ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ (siddaramaiah) ಹಾಗು ಡಿ.ಕೆ ಶಿವಕುಮಾರ್ (d.k.Shivakumar) ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಇದರ ನಡುವೆ ಮಾಜಿ ಸಚಿವ ಡಾ ಸುಧಾಕರ್ (Dr.K.Sudhakar) ಕಾಂಗ್ರೆಸ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ 2018 ರಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಟ್ವೀಟ್ ಮಾಡಿದ್ದಾರೆ.
2018ರಲ್ಲಿ ಜೆಡಿಎಸ್-ಕಾಂಗ್ರೆಸ್ (congress-jds) ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಬಳಿ ಹೇಳಲು ಹೋದಾಗ ”ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ“ ಎಂದು ಹೇಳುತ್ತಿದ್ದರು. ”2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿನವೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ“ ಎಂದು ಶಾಸಕರಿಗೆ ಸಮಾಧಾನ ಮಾಡುತ್ತಿದ್ದರು ಎಂದಿದ್ದಾರೆ. ಆ ಬಳಿಕ ನಾವು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದೆವು. ನಮ್ಮ ನಿರ್ಧಾರದ ಹಿಂದೆ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಪ್ರೇರಣೆ ಇದೆ ಎಂದಿದ್ದಾರೆ. ಇದೇ ಮಾತಿಗೆ ಮಾಜಿ ಸಚಿವ ಎಸ್.ಟಿ ಸೋಮಸೇಖರ್ ಕೂಡ ಸಮ್ಮತಿ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಕಾಲು ಎಳೆದಿದ್ದು ಲಾಭವೋ ನಷ್ಟವೋ..?

ಜೆಡಿಎಸ್ ಕಾಂಗ್ರೆಸ್ ಸರ್ಕಾರ ಬೀಳಿಸಿ, ಬಿಜೆಪಿ ಸೇರಿದ್ದ ಸುಧಾಕರ್ ಹಾಗು ಎಸ್.ಟಿ ಸೋಮಶೇಖರ್, ನಮ್ಮ ನಿರ್ಧಾರದ ಹಿಂದೆ ಸಿದ್ದರಾಮಯ್ಯ ಇಲ್ಲ ಎಂದು ಸಾಕಷ್ಟು ಬಾರಿ ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಹೈಕಮಾಂಡ್ ಜೊತೆಗೆ ಚರ್ಚೆ ನಡೆಸುತ್ತಿರುವ ಸಮಯದಲ್ಲಿ ಹೇಳುವ ಮೂಲಕ ಸಿದ್ದರಾಮಯ್ಯ ಕುತಂತ್ರಿ ಎಂದು ಬಿಂಬಿಸಲು ಹೊರಟಿದ್ದಾರೆ. ವಿಶೇಷ ಅಂದ್ರೆ ಮಾಜಿ ಸಚಿವರ ಲೆಕ್ಕಾಚಾರ ಹಳಿ ತಪ್ಪಿದೆ. ಒಂದು ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗದೆ ಇದ್ದರೆ ಮುಂದೆ ಕಾಂಗ್ರೆಸ್ನಿಂದ ಯಾರೇ ಮುಖ್ಯಮಂತ್ರಿ ಆದರೂ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋ ಸಂದೇಶವನ್ನು ಕಳಿಸಿದಂತಿದೆ. ಸಿದ್ದರಾಮಯ್ಯ ನಿರ್ಲಕ್ಷ್ಯ ಅಸಾಧ್ಯ ಎಂದು ಟ್ವೀಟ್ ಸಾರಿ ಹೇಳ್ತಿದೆ.
ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅನ್ನೋ ಕೂಗು..

ಬಿಜೆಪಿ ನಾಯಕರು ಈಗಾಗಲೇ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಸಂಚು ರೂಪಿಸುತ್ತಿದ್ದಾರೆ. D K ಶಿವಕುಮಾರ್ ಸಿಎಂ ಆಗಲಿ ಎಂದು ಕುಮ್ಮಕ್ಕು ನೀಡುತ್ತಿರುವುದೇ ಬಿಜೆಪಿ ಹಾಗು ಬಿಜೆಪಿ ಕಾರ್ಯಕರ್ತ ಪಡೆ. ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ ಶಿವಕುಮಾರ್ ಪರವಾಗಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಆದರೆ ಇದು ಸಂಘ ಪರಿವಾರದ ನಿಲುವು, ಕಾಂಗ್ರೆಸ್ ಪಕ್ಷವನ್ನು ಹಳ್ಳಕ್ಕೆ ಬೀಳಿಸಲು ತೋಡಿರುವ ಹಳ್ಳ ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ತಿಲ್ಲ. ಒಂದು ವೇಳೆ ಡಿ.ಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆದರೆ, ಭ್ರಷ್ಟ ಸಿಎಂ ಅನ್ನೋ ಆರೋಪದ ಜೊತೆಗೆ ಕಾನೂನು ಕುಣಿಕೆಯಲ್ಲಿ ಸಿಲುಕಿಸುವ ತಯಾರಿಯೂ ನಡೆದಿದೆ.
‘ಬಲಪಂಥೀಯ ತಂತ್ರ ಗೊತ್ತಿಲ್ಲ’ ಮಾಜಿ ಸಚಿವ ಕೌಂಟರ್!

ಡಾ ಸುಧಾಕರ್ ಟ್ವೀಟ್ ಮಾಡಿದ್ದರ ಹಿಂದೆ ಸಂಘ ಪರಿವಾರದ ಸಂಚು ಅಡಗಿದೆ ಎಂದು ಯಾರಾದರೂ ಊಹೆ ಮಾಡಬಹುದು. ಆದರೆ ಸಂಘ ಪರಿವಾರದ ಈ ಲೆಕ್ಕಾಚಾರ ತಿಳಿಯದ ಮಾಜಿ ಸಚಿವ ಎಂಟಿಬಿ ನಾಗರಾಜ್, ಸುಧಾಕರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸುಧಾಕರ್ ಹೇಳುತ್ತಿರೋದು ಸುಳ್ಳು, ಹಾಗಿದ್ದರೆ ಇಷ್ಟು ದಿನ ಸುಧಾಕರ್ ಸುಮ್ಮನಿದ್ದಿದ್ದು ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ನಾವು ಬಿಜೆಪಿ ಸೇರಿದ್ದರ ಹಿಂದೆ ಸಿದ್ದರಾಮಯ್ಯ ತಂತ್ರಗಾರಿಕೆ ಮಾಡಿರಲಿಲ್ಲ. ಸುಧಾಕರ್ ಸೋಲಿನಿಂದ ಭ್ರಮನಿರಸನಗೊಂಡು ಹೀಗೆ ಹೇಳ್ತಿದ್ದಾರೆ. ಒಂದು ಸಿದ್ದರಾಮಯ್ಯ ಕಾರಣ ಅನ್ನೋದೇ ಸತ್ಯವಾದ್ರೆ ಮನೆ ದೇವರ ಮೇಲೆ ಆಣೆ ಮಾಡಲಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಒಡಕು ಬಿಜೆಪಿ ಪಾಳಯಕ್ಕೆ ಲಾಭವೇನು..?

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಅನ್ನೋದು ಬಹುತೇಕ ಕಾಂಗ್ರೆಸ್ ಶಾಸಕರ ಅಭಿಪ್ರಾಯ. ಆದರೂ ಡಿ.ಕೆ ಶಿವಕುಮಾರ್ಗೆ ತಲೆಯಲ್ಲಿ ಹುಳ ಬಿಡುವ ಮೂಲಕ ಕಾಂಗ್ರೆಸ್ನಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ ಶಿವಕುಮಾರ್ ಬಗ್ಗೆ ತೋರಿಸುತ್ತಿರುವ ಅನುಕಂಪ ಪರಿಪೂರ್ಣವಾದದ್ದು ಅಲ್ಲ. ಆದರೂ ಗೊಂದಲ ಸೃಷ್ಟಿಸಿ, ರಾಜ್ಯದ ಜನರ ಎದುರು ಕಾಂಗ್ರೆಸ್ ಮಾನ ಹರಾಜು ಹಾಕುವುದು ಈ ಸಂಚಿನ ಉದ್ದೇಶ. ಸಚಿವ ಸುಧಾಕರ್, ಎಸ್.ಟಿ ಸೋಮಶೇಖರ್ ಒಂದು ರೀತಿಯಲ್ಲಿ ಹೇಳಿದ್ರೆ ಎಂಟಿಬಿ ನಾಗರಾಜ್ ಉಲ್ಟಾ ಹೊಡೆದಿರುವುದರಲ್ಲೇ ಇದೆಲ್ಲಾ ದುರುದ್ದೇಶ ಕೃತ್ಯ ಅನ್ನೋದು ಬಯಲಾಗ್ತಿದೆ.
ಕೃಷ್ಣಮಣಿ