ಕರ್ನಾಟಕ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಹಾಗು ಒಳ ಮೀಸಲಾತಿ ಪ್ರಕಟ ಮಾಡಿತ್ತು. ಒಳ ಮೀಸಲಾತಿ ನೀಡಿರುವುದು ರಾಜಕೀಯವಾಗಿ ಬಿಜೆಪಿಗೆ ಲಾಭ ನೀಡುವ ಸಾಧ್ಯತೆಗಳಿವೆ ಅನ್ನೋ ಚರ್ಚೆಗಳು ಶುರುವಾಗಿದ್ದವು. ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ರಾಜ್ಯದಲ್ಲಿ ಒಳಮೀಸಲಾತಿ ಪ್ರಕಟ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಹಲವು ಜಾತಿಗಳು ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟವನ್ನೂ ಮಾಡಿದ್ದವು. ಆದರೆ ಇದೀಗ ರಾಜ್ಯ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿದೆ. ಅರ್ಜಿ ವಿಚಾರಣೆಗೆ ಅಂಗೀಕಾರ ಆಗಿದೆ. ಅಂದರೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಏಕಾಏಕಿ ತಡೆ ಬಿದ್ದಂತಾಗಿದೆ. ಮೀಸಲಾತಿ ತಡೆ ಎನ್ನುವುದಕ್ಕಿಂತಲೂ ಮುಸ್ಲಿಂ ಸಮುದಾಯಕ್ಕೆ ಈ ಹಿಂದೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನೀಡಲಾಗಿದ್ದ ಮೀಸಲಾತಿ ರದ್ದು ಮಾಡಿರುವ ವಿಚಾರವಾಗಿ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಲಾಗಿದೆ.
ಒಕ್ಕಲಿಗರು, ಲಿಂಗಾಯತರ ಮೀಸಲಾತಿ ಹೆಚ್ಚಳಕ್ಕೆ ಅಡ್ಡಿ..!
ರಾಜ್ಯ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 2ಬಿ ಮೀಸಲಾತಿಯನ್ನು ರದ್ದು ಮಾಡಿ, ಅವರಿಗೆ ನೀಡಲಾಗಿದ್ದ ಶೇಕಡ 4ರಷ್ಟು ಮೀಸಲಾತಿಯನ್ನು ತೆರವು ಮಾಡಿ ಒಕ್ಕಲಿಗರು ಹಾಗು ಲಿಂಗಾಯತ ಸಮುದಾಯಕ್ಕೆ ಶೇಕಡ 2ರಷ್ಟನ್ನು ಹಂಚಿಕೆ ಮಾಡಿತ್ತು. ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿ ಒಕ್ಕಲಿಗರಿಗೆ ನೀಡಿದ್ದನ್ನು ಸ್ವತಃ ಒಕ್ಕಲಿಗ ಸ್ವಾಮೀಜಿಗಳೇ ವಿರೋಧ ಮಾಡಿದ್ದರು. ಬೇರೆ ಸಮುದಾಯದ ಮೀಸಲಾತಿ ಕಿತ್ತು ಒಕ್ಕಲಿಗರಿಗೆ ನೀಡುವ ಪ್ರಮೇಯ ಇರಲಿಲ್ಲ ಎಂದಿದ್ದರು. ಇದೀಗ ಮೀಸಲಾತಿ ರದ್ದು ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ. ಈ ವಿಚಾರ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹತ್ವದ ಸಭೆ ಕರೆದಿದ್ದಾರೆ.
ಏಪ್ರಿಲ್ 18ಕ್ಕೆ ಮೀಸಲಾತಿ ಅರ್ಜಿ ವಿಚಾರಣೆ..!
ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಹಾಗು ಬಿ.ವಿ ನಾಗರತ್ನ ನ್ಯಾಯಪೀಠ ಅರ್ಜಿ ವಿಚಾರಣೆಗೆ ಅಂಗೀಕಾರ ಮಾಡಿ, ವಿಚಾರಣೆಗೆ ಕೈಗೆತ್ತಿಕೊಂಡಿದೆ. ಕರ್ನಾಟಕದ ಮುಸ್ಲಿಂ ಸಮುದಾಯದ ಸದಸ್ಯರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ ಮತ್ತು ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದ್ದಾರೆ. ಮುಸ್ಲಿಮರ ಕೋಟಾ ರದ್ದುಗೊಳಿಸಲು ಯಾವುದೇ ಅಧ್ಯಯನದ ವರದಿ ಕೊಟ್ಟಿಲ್ಲ. ಯಾವುದೇ ಪ್ರಾಯೋಗಿಕ ಮಾಹಿತಿಯೂ ಸರ್ಕಾರದ ಬಳಿ ಲಭ್ಯವಿಲ್ಲ. ಆದರೂ ರದ್ದು ಮಾಡಲಾಗಿದೆ ಎಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಏಪ್ರಿಲ್ 18ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ಚುನಾವಣೆ ವೇಳೆ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಹಂಚಿರುವ ಮೀಸಲಾತಿಗೆ ತಡೆ ಬಿದ್ದಿದ್ದು ಬಿಜೆಪಿ ಪಾಲಿಗೆ ಮೀಸಲಾತಿ ವಿಚಾರ ಬಿಸಿತುಪ್ಪ ಆಗುವ ಸಾಧ್ಯತೆ ಹೆಚ್ಚಾಗಿದೆ.
ಕೃಷ್ಣಮಣಿ