ರಾಯಚೂರು: ದೇಶದ ಕೃಷಿ ಕ್ಷೇತ್ರ ಹೆಚ್ಚಿನ ಪ್ರಾಕೃತಿಕ ಸವಾಲುಗಳನ್ನು ಎದುರಿಸುತ್ತಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ಕೃಷಿ ಅಭಿಯಂತರರು ಸಹ ನೆರವಾಗಬೇಕು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಕರೆ ನೀಡಿದ್ದಾರೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಕೃಷಿ ಅಭಿಯಂತರರ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಿ ಮಾರ್ಗದರ್ಶನ, ನೆರವು ನೀಡಬೇಕು. ಕೃಷಿ ತಜ್ಞರು, ಪದವಿದರರೂ ಕೃಷಿ ಹಾಗೂ ಅದಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ದೇಶದಲ್ಲಿ ಬರ ಪರಿಸ್ಥಿತಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ನಿರೀಕ್ಷಿತ ಫಲ ಸಿಗುತ್ತಿಲ್ಲ ಇದಕ್ಕೆ ಕೃಷಿ ವಿಜ್ಞಾನಿಗಳು ಪರಿಹಾರ ಕಂಡು ಹಿಡಿಯಬೇಕು. ಮಿತ ನೀರು, ಅವಧಿ ಹಾಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಫಸಲು ಪಡೆಯಲು ಅನುಕೂಲವಾಗುವ ತಳಿ,ತಂತ್ರಜ್ಞಾನ ಸಂಶೋಧನೆ ಮಾಡಿ ವರ್ಗಾಯಿಸಬೇಕು ಎಂದು ಚಲುವರಾಯಸ್ವಾಮಿ ಹೇಳಿದರು. ನಾಲ್ಕು ಕೃಷಿ ವಿಶ್ವವಿದ್ಯಾಲಯಗಳ ಜವಾಬ್ದಾರಿ ಹಿಂದೆಂದಿಗಿಂತಲೂ ಹೆಚ್ಚಿದ್ದು ಅದನ್ನು ಅರಿತು ಕಾರ್ಯ ನಿರ್ವಹಿಸಿ ಎಂದು ಸಚಿವರು ಕಿವಿ ಮಾತು ಹೇಳಿದರು.
ಕೃಷಿ ಇಂಜಿನಿಯರಿಂಗ್ ಗೆ ಪ್ರತ್ಯೇಕ ನಿರ್ದೇಶನಾಲಯ ಪ್ರರಾಂಭಕ್ಕೆ ಬೇಡಿಕೆ ಇದ್ದು ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು. ಸಿರಿಧಾನ್ಯಗಳ ಬೆಳೆ ಲಾಭದಾಯಕವಾಗಿದೆ .ಸರ್ಕಾರವೂ ಪ್ರೋತ್ಸಾಹ ಧನ ನೀಡುತ್ತಿದ್ದು ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು. ನಮ್ಮ ಸರ್ಕಾರ ಕೃಷಿ ಹಾಗೂ ರೈತರಿಗೆ ಹೆಚ್ಚಿನ ಆದ್ಯತೆ ನೀಡುತಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಶಕ್ತಿ ತುಂಬಲಾಗುವುದು ಎಂದು ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಸಣ್ಣ ನೀರಾವರಿ,ವಿಜ್ಞಾನ ತಂತ್ರಜ್ಞಾನ ಸಚಿವರಾದ ಬೋಸ್ ರಾಜ್ ಅವರು ಮಾತನಾಡಿ ಕೃಷಿ ಅಭಿಯಂತರರ ಪ್ರಾಮುಖ್ಯತೆ ಹಾಗೂ ಜವಾಬ್ದಾರಿಗಳು ,ಸಮಾಜಕ್ಕೆ ಅವರ ಕೊಡುಗೆ ಬಗ್ಗೆ ವಿವರಿಸಿದರು. ಶಾಸಕರಾದ ಹಂಪಯ್ಯ ನಾಯಕ್ ನವದೆಹಲಿಯ ಭಾರತೀಯ ಕೃಷಿ ಅಭಿಯಂತರರ ಸಂಘದ ಅಧ್ಯಕ್ಷರಾದ ಡಾ ಎಸ್.ಎನ್ ಶಾ, ಪ್ರಧಾನ ಕಾರ್ಯದರ್ಶಿ ಡಾ ಪಿ.ಕೆ ಸಾಹು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ ಹನುಮಂತಪ್ಪ ಮತ್ತಿತರು ಹಾಜರಿದ್ದರು