ರಾಜ್ಯಪಾಲರ ಸಾಂವಿಧಾನಿಕ ವಿವೇಚನಾಧಿಕಾರದ ಬಗ್ಗೆ ಹಲವು ದಶಕಗಳಿಂದಲೂ ಚರ್ಚೆಯಾಗುತ್ತಿದೆ
ಸಂವಿಧಾನಬದ್ಧವಾಗಿ ಒಕ್ಕೂಟ ಸಂರಚನೆಯನ್ನು ಅಂಗೀಕರಿಸಿರುವ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರದ ವಿಭಜನೆಯನ್ನೂ ಗುರುತಿಸಬಹುದು. ಈ ವಿಭಜನೆಯನ್ನು ಸಮರ್ಪಕವಾಗಿ ನಿಭಾಯಿಸುವ ಸಲುವಾಗಿಯೇ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಸ್ತರದ ಆಡಳಿತ ವ್ಯವಸ್ಥೆಯನ್ನು ಭಾರತ ಒಪ್ಪಿಕೊಂಡಿದೆ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಈ ವ್ಯವಸ್ಥೆಯೇ ಆಡಳಿತ ನಿರ್ವಹಣೆಗೆ ಆಧಾರವಾಗಿರುತ್ತದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗವು ಚುನಾಯಿತ ಶಾಸಕಾಂಗಕ್ಕೆ ಜವಾಬ್ದಾರವಾಗಿರುತ್ತದೆ ಅಂದರೆ ಶಾಸಕಾಂಗದ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಭಾರತ ಸಂವಿಧಾನದ ಅನುಚ್ಛೇದ 153ರ ಅನ್ವಯ ಪ್ರತಿಯೊಂದು ರಾಜ್ಯಕ್ಕೂ ಒಬ್ಬ ರಾಜ್ಯಪಾಲರನ್ನು ಕಾರ್ಯಾಂಗದ ಮುಖ್ಯಸ್ಥರಾಗಿ ನೇಮಿಸಲಾಗುತ್ತದೆ. ಒಬ್ಬರನ್ನೇ ಒಂದಕ್ಕಿಂತಲೂ ಹೆಚ್ಚು ರಾಜ್ಯಗಳಿಗೆ ನೇಮಿಸುವ ಅವಕಾಶವನ್ನೂ ಸಂವಿಧಾನ ಕಲ್ಪಿಸಿದೆ.
ಅಧಿಕಾರ ವಿಕೇಂದ್ರೀಕರಣ ಹಾಗೂ ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ಬಗ್ಗೆ ಸರ್ಕಾರಗಳು ಎಷ್ಟೇ ಉದಾತ್ತತೆಯಿಂದ ಮಾತನಾಡುತ್ತಿದ್ದರೂ, 75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲೇ ನಡೆಯುತ್ತಿರುವುದು ವಾಸ್ತವ. ನಿರ್ದಿಷ್ಟವಾಗಿ ಹೇಳುವುದಾದರೆ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸುವ ಪ್ರಕ್ರಿಯೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮರ್ಜಿಗೆ ಒಳಪಟ್ಟಿದ್ದು, ಸರ್ಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ದ ವ್ಯಕ್ತಿಗಳನ್ನೇ ನೇಮಕ ಮಾಡುವುದು, ಬದಲಾಯಿಸುವುದು ಆರಂಭದಿಂದಲೂ ಕಾಣಬಹುದಾದ ವಿದ್ಯಮಾನ. ಕೇಂದ್ರ ಸರ್ಕಾರದ ಅಥವಾ ಅಧಿಕಾರಾರೂಢ ಪಕ್ಷದ ಮೂಗಿನ ನೇರಕ್ಕೆ ನಡೆದುಕೊಳ್ಳುವ ರಾಜ್ಯಪಾಲರ ಹಲವು ಪ್ರಸಂಗಗಳಿಗೆ ಇತ್ತೀಚಿನ ಬೆಳವಣಿಗೆಗಳು ಸಾಕ್ಷಿಯಾಗಿವೆ.
ತಮಿಳುನಾಡು ಸರ್ಕಾರದ ಹತ್ತು ಮಸೂದೆಗಳನ್ನು ಕಳೆದ ಮೂರು ವರ್ಷಗಳಿಂದ ಅಂಗೀಕರಿಸದೆ, ಹಿಂದಿರುಗಿಸದೆ ತಡೆಹಿಡಿದಿರುವ ರಾಜ್ಯಪಾಲರ ವರ್ತನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ರಾಜ್ಯಪಾಲರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದು, ಶಾಸನಸಭೆಯಲ್ಲಿ ಮರು ಅಂಗೀಕಾರ ಪಡೆದಿರುವ ಯಾವುದೇ ಮಸೂದೆಗಳು ಹಣಕಾಸು ಮಸೂದೆಗೆ ಸಮನಾಗಿದ್ದು ಅವುಗಳನ್ನು ತಡೆಹಿಡಿಯುವ ಅಥವಾ ತಿರಸ್ಕರಿಸುವ ವಿವೇಚನಾಧಿಕಾರ ರಾಜ್ಯಪಾಲರಿಗೆ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ರೀತಿ ರಾಜ್ಯವಿಧಾನಸಭೆಗಳಲ್ಲಿ ಮಂಡಿಸಿ ಅಂಗೀಕರಿಸಲಾದ ಮಸೂದೆಗಳನ್ನು ರಾಜ್ಯಪಾಲರು ತಡೆಹಿಡಿಯುವ ಅಥವಾ ಅನುಮೋದಿಸಲು ವಿಳಂಬ ಮಾಡುವ ಪ್ರವೃತ್ತಿ ದಶಕಗಳಿಂದಲೂ ಕಾಣಬಹುದಾದರೂ ಕಳೆದ ಹತ್ತು ವರ್ಷಗಳಲ್ಲಿ ಇದು ಹೆಚ್ಚಾಗಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಕೇರಳ, ತಮಿಳುನಾಡು, ಪಂಜಾಬ್ ಸರ್ಕಾರಗಳು ಈ ಸಮಸ್ಯೆಯನ್ನು ಎದುರಿಸಿವೆ. ಈ ನಿಟ್ಟಿನಲ್ಲಿ ಕೇರಳ ರಾಜ್ಯಪಾಲರಿಂದಲೂ ಸುಪ್ರೀಂಕೋರ್ಟ್ ವಿವರಣೆ ಕೇಳಿದೆ.
ಸಂವಿಧಾನ ಏನು ಹೇಳುತ್ತದೆ ?
ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕರಿಸಲಾಗುವ ಮಸೂದೆಗಳೆಲ್ಲವೂ ರಾಜ್ಯಪಾಲರ ಅಂಕಿತ ಪಡೆಯುವುದು ಒಂದು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಶಾಸಕಾಂಗದ ನಿರ್ಧಾರಗಳ ಮೇಲೆ ಕಾರ್ಯಾಂಗದ ಅಂಕುಶ ಇರಿಸುವ ಒಂದು ಪ್ರಜಾಸತ್ತಾತ್ಮಕ ಪರಿಕಲ್ಪನೆಯಲ್ಲಿ ಈ ನಿಯಮವನ್ನು ಅಳವಡಿಸಲಾಗಿದೆ. ಸಂವಿಧಾನ ಅನುಚ್ಛೇದ 200ರ ಅನ್ವಯ ರಾಜ್ಯ ಶಾಸಕಾಂಗಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗೆ ಅಂಕಿತ ಹಾಕುವ ಮುನ್ನ ರಾಜ್ಯಪಾಲರಿಗೆ ನಾಲ್ಕು ಆಯ್ಕೆಗಳಿರುತ್ತವೆ. ಮಸೂದೆಗೆ ಅಂಕಿತ ಹಾಕುವ ಮೂಲಕ ಅನುಮೋದಿಸುವುದು, ಅನುಮೋದನೆಯನ್ನು ತಡೆಹಿಡಿಯುವುದು, ಮಸೂದೆಯನ್ನು ತಿರಸ್ಕರಿಸುವುದು ಮತ್ತು ಹಣಕಾಸು ಮಸೂದೆಯಾಗಿದ್ದಲ್ಲಿ ಮರುಪರಿಶೀಲನೆಗಾಗಿ ಶಾಸನಸಭೆಗೆ ಹಿಂದಿರುಗಿಸುವುದು. ಅಥವಾ ರಾಷ್ಟ್ರಪತಿಗಳ ಪರಿಶೀಲನೆಗಾಗಿ ತಡೆಹಿಡಿಯುವುದು. ರಾಜ್ಯಪಾಲರಿಂದ ತಿರಸ್ಕೃತವಾಗುವ ಯಾವುದೇ ಮಸೂದೆ ಕಾಯ್ದೆಯಾಗಿ ಜಾರಿಮಾಡಲಾಗುವುದಿಲ್ಲ.
1974ರ ಶಮ್ಶೇರ್ ಪ್ರಕರಣ ಮತ್ತಿತರ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನಿರ್ದೇಶಿಸಿರುವಂತೆ ತಮ್ಮ ಅನುಮತಿಯನ್ನು ತಡೆಹಿಡಿಯುವಾಗ ಅಥವಾ ಮಸೂದೆಯನ್ನು ಹಿಂದಿರುಗಿಸುವಾಗ ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಪ್ರಯೋಗಿಸುವಂತಿಲ್ಲ. ಸಚಿವ ಮಂಡಲದ ಸಲಹೆಯಂತೆ ನಡೆದುಕೊಳ್ಳಬೇಕಾಗುತ್ತದೆ. ಖಾಸಗಿ ಸದಸ್ಯರ ಮಸೂದೆಯಾಗಿದ್ದಲ್ಲಿ, ಅದನ್ನು ಶಾಸನಸಭೆಯು ಕಾಯ್ದೆಯಾಗಿ ಜಾರಿಗೊಳಿಸುವ ಉದ್ದೇಶ ಹೊಂದಿರದಿದ್ದ ಪಕ್ಷದಲ್ಲಿ, ರಾಜ್ಯಪಾಲರು ಅದನ್ನು ತಡೆಹಿಡಿಯುವ ಅಧಿಕಾರ ಹೊಂದಿರುತ್ತಾರೆ. ಆದರೆ ಸಾಮಾನ್ಯವಾಗಿ ಯಾವುದೇ ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಸಚಿವ ಸಂಪುಟವು ಮಸೂದೆಯನ್ನು ತಡೆಹಿಡಿಯಲು ರಾಜ್ಯಪಾಲರಿಗೆ ಸಲಹೆ ನೀಡುವುದಿಲ್ಲ. ಒಂದು ವೇಳೆ ಮಸೂದೆಯನ್ನು ಹಿಂದಿರುಗಿಸುವುದಾದರೂ ರಾಜ್ಯ ಸಚಿವ ಸಂಪುಟದ ಸಲಹೆಯನ್ನು ಆಧರಿಸಿಯೇ ನಿರ್ಧರಿಸಬೇಕಾಗುತ್ತದೆ.
ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ರಾಜ್ಯಪಾಲರು ಸ್ವಪ್ರೇರಣೆಯಿಂದ ಮಸೂದೆಗಳನ್ನು ಹಿಂದಿರುಗಿಸಿರುವುದನ್ನು ಕಾಣಬಹುದು. ಆದರೆ ಅಂತಹ ಮಸೂದೆಗಳನ್ನು ವಿಧಾನಸಭೆಯಲ್ಲಿ ಪುನಃ ಅನುಮೋದಿಸಿದಲ್ಲಿ ರಾಜ್ಯಪಾಲರ ಅಂಕಿತ ಕಡ್ಡಾಯವಾಗುತ್ತದೆ. ರಾಜ್ಯ ವಿಧಾನಸಭೆಗಳಲ್ಲಿ ಅನುಮೋದಿಸಲಾಗುವ ಮಸೂದೆಗಳು ಹೈಕೋರ್ಟ್ನ ಅಧಿಕಾರವನ್ನು ಮೊಟಕುಗೊಳಿಸುವಂತಿದ್ದರೆ ಅಥವಾ ಮಸೂದೆಯ ಕೆಲವು ನಿಯಮಗಳು ಸಂವಿಧಾನ ನಿಯಮಗಳಿಗೆ ಅಥವಾ ಕೇಂದ್ರ ಕಾಯ್ದೆಗಳಿಗೆ ವ್ಯತಿರಿಕ್ತವಾಗಿದ್ದಲ್ಲಿ ರಾಜ್ಯಪಾಲರು ಅವುಗಳನ್ನು ತಡೆಹಿಡಿಯುವ ವಿವೇಚನಾಧಿಕಾರ ರಾಜ್ಯಪಾಲರಿಗೆ ಇರುತ್ತದೆ. ಇಂತಹ ಮಸೂದೆಗಳನ್ನು ಅಂತಿಮವಾಗಿ ರಾಷ್ಟ್ರಪತಿಗಳು ಪರಿಶೀಲಿಸಿ ನಿರ್ಧರಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಸಮಯದ ಗುಡುವು ಇರುವುದಿಲ್ಲ.
![](https://pratidhvani.com/wp-content/uploads/2023/11/Picsart_23-11-23_22-19-40-370-1024x683.jpg)
ರಾಜ್ಯಪಾಲರ ವಿವೇಚನಾಧಿಕಾರ
ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ರಾಜ್ಯಪಾಲರ ಸಾಂವಿಧಾನಿಕ ಅಧಿಕಾರ ವ್ಯಾಪ್ತಿ ಹಾಗೂ ವಿವೇಚನಾಧಿಕಾರದ ವ್ಯಾಪ್ತಿಯನ್ನು ಕಾಲಕಾಲಕ್ಕೆ ಪರಾಮರ್ಶಿಸುತ್ತಲೇ ಬರಲಾಗಿದ್ದು, ಸುಪ್ರೀಂಕೋರ್ಟ್ ಪ್ರತಿಯೊಂದು ಸನ್ನಿವೇಶದಲ್ಲೂ ಸಂವಿಧಾನದ ನಿಯಮಗಳ ಅನುಸಾರ ತನ್ನ ಆದೇಶ/ನಿರ್ದೇಶನವನ್ನು ನೀಡುತ್ತಲೇ ಬಂದಿದೆ. ಇತ್ತೀಚಿನ ಮಹಾರಾಷ್ಟ್ರ ವಿಧಾನಸಭೆಯ ಪ್ರಕರಣದಲ್ಲೂ ಸಹ ಸುಪ್ರೀಂಕೋರ್ಟ್ ರಾಜ್ಯಪಾಲರ ವಿವೇಚನಾಧಿಕಾರದ ವ್ಯಾಪ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಸಂವಿಧಾನ ಆಗಲೀ ಅಥವಾ ಯಾವುದೇ ಕಾನೂನು ರಾಜ್ಯಪಾಲರಿಗೆ ಶಾಸನಸಭೆಯನ್ನು ಪ್ರತಿನಿಧಿಸುವ ಪಕ್ಷಗಳ ನಡುವಿನ ಅಥವಾ ಪಕ್ಷದೊಳಗಿನ ಆಂತರಿಕ ವಿವಾದಗಳಲ್ಲಿ ಮಧ್ಯಪ್ರವೇಶ ಮಾಡುವ ಹಕ್ಕು ನೀಡುವುದಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ಹೊಸ ಸರ್ಕಾರದ ರಚನೆಯನ್ನು ಅನೂರ್ಜಿತಗೊಳಿಸದಿದ್ದರೂ, ಆ ಸನ್ನಿವೇಶದಲ್ಲಿ ರಾಜ್ಯಪಾಲರ ನಡೆಯನ್ನು ಕಟುವಾಗಿ ಖಂಡಿಸಿದೆ.
ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸಾಮಾನ್ಯವಾಗಿ 1987ರ ಸರ್ಕಾರಿಯಾ ಆಯೋಗದ ಶಿಫಾರಸುಗಳನ್ನು ಪರಿಶೀಲಿಸುತ್ತದೆ. ಈ ಆಯೋಗದ ಶಿಫಾರಸುಗಳಲ್ಲಿ ಪ್ರಮುಖವಾದದ್ದೆಂದರೆ, ಅಪರೂಪದ ಸನ್ನಿವೇಶಗಳಲ್ಲಿ, ಮಸೂದೆಗಳು ಅಸಾಂವಿಧಾನಿಕವಾಗಿ ಕಂಡುಬಂದಲ್ಲಿ, ರಾಷ್ಟ್ರಪತಿಗಳ ಅನುಮೋದನೆಗಾಗಿ, ರಾಜ್ಯಪಾಲರು ರಾಜ್ಯ ವಿಧಾನಸಭೆಗಳ ಮಸೂದೆಗಳನ್ನು ತಡೆಹಿಡಿಯಬಹುದು ಎಂದು ಹೇಳಲಾಗಿದೆ. ಅದನ್ನು ರಾಜ್ಯಪಾಲರ ವಿವೇಚನಾಧಿಕಾರ ಎಂದು ಬಣ್ಣಿಸಲಾಗಿದೆ. ಇನ್ನಿತರ ಯಾವುದೇ ಸನ್ನಿವೇಶಗಳಲ್ಲಿ ರಾಜ್ಯಪಾಲರು ಸಂವಿಧಾನ ಅನುಚ್ಛೇದ 200ರ ಅನ್ವಯ ರಾಜ್ಯ ಸಚಿವ ಸಂಪುಟದ ಸಲಹೆಯಂತೆ ನಡೆದುಕೊಳ್ಳಬೇಕಾಗುತ್ತದೆ. ರಾಷ್ಟ್ರಪತಿ ಕಚೇರಿಯೂ ಸಹ ಇಂತಹ ಮಸೂದೆಯ ಬಗ್ಗೆ ಅಂತಿನ ನಿರ್ಧಾರವನ್ನು ತಡೆಹಿಡಿಯುವುದೇ ಅದರೆ, ಆರು ತಿಂಗಳೊಳಗಾಗಿ ರಾಜ್ಯ ಸರ್ಕಾರಕ್ಕೆ ಸಕಾರಣಗಳನ್ನು ತಿಳಿಸಬೇಕಾಗುತ್ತದೆ.
ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ನಡವಳಿಕೆಯನ್ನು ಸದಾ ಗಮನಿಸುತ್ತಲೇ ಇರುವ ಉನ್ನತ ನ್ಯಾಯಾಂಗದ ಈ ನಿಯಮಗಳು ಪ್ರಜಾಪ್ರಭುತ್ವದ ತಳಪಾಯವನ್ನು ಹಾಗೂ ಒಕ್ಕೂಟ ವ್ಯವಸ್ಥೆಯ ಸಾಂಸ್ಥಿಕ ಅಡಿಪಾಯವನ್ನು ಸಂರಕ್ಷಿಸುವ ಕ್ರಮಗಳೇ ಆಗಿದ್ದು, ಸಂಸದೀಯ ಪ್ರಜಾಸತ್ತೆಯ ಕಾರ್ಯನಿರ್ವಹಣೆಯಲ್ಲಿ ಈ ನಿಯಮಗಳನ್ನು ಅನುಸರಿಸುವುದು ಅವಶ್ಯವೂ ಆಗಿರುತ್ತದೆ. ಆದರೆ 1957ರಲ್ಲಿ ಕೇರಳದ ಬಹುಮತದ ಸಿಪಿಐ ಸರ್ಕಾರದ ಪದಚ್ಯುತಿ ಮತ್ತು ರಾಷ್ಟ್ರಪತಿ ಆಳ್ವಿಕೆಯ ಪ್ರಕರಣದಿಂದ ಹಿಡಿದು ಇತ್ತೀಚಿನ ಮಹಾರಾಷ್ಟ್ರ ವಿಧಾನಸಭೆಯ ಪ್ರಕರಣದವರೆಗೆ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿರುವುದನ್ನು ಗಮನಿಸಬಹುದಾಗಿದೆ. ರಾಜ್ಯಪಾಲ ಹುದ್ದೆಯನ್ನು ರಾಜಕೀಕರಣಗೊಳಿಸುವ ಪ್ರಕ್ರಿಯೆಗೆ ಸ್ವತಂತ್ರ ಇತಿಹಾಸದಷ್ಟೇ ದೀರ್ಘ ಪರಂಪರೆಯೂ ಇರುವುದು ದುರದೃಷ್ಟಕರ.
ತಮಿಳುನಾಡಿನ ಸಿ.ಎನ್. ಅಣ್ಣಾದೊರೈ ಅವರಿಂದ ಇತ್ತೀಚಿನ ಬಿಹಾರದ ನೀತಿಶ್ ಕುಮಾರ್ವರೆಗೆ ಹಲವು ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ರಾಜ್ಯಪಾಲ ಹುದ್ದೆಯನ್ನೇ ರದ್ದುಪಡಿಸುವಂತೆ ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ ಭಾರತೀಯ ಸಂವಿಧಾನದ ನಿಯಮಗಳ ಅನುಸಾರ ರಾಜ್ಯ ಕಾರ್ಯಾಂಗವನ್ನು ನಡೆಸಲು ಹಾಗೂ ದೇಶದ ಏಕತೆ-ಅಖಂಡತೆಯನ್ನು ರಕ್ಷಿಸುವ ಸಲುವಾಗಿ, ರಾಷ್ಟ್ರಮಟ್ಟದಲ್ಲಿ ರಾಷ್ಟ್ರಪತಿಗಳು ಇರುವಂತೆಯೇ ರಾಜ್ಯಗಳಲ್ಲಿ ರಾಜ್ಯಪಾಲರೂ ಇರುವುದು ಅವಶ್ಯವಾಗಿದೆ. ಕೇಂದ್ರದಿಂದಲೇ ನೇಮಿಸಲ್ಪಡುವುದಾದರೂ ರಾಜ್ಯಪಾಲರು ಮೂಲತಃ ಸಂವಿಧಾನದ ಆಶಯದಂತೆ ಒಕ್ಕೂಟ ವ್ಯವಸ್ಥೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದೇ ಅಲ್ಲದೆ ರಾಜ್ಯ ಸರ್ಕಾರಗಳ ಅಧಿಕಾರವನ್ನು ನಗಣ್ಯಗೊಳಿಸುವ ಅಥವಾ ಶಿಥಿಲಗೊಳಿಸುವ ಪ್ರಯತ್ನಗಳನ್ನು ಮಾಡುವಂತಿಲ್ಲ.
ಈ ಸಾಂವಿಧಾನಿಕ ಆಶಯಗಳ ಚೌಕಟ್ಟಿನೊಳಗೇ ಇತ್ತೀಚಿನ ಕೆಲವು ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ರಾಜ್ಯಪಾಲ ಹುದ್ದೆಯಲ್ಲಿರುವವರು ಹಾಗೂ ರಾಜ್ಯ ಮುಖ್ಯಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತೆ ಆಗ್ರಹಿಸಿರುವ ಸುಪ್ರೀಂಕೋರ್ಟ್ ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಬಾರದಂತೆ ಆಡಳಿತ ನಿರ್ವಹಣೆ ಮಾಡಲು ಉತ್ತೇಜಿಸಿದೆ. ರಾಜ್ಯಪಾಲರನ್ನು ನೇಮಿಸುವ ಮುನ್ನ ಕೇಂದ್ರವು ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಪರಿಗಣಿಸುವಂತೆ ಅಥವಾ ರಾಜ್ಯ ಮುಖ್ಯಮಂತ್ರಿಗಳೊಡನೆ ಸಮಾಲೋಚನೆ ನಡೆಸುವಂತೆ ಸಂವಿಧಾನ ತಿದ್ದುಪಡಿ ಮಾಡುವ ಆಗ್ರಹಗಳೂ ಕೇಳಿಬರುತ್ತಿವೆ. ಪಂಚಿ ಆಯೋಗವು ಶಿಫಾರಸು ಮಾಡಿರುವಂತೆ ಸೂಕ್ತ ಸಹಕಾರ ನೀಡದ ರಾಜ್ಯಪಾಲರನ್ನು ವಾಗ್ದಂಡನೆಯ ಮೂಲಕ ತೆಗೆದುಹಾಕುವಂತೆ ಆಗ್ರಹಿಸಲು ರಾಜ್ಯ ವಿಧಾನಸಭೆಗಳಿಗೆ ಅಧಿಕಾರ ನೀಡುವ ಬಗ್ಗೆಯೂ ತಜ್ಞರ ಅಭಿಪ್ರಾಯಗಳು ಚಾಲ್ತಿಯಲ್ಲಿವೆ.
![](https://pratidhvani.com/wp-content/uploads/2023/11/RN_Ravi_and_MK_Stalin-1024x683.png)
ಸಂಸದೀಯ ವ್ಯವಸ್ಥೆಯ ಆದ್ಯತೆಗಳು
ಮೂಲತಃ ಭಾರತದ ಸಂಸದೀಯ ಪ್ರಜಾಪ್ರಭುತ್ವದ ಸಮಸ್ಯೆ ಇರುವುದು ಅಧಿಕಾರ ರಾಜಕಾರಣದ ಬಳಕೆ ಮತ್ತು ವ್ಯಾಪ್ತಿಯಲ್ಲಿ. ಸ್ಪಷ್ಟ ಬಹುಮತ ಪಡೆದಿರುವ ಕೇಂದ್ರ ಸರ್ಕಾರಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರಗಳನ್ನು ಪದಚ್ಯುತಗೊಳಿಸಲು ರಾಜ್ಯಪಾಲರ ಕಚೇರಿಯನ್ನು ಬಳಸಿಕೊಳ್ಳುವ ಹಲವು ಪ್ರಸಂಗಗಳಿಗೆ ಸ್ವತಂತ್ರ ಭಾರತ ಸಾಕ್ಷಿಯಾಗಿದೆ. ನೆಹರೂ ಕಾಲದಿಂದಲೂ ಚಾಲ್ತಿಯಲ್ಲಿರುವ ಈ ಧೋರಣೆ ಅನೂಚಾನವಾಗಿ ನಡೆದುಕೊಂಡುಬಂದಿದೆ. ಇಂದಿರಾಗಾಂಧಿ ಆಳ್ವಿಕೆಯ ವ್ಯಾಪಕ ಟೀಕೆಗೊಳಗಾಗಿದ್ದ ಈ ಆಡಳಿತ ನೀತಿ ಇಂದಿಗೂ ಸಹ ರೂಪಾಂತರ ಹೊಂದುವ ಮೂಲಕ ರಾಜ್ಯಪಾಲರ ವಿವೇಚನಾಧಿಕಾರವನ್ನು ಕೇಂದ್ರದಿಂದ ನಿಗ್ರಹಿಸುವ ಪರಂಪರೆಯನ್ನು ಮುಂದುವರೆಸಲಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಪಣತೊಟ್ಟು ತುರ್ತುಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಜನತಾಪಕ್ಷದ ಸರ್ಕಾರವೂ ಸಹ ಹಲವು ರಾಜ್ಯಪಾಲರನ್ನು ಪದಚ್ಯುತಗೊಳಿಸಿದ್ದನ್ನು ಸ್ಮರಿಸಬಹುದು.
ಸ್ವತಂತ್ರ ಭಾರತದ 75 ವರ್ಷಗಳ ಆಳ್ವಿಕೆಯಲ್ಲಿ ಆಗಿರಬಹುದಾದ ವ್ಯತ್ಯಯಗಳನ್ನು, ಕಂಡಿರಬಹುದಾದ ನ್ಯೂನತೆಗಳನ್ನು ಸರಿಪಡಿಸುವುದು, ಅಮೃತಕಾಲದಲ್ಲಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಆದ್ಯತೆಯಾಗಬೇಕಿದೆ. ಇದು ಸಾಧ್ಯವಾಗಬೇಕಾದರೆ ಸಂವಿಧಾನದ ಮೂರು ಪ್ರಧಾನ ಅಂಗಗಳೂ ಸಹ ಸಮನ್ವಯದೊಂದಿಗೆ ಆಡಳಿತ ನಿರ್ವಹಣೆ ನಡೆಸಬೇಕಾಗುತ್ತದೆ. ಚುನಾಯಿತ ಸರ್ಕಾರಗಳು ದೇಶದ ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ಪ್ರತೀಕವಾಗಿದ್ದು, ಸಾಮೂಹಿಕ ಪಕ್ಷಾಂತರದ ಮೂಲಕ, ಶಾಸಕರ ಖರೀದಿಯ ಮೂಲಕ, ಚುನಾಯಿತ ಶಾಸಕರ ರಾಜೀನಾಮೆ-ಮರು ಚುನಾವಣೆಯ ಮೂಲಕ, ನಡೆಸುವ ಯಾವುದೇ ಪ್ರಯತ್ನಗಳು ಈ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ. ರಾಜ್ಯ ಸರ್ಕಾರಗಳನ್ನು ಪದಚ್ಯುತಗೊಳಿಸುವ ಹೊಸ ಮಾದರಿಯೊಂದನ್ನು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಲ್ಲಿ ಪ್ರಾಯೋಗಿಕವಾಗಿ ಅನುಸರಿಸಲಾಗಿದ್ದು, ಯಶಸ್ವಿಯಾಗಿರುವುದೂ ಹೌದು. ಸ್ಪಷ್ಟ ಬಹುಮತ ಪಡೆದು ಅಧಿಕಾರಗ್ರಹಣ ಮಾಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ಇದೇ ಮಾದರಿಯ ಭೀತಿಯನ್ನು ಎದುರಿಸುತ್ತಿದೆ.
ಇಂತಹ ಸನ್ನಿವೇಶಗಳಲ್ಲಿ ರಾಜ್ಯಪಾಲರು ವಹಿಸುವ ಪಾತ್ರ ನಿರ್ಣಾಯಕವಾಗುತ್ತದೆ. ಅಂತಿಮವಾಗಿ ಒಂದು ರಾಜ್ಯದ ಜನತೆ ಆಯ್ಕೆ ಮಾಡಿದ ಸರ್ಕಾರದ ಸುಗಮ ಆಡಳಿತ ನಿರ್ವಹಣೆಗೆ ಪೂರಕವಾಗಿ, ಸರ್ಕಾರಗಳು ಜಾರಿಗೊಳಿಸುವ ಕಾಯ್ದೆಗಳನ್ನು ಹಾಗೂ ಮಂಡಿಸುವ ಮಸೂದೆಗಳನ್ನು, ಸಂವಿಧಾನದ ಚೌಕಟ್ಟಿನೊಳಗೇ ಪರಾಮರ್ಶಿಸಿ, ಅನುಮೋದಿಸುವುದು ರಾಜ್ಯಪಾಲರ ಪ್ರಥಮ ಆದ್ಯತೆಯಾಗಬೇಕಾಗುತ್ತದೆ. ಏಕೆಂದರೆ ಈ ಬಹುಮತದ ಸರ್ಕಾರದ ಯಾವುದೇ ವಿಧೇಯಕ/ಮಸೂದೆಗಳು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಜನಾಭಿಪ್ರಾಯವೆಂದೇ ಪರಿಗಣಿಸಲ್ಪಡುತ್ತದೆ. ಈ ಮಸೂದೆ ಹಾಗೂ ಕಾಯ್ದೆಗಳನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇರುವುದನ್ನೂ ಸಂವಿಧಾನ ಮಾನ್ಯ ಮಾಡುತ್ತದೆ. ಉನ್ನತ ನ್ಯಾಯಾಂಗವು ಈ ಕರ್ತವ್ಯವನ್ನು ನಿಭಾಯಿಸುತ್ತಲೇ ಬಂದಿದೆ.
ಶಾಸಕಾಂಗ ಹಾಗೂ ಕಾರ್ಯಾಂಗದ ನಡುವಿನ ಸಮನ್ವಯ ಹಾಗೂ ಸಹಭಾಗಿತ್ವವೇ ಪ್ರಜಾಪ್ರಭುತ್ವದ ಹಾಗೂ ಒಕ್ಕೂಟ ವ್ಯವಸ್ಥೆಯ ಅಡಿಪಾಯವನ್ನು ಸುಭದ್ರವಾಗಿ ಕಾಪಾಡಬಲ್ಲದು ಎಂಬ ಅರಿವು ರಾಜಕೀಯ ಪಕ್ಷಗಳಲ್ಲಿದ್ದರೆ ಸಾಕು. 75 ವಸಂತಗಳನ್ನು ಪೂರೈಸಿ ಶತಮಾನದತ್ತ ಧಾವಿಸುತ್ತಿರುವ ನವ ಭಾರತ ತನ್ನ ಆರ್ಥಿಕ ಅಭಿವೃದ್ಧಿಯೊಂದಿಗೇ, ಸಾಮಾಜಿಕ ನ್ಯಾಯವನ್ನೂ ಸಾಕಾರಗೊಳಿಸುತ್ತಾ, ಮೂಲ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವತ್ತ ಸಾಗುವುದು ಭಾರತದ ಸಮಸ್ತ ನಾಗರಿಕರ ಆಶಯವೂ ಆಗಿರುವುದು ಸಹಜ. ಇದನ್ನು ಈಡೇರಿಸುವ ಹೊಣೆ ಆಳುವ ಪಕ್ಷಗಳ ಮೇಲಿದೆ.
(ಆಧಾರ : The Role of Governors in legislatures – ಆರ್. ರಂಗರಾಜನ್, ನಿವೃತ್ತ ಐಎಎಸ್ ಅಧಿಕಾರಿ, ದ ಹಿಂದೂ -20 ನವಂಬರ್ 2023)
-೦-೦-೦-