ್ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

ಇದೀಗ ಪ್ರಫುಲ್ ಪಟೇಲ್ ಅವರು ಲಕ್ಷದ್ವೀಪದ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್ನಿಂದ ಕರ್ನಾಟಕ ಹೈಕೋರ್ಟ್ಗೆ ಬದಲಾಯಿಸಲು ಪ್ರಸ್ತಾಪ ಇಟ್ಟಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು. ಪ್ರಸ್ತುತ ಕೇರಳ ಹೈಕೋರ್ಟೇ ಲಕ್ಷದ್ವೀಪದ ಹೈಕೋರ್ಟೂ ಆಗಿದ್ದು ಇದು ದ್ವೀಪದಿಂದ 400 ಕಿ.ಮೀ.ದೂರದಲ್ಲಿದೆ. ಆದರೆ ಹೊಸದಾಗಿ ಪ್ರಸ್ತಾಪ ಮಾಡಿರುವ ಕರ್ನಾಟಕ ಹೈಕೋರ್ಟ್ ದ್ವೀಪದಿಂದ 1,000 ಕಿ.ಮೀ. ದೂರದಲ್ಲಿದೆ.
ಆದರೆ ಭಾನುವಾರ ರಾತ್ರಿ ಲಕ್ಷದ್ವೀಪ ಜಿಲ್ಲಾಧಿಕಾರಿ ಎಸ್.ಅಸ್ಕರ್ ಅಲಿ ಅವರು ಅಂತಹ ಯಾವುದೇ ಪ್ರಸ್ತಾಪಗಳು ಇಲ್ಲ ಎಂದಿರುವುದಾಗಿ ‘ದಿ ವೀಕ್’ ವರದಿ ಮಾಡಿದೆ. ಈ ಮೊದಲು, ನ್ಯಾಯಾಲಯ ವ್ಯಾಪ್ತಿಯನ್ನು ಸ್ಥಳಾಂತರಿಸುವ ಕುರಿತು ಜೂನ್ 17 ರಂದು (ಗುರುವಾರ) ಇಮೇಲ್ ಮೂಲಕ ಅವರಿಗೆ ಕಳುಹಿಸಲಾದ ಪ್ರಶ್ನೆಗಳಿಗೆ ಅಲಿಯಿಂದ ಅಥವಾ ಮುಖ್ಯ ಕಾರ್ಯದರ್ಶಿ ಎ ಅನ್ಬರಸು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎನ್ನುತ್ತದೆ ‘ದಿ ವೀಕ್’.

“ಲಕ್ಷದ್ವೀಪ ಆಡಳಿತವು ತನ್ನ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್ನಿಂದ ಕರ್ನಾಟಕ ಹೈಕೋರ್ಟ್ಗೆ ಬದಲಾಯಿಸುವ ಯಾವುದೇ ಪ್ರಸ್ತಾಪವಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಉನ್ನತ ಅಧಿಕಾರ ವ್ಯಾಪ್ತಿಯನ್ನು ಬದಲಾಯಿಸುವ ಸುದ್ದಿ ಆಧಾರರಹಿತವಾಗಿದೆ ಮತ್ತು ಸತ್ಯದಿಂದ ದೂರವಿದೆ” ಎಂದು ವಾಟ್ಸಾಪ್ ಸಂದೇಶದಲ್ಲಿ ಅಲಿ ಹೇಳಿರುವುದಾಗಿಯೂ ‘ದಿ ವೀಕ್’ ವರದಿ ಮಾಡಿದೆ
ದ್ವೀಪಗಳ ಹೊಸ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಕೇರಳ ಹೈಕೋರ್ಟ್ನಲ್ಲಿ ಹಲವಾರು ದಾವೆಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಆಡಳಿತವು ಈ ಪ್ರಸ್ತಾಪವನ್ನು ಇಟ್ಟಿತ್ತು ಎಂದು ಹೇಳಲಾಗಿತ್ತು.
ಮಾಜಿ ಆಡಳಿತಾಧಿಕಾರಿ ದಿನೇಶ್ವರ ಶರ್ಮಾ ಅಲ್ಪಾವಧಿಯ ಅನಾರೋಗ್ಯದಿಂದ ನಿಧನರಾದ ನಂತರ ದಮನ್ ಮತ್ತು ಡಿಯು ಆಡಳಿತಗಾರರಾಗಿರುವ ಪಟೇಲ್ ಅವರಿಗೆ ಕಳೆದ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಹೆಚ್ಚುವರಿ ಉಸ್ತುವಾರಿ ನೀಡಲಾಯಿತು.

ಈ ವರ್ಷ 11 ರಿಟ್ ಅರ್ಜಿಗಳು ಸೇರಿದಂತೆ 23 ಅರ್ಜಿಗಳನ್ನು ಲಕ್ಷದ್ವೀಪದ ಆಡಳಿತಗಾರರ ವಿರುದ್ಧ ಮತ್ತು ದ್ವೀಪಗಳ ಸ್ಥಳೀಯ ಸರ್ಕಾರದ ವಿರುದ್ಧ ಸಲ್ಲಿಸಲಾಗಿದೆ.
ಆದರೆ ಕಾನೂನಿನ ಪ್ರಕಾರ ನ್ಯಾಯಾಲಯದ ವ್ಯಾಪ್ತಿಯನ್ನು ಸಂಸತ್ತಿನ ಮೂಲಕ ಮಾತ್ರ ಬದಲಾಯಿಸಬಹುದಾಗಿದ್ದು, ಈ ಬಗ್ಗೆ ಪಿಟಿಐ ಜೊತೆ ದೂರವಾಣಿ ಮೂಲಕ ಮಾತನಾಡಿದ ಲೋಕಸಭಾ ಸದಸ್ಯ ಮೊಹಮ್ಮದ್ ಫೈಜಲ್ ಪಿ ಪಿ, “ನ್ಯಾಯಾಂಗ ವ್ಯಾಪ್ತಿಯನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಪ್ರಫುಲ್ ಪಟೇಲ್ ಅವರ ಮೊದಲ ಪ್ರಯತ್ನ ಇದು” ಎಂದು ಹೇಳಿದ್ದಾರೆ.

“ನಿರ್ದಿಷ್ಟವಾಗಿ ನ್ಯಾಯಲಯ ವ್ಯಾಪ್ತಿಯನ್ನು ಬದಲಾಯಿಸಲು ಅವರು ಏಕೆ ಬಯಸುತ್ತಾರೆ? ಇದು ಸಂಪೂರ್ಣವಾಗಿ ತಮ್ಮ ಹುದ್ದೆಯ ದುರುಪಯೋಗವಾಗಿದೆ. ಈ ದ್ವೀಪಗಳಲ್ಲಿನ ಜನರ ಮಾತೃಭಾಷೆ ಮಲಯಾಳಂ ” ಎಂದು ಅವರು ಹೇಳಿದ್ದಾರೆ. ಪ್ರಫುಲ್ ಪಟೇಲ್ಗಿಂತ ಮೊದಲು 36 ಆಡಳಿತಾಧಿಕಾರಿಗಳು ಲಕ್ಷದ್ವೀಪಕ್ಕೆ ಆಗಮಿಸಿದ್ದರು ಆದರೆ ಯಾರಿಗೂ ಈ ರೀತಿಯ ಆಲೋಚನೆ ಬಂದಿರಲಿಲ್ಲ ಎಂದು ಫೈಜಲ್ ಹೇಳಿದ್ದಾರೆ.
ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಮಲಯಾಳಂ ಮೌಖಿಕ ಮತ್ತು ಲಿಖಿತ ಭಾಷೆಯಾಗಿರುವುದರಿಂದ ದ್ವೀಪಕ್ಕೆ ಕೇರಳ ಹೈಕೋರ್ಟನ್ನೇ ನ್ಯಾಯ ತೀರ್ಮಾನಗಳಿಗೆ ಬಳಸಲಾಗುತ್ತಿದೆ ಎಂದು ಲಕ್ಷದ್ವೀಪದ ಕಾನೂನು ತಜ್ಞರು ಹೇಳುತ್ತಾರೆ.

ಹೈಕೋರ್ಟ್ನ ನ್ಯಾಯ ವ್ಯಾಪ್ತಿಯನ್ನು ಬದಲಾಯಿಸುವುದರಿಂದ ದ್ವೀಪಗಳ ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯು ಬದಲಾಗುತ್ತದೆ. ಏಕೆಂದರೆ ಇದುವರೆಗೆ ಒಂದೇ ಭಾಷೆ ಮತ್ತು ಲಿಪಿ ಹೊಂದಿದ್ದರಿಂದ ಎಲ್ಲಾ ನ್ಯಾಯಾಂಗ ಅಧಿಕಾರಿಗಳನ್ನು ಕೇರಳ ಹೈಕೋರ್ಟ್ನಿಂದಲೇ ಕಳುಹಿಸಲಾಗುತ್ತಿತ್ತು. ಅಲ್ಲದೆ ಹೈಕೋರ್ಟನ್ನು ಬದಲಾಯಿಸುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಸಹ ಬೀಳಲಿದೆ. ಯಾಕೆಂದರೆ ಪ್ರಸ್ತುತ ವಿಚಾರಣೆಯಲ್ಲಿರುವ ಎಲ್ಲಾ ಪ್ರಕರಣಗಳನ್ನು ಹೊಸದಾಗಿ ಆಲಿಸಬೇಕಾಗುತ್ತದೆ ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.